Advertisement

Siddaramaiah ಜನರ ಅಪೇಕ್ಷೆಯಂತೆ ಸಿಎಂ ಆಗಿದ್ದಾರೆ: ಸಚಿವ ಕೆ.ವೆಂಕಟೇಶ್

07:45 PM Jun 04, 2023 | Team Udayavani |

ಪಿರಿಯಾಪಟ್ಟಣ : ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದ ಜನತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ಸಿದ್ದರಾಮಯ್ಯ ನವರ ನಾಯಕತ್ವವನ್ನು ಹಂಬಲಿಸಿದ್ದರು ಈಗ ಜನರ ಅಪೇಕ್ಷೆಯಂತೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.

Advertisement

ಸಚಿವರಾದ ನಂತರ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿ ಪಟ್ಟಣದ ಶಕ್ತಿ ದೇವತೆಗಳಾದ ಶ್ರೀ ಮಸಣಿಕಮ್ಮ ಹಾಗೂ ಕನ್ನಂಬಾಡಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕಳೆದ ಮೂರುವರೆ ವರ್ಷ ರಾಜ್ಯದ ಜನರ ಪಾಲಿಗೆ ಕರಾಳ ದಿನಗಳಾಗಿದ್ದವು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಕಮಿಷನ್ ದಂಧೆ, ಸಾರ್ವಜನಿಕರ ಹಣದ ದುರ್ಬಳಕೆ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಗೆ ಕತ್ತರಿ ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ರೂಪಿಸಿದ ಬಿಜೆಪಿ ಸರ್ಕಾರದಿಂದ ಬೇಸತ್ತ ಜನಸಾಮಾನ್ಯರು ರಾಜ್ಯದ ಸುಭೀಕ್ಷೆ ಹಾಗೂ ಜನ ಸಾಮಾನ್ಯರ ಏಳಿಗೆಗೆ ಸಿದ್ದರಾಮಯ್ಯ ನವರ ನಾಯಕತ್ವವನ್ನು ಬಯಸುತ್ತಿದ್ದರು ಅದೇ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜನತೆ ನೆಮ್ಮದಿಯಿಂದ ಸರ್ಕಾರ ಮಾಡಲಿ ಎಂದು ಸಿದ್ದರಾಮಯ್ಯ ನವರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಆದ್ದರಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಪರ ಕೆಲಸಗಳನ್ನು ಮಾಡುವ ಮೂಲಕ ಶ್ರೀಸಾಮಾನ್ಯರ ಆಶೊತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಮಾರ್ಗದರ್ಶನ ನಮಗೆ ಬೇಕು. ನಾವು ನುಡಿದಂತೆ ನಡೆಯುವವರು ನೀಡಿದ್ದ 5 ಭರವಸೆಗಳನ್ನು ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ, ಜುಲೈ 1 ರಿಂದ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ನೀಡುವ ಮೂಲಕ ಹಂತಹಂತವಾಗಿ ಪ್ರಾರಂಭಿಸುತ್ತಿದ್ದೇವೆ, ಅದೇರೀತಿ ಗೃಹವಕ್ಷ್ಮಿ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿ ಯೋಜನೆಗಳು ಆರಂಭವಾಗಲಿವೆ ವಿರೋಧ ಪಕ್ಷಗಳು ನಾವು ನೀಡಿದ್ದ ಭರವಸೆಗಳನ್ನು ಇವರು ಈಡೇರಿಸಲು ಸಾಧ್ಯವಿಲ್ಲ ಎಂದು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದರು. ಸಂಸದ ಪ್ರತಾಪ್ ಸಿಂಹ ಜೂನ್ 1 ರಂದು ಪ್ರತಿಭಟಿಸುವ ಬೆದರಿಕೆ ಹಾಕಿದ್ದರು, ಆದರೆ ಈಗ ತುಟಿಕ್ ಪಿಟಿಕ್ ಎನ್ನುತ್ತಿಲ್ಲ, ಪ್ರತಾಪ್ ಸಿಂಹ ನಾವು ಬದ್ದತೆ ಹಾಗೂ ಕೊಟ್ಟ ಮಾತಿನಂತೆ ನಡೆಯುವವರು ಈಗ ಮಾತಿನಂತೆ ಪಡೆದಿದ್ದೇವೆ ನೀನು ಹೋರಾಟ ಮಾಡಬೇಕಿರುವುದು ಕಾಂಗ್ರೆಸ್ ವಿರುದ್ಧವಲ್ಲ ಮೋದಿಯ ವಿರುದ್ಧ ನೀನು ಹೇಳಿದ ರೀತಿಯಲ್ಲಿ ಸಾರ್ವಜನಿಕ ಹಣವನ್ನು ಯದ್ವ ತದ್ವ ಖರ್ಚು ಮಾಡಲು ಸಾಧ್ಯವಿಲ್ಲ, ಮೋದಿಗೆ ಹೋಗಿ ಹೇಳು, 9 ವರ್ಷಗಳ ಹಿಂದೆ ಪ್ರತಿಯೊಬ್ಬ ಭಾರತೀಯರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಹಣ ಹಾಗೂ 2 ಕೋಟಿ ಉದ್ಯೋಗದ ಭರವಸೆ ನಿಡಿದ್ದಿರಲ್ಲ ಅದನ್ನು ಮೊದಲು ಮಾಡಿ ಎಂದು ಮೋದಿ ವಿರುದ್ಧ ಪ್ರತಿಭಟಿಸು ಎಂದು ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಕ್ಷೇತ್ರಕ್ಕೆ ಬಂದಾಗ ಮತದಾರರು ಇದನ್ನು ಪ್ರಶ್ನಿಸಬೇಕು ಎಂದರು.

ತಾಲೂಕಿಗೆ ಗೌರವ ತರುವ ಕೆಲಸ ಮಾಡುತ್ತೇನೆ
45 ವರ್ಷಕ್ಕೂ ಹೆಚ್ಚು ಕಾಲ ತಾಲ್ಲೂಕಿನ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಈಗ ಎರಡನೇ ಬಾರಿ ರಾಜ್ಯದ ಸಚಿವನಾಗಿ ದ್ದೇನೆ ಪ್ರತಿದಿನ ನಾನು ಸಾರ್ವಜನಿಕರ ಕೆಲಸಕ್ಕೆ ಸಿಗಲು ಸಾಧ್ಯವಿಲ್ಲ ಹಾಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ಪಕ್ಕದ ಅಧ್ಯಕ್ಷರು, ಹಿರಿಯರು ಇರುತ್ತಾರೆ ಎಂದಾಗ ನಿಮ್ಮ ಮಗ ನಿತಿನ್ ವೆಂಕಟೇಶ್ ರವರಿಗೆ ಜವಾಬ್ದಾರಿ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದಾಗ ಬೆಂಗಳೂರು ಅಮೆರಿಕವಲ್ಲಾ ನಾನು ಇರುತ್ತೇನೆ, ಮುಂದಿನ ದಿನಗಳಲ್ಲಿ ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ನಲ್ಲಿ ಸ್ವಂತ ಮನೆ ನಿರ್ಮಾಣ ಮಾಡುತ್ತೇನೆ, ಸದ್ಯದಲ್ಲೇ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತೇನೆ, ನೀವು ಸಹ ತಾಲ್ಲೂಕಿನ ಸಮಸ್ಯೆಗಳ ಕುರಿತು ಮಾಹಿತಿ ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಬೇಕು ಎಂದರು.

ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಮಾತನಾಡಿ ತಾಲೂಕಿನ ಜನರ ಆಶೀರ್ವಾದ, ಪಕ್ಷದ ಕಾರ್ಯಕರ್ತರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಮಗೆ ಅಭೂತಪೂರ್ವ ಗೆಲುವು ಸಿಕ್ಕಿದೆ ಕಾರ್ಯಕರ್ತರ ಈ ಶ್ರಮವನ್ನು ನಾವೆಂದಿಗೂ ಮರೆಯುವುದಿಲ್ಲ. ನಮ್ಮ ಮೇಲೆ ಯಾವ ರೀತಿ ಪ್ರೀತಿ ಅಭಿಮಾನ ಇಟ್ಟಿದ್ದಿರೋ ಅದೇ ರೀತಿ ಪಕ್ಷದ ಮೇಲೆ ಅಭಿಮಾನವನ್ನು ಹೊಂದಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

Advertisement

ತಾಲೂಕಿನ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರದ ಗುರಿಯಾಗಿದೆ ಇದಕ್ಕೆ ತಾಲೂಕಿನ ಜನತೆಯ ಸಹಕರಿಸಬೇಕು ಎಂದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next