ಮೈಸೂರು: ರಾಜಕೀಯ ವಿರೋಧಿಗಳ ಚಕ್ರವ್ಯೂಹವನ್ನು ಲೀಲಾಜಾಲವಾಗಿ ಭೇದಿಸಿ ಹೊರಬಂದಸಿದ್ದರಾಮಯ್ಯ!
ದೇಶದ ಗಮನ ಸೆಳೆದಿದ್ದ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆ ಪ್ರತಿ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರಿ ಅಂತರದ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮರುಸ್ಥಾಪಿಸಿದ್ದಾರೆ. ತಮ್ಮ ಸೋಲಿಗೆ ಹಠ ತೊಟ್ಟಿದ್ದ ಬಿಜೆಪಿ ವರಿಷ್ಠರ ಎದುರು ಗೆದ್ದು ಬೀಗಿದ್ದಾರೆ.
ವರುಣ ಕ್ಷೇತ್ರದಲ್ಲಿ ಸಂಘ ಪರಿವಾರದ ಕಟು ಟೀಕಾಕಾರರಾದ ಸಿದ್ದರಾಮಯ್ಯ ಅವರನ್ನು ಶತಾ ಯಗತಾಯ ಸೋಲಿಸಲೇಬೇಕೆಂದು ಬಿಜೆಪಿ ಹೈಕಮಾಂಡ್ ಹಠ ತೊಟ್ಟಿತ್ತು. ಬಿಜೆಪಿ ವರಿಷ್ಠರು ವರುಣ ಕ್ಷೇತ್ರವನ್ನು ತನ್ನ ನೇರ ಉಸ್ತುವಾರಿಯಲ್ಲಿ ಇರಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ವರುಣ ಕ್ಷೇತ್ರಕ್ಕೆ ಹೊಂದಿಕೊಂಡಂತಿ ರುವ ನಂಜನಗೂಡು ಸಮೀಪ ಪ್ರಧಾನಿ ಮೋದಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತಾಡಿದ್ದರು.
ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಾಧ್ಯವಾಗದಂತೆ ಅವರನ್ನು ಕ್ಷೇತ್ರದಲ್ಲಿ ಕಟ್ಟಿ ಹಾಕಬೇಕೆಂದು ಬಿಜೆಪಿ ಪ್ರಯತ್ನಿಸಿತ್ತು. ಇದರಲ್ಲಿ ಬಿಜೆಪಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಯಿತು. ಸಿದ್ದರಾಮಯ್ಯ ಪ್ರಾರಂಭದಲ್ಲಿ ಕ್ಷೇತ್ರದಲ್ಲಿ ಒಂದು ದಿನ ಪ್ರಚಾರ ನಡೆಸಲು ಉದ್ದೇಶಿಸಿದ್ದರು. ಆದರೆ, ಎದುರಾಳಿಗಳು ಸಂಘಟಿತರಾಗುತ್ತಿದ್ದಂತೆ ನಾಲ್ಕು ದಿನಗಳ ಕಾಲ ಪ್ರಚಾರ ನಡೆಸುವಂತಾಯಿತು. ಇದು ನನ್ನ ಕೊನೆಯ ಚುನಾವಣೆ, ಆಶೀರ್ವದಿಸಿ ಎಂದು ಮತ ದಾರರಿಗೆ ಕೈಮುಗಿದರು. ಪುತ್ರ ಡಾ.ಯತೀಂದ್ರ ಅವರು ತಮ್ಮ ತಂದೆಯ ಕೊನೆಯ ಚುನಾವಣೆ ಇದು. ಅವರನ್ನು ಗೆಲ್ಲಿಸಿ ಗೌರವಯುತವಾಗಿ ನಿವೃತ್ತಿ ಪಡೆಯುವಂತೆ ಮಾಡಬೇಕು ಎಂದು ಮನವಿ ಮಾಡಿದ್ದರು.
Related Articles
ವಸತಿ ಸಚಿವ ವಿ.ಸೋಮಣ್ಣ ಅವರನ್ನು ವರುಣ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿದಾಗ ಸೋಮಣ್ಣ ಪ್ರಾರಂಭದಲ್ಲಿ ಒಪ್ಪಲಿಲ್ಲ. ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿದರು. ಜೊತೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲೂ ಟಿಕೆಟ್ ನೀಡಿದಾಗ ಸೋಮಣ್ಣ ಸ್ವಲ್ಪ ನಿರಾಳರಾಗಿದ್ದರು. ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ವರುಣ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗಳಲ್ಲಿ ಸುತ್ತಾಡಿ ಮತಯಾಚಿಸಿದ್ದರು. ಸೋಮಣ್ಣ ಕ್ಷೇತ್ರಕ್ಕೆ ಹೊಸಬರಾಗಿದ್ದರು. ಕ್ಷೇತ್ರದ ಹಳ್ಳಿಗಳು, ಜನರ ಪರಿಚಯ ಅವರಿಗೆ ಇರಲಿಲ್ಲ. ಇದು ಕೂಡ ಅವರ ಸೋಲಿಗೆ ಕಾರಣವಾಯಿತು. ಸೋಮಣ್ಣ ಹರಕೆಯ ಕುರಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಇದು ಮನೆಮಗ ಹಾಗೂ ಹೊರಗಿನವರ ನಡುವಿನ ಹೋರಾಟ ಎಂದಿದ್ದರು.
ಸೋಮಣ್ಣ ವರುಣ ಕ್ಷೇತ್ರವನ್ನು ಬೆಂಗಳೂರಿನಲ್ಲಿ ತಾವು ಪ್ರತಿನಿಧಿಸಿದ್ದ ಗೋವಿಂದರಾಜ ನಗರ ಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಗೋವಿಂದರಾಜನಗರ ಕ್ಷೇತ್ರದ ಅಭಿ ವೃದ್ಧಿಯ ಕಿರು ಪುಸ್ತಕವನ್ನು ಕ್ಷೇತ್ರದಲ್ಲಿ ಹಂಚಿದ್ದರು. ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ವಜಾತಿ ಮೋಹದ ಆರೋಪ ಮಾಡಿದ್ದರು. ಅಭಿವೃದ್ಧಿ ಕಾರ್ಯಗಳನ್ನು ಸಿದ್ದರಾಮಯ್ಯ ನಿರ್ಲಕ್ಷಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದರು. ಆದರೆ, ಮತದಾರ ಈ ಆರೋಪಗಳಿಗೆ ಕಿಮ್ಮತ್ತು ನೀಡಿಲ್ಲ.
ಕೈ ಬಿಡದ ಅಹಿಂದ ಮತದಾರರು: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ 2008, 2013ರಲ್ಲಿ ಗೆದ್ದಿ ದ್ದರು. 2018ರಲ್ಲಿ ಅವರ ಪುತ್ರ ಡಾ.ಯತೀಂದ್ರ ಜಯಗಳಿಸಿ ದ್ದರು. ಈಗ 2023ರಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ, ಪ.ಪಂಗಡ, ಒಕ್ಕಲಿಗರು ಇದ್ದಾರೆ. ಅಹಿಂದ ವರ್ಗದವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಿದ್ದರಾಮಯ್ಯ ಪರ ಅಹಿಂದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಅಲ್ಲದೇ, ವೀರಶೈವ-ಲಿಂಗಾಯತರು ಸ್ವಲ್ಪ ಪ್ರಮಾಣದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ. ವರುಣ ಕ್ಷೇತ್ರದ ಮತ ದಾರರು ಜಾತಿವಾದಿಗಳಲ್ಲ. ಜಾತಿ ಮೀರಿ ಮತ ಚಲಾಯಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅವರ ಮಾತು ನಿಜವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ವರುಣ ಕ್ಷೇತ್ರದಲ್ಲಿ, ಕೇಂದ್ರ ಸಚಿವ ಅಮಿತ್ ಶಾ ಬಹಿರಂಗ ಸಭೆಯಲ್ಲಿ ಮಾತ್ರ ಪಾಲ್ಗೊಂಡರು. ಇದನ್ನು ಹೊರತುಪಡಿಸಿದರೆ ಯಡಿ ಯೂರಪ್ಪ ಅವರು ವರುಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಲಿಲ್ಲ. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದ ಒಂದು ಕಡೆ ಮಾತ್ರ ಪ್ರಚಾರ ನಡೆಸಿದ್ದರು. ಈ ಕ್ಷೇತ್ರದಲ್ಲಿ ಯಡಿ ಯೂರಪ್ಪ ಅವರನ್ನು ಬೆಂಬಲಿಸುವ ಮುಖಂಡರು ಬಿಜೆಪಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಡಿಯೂರ ಪ್ಪ-ಸೋಮಣ್ಣ ಅವರ ನಡುವಿನ ಬಣ ರಾಜಕಾರಣವೂ ವರುಣ ಕ್ಷೇತ್ರದಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ.
-ಕೂಡ್ಲಿ ಗುರುರಾಜ