ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವು ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು. ಆ ದಂಧೆಯಿಂದಲೇ ಸರ್ಕಾರ ಬದುಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ನಿಯಂತ್ರಣ ಮಾಡಿದ್ದು ನಮ್ಮ ಸರ್ಕಾರ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಬೊಮ್ಮಾಯಿ ಗೃಹ ಸಚಿವ ಆಗಿದ್ದಾಗ ಡ್ರಗ್ಸ್ ದಂಧೆಯ ವಿರುದ್ಧ ಮೇಲೆ ಕ್ರಮ ಕೈಗೊಂಡಿದ್ದರು. ಈಗ ಆರಗ ಜ್ಞಾನೇಂದ್ರ ರಾಜೀನಾಮೆ ಕೇಳ್ಲುತ್ತಿರುವ ಸಿದ್ದರಾಮಯ್ಯ ನವರು ಅಂದು ಅವರು ಮುಖ್ಯಮಂತ್ರಿಯಾದ ಮರುದಿನವೇ ರಾಜೀನಾಮೆ ನೀಡಬೇಕಿತ್ತು ಎಂದರು.
ಅರ್ಕಾವತಿ ಹಗರಣ, ಹಾಸಿಗೆ ದಿಂಬಿನ ಹಗರಣ, ಡಿಕೆ ರವಿ, ಗಣಪತಿ ಕೊಲೆ, ಸಚಿವರ ಭ್ರಷ್ಟಾಚಾರ ಇದ್ಯಾವುದಕ್ಕೂ ಸಿದ್ದರಾಮಯ್ಯ ಕ್ರಮ ಕೈಗೊಂಡಿಲ್ಲ. ಎಲ್ಲಾ ಹಗರಣ ಮುಚ್ಚಿ ಹಾಕಿದ್ದರು. ಸಾಮರ್ಥ್ಯವಿಲ್ಲದ ಸರ್ಕಾರ ಅವರದಾಗಿತ್ತು. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸಲ್ಲ. ಪೊಲೀಸ್ ಅಧಿಕಾರಿಯನ್ನೇ ಬಂಧನ ಮಾಡಿದೆ ಎಂದರು.
ಸಿದ್ದರಾಮಯ್ಯ ಕಾಲದ ನೇಮಕಾತಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಳಿನ್ ಕಟೀಲ್, ಈಗ ಪಿಎಸ್ ಐ ನೇಮಕಾತಿ ಪ್ರಕರಣ ತನಿಖೆ ನಡೆಯುತ್ತಿದೆ. ಯಾವೆಲ್ಲಾ ಕಾಂಗ್ರೆಸ್ ನಾಯಕರು ಸಿಕ್ಕಿಹಾಕಿಕೊಳ್ಳುತ್ತಾರೆ ಗೊತ್ತಾಗಲಿದೆ. ಆ ಬಳಿಕ ಇದರ ಬಗ್ಗೆ ತೀರ್ಮಾನ ಎಂದರು.
Related Articles
ಇದನ್ನೂ ಓದಿ:ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
ಸಿದ್ದರಾಮಯ್ಯ ಇನ್ನಷ್ಟು ಇಂತಹ ಉತ್ಸವ (ಸಿದ್ದರಾಮೋತ್ಸವ) ಮಾಡಲಿ. ನಾಲ್ಕೈದು ಲಕ್ಷ ಜನರನ್ನು ಸೇರಿಸಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ನಮಗೆ ಅವರ ಕಾರ್ಯಕ್ರಮದಿಂದ ಹೊಟ್ಟೆಕಿಚ್ಚಿಲ್ಲ. ಆದರೆ ಈ ಕಾರ್ಯಕ್ರಮ ಶುರುವಾದಾಗಿಂದ ಡಿಕೆ ಶಿವಕುಮಾರ್ ನಿದ್ದೆ ಮಾಡಿಲ್ಲ. ಸಿದ್ದರಾಮಯ್ಯ ಎಲ್ಲರನ್ನೂ ಮುಗಿಸಿದರು. ಈಗ ಡಿಕೆ ಶಿವಕುಮಾರ್ ರನ್ನು ಮುಗಿಸಲು ಹೊರಟಿದ್ದಾರೆ ಎಂದರು.
ಸಿದ್ದರಾಮಯ್ಯನವರು ಖರ್ಗೆಯವರನ್ನು ದೂರ ಇಟ್ಟಿದ್ದಾರೆ. ಪರಮೇಶ್ವರನ್ನು ಸೋಲಿಸಿದರು. ಈಗ ಡಿಕೆ ಶಿವಕುಮಾರ್ ಮುಗಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಉತ್ಸವದಿಂದ ನಮಗೆ ಭಯವೂ ಇಲ್ಲ ಹೊಟ್ಟೆಕಿಚ್ಚು ಇಲ್ಲ. ಭಯ ಆಗುತ್ತಿರುವುದು ಡಿಕೆ ಶಿವಕುಮಾರ್ ಎಂದ ನಳಿನ್ ಕುಮಾರ್ ಕಟೀಲ್ ಅವರು ಡಿಕೆಶಿ- ಸಿದ್ದರಾಮಯ್ಯ ನಡುವಿನ ಶೀತಲ ಸಮರಕ್ಕೆ ತುಪ್ಪ ಸುರಿದರು.