Advertisement

ರಾಜಕೀಯವಾಗಿ ಬದುಕಿದ್ದೇವೆ ಎಂದು ತೋರಿಸಲು ಸಿದ್ದು ಹೇಳಿಕೆ

11:16 PM Oct 05, 2019 | Lakshmi GovindaRaju |

ಚಿಕ್ಕಮಗಳೂರು: ರಾಜಕೀಯವಾಗಿ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಸಿ.ಟಿ.ರವಿ ವ್ಯಂಗ್ಯ ಮಾಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸರ್ಕಾರ ಸತ್ತು ಹೋಗಿದೆ. ಇದನ್ನು ಕಿತ್ತೆಸೆಯಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಗಮನ ಸೆಳೆದಾಗ ಪ್ರತಿಕ್ರಿಯಿಸಿದರು.

Advertisement

ನೆರೆ ಪರಿಹಾರವಾಗಿ 1,125 ಕುಟುಂಬಕ್ಕೆ ತಾತ್ಕಾಲಿಕವಾಗಿ ತಲಾ 10 ಸಾವಿರ ರೂ.ನೀಡಲಾಗುತ್ತಿದೆ. 1373 ಮನೆಗಳಿಗೆ 5.85 ಕೋಟಿ ರೂ. ಕೊಡಲಾಗಿದೆ. ಭೂಕುಸಿತದಿಂದ ಮನೆ-ಜಮೀನು ಕಳೆದುಕೊಂಡವರಿಗೆ ಭೂಮಿ ಗುರುತಿಸಲಾಗಿದೆ. ಸರ್ಕಾರ ಸತ್ತು ಹೋಗಿದ್ದರೆ ಎರಡು ತಿಂಗಳಲ್ಲಿ ಈ ರೀತಿಯ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದರು.

ಖುಷ್ಕಿ ಜಮೀನು ನಾಶವಾಗಿದ್ದರೆ 1 ಹೆಕ್ಟೇರ್‌ಗೆ 8 ಸಾವಿರ ರೂ., ತರಿ ಜಮೀನಿಗೆ 13 ಸಾವಿರ ರೂ. ಬಾಗಾಯ್ತುಗೆ 18 ಸಾವಿರ ರೂ., ಭೂಕುಸಿತ ಉಂಟಾಗಿದ್ದರೆ 1 ಹೆಕ್ಟೇರ್‌ಗೆ 37,500 ರೂ. ನೀಡಲಾಗುತ್ತಿದೆ. ಯಾವ ಸರ್ಕಾರವೂ ಎರಡು ತಿಂಗಳಲ್ಲಿ ಈ ಪ್ರಮಾಣದ ಪರಿಹಾರ ನೀಡಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ವಾಗ್ರಹಪೀಡಿತ ಮತ್ತು ದುರುದ್ದೇಶ ಪೂರ್ವಕವಾಗಿ ಸರ್ಕಾರದ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ.

ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕೇ ದೊರಕುತ್ತದೆ. 2004 ರಿಂದ 09ರವರೆಗೆ ಉಂಟಾದ ಅತಿವೃಷ್ಟಿಗೆ ಯುಪಿಎ ಸರ್ಕಾರ ರಾಜ್ಯಕ್ಕೆ 1,524 ಕೋಟಿ ರೂ.ನೀಡಿತ್ತು. 2009 ರಿಂದ 14ರವರೆಗೆ 3,297 ಕೋಟಿ ರೂ.ನೀಡಲಾಗಿತ್ತು ಎಂದು ಹೇಳಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014 ರಿಂದ 2019 ರವರೆಗೆ ರಾಜ್ಯಕ್ಕೆ ನೆರೆ ಪರಿಹಾರವಾಗಿ 6,082 ಕೋಟಿ ರೂ. ಮತ್ತು 1,087 ಕೋಟಿ ರೂ. ಸೇರಿದಂತೆ ಒಟ್ಟು 7,170 ಕೋಟಿ ರೂ.ನೀಡಿದೆ. ಕಾಫಿ ಮತ್ತು ಅಡಕೆ ಬೆಳೆ ನಾಶವಾಗಿದ್ದು, ವಿಶೇಷ ಪ್ಯಾಕೇಜ್‌ ಬಿಡುಗಡೆಗೆ ರಾಜ್ಯ ಸಚಿವ ಸಂಪುಟದಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next