ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಬಂಡವಾಳ ಹಿಂತೆಗೆತದ ಕೇಂದ್ರ ಸರ್ಕಾರದ ತೀರ್ಮಾವನ್ನು ವಿರೋಧಿಸಿವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದು ಮತ್ತು ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜಾರಿಗೆ ತರುತ್ತಿರುವ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್ ವಲಯವನ್ನು ಗುರಿ ಮಾಡಲಾಗಿದೆ. ಆರ್ಥಿಕತೆ ಚೇತರಿಸಿಕೊಳ್ಳಲು ಬ್ಯಾಂಕYಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ ಮತ್ತು ಆಧಾರರಹಿತ ಆರ್ಥಿಕ ವಿಧಾನವಾಗಿದೆ ಎಂದಿದ್ದಾರೆ.
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಬಂಡವಾಳ ಹಿಂತೆಗೆತವನ್ನು ಘೋಷಿಸಿದ್ದಾರೆ. ಇದರಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಬ್ಯಾಂಕಿಂಗ್ ವಲಯದ ಹಿರಿಯರು ಕೇಂದ್ರ ವಿತ್ತ ಸಚಿವರ ಈ ಅನಾಹುತಕಾರಿ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
1969 ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕುಗಳು ದೇಶದಲ್ಲಿ ಪ್ರಗತಿಪರವಾದ, ಪೋ›ತ್ಸಾಹದಾಯಕ ಪಾತ್ರ ನಿರ್ವಹಿಸಿವೆ. ಜನ ಸಾಮಾನ್ಯರ ಪ್ರಗತಿ ಮತ್ತು ದೇಶದ ಆರ್ಥಿಕ ಬೆಳವಣಿಗೆ ನಡುವೆ ಸಾರ್ವಜನಿಕ ವಲಯದ ಬ್ಯಾಂಕುಗಳು ಕೊಂಡಿಯಾಗಿ ಕೆಲಸ ಮಾಡಿವೆ. 1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕYಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65,000 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಳೆದ ವರ್ಷ 10 ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿದಿರಿ. ಘೋಷಿಸಿದಿರಿ. ಇದರಿಂದ ನಮ್ಮ ರಾಜ್ಯದ ನಾಲ್ಕು ಬ್ಯಾಂಕುಗಳು ತಮ್ಮ ಮೂಲ ಆಶಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿವೆ. ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ 27 ರಿಂದ 12 ಕ್ಕೆ ಇಳಿದಿದೆ. ಇದರಿಂದ ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗಗಳು ನಷ್ಟವಾದವು. ಅನೇಕ ಬ್ಯಾಂಕುಗಳು ದಿವಾಳಿಗೆ ಎದ್ದಿವೆ. ಲಕ್ಷಾಂತರ ಠೇವಣಿದಾರರರಿಂದ ಸಂಗ್ರಹಿಸಿದ ಸಾವಿರಾರು ಕೋಟಿ ಠೇವಣಿ ಹಣವನ್ನು ಕಾರ್ಪೋರೇಟ್ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಮೂಲಕ ಠೇವಣಿದಾರರ ಉಳಿತಾಯದ ಹಣವನ್ನು ಮುಳುಗಿಸಲಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರವೇ ಹಲವಾರು ಮಂದಿ ವಂಚಕರು ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕೆ ವಂಚಿಸಿ ದೇಶ ತೊರೆದ ಒಬ್ಬೇ ಒಬ್ಬ ದೊಡ್ಡ ವಂಚಕನನ್ನೂ ಬಂಧಿಸಿ ವಾಪಾಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್ ಳಿಂದ ಬಂಡವಾಳ ಹಿಂತೆಗೆಯುವುದು ಮತ್ತು ಇವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಆಗುವ ಅಡ್ಡ ಪರಿಣಾಮಗಳು ಗೊತ್ತಿದ್ದೂ ಆ ಬಗ್ಗೆ ಜಾಣ ಕುರುಡುತನ ತೋರಿಸುತ್ತಿದೆ. ಆದ್ದರಿಂದ ಈ ದೇಶದ ದುಡಿಯುವ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವ, ಬಡ ಮತ್ತು ಮಧ್ಯಮ ವರ್ಗದ ಜನ ಸಮಾನ್ಯರ ಬದುಕಿಗೆ ಮಾರಕ ಆಗಿರುವ, ದೇಶದ ಆರ್ಥಿಕತೆಯನ್ನು ನಾಶ ಮಾಡುವಂತಹ ಬ್ಯಾಂಕಕುಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತದ ಯೋಜನೆಯನ್ನು ಕೈ ಬಿಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.