Advertisement

Singapore Open Badminton: ಸಿಂಧು, ಸೈನಾಗೆ ಸೋಲು

11:21 PM Jun 06, 2023 | Team Udayavani |

ಸಿಂಗಾಪುರ: ಸಿಂಗಾಪುರದಲ್ಲಾದರೂ ಪಿ.ವಿ. ಸಿಂಧು ಸಂಕಟ ಕೊನೆಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಮಂಗಳವಾರ ಮೊದಲ್ಗೊಂಡ “ಸಿಂಗಾಪುರ್‌ ಓಪನ್‌ ಸೂಪರ್‌ 750′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು. ಸೈನಾ ನೆಹ್ವಾಲ್‌, ಎಚ್‌.ಎಸ್‌. ಪ್ರಣಯ್‌ ಕೂಡ ಇದೇ ಸಾಲಿಗೆ ಸೇರಿದರು. ಜಯ ಸಾಧಿಸಿದ್ದು ಕೆ. ಶ್ರೀಕಾಂತ್‌ ಮತ್ತು ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಮಾತ್ರ.

Advertisement

ಕೆ. ಶ್ರೀಕಾಂತ್‌ ಥಾಯ್ಲೆಂಡ್‌ನ‌ ಕಂಟಫೊನ್‌ ವಾಂಗ್‌ಶರೋನ್‌ ಅವರನ್ನು 21-15, 21-19ರಿಂದ ಮಣಿಸಿ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ಅವರಿನ್ನು ಚೈನೀಸ್‌ ತೈಪೆಯ ಚಿಯಾ ಹಾವೋ ಲೀ ವಿರುದ್ಧ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಫ್ರಾನ್ಸ್‌ನ ಲುಕಾಸ್‌ ಕೊರ್ವೀ-ರೋನನ್‌ ಲಾಬರ್‌ ವಿರುದ್ಧ 21-16, 21-15ರಿಂದ ಗೆದ್ದು ಬಂದರು.

ಹಾಲಿ ಚಾಂಪಿಯನ್‌
ಪಿ.ವಿ. ಸಿಂಧು ಮೇಲೆ ವಿಪರೀತ ನಿರೀಕ್ಷೆ ಇತ್ತು. ಕಾರಣ, ಅವರು ಹಾಲಿ ಚಾಂಪಿಯನ್‌ ಎಂಬುದು. ಆದರೆ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಮುಂದೆ ಭಾರತೀಯಳ ಆಟ ಸಾಗಲಿಲ್ಲ. ಯಮಾಗುಚಿ ಮೊದಲ ಗೇಮ್‌ ಕಳೆದುಕೊಂಡ ಬಳಿಕ ತಿರುಗೇಟು ನೀಡಿದರು. ಗೆಲುವಿನ ಅಂತರ 18-21, 21-19, 21-17. ಕಳೆದ ವಾರದ ಥಾಯ್ಲೆಂಡ್‌ ಓಪನ್‌ ಪಂದ್ಯಾವಳಿಯಲ್ಲೂ ಸಿಂಧು ಮೊದಲ ಸುತ್ತಿನಲ್ಲೇ ಆಟ ಮುಗಿಸಿದ್ದರು.

ಸೈನಾ ನೆಹ್ವಾಲ್‌ ಅವರನ್ನು ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ 21-13, 21-15ರಿಂದ ಮಣಿಸಿದರು. ಭಾರತದ ಮತ್ತೋರ್ವ ಆಟಗಾರ್ತಿ ಆಕರ್ಷಿ ಕಶ್ಯಪ್‌ ಅವರನ್ನು ಥಾಯ್ಲೆಂಡ್‌ನ‌ವರೇ ಆದ ಸುಪನಿದಾ ಕಟೆತಾಂಗ್‌ 21-17, 21-9ರಿಂದ ಹಿಮ್ಮೆಟ್ಟಿಸಿದರು.

ಮಲೇಷ್ಯಾ ಮಾಸ್ಟರ್ ಚಾಂಪಿಯನ್‌ ಎಚ್‌. ಎಸ್‌. ಪ್ರಣಯ್‌ ಅವರನ್ನು ಜಪಾನ್‌ನ ಕೋಡೈ ನರವೋಕ 21-15, 21-19 ಅಂತರದಿಂದ ಮಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next