Advertisement

ಸಿದ್ದಾಪುರ: ಬೆಳೆಯಲೇನೋ ಸಿದ್ಧ ; ಬೆಳೆಸುವವರು ಬೇಕಷ್ಟೇ!

12:21 PM Jul 14, 2022 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕಿನ ದೂರದ ಗ್ರಾಮವಿದು ಸಿದ್ದಾಪುರ. ಕೆಲವು ಸುತ್ತಲಿನ ಪ್ರದೇಶಗಳಿಗೆ ಇದೇ ಕೇಂದ್ರ ಸ್ಥಾನ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳನ್ನು ಬೆಸೆಯುವ ಪ್ರಮುಖ ಕೊಂಡಿ ಸಿದ್ದಾಪುರ. ವಾಣಿಜ್ಯ ಚಟುವಟಿಕೆಗಳ ಕೊರತೆಯೂ ಇಲ್ಲ. ಆದರೆ ಮೂಲ ಸೌಕರ್ಯಗಳ ಕೊರತೆ ಇದೆ.

Advertisement

ಈ ಅಭಿಪ್ರಾಯ ಮೂಡುವುದು ಸಿದ್ದಾಪುರ ಗ್ರಾಮವನ್ನು ಒಂದು ಸುತ್ತು ಹಾಕಿದಾಗ. ಸಿದ್ದಾಪುರವೇನೋ ಶರವೇಗದಲ್ಲಿ ಬೆಳೆಯುತ್ತಿದೆ. ಅಷ್ಟೇ ವೇಗದಲ್ಲಿ ಅಭಿವೃದ್ಧಿ ಕಾಮಗಾರಿಗಳೂ ಸಾಧ್ಯವಾದರೆ ಇಡೀ ಗ್ರಾಮಕ್ಕೇ ಹೊಸ ಕಳೆ ಬರಲಿದೆ. ಅದು ಸಾಧ್ಯವಾಗಬೇಕೆಂಬುದು ಜನರ ಆಗ್ರಹ. ಅದಕ್ಕೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.

ಸುಸಜ್ಜಿತ ಆಸ್ಪತ್ರೆ ಅಗತ್ಯ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ ನಕ್ಸಲ್‌ ಪೀಡಿತ ಪ್ರದೇಶಗಳೂ ಒಳಪಡುತ್ತವೆ. ಸುತ್ತಲಿನ ಎಂಟು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಈ ಕೇಂದ್ರದಲ್ಲಿ 26 ಹುದ್ದೆಗಳಿದ್ದರೂ 19 ಖಾಲಿ ಇವೆ. ಪ್ರಸ್ತುತ ಹೊರ ರೋಗಿ ತಪಾಸಣ ವಿಭಾಗ ಹಾಗೂ ತುರ್ತು ಚಿಕಿತ್ಸೆ ವಿಭಾಗವಿದ್ದರೂ ವೈದ್ಯರಿಲ್ಲ. ವೈದ್ಯರು ಹಾಗೂ ದಾದಿಯರ ಹುದ್ಧೆಗಳು ಖಾಲಿ ಇರುವುದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.

ಸಿದ್ದಾಪುರ ಗ್ರಾಮದಲ್ಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸಂಜೆಯ ಮೇಲೆ ಸಿದ್ದಾಪುರದಲ್ಲಿ ಯಾವುದೇ ಕ್ಲಿನಿಕ್‌ ಅಥವಾ ಆಸ್ಪತ್ರೆ ತೆರೆದಿರುವುದಿಲ್ಲ. ಇಂಥ ಸಂದರ್ಭದಲ್ಲಿ ಸುಮಾರು 60 ಕಿ.ಮೀ. ದೂರದ ಜಿಲ್ಲಾ ಕೇಂದ್ರವಾದ ಉಡುಪಿ ಅಥವಾ ಸುಮಾರು 30 ಕಿ.ಮೀ. ದೂರದ ತಾಲೂಕು ಕೇಂದ್ರವಾದ ಕುಂದಾಪುರ ಆಸ್ಪತ್ರೆಗಳನ್ನೇ ಅವಲಂಬಿಸಬೇಕಿದೆ. ಹಾಗಾಗಿ ಈ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತಗೊಳಿಸಿದರೆ ಇದು ಮೇಲ್ದರ್ಜೆಗೇರಲೇಬೇಕು ಎಂಬುದು ಜನಾಗ್ರಹ.

Advertisement

ನೀರಿನ ಸಮಸ್ಯೆ: ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಗ್ರಾಮದ ಬುಡದಲ್ಲಿ ವಾರಾಹಿ ನದಿ ಹರಿಯುತ್ತಿದೆ. ವಾರಾಹಿ ಕಾಲುವೆ ಗ್ರಾಮದಲ್ಲಿ ಹಾದು ಹೋಗಿದೆ. ಮತ್ತೂಂದು ಭಾಗದಲ್ಲಿ ಕುಬ್ಜಾ ನದಿ ಹರಿಯುತ್ತಿದೆ. ಆದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದರೆ ಪರಿಹಾರವಾದೀತು.

ಸಿದ್ದಾಪುರಕ್ಕೆ ಸುತ್ತಮುತ್ತಲಿನ ಗ್ರಾಮಗಳ ಮತ್ತು ಘಟ್ಟದ ಮೇಲಿನ, ಕೆಳಗಿನ ಜನರು ಬರುವುದರಿಂದ ಜನ ದಟ್ಟಣೆ ಹೆಚ್ಚಿ ಸ್ವಚ್ಛತೆಯೂ ಸವಾಲಾಗಿ ಪರಿಣಮಿಸಿದೆ. ಇದರತ್ತ ಸ್ಥಳೀಯಾಡಳಿತ ಗಮನಹರಿಸಬೇಕಿದೆ. ಪೇಟೆಯ ಒಳಚರಂಡಿಗಳು ಅವ್ಯವಸ್ಥೆಯಿಂದ ಕೂಡಿದೆ. ಇದನ್ನೂ ಸರಿಪಡಿಸಬೇಕಿದೆ. ಸಿದ್ದಾಪುರ ಪೇಟೆಗೆ ಬಹು ಮುಖ್ಯವಾಗಿ ಸುಸಜ್ಜಿತವಾದ ಸರ್ಕಲ್‌ ಹಾಗೂ ಬಸ್‌ ನಿಲ್ದಾಣ ನಿರ್ಮಾಣವಾಗಬೇಕಿದೆ. ಸಂತೆ ಮಾರುಕಟ್ಟೆ ವ್ಯವಸ್ಥೆಯೂ ಆಗಬೇಕಿದೆ.

ಸಿದ್ದಾಪುರ ಪೇಟೆಗೆ ಒಂದೆಡೆಯಿಂದ ಕುಂದಾಪುರ, ಶಿವಮೊಗ್ಗ ರಾಜ್ಯ ಹೆದ್ದಾರಿ ಬಂದು ಸೇರಿದರೆ, ಇನ್ನೊಂದೆಡೆಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಯನ್ನು ಶಿವಮೊಗ್ಗ ಜಿಲ್ಲೆಗೆ ಬೆಸೆಯುವ ಪ್ರಮುಖ ಹೆದ್ದಾರಿ ಬಂದು ಸೇರುತ್ತದೆ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳಿಗೆ ಮಹತ್ವದ ಪ್ರದೇಶವಾಗಿರುವ ಸಿದ್ದಾಪುರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ.

ಪಿಯು ಕಾಲೇಜು ಬೇಕು ಸಿದ್ದಾಪುರ ಸರಕಾರಿ ಪ್ರೌಢಶಾಲೆಯು ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್‌, ದ್ವಿತೀಯ ಮತ್ತು 5ನೇ ಸ್ಥಾನ ತಂದು ಕೊಟ್ಟು ಜನಪ್ರಿಯವಾಯಿತು. ಐವತ್ತೆಂಟು ವರ್ಷಗಳ ಈ ಪ್ರೌಢಶಾಲೆಗೆ ಸಾಕಷ್ಟು ಜಾಗವಿದ್ದು, ಇಲ್ಲಿ ಕಲಿತವರೆಲ್ಲ ಕಾಲೇಜಿಗೆ ದೂರದ ಊರುಗಳಿಗೆ ಹೋಗಬೇಕಿದೆ. ಅದರ ಬದಲಾಗಿ ಇಲ್ಲೊಂದು ಸರಕಾರಿ ಪಿಯು ಕಾಲೇಜು ಒದಗಿಸಿಕೊಟ್ಟರೆ ಅನುಕೂಲವಾದೀತು. ದೂರದ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೇ ಅರ್ಧಕ್ಕೇ ವಿದ್ಯಾಭ್ಯಾಸ ನಿಲ್ಲಿಸುವ ವಿದ್ಯಾರ್ಥಿಗಳಿಗೂ ಓದಲು ಅವಕಾಶ ಕಲ್ಪಿಸಿದಂತಾಗಲಿದೆ. ಇದರೊಂದಿಗೆ ಸರಕಾರಿ ಐಟಿಐ ಕಾಲೇಜು ಪ್ರಾರಂಭಗೊಂಡರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಹಳ್ಳಿಹೊಳೆ, ಯಡಮೊಗೆ, ಕಮಲಶಿಲೆ, ಆಜ್ರಿ, ಕೊಡ್ಲಾಡಿ, ಅಂಪಾರು, ಅಮಾಸೆಬೈಲು ಹಾಗೂ ಉಳ್ಳೂರು-74 ಗ್ರಾಮಗಳ ವಿದ್ಯಾರ್ಥಿಗಳೂ ಫ‌ಲಾನುಭವಿಗಳಾಗುತ್ತಾರೆ. ಇದರೊಂದಿಗೆ ಸರಕಾರಿ ಬಸ್‌ ಸೌಕರ್ಯವೂ ಸಿಗಬೇಕಿದೆ.

ಬೇಡಿಕೆಗಳು

*ಸಿದ್ದಾಪುರಕ್ಕೆ ಸುಸಜ್ಜಿತವಾದ 24×7 ಸರಕಾರಿ ಆಸ್ಪತ್ರೆ

*ಸರಕಾರಿ ಪಿಯು ಕಾಲೇಜು

*ಸರಕಾರಿ ಐಟಿಐ ಕಾಲೇಜುಗಳು

*ವಾಹನ ಪಾರ್ಕಿಂಗ್‌ ವ್ಯವಸ್ಥೆ

*ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

*ನದಿಗಳಿಗೆ ವೆಂಟೆಂಡ್‌ ಡ್ಯಾಂ

*ವಾರಾಹಿ ನದಿಯ ನೀರು ಸಮರ್ಪಕ ಬಳಕೆಗೆ ಒತ್ತು

ನೀರು ಹರಿಸುವ ಕಾರ್ಯವಾಗಲಿ: ವಾರಾಹಿ ಕಾಲುವೆಯ ನೀರು ಏತ ನೀರಾವರಿಯ ಮೂಲಕ ಸಿದ್ದಾಪುರ ಕೆಳಪೇಟೆಯ ಕಾಸಿಕೆರೆಗೆ ಹಾಯಿಸಿ, ಅಲ್ಲಿನಿಂದ ನೈಸರ್ಗಿಕ ತೋಡುಗಳ ಮೂಲಕ ನೀರು ಹರಿಸಿದಲ್ಲಿ ಕುಡಿಯುವ ನೀರು ಸೇರಿದಂತೆ, ನೂರಾರು ಎಕರೆ ಕೃಷಿ ಭೂಮಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಅಂತರ್ಜಲವು ವೃದ್ಧಿಸುತ್ತದೆ. ಈ ಒಂದು ಯೋಜನೆಯಿಂದ ಸಿದ್ದಾಪುರ ಗ್ರಾಮದ ಜತೆಯಲ್ಲಿ ಪಕ್ಕದ ಅಂಪಾರು, ಆಜ್ರಿ ಗ್ರಾಮಗಳಿಗೂ ಉಪಯೋಗವಾಗಲಿದೆ. ಈ ಯೋಜನೆ ಕೂಡಲೇ ಕಾರ್ಯರೂಪಕ್ಕೆ ಬರಬೇಕಾಗಿದೆ. –ಶಿವರಾಮ ಶೆಟ್ಟಿ ಜನ್ಸಾಲೆ ಅಧ್ಯಕ್ಷರು, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ

ಶಾಸಕರಲ್ಲಿ ಮನವಿ: ಸಿದ್ದಾಪುರ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿಗಳು ಕಾಮಗಾರಿಗಳು ನಡೆದಿವೆ. ಇನ್ನೂ ಹಲವು ಸೌಕರ್ಯಗಳಿಗೆ ಶಾಸಕರಲ್ಲಿ ಮನವಿ ಮಾಡಲಾಗಿದೆ. ಅನುದಾನ ಸಿಗುವ ಭರವಸೆ ಸಿಕ್ಕಿದ್ದು, ಗ್ರಾಮದಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ. –ಶೇಖರ ಕುಲಾಲ, ಅಧ್ಯಕ್ಷರು, ಗ್ರಾ.ಪಂ., ಸಿದ್ದಾಪುರ

– ಸತೀಶ್‌ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next