Advertisement

ಸಿದ್ದು ಸ್ಪರ್ಧೆ: ಕೈ ಮುಖಂಡರ ಸ್ವಾರ್ಥ, ಸ್ವಪ್ರತಿಷ್ಠೆ!

04:51 PM Jan 08, 2023 | Team Udayavani |

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪರೋಕ್ಷವಾಗಿ ಖಚಿತಪಡಿಸಿದ್ದರೂ, ಕೋಲಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರ ಸ್ವಾರ್ಥ ಕಿಂಚಿತ್ತೂ ಕಡಿಮೆಯಾಗಿಲ್ಲ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂಬ ವಿಚಾರದಲ್ಲಿ ಎರಡೂ ಗುಂಪುಗಳು ಪುಂಖಾನು ಪುಂಖವಾದ ಹೇಳಿಕೆ ನೀಡುತ್ತಾ ಸ್ವಪ್ರತಿಷ್ಠೆಯನ್ನು ಪ್ರದರ್ಶಿಸುತ್ತಿವೆ.

Advertisement

ಹಲವು ವರ್ಷಗಳಿಂದಲೂ ಕೋಲಾರ ಜಿಲ್ಲಾ ಕಾಂಗ್ರೆಸ್‌ ಅನ್ನು ಕಾಡುತ್ತಿದ್ದ ಗುಂಪುಗಾರಿಕೆ ಕಳೆದ ಲೋಕಸಭಾ ಚುನಾವಣೆಯ ನಂತರ ಸ್ಪಷ್ಟ ರೂಪ ಪಡೆದುಕೊಂಡು ಇಬ್ಭಾಗವಾಗಿದೆ. ಈಗ ಒಂದು ಗುಂಪು ಸಿದ್ದರಾಮಯ್ಯರನ್ನು ಕರೆದುಕೊಂಡು ಬರಲು ಸಜ್ಜಾಗುತ್ತಿದೆ. ಮತ್ತೂಂದು ಗುಂಪು ಸಿದ್ದರಾಮಯ್ಯರ ಸ್ಪರ್ಧೆಗೆ ಪರೋಕ್ಷವಾಗಿ ಹಿಂದೇಟು ಹಾಕುತ್ತಿದೆ. ಮರು ಆಯ್ಕೆ ಲೆಕ್ಕಾಚಾರ ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡುತ್ತಿರುವ ಗುಂಪು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಯತ್ನಿಸುತ್ತಿದೆ ಎಂಬ ಆರೋಪವೂ ಇದೆ. ಮುಖಂಡರ ಕಿತ್ತಾಟದಿಂದ ಮುಸುಕಾಗಿರುವ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ವರ್ಚಸ್ಸನ್ನು ಸಿದ್ದರಾಮಯ್ಯರ ಸ್ಪರ್ಧೆ ಹೊಳಪುಗೊಳಿಸುತ್ತದೆ, ಹಾಗೆಯೇ ಹಾಲಿ ಶಾಸಕರ ಮರು ಆಯ್ಕೆಯ ಗೆಲುವಿಗೂ ಸಹಕಾರಿಯಾಗುತ್ತದೆ ಎನ್ನುವುದು ಒಳ ಲೆಕ್ಕಾಚಾರದ ಭಾಗವಾಗಿದೆ.

ಮೇಲ್ನೋಟಕ್ಕೆ, ಬಾಯಿ ಮಾತಿಗೆ ಸಿದ್ದರಾಮಯ್ಯರ ಮೇಲೆ ಅಗಾಧ ಪ್ರೀತಿ ವ್ಯಕ್ತಪಡಿಸುವ ಕೋಲಾರ ಕಾಂಗ್ರೆಸ್‌ ಎರಡೂ ಬಣದ ಮುಖಂಡರು ತಮ್ಮ ಸ್ವಾರ್ಥ ಮತ್ತು ಸ್ವಪ್ರತಿಷ್ಠೆಯನ್ನು ಅದೇ ಸಿದ್ದರಾಮಯ್ಯರಿಗಾಗಿ ಬಿಟ್ಟು ಕೊಡಲು ಸಿದ್ಧರಿಲ್ಲ. ಸಿದ್ದರಾಮಯ್ಯರಿಂದ ಗೆಲುವಿನ ಮೆಟ್ಟಿಲು ಹತ್ತಬಹುದು, ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಭಾವಿಸಿರುವ ಎರಡೂ ಬಣದ ಮುಖಂಡರು ಅದೇ ಸಿದ್ದರಾಮಯ್ಯರಿಗಾಗಿ ತಮ್ಮ ಅಹಂ ಬಿಟ್ಟು ಕೊಡಲು ಮುಂದಾಗುತ್ತಿಲ್ಲ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಸ್ಪರ್ಧೆ ಮತ್ತು ಗೆಲುವಿಗೆ ಲೆಕ್ಕಾಚಾರಗಳು ನಡೆದಿವೆ. ಸ್ವತಃ ಸಿದ್ದರಾಮಯ್ಯನವರೇ 2-3 ಬಾರಿ ಕ್ಷೇತ್ರ ಸಮೀಕ್ಷೆಯನ್ನು ಮಾಡಿಸಿದ್ದಾರೆ. ಆತ್ಮೀಯರಿಂದ ನಿರಂತರವಾಗಿ ಕ್ಷೇತ್ರದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ವ್ಯಕ್ತಿಗತ ಅಭಿಮಾನ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯರಿಗೆ ಅವರದೇ ಲೆಕ್ಕಾಚಾರಗಳಿರಬಹುದು. ಏಕೆಂದರೆ, ಸಿದ್ದರಾಮಯ್ಯರನ್ನು ಪಕ್ಷ ಪ್ರೀತಿ ಮೀರಿ ವ್ಯಯಕ್ತಿಕವಾಗಿ ಅಭಿಮಾನಿಸುವವರ ದೊಡ್ಡ ಪಡೆ ಕೋಲಾರ ಕ್ಷೇತ್ರದಲ್ಲಿದೆ. 2 ದಶಕಗಳ ಹಿಂದೆ ಇದೇ ನೆಲದಿಂದ ಸಿದ್ದರಾಮಯ್ಯ ಅಹಿಂದ ಚಳವಳಿಯನ್ನು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ. ಅಲ್ಪಸಂಖ್ಯಾತರ ಧ್ವನಿಯಾಗಿರುವುದು, ಮುಖ್ಯಮಂತ್ರಿಯಾಗಿದ್ದಾಗ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ವಿವಿಧ ಭಾಗ್ಯಗಳ ಯೋಜನೆಗಳನ್ನು ನೀಡಿದ್ದು, ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದು, ಡಿಸಿ ಕಚೇರಿ ಸಂಕೀರ್ಣ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದು ಸಿದ್ದರಾಮಯ್ಯರ ಮೇಲಿನ ಕೋಲಾರ ಜನರ ಪ್ರೀತಿ ದುಪ್ಪಟ್ಟಾಗಲು ಕಾರಣವಾಗಿದೆ.

ಇಂಥ ನಾಯಕನ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಎರಡೂ ಬಣಗಳು ಒಗ್ಗೂಡಿ ಅವರನ್ನು ಸ್ವಾಗತಿಸಿದರೆ ಭರ್ಜರಿ ಗೆಲುವನ್ನು ಈಗಲೇ ಖಚಿತಪಡಿಸುವಂತ ವಾತಾವರಣ ನಿರ್ಮಿಸಬಹುದು. ಆದರೆ, ಸ್ವಾರ್ಥಿ, ಸ್ವಪ್ರತಿಷ್ಠೆ ನಾಯಕರಿಗೆ ಇದು ಬೇಕಾಗಿಲ್ಲ. ಒಡಕಿನ ಮನೆಗೆ ಬೆಸುಗೆ? ಕಾಂಗ್ರೆಸ್‌ ಒಡಕಿನ ಮನೆಗೆ ಸಿದ್ದರಾಮಯ್ಯ ಬೆಸುಗೆ ಹಾಕದೇ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ ತಮ್ಮ ವಿರೋಧಿ ಜೆಡಿಎಸ್‌, ಬಿಜೆಪಿಗಿಂತಲೂ ತಮ್ಮದೇ ಪಕ್ಷದ ಪರಸ್ಪರ ಮುನಿಸಿಕೊಂಡಿರುವ ಮುಖಂಡರು ಅವರ ಗೆಲುವಿಗೆ ಅಡ್ಡಿಯಾದರೂ ಅಚ್ಚರಿಪಡಬೇಕಾಗಿಲ್ಲ.

Advertisement

2ನೇ ಸಾಲಿನ ನಾಯಕರಿಲ್ಲದ, ಕಾಂಗ್ರೆಸ್‌ ಕಾರ್ಯಕರ್ತರನ್ನು ವರ್ತೂರು ಬಣಕ್ಕೆ ವಲಸೆ ಕಳುಹಿಸಿರುವ ಕೋಲಾರದಂತ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಮುಂದಿದೆ. ಆದರೆ, ಸಿದ್ದರಾಮಯ್ಯರ ಪರ ಹೀಗೆ ಮತದಾರರ ಮನೆ ಬಾಗಿಲಿಗೆ ತೆರಳುವ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದೆ. ಏಕೆಂದರೆ ಸಿದ್ದರಾಮಯ್ಯರನ್ನು ಸ್ವಾಗತಿಸುತ್ತಿರುವ ಗುಂಪಿನ ಬಹುತೇಕ ಹಾಲಿ ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪ್ರಭಾವಿಗಳೇ ಹೊರತು ಕೋಲಾರ ಕ್ಷೇತ್ರದಲ್ಲಲ್ಲ ಎನ್ನುವುದು ವಾಸ್ತವಾಂಶ. ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿರುವ ಗುಂಪಿನ ಮುಖಂಡರಿಗೂ ಈ ರೀತಿಯ ಶಕ್ತಿ ಸಾಮರ್ಥ್ಯಗಳಿಲ್ಲ ಎನ್ನುವುದು ನಿರ್ವಿವಾದ.

ಜೆಡಿಎಸ್‌ ಬಿಜೆಪಿ ಕಾರ್ಯತಂತ್ರ : ಸಿದ್ದರಾಮಯ್ಯರನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಹೇಗೆಲ್ಲಾ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅವರ ಕಡು ವಿರೋಧಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಸಮಾವೇಶ, ಜಲಧಾರೆ, ಪಂಚರತ್ನ ಯಾತ್ರೆಗಳು, 3ವರ್ಷಗಳ ಸೇವಾ ಕಾರ್ಯಕ್ರಮಗಳ ಮೂಲಕ ಘೋಷಿತ ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ವರ್ತೂರು ಪ್ರಕಾಶ್‌ ತಮಗೆ ಕ್ಷೇತ್ರದ ಮೇಲಿರುವ ಹಿಡಿತವನ್ನು ಸಮಯ ಸಿಕ್ಕಾಗಲೆಲ್ಲಾ ಸಾರಿ ಹೇಳುತ್ತಾ ತೊಡೆ ತಟ್ಟುತ್ತಿದ್ದಾರೆ. ಈ ಎರಡೂ ಪಕ್ಷಗಳ ಪ್ರಚಾರ ಪ್ರಯತ್ನಕ್ಕೆ ಹೋಲಿಸಿದರೆ ಇನ್ನೆಂದೂ ಒಂದಾಗುವುದಿಲ್ಲವೆಂಬ ಮುಖಂಡರ ಒಡಕಿನ ಕೋಲಾರ ಕಾಂಗ್ರೆಸ್‌ ಮನೆಗೆ ಸಿದ್ದರಾಮಯ್ಯರನ್ನು ಕರೆ ತರುವ ಪ್ರಯತ್ನ ಪೇಲವವಾಗಿ ಕಾಣಿಸುತ್ತಿದೆ.

ಸಿದ್ದರಾಮಯ್ಯನವರೇ ಉತ್ತರ ನೀಡಬೇಕು : 15-20 ವರ್ಷಗಳಿಂದಲೂ ಕಾಂಗ್ರೆಸ್‌ ಅನ್ನು ಇತರ ಪಕ್ಷಗಳ ಅಭ್ಯರ್ಥಿಗಳ ಗೆಲ್ಲಿಸಲು ಬಳಸಿ ಯಾವುದೇ ಮುಜುಗರವಿಲ್ಲದೆ ಬಹಿರಂಗವಾಗಿ ಶ್ರಮಿಸಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಈಗ ಒಗ್ಗೂಡುವ ಪ್ರಯತ್ನವನ್ನು ಮಾಡದೆ ಸಿದ್ದರಾಮಯ್ಯರನ್ನು ಯಾವ ಧೈರ್ಯದ ಮೇಲೆ ಕೋಲಾರಕ್ಕೆ ಕರೆ ತರುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯರ ಅಭಿಮಾನಿಗಳು ಕೇಳುತ್ತಿದ್ದಾರೆ. ಇಂತಹ ಹಲವಾರು ಪ್ರಶ್ನೆಗಳಿಗೆ ಇನ್ನೂ 24 ಗಂಟೆಯಲ್ಲಿ ಕೋಲಾರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯರೇ ಸೋಮವಾರದ ಸಭೆಯಲ್ಲಿ ಉತ್ತರ ನೀಡಿ ಕೋಲಾರ ಕ್ಷೇತ್ರದ ಮತದಾರರ ಮನ ಗೆಲ್ಲುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿರುವುದು ಸದ್ಯದ ಕೋಲಾರ ಕಾಂಗ್ರೆಸ್‌ ಪರಿಸ್ಥಿತಿ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next