Advertisement

ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

06:00 PM Sep 24, 2021 | Team Udayavani |

ಬೆಂಗಳೂರು : ಸಭಾಧ್ಯಕ್ಷರ ಹುದ್ದೆ ರಾಜಕಿಯ ಮತ್ತು ಪಕ್ಷಗಳನ್ನು ಮೀರಿದ ಹುದ್ದೆ. ಅವರ ನಿರ್ಣಯಗಳು ಯಾವಾಗಲೂ ಪಕ್ಷಾತೀತವಾಗಿರಬೇಕು. ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದಾರೆ ಎಂಬ ನನ್ನ ನಂಬಿಕೆ ಹುಸಿಯಾಗಿದೆ. ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರ ಆರ್.ಎಸ್.ಎಸ್ ನವರ ನಿರ್ದೇಶನದಲ್ಲಿ ಮುಖವಾಡ ಧರಿಸಿ, ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷರು ಅನಿರ್ಧಿಷ್ಟ ಅವಧಿಗೆ ಮುಂದೂಡಿದ ಬಳಿಕ ಸಿದ್ದರಾಮಯ್ಯ ಅವರು ಮೊಗಸಾಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರ್ಕಾರದ ನಿರ್ದೇಶನದ ಮೇರೆಗೆ ಸಭಾಧ್ಯಕ್ಷರು ಕಲಾಪವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಿದ್ದಾರೆ. ಆರು ತಿಂಗಳ ಬಳಿಕ ಅಧಿವೇಶನ ನಡೆಯುತ್ತಿದೆ. ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸರ್ಕಾರದ ಗಮನ ಸೆಳೆಯಬೇಕಾದ ಸಮಸ್ಯೆಗಳಿವೆ, ಹಾಗಾಗಿ ಕನಿಷ್ಟ ಇಪ್ಪತ್ತು ದಿನ ಸದನ ನಡೆಸಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹೇಳಿದ್ದೆ. ಸಭಾಧ್ಯಕ್ಷರು ಇನ್ನೊಂದು ಸಭೆ ಕರೆದಾಗ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಭರವಸೆ ನೀಡಿದ್ದರು. ಆದರೆ ಈ ವಾರ ಸಭೆ ಕರೆಯಲೇ ಇಲ್ಲ, ಇನ್ನು ಐದು ದಿನವಾದರೂ ಸದನ ಮುಂದುವರೆಸುವಂತೆ ಆಗ ಸಭಾಧ್ಯಕ್ಷರಿಗೆ ಪತ್ರ ಬರೆದೆ. ಅದಕ್ಕವರು ಸರ್ಕಾರ ಸಿದ್ಧವಿಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಗೆ ನಾನು ಅವಕಾಶ ಕೇಳಿದ್ದೆ. ಸಮಯ ಇಲ್ಲ ಎಂದು ಅವಕಾಶವನ್ನೇ ನೀಡಿಲ್ಲ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ತೀರ ಕೆಟ್ಟದಾಗಿದೆ, ಹೀಗೆ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಬೇಕಿತ್ತು. ಸನದ ಮುಂದುವರೆಸಿದ್ದರೆ ಈ ಎಲ್ಲಾ ವಿಷಯಗಳ ಮೇಲೆ ಚರ್ಚಿಸಬಹುದಿತ್ತು. ಈ ವರೆಗೆ ಸದನದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆಯಾದರೂ ಸರ್ಕಾರ ಸಕಾರಾತ್ಮಕವಾಗಿ ಉತ್ತರ ನೀಡಿದೆಯೇ, ಅದೂ ಇಲ್ಲ. ಸದನದಲ್ಲಿ ಧರಣಿ, ಪ್ರತಿಭಟನೆ ಮಾಡದೆ ಜನರ ಸಮಸ್ಯೆಗಳ ಚರ್ಚೆಗೆ ಹೆಚ್ಚು ಸಮಯ ಸಿಗಲಿ ಎಂದು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಿದ್ದೆವು. ಯಾವಾಗ ಸದನ ಮುಂದುವರೆಸಲು ಆಗುವುದೇ ಇಲ್ಲ ಎಂದು ಹೇಳಿದರೋ ಆಗ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರ್ಕಾರ ಶೋಷಿತರು, ದಲಿತರು, ಮಹಿಳೆಯರನ್ನು ಸಂಘ ಪರಿವಾರದ, ಮೇಲ್ವರ್ಗದ ಜನರ ಗುಲಾಮರನ್ನಾಗಿಸಲು ಹೊರಟಿದೆ. ಇದನ್ನು ಸದನದಲ್ಲಿ ವಿರೋಧ ಮಾಡಿದರೆ ಸಭಾಧ್ಯಕ್ಷರೇ ಸಮರ್ಥನೆಗೆ ಇಳಿಯುತ್ತಾರೆ.

Advertisement

ಕೆಐಎಡಿಬಿ ಅಧೀನದಲ್ಲಿರುವ ಸುಮಾರು 400 ಕೋಟಿ ಮೌಲ್ಯದ 116 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಕೇವಲ ರೂ. 50 ಕೋಟಿಗೆ ಸೆಸ್ ಎಂಬ ಆರ್.ಎಸ್.ಎಸ್ ನವರನ್ನು ಒಳಗೊಂಡ ಸಂಸ್ಥೆಗೆ ಮಾರಲು ನಿರ್ಧರಿಸಿದೆ. ಇದನ್ನು ಪ್ರಶ್ನಿಸಿದರೆ ಸಭಾಧ್ಯಕ್ಷರು ಸರ್ಕಾರದ ಕೈಗೊಂಬೆಯಂತೆ ವರ್ತಿಸಿದರು.

ಇದನ್ನೂ ಓದಿ : ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಕೊರೊನಾದಿಂದ ಸತ್ತವರ ಲೆಕ್ಕದಲ್ಲೂ ಸರ್ಕಾರ ಸುಳ್ಳು ಹೇಳಿದೆ. ಹಿಂದಿನ ಮುಖ್ಯಮಂತ್ರಿ ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಮೂನ್ನೂರು ಕೋಟಿ ಘೋಷಣೆ ಮಾಡಿದ್ದರು. ಅವರು ಅಧಿಕಾರದಿಂದ ಇಳಿದು ಎರಡು ತಿಂಗಳಾಯಿತು. ಇನ್ನೂ ಒಂದು ಪೈಸೆ ಪರಿಹಾರ ಕೊಟ್ಟಿಲ್ಲ. ಶ್ರೀರಾಮುಲು ಪರಿಹಾರ ಕೊಟ್ಟಿದ್ದೀವಿ ಎಂದು ಹೇಳಿ ಸಿಕ್ಕಿಬಿದ್ದರು, ಕೊನೆಗೆ ಯಡಿಯೂರಪ್ಪ ಅವರೇ ಪರಿಹಾರ ಕೊಟ್ಟಿಲ್ಲ ಎಂದು ಸಮಜಾಯಿಷಿ ಹೇಳಿದರು.

ಲೋಕಸಭೆಯ ಸಭಾಧ್ಯಕ್ಷರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ದೇಶದ 75 ವರ್ಷಗಳ ಇತಿಹಾಸದಲ್ಲಿ, ವಿಧಾನಸೌಧ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನದಿಂದ ಇವತ್ತಿನವರೆಗೆ ಲೋಕಸಭಾ ಸಭಾಧ್ಯಕ್ಷರು ವಿಧಾನಮಂಡಲದ ಜಂಟಿ ಅಧಿವೇಶನ ಕುರಿತು ಭಾಷಣ ಮಾಡಿಲ್ಲ.

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಖಂಡಿಸಿ ನಾವು ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿಯಲ್ಲಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಆಸ್ಪತ್ರೆ ಬಿಲ್, ದಿನಸಿ ಪದಾರ್ಥ, ಬಸ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಹಾಗೂ ಸೇವೆಗಳ ಬೆಲೆ ಗಗನಕ್ಕೇರಿ, ಜನಸಾಮಾನ್ಯರು ಪರದಾಡುವಂತಾಗಿದೆ.

ಒಂದು ಮಧ್ಯಮ ವರ್ಗದ ಕುಟುಂಬದ ಜೀವನ ನಿರ್ವಹಣೆಯ ವೆಚ್ಚ ಇಂದು ದುಪ್ಪಟ್ಟಾಗಿದೆ, ಆದರೆ ಸಂಬಳ, ಪಿಂಚಣಿ, ಕೂಲಿ ಇವೆಲ್ಲವೂ ಹಿಂದಿನಷ್ಟೇ ಇದೆ. ಹೀಗಾದರೆ ಸಾಮಾನ್ಯ ಜನ ಬದುಕುವುದು ಹೇಗೆ?

Advertisement

Udayavani is now on Telegram. Click here to join our channel and stay updated with the latest news.

Next