Advertisement

ಆಪರೇಷನ್‌ ಕಮಲ ಎಂಬುದು ಪರಿಚಯವಾದದ್ದೇ ಕರ್ನಾಟಕ ಬಿಜೆಪಿಯಿಂದ: ಸಿದ್ದರಾಮಯ್ಯ ವಾಗ್ದಾಳಿ

01:59 PM May 06, 2023 | Team Udayavani |

ಮೈಸೂರು: ಆಪರೇಷನ್‌ ಕಮಲ ಎಂಬುದು ಪರಿಚಯವಾದದ್ದೇ ಕರ್ನಾಟಕ ಬಿಜೆಪಿಯಿಂದ. ಶಾಸಕರಿಗೆ ಹಣ ಕೊಟ್ಟು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಆಪರೇಷನ್‌ ಕಮಲ. ಇಂಥ ದ್ವಂದ್ವ ನಿಲುವು ಇರುವಂತವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿದರೆ ಯಾವ ಸರ್ಕಾರ ಕೂಡ ಜನಪರವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಮೈಸೂರಿನಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಜನ ಇಂದು ಬೇಸತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಭ್ರಷ್ಟಾಚಾರ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 40% ಕಮಿಷನ್‌ ಸರ್ಕಾರ ಎಂದು ದೂರಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಜನರಿಗೆ ‘ನ ಖಾವೂಂಗ ನ ಖಾನೇದೂಂಗ’ ಎಂದಿದ್ದರು, ಆದರೆ ಪತ್ರ ಬರೆದು ಇಷ್ಟು ಕಾಲ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರ ಈ ಭರವಸೆ ಕೇವಲ ಪ್ರಚಾರಕ್ಕಾಗಿ ನೀಡಿದ್ದ ಹೇಳಿಕೆ ಮಾತ್ರ. ರುಪ್ಸಾ (ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ) ದವರು ಪ್ರಧಾನಿಗಳಿಗೆ ಪತ್ರ ಬರೆದು ಈ ಸರ್ಕಾರ 40% ಕಮಿಷನ್‌ ಕೇಳುತ್ತಿದ್ದೆ ಎಂದರು. ಬೊಮ್ಮಾಯಿ ಅವರು ತಮ್ಮ ಭ್ರಷ್ಟಾಚಾರಗಳಿಗೆ ದಾಖಲೆ ಕೇಳುತ್ತಾರೆ, ಈ ಪತ್ರಗಳು ದಾಖಲಾತಿಗಳಲ್ವಾ?  ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Canada: ಕಬಡ್ಡಿ ಫೆಡರೇಶನ್ ಅಧ್ಯಕ್ಷ ಕಮಲಜಿತ್ ಕಾಂಗ್‌ ಮೇಲೆ ಗುಂಡಿನ ದಾಳಿ

ಪಿಎಸ್‌ಐ ನೇಮಕಾತಿಯಲ್ಲಿ ಎಡಿಜಿಪಿ ಸಹಿತವಾಗಿ ಸುಮಾರು 70 ಜನ ಜೈಲಿಗೆ ಹೋದರು, ಇದು ಸಾಕ್ಷಿ ಅಲ್ಲವಾ? ಸಂತೋಷ್‌ ಪಾಟೀಲ್‌ ಎಂಬ ಬಿಜೆಪಿ ಕಾರ್ಯಕರ್ತ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿ, ಲಂಚ ಕೊಡದ ಕಾರಣಕ್ಕೆ ಬಿಲ್‌ ಹಣ ನೀಡಲಿಲ್ಲ ಎಂದು ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದರು. ಇದು ಸಾಕ್ಷಿ ಅಲ್ಲವಾ? ನಾವು  ಸದನದ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಹೋರಾಟವನ್ನು ಮಾಡಿದ್ದೆವು, ಧರಣಿ ಮಾಡಿದ್ದೆವು. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು ಎಂದರು.

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರು ಸೋಪ್‌ ಮತ್ತು ಡಿಟರ್ಜೆಂಟ್‌ ನಿಗಮದ ಅಧ್ಯಕ್ಷರಾಗಿದ್ದವರು. ಅವರ ಮಗ ಅಪ್ಪನ ಪರವಾಗಿ ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮನೆಯನ್ನು ಶೋಧ ಮಾಡಿದಾಗ ಸುಮಾರು 8 ಕೋಟಿ ಭ್ರಷ್ಟ ಹಣ ಸಿಗುತ್ತದೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಬೀತಾಗಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು? ಎಂದರು.

Advertisement

ಇವೆಲ್ಲವೂ ಈ ಸರ್ಕಾರ 40% ಕಮಿಷನ್‌ ಸರ್ಕಾರ ಎಂಬುದನ್ನು ತೋರಿಸುತ್ತದೆ. ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ನೇಮಕಾತಿ, ವರ್ಗಾವಣೆ, ಯೋಜನೆಗೆ ಅನುಮೋದನೆ ನೀಡುವಾಗ, ಎನ್‌,ಒ,ಸಿ ನೀಡುವಾಗ ಲಂಚದಿಂದ ತುಂಬಿಹೋಗಿದೆ. ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಯಾವಾಗಲೂ ನಡೆದಿರಲಿಲ್ಲ ಎಂದರು.

ಇದರ ಜೊತೆಗೆ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನೂ ಮಾಡಿಲ್ಲ. ಕೋಮುವಾದವನ್ನು ಬೆಳೆಸಿದೆ. ಹಿಜಾಬ್‌, ಹಲಾಲ್‌, ಆಜಾನ್‌, ಜಾತ್ರೆಗಳಲ್ಲಿ ಯಾವ ಧರ್ಮದವರು ವ್ಯಾಪಾರ ಮಾಡುತ್ತಾರೆ ಎನ್ನುವುದು ಸಮಸ್ಯೆಗಳೇ ಅಲ್ಲ, ಇವುಗಳನ್ನು ಅನಗತ್ಯವಾಗಿ ಸಮಸ್ಯೆಯ ರೀತಿ ಬಿಂಬಿಸಿದ್ರು. ಇದರಿಂದ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇವೆಲ್ಲ ಜನರಿಗೆ ಬೇಕಿದೆಯಾ? ಎಂದರು.

ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆಂದು ಹೇಳಲಿ ನೋಡೋಣ. ಮೋದಿ ಅವರು ಕಾಂಗ್ರೆಸ್‌ ನ ವಾರೆಂಟಿಯೇ ಮುಗಿದಿದೆ, ಇನ್ನು ಗ್ಯಾರೆಂಟಿಗಳನ್ನು ಈಡೇರಿಸುತ್ತಾರ ಎಂದು ಲಘುವಾಗಿ ಮಾತನಾಡುತ್ತಾರಲ್ವಾ ಅವರೇ ಈ ಪ್ರಶ್ನೆಗೆ ಉತ್ತರ ನೀಡಲಿ ಎಂದರು.

ಈ ಬಾರಿ ಜನ ಅತಂತ್ರ ವಿಧಾನಸಭೆ ನಿರ್ಮಾಣ ಮಾಡಬಾರದು, ಇದರಿಂದ ಸುಭದ್ರ ಸರ್ಕಾರ ನೀಡಲು ಆಗಲ್ಲ, ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆದ ಪಕ್ಷ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಹೀಗಾಗಿ ಕಾಂಗ್ರೆಸ್‌ ಗೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ ಎಂದರು.

ನಾನು ಈ ಬಾರಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ. ಬಾದಾಮಿ ದೂರ ಆಗುತ್ತದೆ, ಪ್ರತೀ ವಾರ ಹೋಗಿ ಜನರ ಕಷ್ಟ ಕೇಳಲು ಆಗಲ್ಲ ಎಂಬ ಕಾರಣಕ್ಕೆ ಬಾದಾಮಿಯಿಂದ ನಿಲ್ಲಬಾರದು ಎಂದು ತೀರ್ಮಾನ ಮಾಡಿ ಹೈಕಮಾಂಡ್‌ ಗೆ ಹೇಳಿದ್ದೆ. ಅವರು ವರುಣಾದಿಂದ ಸ್ಪರ್ಧಿಸಿ ಎಂದು ಅವಕಾಶ ನೀಡಿದ್ದಾರೆ. ಜನರೂ ಇದನ್ನೇ ಹೇಳುತ್ತಿದ್ದರು, ನಮ್ಮ ಯತೀಂದ್ರ ಕೂಡ ಇಲ್ಲಿಂದಲೇ ಸ್ಪರ್ಧಿಸಿ ಎಂದು ಹೇಳುತ್ತಿದ್ದರು, ನನ್ನ ಕೊನೆ ಚುನಾವಣೆಯನ್ನು ನನ್ನ ಹುಟ್ಟೂರಿನಿಂದಲೇ ನಿಂತು ಚುನಾವಣಾ ರಾಜಕಾರಣವನ್ನು ಕೊನೆಗೊಳಿಸೋಣ ಎಂದು ನಿರ್ಧರಿಸಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ ಎಂದರು.

ನನ್ನ ಮೊಮ್ಮಗನಿಗೆ ಇನ್ನು 17 ವರ್ಷ. ಅವನು ಒಂದು ವೇಳೆ ರಾಜಕೀಯಕ್ಕೆ ಬರಲು ಮನಸು ಮಾಡಿದರು ಅದಕ್ಕೆ ಇನ್ನು 8 ರಿಂದ 10 ವರ್ಷ ಬೇಕು. ಮೊಮ್ಮಗನನ್ನು ನನ್ನ ಉತ್ತರಾಧಿಕಾರಿ ಎಂದು ಹೇಳಿಯೇ ಇಲ್ಲ. ರಾಜಕೀಯಕ್ಕೆ ಅವನು ಬರಬಹುದು ಇಲ್ಲ ಬರದೇ ಇರಬಹುದು. ಅದು ಅವನ ವೈಯಕ್ತಿಕ ಇಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next