Advertisement

Siddaramaiah Life: ಸಿದ್ದರಾಮಯ್ಯ ಮುಖ್ಯಮಂತ್ರಿ: ಅಹಿಂದ ನಾಯಕನಿಗೆ ಮತ್ತೆ ಒಲಿದ ಪಟ್ಟ

10:47 AM May 19, 2023 | Pranav MS |

ರಾಜ್ಯ ಕಂಡ ಪ್ರಭಾವಿ ಹಾಗೂ ವರ್ಚಸ್ವೀ ರಾಜಕಾರಣಿ ಸಿದ್ದರಾಮಯ್ಯ. ತಾಲೂಕು ಬೋರ್ಡ್‌ನಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದವರೆಗೂ ಅವರ ರಾಜಕೀಯ ಪಯಣ ರೋಚಕವೂ ಹೌದು. ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಇತ್ತೀಚಿನ ರಾಜಕಾರಣಿಗಳ ಪೈಕಿ ಸಿದ್ದರಾಮಯ್ಯ ಕೂಡ ಒಬ್ಬರು.

Advertisement

ದೇವರಾಜ ಅರಸು ಅವರ ಅನಂತರ ಅಹಿಂದ ವರ್ಗಕ್ಕೂ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದವರು ಸಿದ್ದರಾಮಯ್ಯ. ಮೂಲತಃ ಹಳ್ಳಿಗಾಡಿನ ಹಿನ್ನೆಲೆಯ ಬಡ ರೈತನ ಕುಟುಂಬದಿಂದ ಬಂದವರು. ಅವರೇ ಸಾಕಷ್ಟು ಬಾರಿ ಹೇಳಿಕೊಂಡಿರುವಂತೆ ಉನ್ನತ ವ್ಯಾಸಂಗ ಮಾಡುವಾಗ ಹಾಸ್ಟೆಲ್‌ನಲ್ಲಿ ಕೊಠಡಿ ಸಿಗದೆ ಪ್ರತ್ಯೇಕ ರೂಂ ಮಾಡಿಕೊಂಡು ಹೊಟೇಲ್‌ನಲ್ಲಿ ಸಾಂಬಾರ್‌ ತಂದು ಅನ್ನ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪೂರೈಸಿದವರು.

ಸಿದ್ದರಾಮಯ್ಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿ ಬಂದವರಲ್ಲ. ವಕೀಲಿ ವೃತ್ತಿ ಆಯ್ಕೆ ಮಾಡಿ ಕೊಂಡು ತಾಲೂಕು ಬೋರ್ಡ್‌ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ ಆರ್ಥಿಕ ತಜ್ಞರೇ ಅಚ್ಚರಿಗೊಳ್ಳುವಂತೆ ದಾಖಲೆಯ 13 ಬಾರಿ ಬಜೆಟ್‌ ಮಂಡಿಸಿ ರಾಜ್ಯದ ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಂಡವರು.

ಹೋರಾಟದಿಂದಲೇ ಬೆಳೆದ ವ್ಯಕ್ತಿ: ಸಚಿವರಾಗಿ, ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅವರು ಮಂಡಿಸಿದ ಬಜೆಟ್‌ ಹಾಗೂ ನೀಡಿದ ಕಾರ್ಯಕ್ರಮಗಳು ಹಾಗೂ ಆರ್ಥಿಕ ಶಿಸ್ತು ಮೆಚ್ಚುವಂತದ್ದು. ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ವ್ಯಾಟ್‌ ಜಾರಿಗೆ ತಂದ ಹಣಕಾಸು ಸಚಿವ ಎಂಬ ಹೆಗ್ಗಳಿಕೆಯೂ ಇವರದು. ರಾಜಕಾರಣದಲ್ಲೂ ಸಿದ್ದರಾಮಯ್ಯ ಅವರಿಗೆ ನೇರವಾಗಿ ಅಧಿಕಾರದ ಗದ್ದುಗೆ ಸಿಗಲಿಲ್ಲ. ಅದರ ಹಿಂದೆ ಸಾಕಷ್ಟು ಹೋರಾಟ, ಶ್ರಮ, ಸಂಘಟನೆಯೂ ಇದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಯಾಗಿ ಹಲ ವಾರು ಜನ ಪ್ರಿಯ ಯೋಜ ನೆ ರೂಪಿ ಸಿ ದ್ದರು. ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್‌, ಕ್ಷೀರಭಾಗ್ಯ, ಮನಸ್ವಿನಿ, ಆರೋಗ್ಯ ಭಾಗ್ಯ, ಶಾದಿ ಭಾಗ್ಯ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಬಡವರಿಗೆ ಉಚಿತವಾಗಿ ತಲಾ 7 ಕೆ.ಜಿ. ಅಕ್ಕಿ ವಿತರಣೆಯ ಅನ್ನಭಾಗ್ಯ, ಶಾಲಾಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಕ್ಷೀರಭಾಗ್ಯ, ಪಶು ಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುವ ಕ್ಷೀರಧಾರೆ, ಬಡ ಕುಟುಂಬಗಳು ಹಾಗೂ ರೈತರಿಗೆ ವರದಾನವಾಯಿತು. ಇವರಿಗೆ ಒಂದು ರೀತಿಯಲ್ಲಿ “ಭಾಗ್ಯಗಳ ಸರದಾರ’ ಎಂದೇ ಹೆಸರು ಬಂದಿತ್ತು.

ಆಕಸ್ಮಿಕ ರಾಜಕೀಯ ಪ್ರವೇಶ: ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾದವರು ಸಿದ್ದರಾಮಯ್ಯ. ರಾಜಕೀಯ ಪ್ರವೇಶ ಆಕಸ್ಮಿಕ. ಕಾನೂನು ಪದವಿ ಅನಂತರ ಮೈಸೂರು ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ನಂಜುಂಡ ಸ್ವಾಮಿಯವರು ಸಿದ್ದರಾಮಯ್ಯ ಅವರ ಮಾತಿನ ಶೈಲಿ, ಹೋರಾಟ ಸ್ವಭಾವ, ಬಡವರು, ರೈತರ ಪರ ಬದ್ಧತೆ ನೋಡಿ ರಾಜಕೀಯ ಕ್ಷೇತ್ರಕ್ಕೆ ಇಳಿಯುವಂತೆ ನೀಡಿದ ಪ್ರೇರಣೆಯಿಂದ ರಾಜಕಾರಣಕ್ಕೆ ಪ್ರವೇಶ ಮಾಡಿ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ.

Advertisement

1948 ಆಗಸ್ಟ್‌ 12ರಂದು ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಜನಿಸಿದರು. ಮೂಲತಃ ವೃತ್ತಿಯಿಂದ ವಕೀಲರಾದ ಇವರು ಸಮಾಜವಾದಿ ಯುವಜನ ಸಭಾ ಮೂಲಕ ರಾಜಕೀಯಕ್ಕೆ ಬಂದರು. 1978ರ ವರೆಗೂ ಇವರು ಜ್ಯೂ. ಲಾಯರ್‌ ಆಗಿ ಕೆಲಸ ಮಾಡಿದರು. 75 ವರ್ಷದ ಸಿದ್ದರಾಮಯ್ಯ ಅವರು ಕರುನಾಡು ಕಂಡ ಅತ್ಯಂತ ಶ್ರೇಷ್ಠ ರಾಜಕೀಯ ಮುತ್ಸದ್ಧಿಯೂ ಹೌದು. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಲೋಕದಳ ಮೂಲಕ ಶಾಸನಸಭೆ ಪ್ರವೇಶಿಸಿ ಅನಂತರ ಜನತಾಪಕ್ಷ, ಜನತಾದಳ, ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ಹೊರಬಿದ್ದವರು. ಅನಂತರ ಸ್ವಲ್ಪ ಕಾಲ ಎಬಿಪಿಜೆಡಿನಲ್ಲಿ ಗುರುತಿಸಿಕೊಂಡು ಖುದ್ದು ಸೋನಿಯಾ ಗಾಂಧಿ ಆಹ್ವಾನದ ಮೇರೆಗೆ ರಾಜ್ಯದ ಕಾಂಗ್ರೆಸ್‌ ನಾಯಕರ ಒತ್ತಾಸೆಯಿಂದ ಕಾಂಗ್ರೆಸ್‌ ಸೇರಿದ ವರು. ಕಾಂಗ್ರೆಸ್‌ ಸೇರಿದ ಅನಂತರ ಸಿದ್ದರಾಮಯ್ಯ ಅವರ ರಾಜಕೀಯ ಪಯಣದ ಹಾದಿಯೇ ಬದಲಾಯಿತು ಎಂದು ಹೇಳಬಹುದು. ವಿಪಕ್ಷ ನಾಯಕ ಸ್ಥಾನ, ಮುಖ್ಯ ಮಂತ್ರಿ ಸ್ಥಾನ ಅವರಿಗೆ ಕಾಂಗ್ರೆಸ್‌ನಲ್ಲಿ ಲಭಿಸಿತು. ಜತೆಗೆ ರಾಜ್ಯದ ಪ್ರಭಾವಿ ನಾಯಕನಾಗಿ ಬೆಳೆಯಲು ಅವಕಾ ಶವೂ ದೊರೆಯಿತು. ಕಾಂಗ್ರೆಸ್‌ನಲ್ಲಿ ಈ ಮಟ್ಟಿಗೆ ಬೇರೆ ಪಕ್ಷದಿಂದ ಬಂದವರಿಗೆ ಅವಕಾಶ ಸಿಕ್ಕಿದ್ದು ಕಡಿಮೆಯೇ.

ಚಾಮುಂಡೇಶ್ವರಿ ಉಪ ಚುನಾವಣೆ ಅವರ ರಾಜಕೀಯ ಜೀವನದ ಅತ್ಯಂತ ದೊಡ್ಡ ಹೋರಾಟ ಎಂದೇ ಹೇಳಬಹುದು. ಜೆಡಿಎಸ್‌ ಹಾಗೂ ಬಿಜೆಪಿಯಿಂದ ಒಂದೇ ಅಭ್ಯರ್ಥಿ ಹಾಕಿದ್ದರಿಂದ ಗೆಲುವಿಗಾಗಿ ಸಿದ್ದರಾ ಮಯ್ಯ ಸಾಕಷ್ಟು ಕಷ್ಟ ಪಡಬೇಕಾಯಿತು. 2023ರ ಚುನಾ ವಣೆಯೂ ಅವರ ಪಾಲಿಗೆ ಒಂದು ರೀತಿಯಲ್ಲಿ ಅಗ್ನಿ ಪರೀ ಕ್ಷೆಯಂತೆಯೇ ಆಗಿತ್ತು. ಆದರೂ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದೀಗ ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಭಾಗ್ಯ ಒದಗಿದೆ.

ಬಳ್ಳಾರಿ ಪಾದಯಾತ್ರೆ, ಪ್ರಜಾಧ್ವನಿ: ವಿಪಕ್ಷ ನಾಯಕ ನಾಗಿದ್ದಾಗ ಗಣಿ ರೆಡ್ಡಿಗಳ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಅದು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ತಂದು ನಿಲ್ಲಿಸಿತು. ಕಾಂಗ್ರೆಸ್‌ನಲ್ಲಿ ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಮುಖ್ಯಮಂತ್ರಿಯಾದವರು ಸಿದ್ದ ರಾಮಯ್ಯ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠ ಗೊಳಿಸುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ. ಬಂಗಾರಪ್ಪ ಅವರ ಅನಂತರ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ವರ್ಚಸ್ವೀ ನಾಯಕನ ಕೊರತೆ ತುಂಬಿದವರು ಸಿದ್ದರಾಮಯ್ಯ.

ದಿಗ್ಗಜರ ಜತೆ ಸಂಪರ್ಕ: ರಾಜ್ಯ ಹಾಗೂ ರಾಷ್ಟ್ರ ರಾಜ ಕಾರಣದ ದಿಗ್ಗಜರ ಜತೆಗಿನ ಸಂಪರ್ಕ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಗೆ ಕಾರಣ. ಚಂದ್ರ ಶೇಖರ್‌, ಮಧು ದಂಡವತೆ, ಬಾಪು ಕಲ್ದಾತೆ, ಎಚ್‌. ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಜಾರ್ಜ್‌ ಫೆರ್ನಾಂಡಿಸ್‌, ಜೆ.ಎಚ್‌.ಪಟೇಲ್‌, ಎಸ್‌.ಆರ್‌. ಬೊಮ್ಮಾಯಿ, ವೀರೇಂದ್ರಕುಮಾರ್‌, ಶರದ್‌ ಪವಾರ್‌, ಮುಲಾಯಂ ಸಿಂಗ್‌ ಯಾದವ್‌, ಲಾಲೂ ಪ್ರಸಾದ್‌ ಯಾದವ್‌, ರಾಂ ವಿಲಾಸ್‌ ಪಾಸ್ವಾನ್‌ ಹೀಗೆ ಸಮಾಜವಾದಿ ಮೂಲದ ನಾಯಕರ ಸಂಪರ್ಕ ಹಾಗೂ ಜತೆಗೂಡಿ ಕೆಲಸ ಮಾಡಿದ್ದಾರೆ.

ಅಭಿನವ ಅರಸು
ಸಿದ್ದರಾಮಯ್ಯ ಎಂದರೆ ತಳಮಟ್ಟದಿಂದ ಬಂದ ಜನನಾಯಕ, ಸಾಮಾಜಿಕ ನ್ಯಾಯದ ಪ್ರತಿಪಾದಕ ಅಭಿನವ ಅರಸು ಎಂದೇ ಅವರ ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಸಿದ್ದರಾಮಯ್ಯ ಅವರು ತಳವರ್ಗದವರ ಬಗ್ಗೆ ಹೊಂದಿರುವ ಕಾಳಜಿ ಹಾಗೂ ಅಧಿಕಾರ ಇದ್ದಾಗ ಕೈಗೊಂಡ ಜನಪರ ಕೆಲಸ, ವಿಪಕ್ಷದಲ್ಲಿದ್ದರೂ ಬಡವರ್ಗದವರ ಪರ ಹೋರಾಟ ಇದಕ್ಕೆ ಸಾಕ್ಷಿ. ಅಷ್ಟೇ ಅಲ್ಲ, ಹಿಂದುಳಿದವರ ಅಭಿವೃದ್ಧಿಗಾ ಗಿಯೇ ಅವರು ಘೋಷಿಸಿದ ಯೋಜನೆಗಳೂ ಎಲ್ಲರನ್ನೂ ತಲುಪಿದವು.

ಅಹಿಂದ ನಾಯಕ
ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದ್ದರೂ ರಾಜ್ಯ ರಾಜಕಾರಣದಲ್ಲಿ ಅವರು ಅಹಿಂದ ನಾಯಕ. ಹಿಂದುಳಿದ, ಅಲ್ಪಸಂಖ್ಯಾಕ ಹಾಗೂ ದಲಿತ ಸಮುದಾಯದವರು ಅವರ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ರಾಜ್ಯದಲ್ಲಿ 2013 ಹಾಗೂ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಈ ವರ್ಗದ ಮತಗಳು ಕ್ರೋಡೀಕರಣವಾಗಿ ಕಾಂಗ್ರೆಸ್‌ನತ್ತ ವಾಲಿದ್ದು. ಅದರಲ್ಲೂ ವಿಶೇಷವಾಗಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿರುವ ಸಿದ್ದರಾಮಯ್ಯ ಅವರು ಈ ಬಾರಿ ಅಹಿಂದ ಮತಬ್ಯಾಂಕ್‌ ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗಿರುವುದು ಫ‌ಲಿತಾಂಶದ ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ, ದಲಿತ ರಾಮಯ್ಯ ಎಂದೂ ಕರೆದಿದ್ದು ಇದೆ. ರಾಜ್ಯದ ದಲಿತ ಸಂಘಟನೆಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ರಾಜ್ಯ ಬಜೆಟ್‌ ಗಾತ್ರದ ಇಂತಿಷ್ಟು ಹಣ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕೆ ವೆಚ್ಚ ಆಗಬೇಕು ಎಂಬ ಕ್ರಾಂತಿಕಾರಕ ನಿರ್ಧಾರ ಕೈಗೊಂಡು ಕಾಯ್ದೆ ರೂಪಿಸಿದ್ದರು. ಅದೇ ರೀತಿ ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾಕ ಹಾಗೂ ಹಿಂದುಳಿದ ವರ್ಗದ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಅತೀ ಹೆಚ್ಚು ದಾಖಲೆಯ ಅನುದಾನ ಸಹ ಒದಗಿಸಿದ್ದರು.

ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next