Advertisement

ಕಿಶೋರಿ ಅಮೋಣ್ಕರ್‌: ಕಣ್ಮರೆಯಾದ ಅಪರಂಜಿ

04:58 PM Apr 08, 2017 | |

ನೀಳಕಾಯ, ಗೌಳಶಾರೀರ, ಎತ್ತರದ ನಿಲುವು, ಚಶ್ಮಾಧರಿಸಿದರೆ ಪ್ರಾಧ್ಯಾಪಕತ್ವದ ಕಳೆ. ತನ್ಮಯತೆಯಲ್ಲಿ ರಾಗ ಸಿಂಚನ, ಮಂದ್ರದಿಂದ ತಾರಕದವರೆಗೆ ನಿರಾಯಾಸದ ಧ್ವನಿ ಪಯಣ. ಆರೋಹಣದಲ್ಲೂ ಅವರೋಹಣದಲ್ಲೂ ಸಿದ್ಧಿಸಿದ ಗಮಕ.

Advertisement

ಜೈಪುರ ಘರಾನದ ಅನ್ವೇಷಕಿ, ಶಾಸ್ತ್ರೀಯ – ಲಘುಶಾಸ್ತ್ರೀಯ ಗಾಯನದಲ್ಲಿ ಪ್ರಾವೀಣ್ಯತೆ. ಕಿಶೋರಿ ಅಮೋಣ್ಕರ್‌.ಪ್ರಾರಂಭಿಕ ಶಿಕ್ಷಣ ತಾಯಿಯಿಂದಲೇ. ಜೈಪುರ ಸಂಪ್ರದಾಯ ಸಂಗೀತ ಗಾಯಕಿ. ಮೊಗುಬಾಯಿ ಕರ್ಡಿಕರ್‌ ಈ ಮಹಾನ್‌ ಕಲಾವಿದೆಯ ತಾಯಿ. ಈಕೆಯಿಂದಲೇ ಮೊದಲ ಪಾಠ ಕಲಿತ ಕಿಶೋರಿ ಅವರು ಕ್ರಮೇಣ ತನ್ನದೇ ಆದ ಸಂಗೀತ ಲಯವನ್ನು ಕಂಡುಕೊಂಡು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಧಿಕೃತವಾಗಿ ಪ್ರತಿನಿಧಿಸುವ ದೇಶದ ಅಪ್ರತಿಮ ಗಾಯಕಿ ಎನಿಸಿಕೊಂಡರು. ಆರಂಭದ ದಿನಗಳಲ್ಲಿ ಕಾರ್ಯಕ್ರಮಗಳಿಗೆ ತಾಯಿಯೊಂದಿಗೆ ಪ್ರಯಾಣ ಮಾಡುತ್ತಿದ್ದು ಕಿಶೋರಿ,  ಅಮ್ಮನ ಹಾಡಿಗೆ ಶೃತಿ ನುಡಿಸುತ್ತಿದ್ದುದು ವಿಶೇಷ. 1932 ರ ಏಪ್ರಿಲ್‌ 10 ರಂದು ಜನಿಸಿದ ಕಿಶೋರಿ, ತನ್ನ 8 ನೇ ವಯಸ್ಸಿನಲ್ಲಿ ಅಂಜನಿಭಾಯಿ ಮಾಲ್ಪೆಪಕರ್‌ ಅವರಿಂದ ಆಗ್ರಾ ಘರಾನದ ಶಿಕ್ಷಣ, ಅನ್ವರ್‌ ಹುಸೇನ್‌ ಖಾನ್‌ ಹಾಗೂ ಶರಶ್ಚಂದ್ರ ಅರೋಲ್ಕರ್‌ ಅವರಿಂದ ಗ್ವಾಲಿಯರ್‌ ಘರಾನ ಮತ್ತು ಬಾಲಕೃಷ್ಣ ಬುವಾ ಪರ್‌ವತ್‌ಕರ್‌ ಅವರಿಂದ ಪರಿಣಿತಿ ಹೊಂದಿದ ನಂತರ ಗಾಯನಲೋಕದಲ್ಲಿ ಪ್ರಸಿದ್ಧರಾದರು.

ನೈಪುಣ್ಯತೆ – ಪ್ರಾವೀಣ್ಯತೆ 
ಅಮೋಣ್ಕರ್‌ ಅವರ ಕಾರ್ಯಶ್ರದ್ಧೆ ಸಂಪೂರ್ಣವಾಗಿ ಶಾಸ್ತ್ರೀಯ ಹಾಡುಗಾರಿಕೆಯಲಿ. ಆಂತೆಯೇ ಅವರು ಜೈಪುರ ಘರಾನದ ಗಾಯನದಲ್ಲಿ ಬೇರೆ ಬೇರೆ ಘರಾನ‌ಗಳ ತಿರುಳನ್ನು ಅಳವಡಿಸುತ್ತಿದ್ದುದು ವಿಶೇಷ. ಈ ಒಂದು ಪ್ರಯೋಗಕ್ಕೆ ಹಲವಡೆ ಪ್ರಶಂಸೆಗಳು ಮತ್ತೂಂದೆಡೆ ವಿಮರ್ಶೆಗಳು, ಟೀಕೆಗಳು ಬಂದವಾದರೂ, ಆಕೆಯ ರಾಗ ಭಾವುಕತೆಯ ತಲ್ಲೀನತೆಯ ಅಭಿವ್ಯಕ್ತಿಯಲ್ಲಿ. ನಾದ ಸಿಂಚನದಲ್ಲಿ ಮೃದು ಮಧುರಾಲಾಪದ ರಾಗಬಾಂಧವ್ಯದಲ್ಲಿ,  ಲಯ ಪ್ರಯಾಣದಲ್ಲಿ ಕೇಳುಗರು ಗಂಧರ್ವಗಾನದ ನಾದ ಸುಖವನ್ನ ಅನುಭಸುತ್ತಿದ್ದರು ಎಂಬುದು ನಿಜವೆ; ಹೀಗಾಗಿ ಯಾವ ಪ್ರತಿಕ್ರಿಯೆಯೂ, ಟೀಕೆಯೂ ಈ ಕಲಾವಿದೆಯನ್ನು ಬಾಧಿಸಲಿಲ್ಲ. 

ಅಮೋಣ್ಕರ್‌ ಅವರೇ ಹೇಳಿರುವಂತೆ, ಘರಾನ ಎನ್ನುವುದೇನಿಲ್ಲ. ಏನಿದ್ದರೂ ಸಮಗ್ರ ಸಂಗೀತವಷ್ಟೆ ; ಇದು ಹೇಗೆಂದರೆ ಸಂಗೀತವನ್ನು ವಿಭಜಿಸಿದಂತೆ.  ಕಲೆಯ ಕಲಿಯುವಿಕೆಯಲ್ಲಿ ಮಿತಿ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಬೋಧಿಸಕೊಡದು. ಆದರೆ ಸಂಗೀತದ ವ್ಯಾಕರಣವನ್ನು ತಿಳಿದಿರಬೇಕು. ಗಾನಸರಸ್ವತಿ, “ಪದ್ಮಭೂಷಣ ಪ್ರಶಸ್ತಿ, ಸಂಗೀತ ಸಾಮ್ರಾಜ್ಞೆ ತಮ್ಮ ಪಾಲಿಗೆ ದಕ್ಕಿದ್ದ ಸಮಸ್ತ ಜಾnನವನ್ನು ಶಿಷ್ಯರಿಗೆ ಮನಸಾರೆ ಧಾರೆಯೆರೆದ ಮಹಾನುಭಾವರು. ರೋಚಕ ಹಾಗೂ ನಂಬಲಸಾಧ್ಯವಾದ ಸಂಗತಿ ಎಂದರೆ ಹೋದವಾರವಷ್ಟೇ,  ನಮ್ಮ ನಾಡಿನ ಪ್ರಸಿದ್ಧಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಅವರು ಈ ಮಹಾನ್‌ ಕಲಾವಿದೆಯನ್ನು ಸಂದರ್ಶಿಸಿದ್ದರು.  ಮತ್ತು ಅದೇ ಕೊನೆಯ ಸಂದರ್ಶನ ಸಹ ಆಗಿಹೋಗಿದೆ.

 ವಿಶೇಷತೆ 
ತಮ್ಮ ಸಂಗೀತ ಕಛೇರಿ ನಡೆಯುತ್ತಿರುವ ಸಂದರ್ಭದಲ್ಲಿ ಯಾರಾದರೂ ಸಭೆಯಿಂದ ಹೊರನಡೆದರೆ ಬಹುವಾಗಿ ನೊಂದು ಕೊಳ್ಳುತ್ತಿದ್ದರು ಅಮೋಣRರ್‌.  ಏಕೆಂದರೆ ಸಭಿಕರು ಎದ್ದುಹೋದರೆಂದರೆ ತನ್ನ ಹಾಡುಗಾರಿಕೆ ಅವರಿಗೆ ಹಿಡಿಸಲಿಲ್ಲವೇನೋ ಎಂಬ ಸೂಕ್ಷ್ಮ ಭಾವನೆ ಅವರದು. ಇಂತಹ ಸಂದರ್ಭಗಳಲ್ಲಿ ಶ್ರೀಮತಿ ಕಿಶೋರಿ ಅವರು ಸಂಭಾವನೆಯನ್ನೂ ಸಹ ಪಡೆಯದಿದ್ದ ಘಟನೆಗಳು ಸಹ ನಡೆದಿವೆ. ಶ್ರೋತೃಗಳಿಗೆ  ಏಕಾಗ್ರತೆ ಇರಬೇಕಾದುದು ಸಹಜ ಎಂದು ಈ ಮಹಾನ್‌ ಕಲಾವಿದೆ ಬಯಸುವುದರಲ್ಲಿ ತಪ್ಪು ಕಾಣಲಾಗದು.

Advertisement

ಹಿಂದೂಸ್ತಾನಿ ಸಂಗೀತದ ವಿಶೇಷತೆ ಎಂದರೆ ಮನೋಧರ್ಮ ಕೇಂದ್ರೀಕೃತ. ಕಲಾವಿದನಿಗೆ ಸಂಗೀತಕ್ಕೆ ಹೇಳಿ ಮಾಡಿಸಿದ ವಾತಾವರಣ ಅದಕ್ಕೆ ತಕ್ಕಂತೆ ರಸಿಕ ಸಮುದಾಯದ ಪ್ರತಿಕ್ರಿಯೆ.  ಅಮೋಣRರ್‌ ಅವರು ಸಂಗೀತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದವರು. ಅದದೇ ಪುನರಾವರ್ತನೆಯ ತಂತ್ರದ ಪಾಠದಾಚೆಗೂ ನಾವು ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಹೇಳಿದವರು ಆಕೆ. 
ಹೀಗೆ ಕೇಳುತ್ತಾ ಕಲಿಯುತ್ತ ತನ್ನದೇ ಆದ ಶಿಷ್ಟ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂಬುದು ಈ ಕಲಾವಿದೆಯ ಸ್ಪಷ್ಟ ನಿಲುವು. ಈ ವಿಷಯ ಪ್ರಸ್ತಾಪವಾದಾಗ ಅಮೋಣRರ್‌ ಅವರು ತಮ್ಮ ತಾಯಿಯ ಪಾಠಕ್ರಮವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.     ರವೀಂದ್ರ ಅಮೋಣRರ್‌ ಎಂಬ ಒಬ್ಬ ಶಾಲಾ ಅಧ್ಯಾಪಕರನ್ನು ಕೈಡಿದ ಕಿಶೋರಿ ಅವರಿಗೆ ಇಬ್ಬರು ಗಂಡು ಮಕ್ಕಳು. 1992 ರಲ್ಲಿ ಪತಿಯನ್ನು ಕಳೆದುಕೊಂಡ ಕಿಶೋರಿ ಅವರು ದಿಢೀರ್‌ ಜೊತೆಯಾದ ಸಂಕಟ ಹಾಗೂ ಒಂಟಿತನದಿಂದ ಸ್ವಲ್ಪವೂ ಧೃತಿಗೆಡದೆ ಸಂಗೀತ ಪ್ರಯಾಣವನ್ನು ಮುಂದುವರಿಸಿ ಸಾಧನೆಯ ಉತ್ತುಂಗ ಶಿಖರವೇರಿದರು.

 ಎಂ.ಆರ್‌.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next