Advertisement

ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ

11:54 AM Oct 10, 2019 | Naveen |

ಚಂದ್ರಶೇಖರ ಯರದಿಹಾಳ
ಸಿಂಧನೂರು: ನಗರದಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಆಸ್ಪತ್ರೆ ಒಳಹೊಕ್ಕರೆ ಮೂಲ ಸೌಕರ್ಯಗಳಿಲ್ಲದೇ ಅವ್ಯವಸ್ಥೆ, ಅಸ್ವಚ್ಛತೆ, ಹಣಕ್ಕಾಗಿ ಸಿಬ್ಬಂದಿಗಳ ಹಪಾಹಪಿತನಕ್ಕೆ ರೋಗಿಗಳು ಬೇಸರಗೊಳ್ಳುವಂತಾಗಿದೆ.

Advertisement

ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ನಿತ್ಯ ಅತೀ ಹೆಚ್ಚು ಬಡ ರೋಗಿಗಳು, ಗರ್ಭಿಣಿಯರು, ಮಕ್ಕಳು, ವಯೋವೃದ್ಧರು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆಯೇ ಇಲ್ಲದಾಗಿದೆ. ಕುಡಿಯುವ ನೀರು, ಕುಳಿತುಕೊಳ್ಳಲು ಆಸನ, ಶೌಚಾಲಯ ವ್ಯವಸ್ಥೆ ಇಲ್ಲದೇ ರೋಗಿಗಳು, ಸಾರ್ವಜನಿಕರು ಪರದಾಡುವಂತಾಗಿದೆ. ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಜನ ದುರ್ವಾಸನೆಗೆ ಬೇಸತ್ತಿದ್ದಾರೆ. ಸೊಳ್ಳೆಗಳ ಹಾವಳಿಯಂತೂ ಹೇಳತೀರದಾಗಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತೂಂದಿಷ್ಟು ಕಾಯಿಲೆಗಳನ್ನು ಅಂಟಿಸಿಕೊಂಡು ಹೊರಹೋಗುವ ವಾತಾವರಣ ಇಲ್ಲಿದೆ. ವೈದ್ಯರ ಖಾಸಗಿ ಆಸ್ಪತ್ರೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಹುತೇಕ ತಜ್ಞ ವೈದರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದಕ್ಕಿಂತ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲೇ ಹೆಚ್ಚು ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ವೈದ್ಯರು ನಿಗದಿತ ಸಮಯಕ್ಕೆ ಬಾರದ್ದರಿಂದ ರೋಗಿಗಳು ಚಿಕಿತ್ಸೆಗಾಗಿ ಹಲವು ತಾಸುಗಳವರೆಗೆ ಕಾಯಬೇಕಾದ ಅನಿವಾರ್ಯತೆ ಇದೆ.

ಕಳೆದ ಎರಡು ದಿನದ ಹಿಂದೆ ನಾಯಿ ಕಡಿಸಿಕೊಂಡು ಬಂದಿದ್ದ 8 ಜನರಿಗೆ ಇಲ್ಲಿನ ವೈದ್ಯರು, ಸಿಬ್ಬಂದಿಗೆ ಚಿಕಿತ್ಸೆಗಾಗಿ 3-4 ತಾಸು ಸತಾಯಿಸಿದ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನಾಯಿ ಕಡಿತದಿಂದ ಗಾಯಗೊಂಡ ಹಂಚಿನಾಳ ಕ್ಯಾಂಪ್‌ ನಿವಾಸಿ ಶಿವಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೋಗಿಗಳ ಬಳಿ ವಾದ: ಹೆರಿಗೆ ಹಾಗೂ ಇನ್ನಿತರ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಲ್ಲಿನ ಸಿಬ್ಬಂದಿ ಸಣ್ಣಪುಟ್ಟ ವಿಷಯಕ್ಕೂ ವಾದ ಮಾಡುವುದು ಸಾಮಾನ್ಯವಾಗಿದೆ. ಹೆರಿಗೆಗೆ ಬಂದ ಸಂಬಂಧಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಈ ಕುರಿತು ಮೇಲಾಧಿಕಾರಿಗಳವರೆಗೆ ದೂರು ಹೋದರೂ ಯಾವುದೇ ಪ್ರಯೋಜನ ಇಲ್ಲದಾಗಿದೆ.

Advertisement

ಶಾಸಕರ-ಅಧಿಕಾರಿಗಳ ಆದೇಶಕ್ಕೂ ಇಲ್ಲ ಬೆಲೆ: ಸುಮಾರು ತಿಂಗಳ ಹಿಂದೆ ಆಸ್ಪತ್ರೆಗೆ ಶಾಸಕ ವೆಂಕಟರಾವ್‌ ನಾಡಗೌಡ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಿಎಚ್‌ಒ ಭೇಟಿ ನೀಡಿದ್ದರು. ಇಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಸ್ಪತ್ರೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಮತ್ತು ರೋಗಿಗಳ ಬಳಿ ಹಣ ವಸೂಲಿ ಮಾಡದಂತೆ ವೈದ್ಯರು, ಸಿಬ್ಬಂದಿಗೆ ತಾಕೀತು ಮಾಡಿದ್ದರು. ಹಣ ಕೇಳುವ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈವರೆಗೆ ಇಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಸಿಬ್ಬಂದಿ ತಮ್ಮ ಹಳೇ ಛಾಳಿಯನ್ನೇ ಮುಂದುವರಿಸಿದ್ದಾರೆ ಎಂದು ರೋಗಿಗಳು ದೂರಿದ್ದಾರೆ.

ಬ್ಯಾಟರಿ ಕಳವು: ಆಸ್ಪತ್ರೆಯಲ್ಲಿ ಜನರೇಟರ್‌ ಕೆಟ್ಟಿದ್ದರಿಂದ ಕರೆಂಟ್‌ ಹೋದರೆ ರೋಗಿಗಳು ಕತ್ತಲಲ್ಲಿ ಕಾಲ ಕಳೆಯಬೇಕಾಗುತ್ತಿದೆ. ಇತ್ತೀಚೆಗೆ ಜನರೇಟರ್‌ಗಾಗಿ ತಂದ ಹೊಸ ಬ್ಯಾಟರಿ ಕೂಡ ಕಳ್ಳತನವಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಜನ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next