Advertisement

ರೇಷ್ಮೆಗೂಡಿನ ಧಾರಣೆ ಭಾರೀ ಕುಸಿತ: ಕೆ.ಜಿ.ಗೆ 280

07:03 AM Jun 15, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಬರದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾರುಕಟ್ಟೆಯಲ್ಲಿ ಮತ್ತೆ ರೇಷ್ಮೆಗೂಡಿನ ಧಾರಣೆ ಭಾರೀ ಕುಸಿತಗೊಂಡಿದ್ದು, ಕಳೆದೊಂದು ವಾರದಿಂದ ಮಿಶ್ರತಳಿಯ ರೇಷ್ಮೆ ಗೂಡು ಕೆ.ಜಿ. ಬರೀ 250 ರಿಂದ 280 ರೂ. ವರೆಗೆ ಮಾತ್ರ ಮಾರಾಟಗೊಳ್ಳುತ್ತಿರುವುದು ರೇಷ್ಮೆ ಬೆಳೆಗಾರರನ್ನು ಕಂಗಾಲಾಗಿಸಿದೆ.

Advertisement

ಕೃಷಿಯಿಂದ ವಿಮುಖ: ಜಿಲ್ಲಾದ್ಯಂತ ಮಳೆ ಬೆಳೆ ಕೊರತೆಯಿಂದ ಬರಗಾಲಕ್ಕೆ ತುತ್ತಾಗಿರುವ ರೈತರು, ತೀವ್ರ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಕೈ ಕೊಡುತ್ತಿರುವುದರಿಂದ ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೂ ಬದುಕಿನ ಬಂಡಿಗಾಗಿ ಅಲ್ಪಸ್ವಲ್ಪ ಇರುವ ನೀರನ್ನು ಬಳಸಿ ಬೆಳೆ ತೆಗೆದರೂ ಪಟ್ಟ ಪರಿಶ್ರಮಕ್ಕೂ ರೈತರಿಗೆ ಬೆಲೆ ಇಲ್ಲದಂತಾಗಿದ್ದು, ಹವಾಮಾನ ವೈಪರೀತ್ಯವೋ ಅಥವಾ ಖರೀದಿಗೆ ರೀಲರ್‌ಗಳು ಮುಂದಾಗದ ಪರಿಣಾಮವೋ ರೇಷ್ಮೆಗೂಡು ಬೆಲೆ ಪಾತಾಳಕ್ಕೆ ಕುಸಿದು ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ.

250ರಿಂದ 280 ರೂ. ಮಾರಾಟ: ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಗುಣಮಟ್ಟದ ರೇಷ್ಮೆಗೂಡು ಬಂದರೂ ಬೆಲೆ ಮಾತ್ರ ಕೆ.ಜಿ. 250 ರಿಂದ ಗರಿಷ್ಠ 280 ರೂ. ವರೆಗೂ ಮಾತ್ರ ಮಾರಾಟಗೊಳ್ಳುತ್ತಿದ್ದು, ಉತ್ತಮ ಬೆಳೆ ತೆಗೆದು ಬಂಪರ್‌ ಬೆಲೆ ನಿರೀಕ್ಷಿಸಿರುವ ರೇಷ್ಮೆ ಬೆಳೆಗಾರರು ಈಗ ಬೆಲೆ ಕುಸಿತದಿಂದ ಕೈ ಸುಟ್ಟುಕೊಳ್ಳುವಂತಾಗಿದೆ.

ಬೆಳೆಗಾರರು ಚಿಂತೆಗೀಡು: ಜಿಲ್ಲಾದ್ಯಂತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬರದ ನಡುವೆಯೂ ರೇಷ್ಮೆಗೂಡು ಸಾಕಾಣೆಯಲ್ಲಿ ತೊಡಗಿರುವ ಬೆಳೆಗಾರರಿಗೆ ಬೆಲೆ ಕುಸಿತ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಬೆಳೆ ಸಾಕಷ್ಟು ವಿಸ್ತರಣೆಗೊಂಡಿದ್ದು, ನಿರೀಕ್ಷೆಗೂ ಮೀರಿ ಅವಕ ಮಾರುಕಟ್ಟೆಗೆ ಬರುತ್ತಿದೆ. ಆದರೆ ಸಾಮಾನ್ಯವಾಗಿ ರೇಷ್ಮೆಗೂಡು 300 ರಿಂದ 350, 400 ರೂ. ವರೆಗೂ ಮಾರಾಟಗೊಳ್ಳುತ್ತಿತ್ತು. ಆದರೆ ವಾರದಿಂದ 250, 270ಕ್ಕೆ ಇಳಿದಿರುವುದು ಬೆಳೆಗಾರರನ್ನು ತೀವ್ರ ಚಿಂತೆಗೀಡು ಮಾಡಿದೆ.

Advertisement

ಬೆಲೆ ಕುಸಿತಕ್ಕೆ ಏನು ಕಾರಣ?: ಸದ್ಯ ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಸದ್ಯದ ಹವಾಮಾನ ವೈಪರೀತ್ಯದಿಂದ ಮಳೆಗಾಲ ಶುರುವಾಗಿರುವುದು ರೇಷ್ಮೆಗೂಡು ಬಚ್ಚಿಣಿಕೆ ಸಮರ್ಪಕವಾಗಿ ಆಗುವುದಿಲ್ಲ ಎಂಬ ಕಾರಣಕ್ಕೆ ಬೆಲೆ ಕುಸಿತವಾದರೂ ಸತತ ನಾಲ್ಕೈದು ವರ್ಷಗಳಿಂದ ರೇಷ್ಮೆಗೂಡು ಧಾರಣೆಯಲ್ಲಿ ಕಾಣುತ್ತಿರುವ ಏರಿಳಿತದಿಂದ ರೇಷ್ಮೆಗೂಡು ಖರೀದಿಸುವ ರೀಲರ್‌ಗಳ ಬಳಿ ರೇಷ್ಮೆಗೂಡು ಖರೀದಿಗೆ ಹಣ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರಚನೆಯಾಗಿದ್ದ ಬಸವರಾಜ್‌ ಸಮಿತಿ ನೀಡಿರುವ ವರದಿಯನ್ನು ಮೈತ್ರಿ ಸರ್ಕಾರ ಸಂಪೂರ್ಣವಾಗಿ ಮರೆತು ಬಿಟ್ಟಿದೆ. ಬೆಲೆ ಕುಸಿತವಾದಾಗ ರೈತರಿಗೆ ಬೆಂಬಲ ಬೆಲೆ ಘೋಷಿಸಬೇಕು. ಅದೇ ರೀತಿ ರೀಲರ್‌ಗಳಿಗೆ ನೆರವಾಗಬೇಕು ಎಂಬ ಸಲಹೆಯನ್ನು ಸರ್ಕಾರ ಮರೆತು ಬಿಟ್ಟಿದೆ.

ಇ-ಹರಾಜುನಿಂದ ಉಲ್ಬಣಿಸಿರುವ ಹಲವು ತೊಡುಕುಗಳಿಗೆ ಸರ್ಕಾರ ಇನ್ನೂ ಸ್ಪಂದಿಸದ ಕಾರಣ ಮಾರುಕಟ್ಟೆಯಲ್ಲಿ ಪದೇ ಪದೆ ರೇಷ್ಮೆಗೂಡಿನ ಧಾರಣೆ ಕುಸಿಯುತ್ತಿದೆ ಎಂದು ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯ ರೀಲರ್‌ ಅನ್ವರ್‌ ಎಂಬವರು ಉದಯವಾಣಿಗೆ ತಿಳಿಸಿದರು. ಸದ್ಯದ ಬೆಲೆ ಕುಸಿತಕ್ಕೆ ಹವಾಮಾನ ವೈಪರೀತ್ಯವೂ ಕಾರಣ ಎಂದರು.

ಒಟ್ಟಾರೆ ಬರದ ಬೇಗುದಿಯಲ್ಲಿ ಸಿಲುಕಿರುವ ಜಿಲ್ಲೆಯ ರೈತರಿಗೆ ಪದೇ ಪದೆ ರೇಷ್ಮೆಗೂಡಿನ ಧಾರಣೆ ಕುಸಿಯುತ್ತಿರುವುದು ಸಹಜವಾಗಿಯೇ ರೇಷ್ಮೆ ಬೆಳೆಗಾರರ ನೆಮ್ಮದಿ ಕೆಡಿಸಿದೆ. ಆದರೆ ಮೈತ್ರಿ ಸರ್ಕಾರ ರೇಷ್ಮೆ ಬೆಳೆಗಾರರ ನೆರವಿಗೆ ಬರುವ ದಿಸೆಯಲ್ಲಿ ಬಸವರಾಜ್‌ ಸಮಿತಿ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಂದು ಬೆಲೆಉ ಸ್ಥಿರತೆ ಕಾಪಾಡುವಲ್ಲಿ ವಿಫ‌ಲವಾಗಿರುವುದು ರೇಷ್ಮೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕೈ ಹಿಡಿಯದ ಇ-ಹರಾಜು ಪ್ರಕ್ರಿಯೆ: ರೇಷ್ಮೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜೊತೆಗೆ ಕಾಲಕಾಲಕ್ಕೆ ನ್ಯಾಯ ಸಮ್ಮತವಾದ ಬೆಲೆ ದೊರೆಕಿಸಿಕೊಡಬೇಕು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಬೇಕೆಂಬ ಮಹತ್ವಕಾಂಕ್ಷೆ ಹೊತ್ತು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸರ್ಕಾರ ಇ-ಹರಾಜು ವ್ಯವಸ್ಥೆ ಜಾರಿಗೆ ತಂದರೂ ಕೂಡ ರೇಷ್ಮೆ ಬೆಳೆಗಾರರ ಕೈ ಹಿಡಿಯಲಿಲ್ಲ.

ಇ-ಹರಾಜು ಪ್ರಕ್ರಿಯೆಯೆಂದ ಉಲ್ಬಣಿಸಿರುವ ಹಲವು ತೊಡುಕುಗಳಿಗೆ ಪರಿಹಾರ ಸೂಚಿಸುವಲ್ಲಿ ಸರ್ಕಾರ ವಿಫ‌ಲವಾಗಿದೆ ಎಂಬ ಆರೋಪ ರೇಷ್ಮೆಗೂಡು ಖರೀದಿಸುವ ರೀಲರ್‌ಗಳಿಂದ ಕೇಳಿ ಬರುತ್ತಿದೆ. ಹೀಗಾಗಿ ಇ-ಹರಾಜು ಪ್ರಕ್ರಿಯೆ ಬಂದರೂ ಬೆಲೆ ಸ್ಥಿರತೆ ಕಾಪಾಡುವಲ್ಲಿ ಸಾಧ್ಯವಾಗುತ್ತಿಲ್ಲ.

ರೇಷ್ಮೆ ಸಚಿವರ ವೈಖರಿಗೆ ನೆಟ್ಟಿಗರ ಆಕ್ರೋಶ: ರಾಜ್ಯದಲ್ಲಿ ಕಳೆದೊಂದು ವಾರದಿಂದ ರೇಷ್ಮೆಗೂಡು ಧಾರಣೆ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದ್ದರೂ ಈ ಬಗ್ಗೆ ರಾಜ್ಯದ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಅಧಿಕಾರಿಗಳ ಸಭೆ ನಡೆಸಿ ರೇಷ್ಮೆಗೂಡು ಕುಸಿದಿರುವ ಕುರಿತು ಚರ್ಚೆ ನಡೆಸದ ಬಗ್ಗೆ ರೈತರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೆಲೆ ಕುಸಿದರೂ ರೇಷ್ಮೆ ಸಚಿವರು ಎಲ್ಲಿದ್ದಾರೆ ಪತ್ತೆ ಮಾಡಿಕೊಡಿ ಎಂದು ರೈತಪರ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿರುವುದು ಕಂಡು ಬರುತ್ತಿದೆ. ಪ್ರತಿ ದಿನ ರಾಜ್ಯದಲ್ಲಿ 150 ಟನ್‌ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತದೆ. ಲಕ್ಷಾಂತರ ರೈತರು ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಬೆಲೆ ಕುಸಿತವಾದರೂ ರೇಷ್ಮೆ ಸಚಿವರು ಎಚ್ಚೆತ್ತುಕೊಂಡು ರೈತರ ನೆರವಿಗೆ ಧಾವಿಸದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಚಿವರು ಮೈತ್ರಿ ಸರ್ಕಾರವನ್ನು ಉಳಿಸುವಲ್ಲಿ ತಲ್ಲೀನರಾಗಿದ್ದಾರೆ ಎಂಬ ಟೀಕೆ, ಟಿಪ್ಪಣಿಗಳು ರೇಷ್ಮೆ ಬೆಳೆಗಾರರಿಂದ ವ್ಯಕ್ತವಾಗುತ್ತಿವೆ.

ನೋಟು ಅಮಾನ್ಯಿಕರಣಗೊಂಡ ದಿನದಿಂದ ಕೂಡ ರೇಷ್ಮೆಗೂಡು ಬೆಲೆಯಲ್ಲಿ ಸಾಕಷ್ಟು ಏರುಪೇರು ಆಗುತ್ತಲೇ ಇದೆ. ಬೆಲೆ ಕುಸಿತಕ್ಕೆ ನಿಖರವಾದ ಕಾರಣ ಇಲಾಖೆಯ ಬಳಿ ಇಲ್ಲ. ಅಧಿಕಾರಿಗಳು ಬೆಲೆ ಕುಸಿತದ ಕಾರಣಗಳನ್ನು ಹುಡುಕುವಲ್ಲಿ ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ. ರೇಷ್ಮೆ ಕೃಷಿಯನ್ನೇ ನಂಬಿದ ರೈತರು ಬೀದಿಗೆ ಬರುವಂತಾಗಿದೆ.
-ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ಸಂಚಾಲಕರು, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next