Advertisement

ಸಿದ್ದರಾಮಯ್ಯ: ಚಕ್ರವ್ಯೂಹ ರಾಜಕಾರಣ ಮೀರಿ ನಿಂತು ಬೆಳೆದ ನಾಯಕ

10:29 PM May 18, 2023 | Team Udayavani |

ಮೈಸೂರು: ಅವತ್ತು ಒಂದು ದಿನ. ಎಸ್‌.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲ. ಆಗ ಮಾಜಿ ಸಚಿವರಾಗಿದ್ದ ಸಿದ್ದರಾಮಯ್ಯ, 1989ರ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಹತಾಶರಾಗಿದ್ದರು. ಇನ್ನು ರಾಜಕಾರಣ ನಮ್ಮಂಥವರಿಗೆ ಕಷ್ಟ ಅನಿಸುತ್ತೆ. ಈ ಚುನಾವಣೆಗಳ ಸಹವಾಸವೇ ಸಾಕು. ನನ್ನ ಹತ್ತಿರ ಚುನಾವಣೆ ಎದುರಿಸುವಷ್ಟು ದುಡ್ಡಿಲ್ಲ. ಕರಿಕೋಟು ಹಾಕ್ಕೊಂಡು ಮತ್ತೆ ಕೋರ್ಟ್‌ಗೆ ಹೋಗಿ ಲಾ ಪ್ರಾಕ್ಟೀಸ್‌ ಮಾಡ್ತೀನಿ ಅಂತ ಆಪ್ತರ ಎದುರು ಬಹಳ ಗಂಭೀರವಾಗಿಯೇ ಮಾತಾಡಿದ್ದರು. ಅವರ ಮಾತಿನಲ್ಲಿ ವಿಷಾದದ ಛಾಯೆ ಇತ್ತು. ಆದರೆ 1994ರ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಗೆದ್ದ ಅನಂತರ ಅಂತಹ ಹತಾಶ ಸ್ಥಿತಿಗೆ ಮರಳಲಿಲ್ಲ.

Advertisement

ಆದರೆ ಚುನಾವಣೆಗಳು ಸಿದ್ದರಾಮಯ್ಯ ಅವರನ್ನು ಸುಸ್ತು ಮಾಡಿರುವುದು ಮಾತ್ರ ನಿಜ. ಇದಕ್ಕೆ ಈ ಬಾರಿಯ ವರುಣ ಕ್ಷೇತ್ರದ ಚುನಾವಣೆಯೂ ಹೊರತಲ್ಲ. ಸಿದ್ದರಾಮಯ್ಯ ಈ ರಾಜ್ಯ ಕಂಡ ಮಾಸ್‌ ಲೀಡರ್‌ಗಳಲ್ಲಿ ಅಗ್ರರು. ಹಿಂದುಳಿದ ಕುರುಬ ಸಮಾಜದ ಸಿದ್ದರಾಮಯ್ಯ ಅಹಿಂದ ವರ್ಗಗಳ ಚಾಂಪಿಯನ್‌. ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡರ ಅನಂತರ ಸಮೂಹ ನಾಯಕರಾಗಿ ರೂಪುಗೊಂಡವರು ನಿಸ್ಸಂಶಯವಾಗಿ ಸಿದ್ದರಾಮಯ್ಯ. ಆಗೆಲ್ಲ ಹಿಂದುಳಿದ ವರ್ಗಗಳ ನಾಯಕರೆಂದರೆ ಕಾಂಗ್ರೆಸ್‌ನಲ್ಲಿದ್ದ ಸಾರೇಕೊಪ್ಪ ಬಂಗಾರಪ್ಪ ಅವರಾಗಿದ್ದರು. ಇದಕ್ಕೆ ಪ್ರತಿಯಾಗಿ ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ಪ್ರಾರಂಭದಲ್ಲಿ ಹಿಂದುಳಿದ ಕುರುಬ ಸಮಾಜದ ನಾಯಕರಾಗಿ ಅನಂತರ ಕ್ರಮೇಣ ಅಹಿಂದ ನಾಯಕರಾಗಿ ಹೊರಹೊಮ್ಮಿದರು. ಹೀಗೆ ಮುಂಚೂಣಿಗೆ ಬರುವಾಗ ಜೀವರಾಜ ಆಳ್ವ ಮತ್ತಿತರ 2ನೇ ಹಂತದ ನಾಯಕರ ಜತೆ ಸಂಘರ್ಷದ ಹಾದಿ ತುಳಿಯಬೇಕಾಯಿತು.

ಇಂತಹ ಒಂದು ದಿನದಲ್ಲೇ 1994ರ ಚುನಾವಣೆ ವೇಳೆಯಲ್ಲೇ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಪಟೇಲರ ಸಮ್ಮುಖದಲ್ಲಿ ಮೈಸೂರಿನಲ್ಲಿ ಅಂದು ನಡೆದ ಜನತಾದಳದ ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡರು, “ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಶಕ್ತಿ’ ಎಂದು ಮೊದಲ ಬಾರಿಗೆ ಘೋಷಿಸಿದರು. ಸಿದ್ದರಾಮಯ್ಯ ಅವರಲ್ಲಿ ಅಂತಹ ರಾಜಕೀಯ ಶಕ್ತಿ ಇರುವುದನ್ನು ಮೊದಲು ಗುರುತಿಸಿದವರೇ ದೇವೇಗೌಡರು. ಆಗ ಸಿದ್ದರಾಮಯ್ಯ ರಾಜ್ಯ ಜನತಾದಳದ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದರು. ಜನತಾದಳ ತನ್ನ ಯಾದವೀ ಕಲಹದಲ್ಲಿ ಹೋಳಾದಾಗ ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಿಸಿದ್ದ ದಿನಗಳೂ ಇವೆ. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಗಟ್ಟಿ ನಾಯಕತ್ವ ತಂದುಕೊಟ್ಟಿದ್ದು ಜನತಾ ಪರಿವಾರ. ಇದರ ಲಾಭ ಪ್ರಾರಂಭದಲ್ಲಿ ಜನತಾ ಪರಿವಾರ, ಅನಂತರ ಕಾಂಗ್ರೆಸ್‌ ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರಿಗೆ ಜನತಾ ಪರಿವಾರ ಸಚಿವ, ಉಪ ಮುಖ್ಯಮಂತ್ರಿ ಸ್ಥಾನ ನೀಡಿದೆ.

ಕಾಂಗ್ರೆಸ್‌ 2 ಬಾರಿ ವಿಪಕ್ಷ ನಾಯಕ, ಒಮ್ಮೆ ಮುಖ್ಯಮಂತ್ರಿ ಮಾಡಿದೆ. ಇದೀಗ 2ನೇ ಬಾರಿಗೆ ಸಿಎಂ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯ ತಾವಿದ್ದ ಪಕ್ಷ ಹಾಗೂ ಸರಕಾರದಲ್ಲಿ ತಮ್ಮ ಸ್ಥಾನವನ್ನು ತಮ್ಮ ಹಕ್ಕು, ಪಾಲು, ದುಡಿಮೆಗೆ ಪ್ರತಿಫ‌ಲ ಎಂಬಂತೆ ಅಧಿಕಾರಯುತವಾಗಿ ಪಡೆಯುತ್ತಲೇ ಸಾಗಿದ್ದಾರೆ. ಮೈಸೂರು ತಾಲೂಕು ಬೋರ್ಡ್‌ ಸದಸ್ಯ ಸ್ಥಾನದಿಂದ ಸಿಎಂ ಗಾದಿಗೆ 2ನೇ ಬಾರಿಗೆ ಏರುವವರೆಗಿನ ಸಿದ್ದರಾಮಯ್ಯ ಅವರ 45 ವರ್ಷಗಳ ರಾಜಕೀಯ ಜೀವನ ಏಳು-ಬೀಳುಗಳಿಂದ ಕೂಡಿದ್ದು. ಸುಮಾರು 26 ವರ್ಷ ಸಚಿವ, ಡಿಸಿಎಂ, ಸಿಎಂ, ವಿಪಕ್ಷ ನಾಯಕರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಇಷ್ಟೊಂದು ದೀರ್ಘ‌ ಕಾಲ ಅಧಿಕಾರದಲ್ಲಿದ್ದವರು ಅಪರೂಪ. ಸಿದ್ದರಾಮಯ್ಯ ಧರಂಸಿಂಗ್‌ ಸಂಪುಟದಲ್ಲಿ ಡಿಸಿಎಂ ಆಗಿದ್ದಾಗ ಅಹಿಂದ ಸಮಾವೇಶ ಆರಂಭಿಸಿದರು. ಆಗ ಹುಬ್ಬಳ್ಳಿಯ ಅಹಿಂದ ಸಮಾವೇಶಕ್ಕೆ ಹೋಗಬಾರದೆಂದು ಎಚ್‌.ಡಿ.ದೇವೇಗೌಡರು ತಮ್ಮ ಪಕ್ಷದ ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿದ್ದರು. ಸಮಾವೇಶಕ್ಕೆ ಹೋದರೆ ಅಧಿಕಾರದಿಂದ ಕೆಳಗಿಳಿಸುವುದಾಗಿ ಎಚ್ಚರಿಸಿದ್ದರು.

ಸಿದ್ದರಾಮಯ್ಯ ತಮ್ಮ ಕಾಲಿನ ಮೂಳೆ ಮುರಿದಿದ್ದರೂ ಈ ಸಮಾವೇಶದಲ್ಲಿ ಪಾಲ್ಗೊಂಡು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಂಡರು. ಆಗ ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರೂ ಈ ಸಮಾವೇಶದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರು. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ 2006ರಲ್ಲಿ ಹೊರ ಹಾಕಿದಾಗ ಅವರು ಅಹಿಂದ ಚಳವಳಿಯನ್ನು ಚುರುಕುಗೊಳಿಸಿದರು. ಅಖೀಲ ಭಾರತ ಪ್ರಗತಿಪರ ಜನತಾದಳಕ್ಕೆ ಮತ್ತೆ ಚಾಲನೆ ಕೊಟ್ಟರು. ಜಿ.ಪಂ. ಚುನಾವಣೆಯನ್ನು ಈ ಪಕ್ಷದ ವತಿಯಿಂದಲೇ ಎದುರಿಸಿದರು. ಆದರೆ ಪ್ರಾದೇಶಿಕ ಪಕ್ಷ ಕಟ್ಟುವ ಧೈರ್ಯವನ್ನು ಅವರು ಯಾವತ್ತೂ ಮಾಡಲಿಲ್ಲ. ಪ್ರಾದೇಶಿಕ ಪಕ್ಷದ ಮೂಲಕ ಸ್ವತಂತ್ರವಾಗಿ ಸರಕಾರ ರಚನೆ ಸುಲಭದ ಮಾತಲ್ಲ ಎಂಬ ವಾಸ್ತವದ ಅರಿವಿತ್ತು.

Advertisement

ಹೀಗಾಗಿಯೇ ಅವರು 2006ರಲ್ಲಿ ಕಾಂಗ್ರೆಸ್‌ ಕೈ ಹಿಡಿದರು. ಕನ್ನಡ ಭಾಷೆ ವಿಚಾರಕ್ಕೆ ಬಂದಾಗ ಅವರ ಬದ್ಧತೆ ಪ್ರಶ್ನಾತೀತ. ಅವರ ಮೊದಲ ಅಧಿಕಾರ ಹುದ್ದೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನವೇ ಆಗಿತ್ತು. ಸಿದ್ದರಾಮಯ್ಯ ಬಿಎಸ್‌ಸಿ ಓದಿ ಅನಂತರ ಕಾನೂನು ಪದವಿ ಪಡೆದರು. ಸಿದ್ದರಾಮಯ್ಯ ರಾಜಕಾರಣಕ್ಕೆ ಬರಲು ಆಗ ಸಮಾಜವಾದಿ ಚಳವಳಿಯಲ್ಲಿದ್ದ ರೈತ ನಾಯಕ ಪ್ರೊ| ಎಂ.ಡಿ.ನಂಜುಂಡಸ್ವಾಮಿ ಅವರು ಕಾರಣ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಖಾತೆ ಹೊತ್ತಾಗ ಸಿದ್ದರಾಮಯ್ಯ ಅವರಿಗೆ ಕುರಿ ಎಣಿಸಲು ಬರುವುದಿಲ್ಲ. ಇನ್ನು ಹಣಕಾಸು ಇಲಾಖೆ ಹೇಗೆ ನಿಭಾಯಿಸುತ್ತಾರೆ ಎಂದು ಕುಹಕವಾಡಿದವರೂ ಉಂಟು.

ಆದರೆ ಸಿದ್ದರಾಮಯ್ಯ ಪ್ರಥಮ ಬಜೆಟ್‌ನಲ್ಲಿಯೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಸಿದ್ದರಾಮಯ್ಯ 2013ರಿಂದ 2018ರ ವರೆಗೆ ನನ್ನದು ಅಹಿಂದ ಸರಕಾರ ಎನ್ನುತ್ತಿದ್ದರು. ಇದಕ್ಕೆ ಸ್ವಪಕ್ಷೀಯರೇ ಕೆಲವರು ವಿರೋಧಿಸಿದಾಗಲೂ ಅವರು ಜಗ್ಗಲಿಲ್ಲ. ನನ್ನದು ಅಹಿಂದ ಸರಕಾರ ಎಂದು ಕರೆದರೂ ನನಗೆ ಮುಜುಗರ ಇಲ್ಲ. ನಾನು ಅಹಿಂದ ಪರ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಮಸೂದೆಗೆ ಒಳಪಡಿಸುವುದು, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಯೋಜನೆ ಆದೇಶ ಹೊರಡಿಸಿ ವಿವಾದಕ್ಕೀಡಾದ ಅನಂತರ ಹಿಂಪಡೆದರು. ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸಿ ಕಟು ಟೀಕೆಗೆ ಒಳಗಾದರು. ಸಿದ್ದರಾಮಯ್ಯ ಮೈಸೂರಿನ ಕಾನೂನು ಕಾಲೇಜೊಂದರಲ್ಲಿ ಸುಮಾರು 3 ವರ್ಷ ಪಾರ್ಟ್‌ಟೈಂ ಅಧ್ಯಾಪಕರಾಗಿದ್ದರು.

ಅವರೇ ಹೇಳುವಂತೆ ಅವರಿಗೆ ವಕೀಲ ವೃತ್ತಿಗಿಂತ ಕಾನೂನು ಪಾಠ ಮಾಡುವುದೇ ಹೆಚ್ಚು ಇಷ್ಟವಾಗಿತ್ತು. ಸಮಾಜವಾದಿ ಚಳವಳಿ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡ ಸಿದ್ದರಾಮಯ್ಯ ಜಾತಿಬದ್ಧ ಪಾಳೆಯಗಾರಿಕೆ ರಾಜಕಾರಣವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಕಳೆದ ಸುಮಾರು 20 ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಅವರಷ್ಟು ಆವರಿಸಿಕೊಂಡಿರುವವರು ಮತ್ತೂಬ್ಬರಿಲ್ಲ. ಯಾವುದೇ ರಾಜಕೀಯ ಪಕ್ಷದ ನಡೆ ಇರಲಿ ಅದು ಸಿದ್ದರಾಮಯ್ಯ ಅವರನ್ನು ಗಮನದಲ್ಲಿಟ್ಟುಕೊಂಡೇ ದಾಳ ಉರುಳಿಸಬೇಕಾದ ಪರಿಸ್ಥಿತಿ. ಸಿದ್ದರಾಮಯ್ಯ ಅವರ ಸುತ್ತಲೇ ಕರ್ನಾಟಕದ ರಾಜಕಾರಣ ಗಿರಕಿ ಹೊಡೆದಿದೆ.

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next