ಕುರುಗೋಡು: ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಎಲ್ಲೇ ಸ್ಪರ್ಧಿಸಿದರೂ ಸೋಲುವುದು ಮಾತ್ರ ಖಚಿತ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಮೊದಲು ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಈಗ ಕೋಲಾರ, ವರುಣಾದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರಿಗೆ ಕ್ಷೇತ್ರ ಯಾವುದು ಎಂಬುದೇ ಸ್ಥಿರವಾಗಿಲ್ಲ. ಈ ಬಾರಿ ಅವರು ಎಲ್ಲೇ ಸ್ಪರ್ಧಿಸಿದರೂ ಸೋಲುವುದು ನಿಶ್ಚಿತ ಎಂದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆ ಮಾಡುತ್ತಿವೆ. ಆದರೆ ಇವೆರಡೂ ಪಕ್ಷಗಳು ಅ ಧಿಕಾರಕ್ಕೆ ಬರಲ್ಲ. ಎರಡೂ ಪಕ್ಷಗಳು, ಸುಳ್ಳು ಮತ್ತು ಜೊಳ್ಳು ಯಾತ್ರೆಗಳನ್ನು ಮಾಡುತ್ತ ಜನರಿಗೆ ಮಂಕು ಬೂದಿ ಎರಚುತ್ತಿವೆ. ಈ ಯಾತ್ರೆಗಳಲ್ಲಿ ಹೇಳುತ್ತಿರುವುದು ಸುಳ್ಳು ಎಂಬುದು ಜನರಿಗೂ ಗೊತ್ತಿದೆ ಎಂದರು.
ಈ ಬಾರಿ ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ವರಿಷ್ಠರು ಪಕ್ಷಕ್ಕೆ ಕರೆತರುವ ವಿಷಯದ ಬಗ್ಗೆ ತಮಗೆ ತಿಳಿದಿಲ್ಲ ಎಂದರು.