Advertisement

ಸಿದ್ದರಾಮಯ್ಯ- ಯಡಿಯೂರಪ್ಪ ಭೇಟಿ ನಿಜ: ಕುಮಾರಸ್ವಾಮಿ

11:09 PM Oct 13, 2021 | Team Udayavani |

ಬೆಂಗಳೂರು: “ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನ ಕಾರ್ಯತಂತ್ರ- ರಣತಂತ್ರ ಬೇರೆಯೇ ಇರಲಿದೆ. ಬೂತ್‌ ಮಟ್ಟದಲ್ಲಿ ಪಕ್ಷದ ಹೊಸ ಪಡೆ ಕಟ್ಟಲಿದ್ದೇವೆ. ಸಂಕ್ರಾತಿಗೆ ಮೊದಲ ಹಂತದಲ್ಲಿ 126 ಅಭ್ಯರ್ಥಿಗಳ ಪಟ್ಟಿಯೊಂದಿಗೆ ರಾಜ್ಯ ಪ್ರವಾಸ ಆರಂಭಿಸಲಿದ್ದೇನೆ’- ಇವು 2023ರ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ನಾಲ್ಕು ತಿಂಗಳ “ಟಾಸ್ಕ್’ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಮಾತುಗಳು.

Advertisement

ಇದ್ದಕ್ಕಿದ್ದಂತೆ ಬಿಎಸ್‌ವೈ- ಸಿದ್ದು ಭೇಟಿ “ಬಾಂಬ್‌’ ಉದ್ದೇಶವೇನು?
ಈ ಹೇಳಿಕೆ ಹಿಂದೆ ಯಾವುದೇ ಉದ್ದೇಶ ಇಲ್ಲ. ಅವರಿಬ್ಬರು ಭೇಟಿ ಯಾಗಿದ್ದು ನಿಜ. ಡಿಸೆಂಬರ್‌ ವೇಳೆಗೆ ಏನೋ ಮಾಡುವ ಲೆಕ್ಕಾಚಾರ ಹಾಕಿ ಕೊಂಡಿದ್ದರು. ಈಗ ಎಲ್ಲವೂ ಉಲ್ಟಾ ಆಗಿದ್ದು, ಏನೂ ಆಗಿಲ್ಲ ಎಂದು ಕಥೆ ಕಟ್ಟುತ್ತಿದ್ದಾರೆ.

ಅವರಿಬ್ಬರೂ ಭೇಟಿಯಾಗಿಲ್ಲ ಎಂದಿದ್ದಾರಲ್ಲ?
ಗೌಪ್ಯವಾಗಿ ಭೇಟಿಯಾಗಿದ್ದನ್ನು ಯಾರಾದರೂ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರಾ? ಇವರ ರಾಜಕೀಯ ಒಳಒಪ್ಪಂದ ನಾನು ನೋಡಿಲ್ಲವೇ? 2006ರಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಏನು ಮಾಡಿದ್ದರು, ಯಾರನ್ನು ಗೆಲ್ಲಿಸಿದ್ದರು ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿರುವವರೆಗೆ ಇವರ ವರಸೆ ಬೇರೆಯೇ ಇತ್ತು. ಅಧಿಕಾರಕ್ಕಾಗಿ ಇವರು ಏನು ಬೇಕಾದರೂ ಮಾಡುತ್ತಾರೆ.

ಹಿಂದುಳಿದ ವರ್ಗಗಳ ಆಯೋಗದ ವರದಿ ಬಿಡುಗಡೆ ಯನ್ನು ತಡೆದಿದ್ದು ನಿಜವೇ?
ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅವರು ಆ ವಿಚಾರ ಎಂದೂ ಪ್ರಸ್ತಾವಿಸಲೇ ಇಲ್ಲ. ಈಗ ಮಾತೆತ್ತಿದರೆ ಕುಮಾರಸ್ವಾಮಿ ಬಿಡುಗಡೆಗೆ ಅವಕಾಶ ಕೊಡಲಿಲ್ಲ ಎಂಬ ಸುಳ್ಳಿನ ಡಂಗೂರ ಸಾರುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಅದ್ಯಾವಾಗಲೋ ಮಾಡಿರುವ ಗಣತಿ ಈಗ ಎಷ್ಟರ ಮಟ್ಟಿಗೆ ಪ್ರಸ್ತುತ? ಇದರ ಅಜೆಂಡಾ ಬೇರೆಯೇ ಇದೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಸಿದ್ದ ರಾಮಯ್ಯ ಕಾಂಗ್ರೆಸ್‌ನಲ್ಲಿ ಇರುತ್ತಾರಾ ಎಂಬುದನ್ನು ಕಾದು ನೋಡೋಣ.

ಕಾಂಗ್ರೆಸ್‌ ಸೋಲಿಸಲು ಹಾನಗಲ್‌-ಸಿಂದಗಿಯಲ್ಲಿ ಅಭ್ಯರ್ಥಿ ಹಾಕಿದ್ದೀರಂತೆ?
ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ ಪಕ್ಷದವರನ್ನು ಕೇಳಿ ನಾವು ಅಲ್ಪಸಂಖ್ಯಾಕರಿಗೆ ಸ್ಥಾನಮಾನ ಅಥವಾ ಅಧಿಕಾರ ಕೊಡಬೇಕಿಲ್ಲ. ಸಿ.ಎಂ.ಇಬ್ರಾಹಿಂ, ಮಿರಾಜುದ್ದೀನ್‌ ಪಟೇಲ್‌ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಪಕ್ಷ ನಮ್ಮದು. ಇದೇ ಇಕ್ಬಾಲ್‌ ಅನ್ಸಾರಿಗೆ ಸಚಿವ ಸ್ಥಾನ ನೀಡಬಾರದು ಎಂದು ಪಟ್ಟು ಹಿಡಿದಿದ್ದವರು ಸಿದ್ದರಾಮಯ್ಯ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಸ್ಥಾನ ಕೊಡ್ತೇವೆ. ಕಾಂಗ್ರೆಸ್‌ನವರು ತಾಕತ್ತಿದ್ದರೆ ಈ ಭರವಸೆ ನೀಡಲಿ.

Advertisement

2023ರ ಚುನಾವಣೆಗೆ ಈಗಲೇ ತಯಾರಾದಂತಿದೆಯಲ್ಲ?
ಹೌದು. ನಾನು ಈಗಿನಿಂದಲೇ ಸಜ್ಜಾಗುತ್ತಿದ್ದೇನೆ. 2008, 2013 ಹಾಗೂ 2018ರ ವಿಧಾನಸಭೆ ಚುನಾ ವಣೆಯಲ್ಲಿ ಹೇಗೆ ಎಡವಿದೆವು? ಎಲ್ಲಿ ವ್ಯತ್ಯಾಸವಾಯಿತು ಎಂಬ ಅಂಶ ಪತ್ತೆ ಹಚ್ಚಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕು ಎಂಬ ಬಗ್ಗೆ ಸ್ಪಷ್ಟ ನೀಲನಕ್ಷೆ ಹಾಕಿಕೊಂಡಿದ್ದೇವೆ.

ಅವಧಿಪೂರ್ವ ಚುನಾವಣೆ ಅನುಮಾನ ಮೂಡುತ್ತಿದೆಯಲ್ಲ?
ಅವಧಿಪೂರ್ವ ಚುನಾವಣೆ ಬಗ್ಗೆ ಹೇಳಲಾಗದು. ಆದರೆ, ಜೆಡಿಎಸ್‌ ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ಧವಾಗಿದೆ.

ಪಕ್ಷ ಸಂಘಟನೆಯಲ್ಲಿ ನಿಖಿಲ್ ಹಾಗೂ ಪ್ರಜ್ವಲ್‌ ಪಾತ್ರ ಏನಿರಲಿದೆ?
ಇಬ್ಬರೂ ಪಕ್ಷದ ಶಿಸ್ತಿನ ಸಿಪಾಯಿ ಗಳು. ಅವರೂ ಸಾಮಾನ್ಯ ಕಾರ್ಯಕರ್ತರಂತೆ ಯಾವುದೇ ಹುದ್ದೆಯಲ್ಲಿದ್ದರೂ ಕೆಲಸ ಮಾಡಲಿ ದ್ದಾರೆ. ಇಬ್ಬರೂ ಜತೆಗೂಡಿಯೇ ಸಂಘಟನೆಗೆ ಹೊರಡಲಿದ್ದಾರೆ.

ನೀವು ನಡೆಸಿದ ಕಾರ್ಯಾಗಾರ ಎಷ್ಟರ ಮಟ್ಟಿಗೆ ಉಪಯುಕ್ತ?
ಇದೊಂದು ವಿನೂತನ ಪ್ರಯತ್ನ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿರುವವರಿಗೆ ನಾಲ್ಕು ತಿಂಗಳ “ಟಾಸ್ಕ್’ ನೀಡಿದ್ದೇನೆ. ಅದರಲ್ಲಿ ಅವರು ಪಾಸ್‌ ಆದರೆ ಮಾತ್ರ ಟಿಕೆಟ್‌ ಎಂದೂ ಹೇಳಿದ್ದೇನೆ. ಕಾರ್ಯಾಗಾರ ನನಗೂ ಒಂದು ಹೊಸ ಅನುಭವ ಕೊಟ್ಟಿದೆ. ಹತ್ತಾರು ಹೊಸ ಮುಖಗಳ ತಲಾಶೆಯೂ ಆಗಿದೆ.

ನಿಮ್ಮ ಶಾಸಕರು ಒಬ್ಬೊಬ್ಬರೇ ಪಕ್ಷ ಬಿಡುವ ಮನಸ್ಥಿತಿಯಲ್ಲಿ ಇದ್ದಾರಲ್ಲ?
ಪಕ್ಷ ತೊರೆಯುವವರ ಬಗ್ಗೆ ಯೋಚಿಸುವುದಿಲ್ಲ. ಪಕ್ಷದ ಹೆಸರು ಹಾಗೂ ನಮ್ಮ ಶ್ರಮದಿಂದ ಗೆದ್ದವರು ಬೆನ್ನಿಗೆ ಚೂರಿ ಹಾಕಿದರೆ ಅಲ್ಲಿನ ಮತದಾರರು ಅದಕ್ಕೆ ಸೂಕ್ತ ಹಾಗೂ ತಕ್ಕ ಉತ್ತರ ನೀಡಲಿದ್ದಾರೆ. ನೂರಾರು ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ಪಕ್ಷಕ್ಕಿದೆ.

ಆರೆಸ್ಸೆಸ್‌ ಟೀಕೆಗೆ ಕಾರಣ?
ಸತ್ಯ ಹೇಳಲು ನಾನು ಯಾವತ್ತೂ ಹಿಂಜರಿಯುವುದಿಲ್ಲ. ಈಗಿನ ಆರೆಸ್ಸೆಸ್‌ ಕುರಿತು ಲೇಖಕರೊಬ್ಬರು ಬರೆದಿದ್ದನ್ನು ಉಲ್ಲೇಖಿಸಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಮೇಲೆ ಯಾಕೆ ಮುಗಿಬೀಳುತ್ತಿದ್ದೀರಿ?
ಸಿದ್ದರಾಮಯ್ಯ ಅವರೇ ನಮ್ಮ ಮೇಲೆ ವಿನಾಕಾರಣ ಮುಗಿಬಿದ್ದಿದ್ದಾರೆ. ಹಾನಗಲ್‌-ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟರೆ ಇವರಿಗೇಕೆ ನೋವು? ನಿತ್ಯ ಜೆಡಿಎಸ್‌ ಬಗ್ಗೆ ಮಾತನಾಡುತ್ತಿದ್ದರೆ ನಾವು ಎಷ್ಟು ದಿನ ಸಹಿಸಿಕೊಂಡು ಇರಲು ಸಾಧ್ಯ?

ಬೂತ್‌ವಾರು ಹೊಸ ಪಡೆ
2023ರ ವಿಧಾನಸಭೆ ಚುನಾವಣೆ ನಮ್ಮ ಕಾರ್ಯತಂತ್ರ ಹಾಗೂ ರಣತಂತ್ರ ಬೇರೆಯೇ ಇರುತ್ತದೆ. ಪಂಚತಂತ್ರ ಯೋಜನೆ ಮೂಲಕ ಜನರ ಮನೆ ಮನ ತಲುಪಲಿದ್ದೇನೆ. ನನ್ನ ರಾಜಕೀಯ ಜೀವನದ ಸವಾಲು ಎಂದು ಪರಿಗಣಿಸಿ ಎದು ರಿಸಲಿದ್ದೇನೆ. ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಬೂತ್‌ ಮಟ್ಟದಲ್ಲಿ ಹೊಸ ಪಡೆ ಕಟ್ಟುತ್ತೇನೆ. ಎಲ್ಲ ಘಟಕಗಳ ಸಹಿತ ಇಡೀ ಪಕ್ಷ ಪುನರ್‌ ಸಂಘಟನೆ ಮಾಡಿ ಪಕ್ಷ ನಿಷ್ಠರಿಗೆ ಅವಕಾಶ ನೀಡಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next