Advertisement

“ತಮ್ಮನ ಸಾವಿಗೆ ಪ್ರತೀಕಾರವಾಗಿ ಸಿಧು ಹತ್ಯೆ’: ಸಚಿನ್‌ ಬಿಷ್ಣೋಯಿ

06:44 PM Jun 03, 2022 | Team Udayavani |

ನವದೆಹಲಿ: ಇತ್ತೀಚೆಗೆ ಹತ್ಯೆಗೊಳಗಾದ ಗಾಯಕ ಸಿಧು ಮೂಸೆವಾಲನ ಹತ್ಯೆ ಮಾಡಿದ್ದು ತಾನೇ ಎಂದು ಪಾತಕಿ ಸಚಿನ್‌ ಬಿಷ್ಣೋಯಿ ಟೀವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.

Advertisement

ತನ್ನ ಕೈಯಾರೆ ಸಿಧುವನ್ನು ಕೊಂದಿದ್ದೇನೆ. ಆತ ನನ್ನ ತಮ್ಮ ವಿಕ್ರಮ್‌ಜಿತ್‌ ಸಿಂಗ್‌ ಮಿಡ್ಡುಖೇರಾ ಹತ್ಯೆ ಮಾಡಿಸಿದ್ದಾನೆ. ಅದಕ್ಕೆ ನಾವು ಹೀಗೆ ಮಾಡಬೇಕಾಯಿತು ಎಂದು ಸಚಿನ್‌ ನೇರವಾಗಿ ಹೇಳಿಕೊಂಡಿದ್ದಾನೆ. ಅಕಾಲಿದಳದ ನಾಯಕ ಮಿಡ್ಡುಖೇರಾನನ್ನು 2021 ಆಗಸ್ಟ್‌ನಲ್ಲಿ ಮೊಹಾಲಿಯಲ್ಲಿ ಕೊಲ್ಲಲಾಗಿತ್ತು.

ಕಾರಾಗೃಹದಲ್ಲಿ ಗಲಾಟೆ
ಸಿಧು ಹತ್ಯೆಯಿಂದ ಪಂಜಾಬ್‌ನ ಫಿರೋಜ್‌ಪುರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಭಾರೀ ಸಂಘರ್ಷ ನಡೆದಿದೆ. ನಾಲ್ಕು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ನಾಲ್ವರನ್ನು ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಿಧು ಸಾವಿಗೆ ಒಂದು ಸಂತಾಪ ಸೂಚಿಸುತ್ತಿದ್ದಾಗ, ಇನ್ನೊಂದು ಗುಂಪು ಅದನ್ನು ವಿರೋಧಿಸಿದ್ದೇ ಈ ಘರ್ಷಣೆಗೆ ಕಾರಣ ಎನ್ನಲಾಗಿದೆ.

ಸಿಧು ಮನೆಗೆ ಭೇಟಿ ನೀಡಿದ ಪಂಜಾಬ್‌ ಸಿಎಂ
ಪಂಜಾಬ್‌ನ ನೂತನ ಮುಖ್ಯಮಂತ್ರಿ, ಆಮ್‌ ಆದ್ಮಿಪಕ್ಷದ ಭಗವಂತ್‌ ಮಾನ್‌ ಮಾನ್ಸಾ ಜಿಲ್ಲೆಯ ಮೂಸಾದಲ್ಲಿರುವ ಸಿಧು ಮನೆಗೆ ಭೇಟಿ ನೀಡಿದ್ದಾರೆ. ಜನರ ಪ್ರತಿಭಟನೆಯ ನಡುವೆಯೂ ಪೊಲೀಸರ ಬಿಗಿಭದ್ರತೆಯಲ್ಲಿ ಭಗವಂತ್‌, ಸಿಧು ಮನೆ ಪ್ರವೇಶಿಸಿ ಅವರ ಪೋಷಕರೊಂದಿಗೆ ಮಾತುಕತೆಯಾಡಿದರು. ಒಟ್ಟಾರೆ ಒಂದು ಗಂಟೆ ಸಿಧು ಮನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next