Advertisement

ಸಿಎಂ ಅಖಾಡಕ್ಕಿಳಿದ ಮಠಾಧೀಶರು: ಸಿದ್ದರಾಮಯ್ಯ ಪರ ನಿಂತ ಅಹಿಂದ

11:20 PM May 15, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರದ ಚೆಂಡು ದಿಲ್ಲಿ ಅಂಗಳಕ್ಕೆ ತಲುಪಿದ ಹೊತ್ತಿನಲ್ಲೇ ಇತ್ತ ನೂತನ ಸಿಎಂ ಯಾರಾಗಬೇಕು ಎಂಬ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಂಬಲಿಗರ ಒತ್ತಡ ಮತ್ತಷ್ಟು ಕಾವು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ವಿವಿಧ ಮಠಾಧೀಶರು ಕೂಡ ಅಖಾಡಕ್ಕಿಳಿದಿದ್ದಾರೆ.

Advertisement

ಹೀಗಾಗಿಯೇ ಸೋಮವಾರ ಬೆಳಗ್ಗಿನಿಂದ ಸಂಜೆವರೆಗೂ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನಗರ ನಿವಾಸ ಮತ್ತು ರಾಜಭವನ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌, ರಾಜ್ಯ ಒಕ್ಕಲಿಗರ ಸಂಘ ಚಟುವಟಿಕೆಯ ತಾಣಗಳಾದವು. ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬದ ನೆಪದಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ನಾಡಿನ ಹಲವು ಮಠಾಧೀಶರು ನೂತನ ಮುಖ್ಯಮಂತ್ರಿ ಆಗುವ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಬೆಂಬಲ ಸೂಚಿಸಿದರು.

ಇದರ ಬೆನ್ನಲ್ಲೇ ಖಾಸಗಿ ಹೊಟೇಲ್‌ನಲ್ಲಿ ಸಭೆ ಸೇರಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಸರ್ವ ಜನಾಂಗ ಶ್ರೇಯಸ್ಸಿಗಾಗಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು. ದಿಢೀರ್‌ ಎಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ಮಾವಳ್ಳಿ ಶಂಕರ್‌, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ಡಾ| ಜಾಫೆಟ್‌, ಅಬ್ದುಲ್‌ ಮೌಲಾನ ಸೇಠ್ , ಮಾಜಿ ಮೇಯರ್‌ ವೆಂಕಟೇಶ ಮೂರ್ತಿ ಸಹಿತ ಹಲವು ಅಹಿಂದ ಸಂಘಟನೆ ಮುಖಂಡರು ಭಾಗವಹಿಸಿದ್ದರು.

ಅಹಿಂದ ಕಾಂಗ್ರೆಸ್‌ನಿಂದ ದೂರವಾಗಲಿದೆ
ಈ ವೇಳೆ ಮಾತನಾಡಿದ ಕೆ.ಎಂ.ರಾಮಚಂದ್ರಪ್ಪ, ಸಿದ್ದರಾಮಯ್ಯ ಸರ್ವ ಜನಾಂಗ ಪ್ರೀತಿಸುವ ನಾಯಕರಾಗಿದ್ದಾರೆ. ಜನಮಾನಸದಲ್ಲಿ ದೇವರಾಜ ಅರಸು ಎಂದು ಕರೆಸಿಕೊಂಡಿದ್ದಾರೆ. 2024ನೇ ಸಾಲಿನ ಲೋಕಸಭಾ ಚುನಾವಣೆ, ಜತೆಗೆ ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಹೈ ಕಮಾಂಡ್‌ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಲೇಬೇಕು ಎಂದು ಅಹಿಂದ ಸಂಘಟನೆ ಪರವಾಗಿ ಆಗ್ರಹಿಸುತ್ತಿರುವುದಾಗಿ ಹೇಳಿದರು.

ಸಿದ್ದರಾಮಯ್ಯರನ್ನು ಕೇವಲ ಒಂದು ಸಮುದಾಯ ಜನರು ಪ್ರೀತಿಸುತ್ತಿಲ್ಲ. ಅಲೆಮಾರಿ ಜನಾಂಗದಿಂದ ಮುಂದುವರಿದ ಸಮುದಾಯವು ಕೂಡ ಸಿದ್ದರಾಮಯ್ಯ ಅವರ ಆಡಳಿತವನ್ನು ಮೆಚ್ಚಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡದೆ ಹೋದರೆ ಮುಂಬರುವ ಲೋಕಸಭಾ ಚುನಾವಣೆ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಹಿಂದ ಕಾಂಗ್ರೆಸ್‌ನಿಂದ ದೂರ ಉಳಿಯಲಿದೆ ಎಂದು ಎಚ್ಚರಿಸಿದರು.

Advertisement

ಡಿಕೆಶಿ ಸಿಎಂ ಆಗಲಿ ಎಂದ ಸ್ವಾಮೀಜಿಗಳು
ಬೆಂಗಳೂರು: ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಸದಾಶಿವನಗರ ನಿವಾಸದಲ್ಲಿ ಸಂಸದ ಡಿ. ಕೆ. ಸುರೇಶ್‌ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮುಖ್ಯಮಂತ್ರಿಯಾಗಲು ತಮ್ಮ ಸಮುದಾಯಗಳ ಬೆಂಬಲವಿದೆ ಎಂದು ಭರವಸೆ ನೀಡಿದ್ದಾರೆ. ಆದಿಚುಂಚನಗಿರಿ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವವರೇ ಮುಖ್ಯಮಂತ್ರಿಯಾಗುವ ಸಂಪ್ರದಾಯವನ್ನು ಕಾಂಗ್ರೆಸ್‌ ಹೊಂದಿದೆ ಎಂದು ರವಿವಾರ ಹೇಳಿದ್ದರು. ಈ ಹೇಳಿಕೆಯನ್ನು ನಾವು ಅನುಮೋದಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ, ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ, ಪಕ್ಷಕ್ಕಾಗಿ ಜೀವಮಾನವನ್ನೇ ಸಮರ್ಪಣೆ ಮಾಡಿಕೊಂಡಂತಹ ವ್ಯಕ್ತಿ ಡಿ.ಕೆ. ಶಿವಕುಮಾರ್‌. ಆದ್ದರಿಂದ ಅವರು ಮುಖ್ಯಮಂತ್ರಿಯಾಗಿ, ನಾಡಿಗೆ ಸಮೃದ್ಧಿ ತಂದು ಕೊಡಲಿ ಎಂದು ಅವರಿಗೆ ಆಶೀರ್ವದಿಸುವುದಾಗಿ ಸ್ವಾಮೀಜಿಗಳು ಹೇಳಿದ್ದಾರೆ.

ಒಕ್ಕಲಿಗ ಸಮುದಾಯದ ಹೋರಾಟದ ಎಚ್ಚರಿಕೆ
ಕಾಂಗ್ರೆಸ್‌ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಆಗುತ್ತಾರೆ. ಅದೇ ರೀತಿಯಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಒಂದು ವೇಳೆ ಅವರಿಗೆ ಸಿಎಂ ಪಟ್ಟ ಕೈತಪ್ಪಿದರೆ ಒಕ್ಕಲಿಗ ಸಮುದಾಯ ಹೋರಾಟ ನಡೆಸಲಿದೆ ಎಂದು ನಿವೃತ್ತ ಐಎಫ್ಎಸ್‌ ಅಧಿಕಾರಿ ಮತ್ತು ಒಕ್ಕಲಿಗರ ಅಭಿಮಾನಿ ಬಳಗ ಅಧ್ಯಕ್ಷ ಗಾನಂ ಶ್ರೀಕಂಠಯ್ಯ ಎಚ್ಚರಿಸಿದರು. ನಾವು ಸುಮ್ಮನೆ ಸಿಎಂ ಸ್ಥಾನ ಕೇಳುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಜತೆಗೆ 135 ಸ್ಥಾನ ಪಡೆದಿದ್ದರಲ್ಲಿ ಶಿವಕುಮಾರ್‌ ಶ್ರಮವಿದೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಡಿಕೆಶಿ ಅವರನ್ನು ಸಿಎಂ ಮಾಡಬೇಕು ಎಂಬ ಕುರಿತಂತೆ ಮಂಗಳವಾರ ಹಮ್ಮಿಕೊಂಡಿರುವ ಜಾಥಾ ಮುಂದೂಡಲಾಗಿದೆ. ಒಕ್ಕಲಿಗ ಸಮುದಾಯ ಶ್ರೀಗಳು ಮತ್ತು ಹಿರಿಯ ಮುಖಂಡರ ಜತೆ ಚರ್ಚಿಸಿ ಮುಂದುವರಿಯುವುದಾಗಿ ತಿಳಿಸಿದರು.

ಒಕ್ಕಲಿಗರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಆಡಿಟರ್‌ ನಾಗರಾಜ್‌ ಮಾತನಾಡಿ, ರಾಜ್ಯದಲ್ಲಿ 1 ಕೋಟಿ ಒಕ್ಕಲಿಗ ಮತದಾರರಿದ್ದಾರೆ. ಒಂದು ವೇಳೆ ಡಿ.ಕೆ.ಶಿ. ಅವರನ್ನು ಹೈಕಮಾಂಡ್‌ ಧಿಕ್ಕರಿಸಿದರೆ ಕಾಂಗ್ರೆಸ್‌ ಅನ್ನು ಒಕ್ಕಲಿಗ ಸಮುದಾಯ ಧಿಕ್ಕರಿಸ ಲಿದೆ. ಒಕ್ಕಲಿಗ ಸಂಘ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು.

ವಿನಯ ಡಿಸಿಎಂ ಆಗಲಿ: ಮುರುಘಾ ಶ್ರೀ
ಧಾರವಾಡ: ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕ, ಮುರುಘಾ ಮಠ ಟ್ರಸ್ಟ್‌ ಕಾರ್ಯಾಧ್ಯಕ್ಷ, ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕ್ಷೇತ್ರದಿಂದ ಹೊರಗಿದ್ದರೂ ಗೆಲುವು ಸಾಧಿಸುವ ಮೂಲಕ ಇತಿಹಾಸವನ್ನೇ ಬರೆದಿದ್ದು, ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಮಾನ ನೀಡಬೇಕು ಎಂದು ಮುರುಘಾ ಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಹುದ್ದೆ
ಯನ್ನು ಸಮುದಾಯದ ಬೇರೆ ನಾಯಕರಿಗೆ ಕೊಟ್ಟರೂ ನಮ್ಮ ಒಪ್ಪಿಗೆ ಇದೆ. ಆದರೆ ವಿನಯ ಕುಲಕರ್ಣಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಉತ್ತರ ಕರ್ನಾಟಕ ಲಿಂಗಾಯತ ಸಮುದಾಯದ ಪ್ರಬಲ ನಾಯಕ ವಿನಯ ಕುಲಕರ್ಣಿ ಸರ್ವ ಧರ್ಮಗಳ ನಾಯಕರು. ಈ ಭಾಗದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದಾರೆ. ಸುಮಾರು 20 ವರ್ಷಗಳಿಂದ ರಾಜಕಾರಣದಲ್ಲಿದ್ದು, ಸಾಕಷ್ಟು ಅನುಭವವುಳ್ಳವರಾಗಿದ್ದಾರೆ ಎಂದು ಹೇಳಿದ್ದಾರೆ.

ಈಶ್ವರ ಖಂಡ್ರೆ ಸಿಎಂ ಅಥವಾ ಡಿಸಿಎಂ ಆಗಲಿ: ಬೀದರ್‌ನ ಮಠಾ ಧೀಶರ ಒಕ್ಕೂಟ
ಬೀದರ್‌: ಭಾಲ್ಕಿ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಮಠಾ ಧೀಶರ ಒಕ್ಕೂಟ ಕಾಂಗ್ರೆಸ್‌ ವರಿಷ್ಠರಿಗೆ ಆಗ್ರಹಿಸಿದೆ.

ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ತಡೋಳದ ರಾಜೇಶ್ವರ ಶಿವಾಚಾರ್ಯರು, ಭಾಲ್ಕಿಯ ಗುರುಬಸವ ಪಟ್ಟದ್ದೇವರು ಮತ್ತು ಹುಲಸೂರಿನ ಶಿವಾನಂದ ಸ್ವಾಮೀಜಿ ಕಾಂಗ್ರೆಸ್‌ ಹೈಕಮಾಂಡ್‌ನ‌ ಗಮನ ಸೆಳೆದರು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲು ಲಿಂಗಾಯತ ಸಮುದಾಯ ಕಾರಣ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರಲ್ಲಿ ಈಶ್ವರ ಖಂಡ್ರೆ ಪ್ರಭಾವಿ ಮತ್ತು ಧೀ ಮಂತ ನಾಯಕರಾಗಿದ್ದು, ಅವರು ಉನ್ನತ ಹುದ್ದೆಗೆ ಅರ್ಹರಾಗಿದ್ದಾರೆ ಎಂದರು.

ಚನ್ನಮಲ್ಲ ಸ್ವಾಮೀಜಿ, ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀಪತಿ ಪಂಡಿತಾರಾಧ್ಯ ಶಿವಾ ಚಾರ್ಯರು, ಸಿದ್ಧೇಶ್ವರ ಶಿವಾಚಾರ್ಯರು, ಚಂದ್ರ ಶೇಖರ ಶಿವಾಚಾರ್ಯರು, ಮುರುಘೇಂದ್ರ ಸ್ವಾಮೀಜಿ, ಗಂಗಾಧರ ಶಿವಾಚಾರ್ಯರು, ಮುಖಂಡ ರಾದ ಸಿದ್ರಾಮಯ್ಯ ಸ್ವಾಮಿ, ವಿಜಯಕುಮಾರ ಹೊಸಖಂಡೆ, ಮಹೇಶ, ಸಂಜಯ ಮಠಪತಿ, ಶ್ರೀಕಾಂತ ಸ್ವಾಮಿ ಇದ್ದರು.

ಪರಂ ಪರ ಪ್ರತಿಭಟನೆ
ತುಮಕೂರು: ಕಾಂಗ್ರೆಸ್‌ ಚುನಾವಣ ಪ್ರಣಾಳಿಕೆ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಹೆಚ್ಚಾಗಿದ್ದು, ಈ ಸಂಬಂಧ ವರಿಷ್ಠರ ಗಮನ ಸೆಳೆಯಲು ಮಂಗಳವಾರ (ಮೇ 16) ಬೆಂಗಳೂರಿ ನಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಹಗ್ಗಜಗ್ಗಾಟ ನಡೆಯುತ್ತಿರುವ ಮಧ್ಯೆ ದಲಿತ ಕೂಗು ಬಲವಾಗಿ ಕೇಳಿಬಂದಿದೆ. ಈ ನಡುವೆ ಪರಮೇಶ್ವರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಹೈಕಮಾಂಡ್‌ ಜತೆ ಉತ್ತಮ ಬಾಂಧವ್ಯ ಹೊಂದಿರುವ ಪರಮೇಶ್ವರ್‌ ಅವರನ್ನು ಸಿಎಂ ಮಾಡಬೇಕು ಎಂದು ಹಲವು ಮುಖಂಡರು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂ ಧಿ, ರಾಹುಲ್‌ ಗಾಂಧಿ  ಅವರನ್ನು ಭೇಟಿಯಾಗಲು ಕಲ್ಯಾಣ ಕರ್ನಾಟಕ ಭಾಗದ ಮಠಾಧೀ ಶರ ನಿಯೋಗವೊಂದು ಶೀಘ್ರದಲ್ಲಿ ಹೊಸದಿಲ್ಲಿಗೆ ತೆರಳಲಿದೆ. ಲಿಂಗಾಯತ ಸಮುದಾಯದ 31 ಜನ ಶಾಸಕರಾಗಿದ್ದು, ಸಂಪುಟದಲ್ಲಿ ನಮ್ಮ ಸಮುದಾಯದವರಿಗೆ ಆದ್ಯತೆ ನೀಡಬೇಕು.
– ಜಿಲ್ಲೆಯ ಮಠಾಧೀಶರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next