Advertisement

ಹಿರಿಯರ ವಿಶ್ವಾಸಕ್ಕೆ ಸಿದ್ದರಾಮಯ್ಯ

11:56 AM Oct 19, 2019 | Team Udayavani |

ಬೆಂಗಳೂರು: ಪಕ್ಷದ ಹಿರಿಯ ನಾಯಕರ ವಿರೋಧದ ನಡುವೆಯೂ ವಿಪಕ್ಷ ನಾಯಕರಾಗಿ ನೇಮಕಗೊಂಡಿರುವ ಸಿದ್ದರಾಮಯ್ಯ ಅವರು ಈಗ ಮುನಿಸಿಕೊಂಡಿ ರುವ ಹಿರಿಯರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನಗಳಿಸುವಲ್ಲಿ ಪಕ್ಷದ ಶಾಸಕರು ಹಾಗೂ ಹೈಕಮಾಂಡ್‌ ನಾಯಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಸಿದ್ದರಾಮಯ್ಯ ಈಗ ರಾಜ್ಯದ ಹಿರಿಯ ನಾಯಕರ ವಿಶ್ವಾಸಗಳಿಸಲು ಮುಂದಿನ ವಾರ ಸಭೆ ಕರೆಯಲು ನಿರ್ಧರಿಸಿದ್ದಾರೆ.

Advertisement

ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗರು ಎಂದು ಎರಡು ಬಣಗಳಾಗಿದ್ದು, ಮೂಲ ಕಾಂಗ್ರೆಸಿಗರು ವಿಶೇಷವಾಗಿ ಹಿರಿಯ ಕಾಂಗ್ರೆಸಿಗರಾದ ಮಲ್ಲಿಕಾರ್ಜುನ ಖರ್ಗೆ, ಎಂ. ವೀರಪ್ಪ ಮೊಲಿ, ಕೆ.ಎಚ್‌.ಮುನಿಯಪ್ಪ, ಮಾರ್ಗರೆಟ್‌ ಆಳ್ವ , ಬಿ.ಕೆ. ಹರಿಪ್ರಸಾದ್‌, ಎಚ್‌.ಕೆ. ಪಾಟೀಲ್‌, ಡಾ| ಜಿ. ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸ ದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಅವರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ಹೈಕಮಾಂಡ್‌ ನೇಮಿಸಿರು ವುದರಿಂದ ಹಿರಿಯ ಕಾಂಗ್ರೆಸ್‌ ನಾಯಕರು ಮತ್ತಷ್ಟು ಮುನಿಸಿ ಕೊಂಡಿದ್ದಾರೆ. ಅಲ್ಲದೆ ಮೊದಲ ಬಾರಿಗೆ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅಧಿಕೃತವಾಗಿ ಕರೆದ ಸಭೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

ಸೋನಿಯಾ ಸೂಚನೆ
ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವಂತೆ ಸೋನಿಯಾ ಗಾಂಧಿ ತನ್ನನ್ನು ಭೇಟಿಯಾದ ಸಿದ್ದರಾಮಯ್ಯಗೆ ಸೂಚಿಸಿದ್ದು, ಅದಕ್ಕಾಗಿ ರಾಜ್ಯದ ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ಅವರಿಗೆ ಹಿರಿಯ ನಾಯಕರ ಮನೆಗಳಿಗೆ ತೆರಳಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆ ಸೋನಿಯಾ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಆದರೆ ಸಿದ್ದರಾಮಯ್ಯ ಈ ರೀತಿ ಮಾಡುವುದು ಅನುಮಾನ. ಅದೇ ಕಾರಣಕ್ಕೆ ಎಲ್ಲ ಹಿರಿಯ ನಾಯಕರನ್ನು ಒಂದೇ ಬಾರಿಗೆ ಸಭೆ ಕರೆದು ಅವರೊಂದಿಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿರಿಯರ ಸೇವೆ ಅವಗಣಿಸದಿರಿ
ಹಿರಿಯ ನಾಯಕರು ಪಕ್ಷದ ಚಟುವಟಿ ಕೆಗಳಿಂದ ವಿಮುಖರಾದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದು ತಪ್ಪು ಸಂದೇಶಕ್ಕೂ ಕಾರಣವಾಗಬಹುದು. ಇದರಿಂದ ಭವಿಷ್ಯದಲ್ಲಿ ಪಕ್ಷದ ಬಲವರ್ಧನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಸೂಕ್ಷ್ಮ ಕಿವಿಮಾತನ್ನೂ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸೋನಿಯಾ ಮನವೊಲಿಸಲು ಹಿರಿಯರು ವಿಫ‌ಲ
ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ ರನ್ನಾಗಿ ನೇಮಕ ಮಾಡದಂತೆ ಸೋನಿಯಾ ಗಾಂಧಿ ಎದುರು ವಾದ ಮಾಡಿದ್ದ ಹಿರಿಯ ನಾಯಕರು ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆಗಿರುವ ಹಿನ್ನಡೆಯ ಬಗ್ಗೆ ಹಾಗೂ ಪರ್ಯಾಯ ನಾಯಕರನ್ನು ಬಿಂಬಿಸುವಲ್ಲಿ ಸಫ‌ಲವಾಗಿಲ್ಲ ಎನ್ನ ಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕತ್ವದ ಬಗ್ಗೆ ಸೋನಿಯಾ ಗಾಂಧಿಯವರಿಗೆ ಮನವರಿಕೆಯಾಗದಿರುವುದು, ಸಿದ್ದರಾಮಯ್ಯ ಅವಧಿಯಲ್ಲಿ ನೇರವಾಗಿ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಕೇಳಿ ಬಾರದಿರುವುದು. ಅಲ್ಲದೆ ಕಾಂಗ್ರೆಸ್‌ನಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದವರನ್ನು ವಲಸಿಗರು ಎಂದು ಬಿಂಬಿಸುವ ಬಗ್ಗೆಯೂ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಮತ್ತೆ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next