Advertisement

ಶಾಮನೂರು ಶಿವಶಂಕರಪ್ಪ ವಿರುದ್ಧ ಯುವ ಪಡೆ ಸೆಡ್ಡು

12:42 AM Mar 31, 2023 | Team Udayavani |

ದಾವಣಗೆರೆ: ಕಾಂಗ್ರೆಸ್‌ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ, 91 ವರ್ಷದ ಡಾ| ಶಾಮನೂರು ಶಿವಶಂಕರಪ್ಪ ಈ ಬಾರಿಯೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಚುನಾವಣ ಆಖಾಡದಲ್ಲಿ ಜಂಗೀ ಕುಸ್ತಿಗೆ ಇಳಿಯಲಿದ್ದಾರೆ. ಕಾಂಗ್ರೆಸ್‌ ಹಿರಿಯಜ್ಜನ ವಿರುದ್ಧ ಸೆಣಸಾಡಲು ಎದುರಾಳಿ ಪಕ್ಷಗಳಿಂದ ಯುವಕರ ಪಡೆ ಉತ್ಸಾಹ ತೋರುತ್ತಿರುವುದು ವಿಶೇಷ.
ಶಾಮನೂರು ಶಿವಶಂಕರಪ್ಪ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಣೆ ಯಾಗಿದೆ. ಪ್ರಬಲ ಪ್ರತಿಸ್ಪರ್ಧಿ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು ಪಕ್ಷ ಯಾರಿಗೇ ಟಿಕೆಟ್‌ ನೀಡಿ ದರೂ ಅವರು ಶಾಮನೂರು ಶಿವಶಂಕರಪ್ಪ ಅವರಿಗಿಂತ ಕಿರಿಯರೇ ಆಗಿರುತ್ತಾರೆ. ಹೀಗಾಗಿ ಈ ಕ್ಷೇತ್ರ ಹಿರಿಯ- ಕಿರಿಯರ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ.

Advertisement

ಶಾಮನೂರು ಅಜ್ಜನ ವಿರುದ್ಧ ಸೆಣಸಾಡಲು ಬಿಜೆಪಿಯಲ್ಲಿ ಒಂದು ದೊಡ್ಡ ಯುವಪಡೆಯೇ ತುದಿಗಾಲಲ್ಲಿ ನಿಂತಿದೆ. ಟಿಕೆಟ್‌ಗಾಗಿ ಯುವಕರು ತಮ್ಮ ತಮ್ಮಲ್ಲಿಯೇ ಪೈಪೋಟಿ ನಡೆಸಿದ್ದು ಬಿಜೆಪಿ ಇನ್ನೂ ಅಧಿಕೃತವಾಗಿ ಟಿಕೆಟ್‌ ಘೋಷಿಸಿಲ್ಲ. ಹಿರಿಯಜ್ಜನ ವಿರುದ್ಧ ಸೋತರೂ, ಗೆದ್ದರೂ ಅದೊಂದು ಸಾಧನೆ (ಗೆದ್ದರೆ ಕಾಂಗ್ರೆಸ್‌ನ ಹಿರಿತಲೆಯನ್ನು ಸೋಲಿಸಿದ ಸಾಧನೆ, ಸೋತರೆ ಹಿರಿಯರನ್ನು ಗೆಲ್ಲಿಸಿದ ಹೆಮ್ಮೆ) ಎಂಬ ಸಮರ್ಥನೆಯ ಭಾವವೇ ಈ ಟಿಕೆಟ್‌ ಪೈಪೋಟಿಗೆ ಕಾರಣವಾಗಿದೆ. ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
91 ವರ್ಷದ ಶಾಮನೂರು ಶಿವಶಂಕರಪ್ಪ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಈಗ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಯುವ ಪಡೆಯಲ್ಲಿ ಪೈಪೋಟಿ: ಇಳಿವಯಸ್ಸಿನ ಶಾಮನೂರು ಶಿವಶಂಕರಪ್ಪ ವಿರುದ್ಧ ಚುನಾವಣ ಕಣದಲ್ಲಿ ಕಾದಾಡಲು ಬಿಜೆಪಿ ಯುವ ಮುಖಂಡರಾದ ಯಶವಂತರಾವ್‌ ಜಾಧವ್‌ (ಜಾಧವ್‌ ಈ ಹಿಂದೆ ಶಾಮನೂರು ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ), ಬಿ.ಜೆ.ಅಜಯಕುಮಾರ್‌, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್‌, ಆನಂದಪ್ಪ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಸಹಿತ ಇನ್ನಿತರ ರಾಜಕೀಯ ಪಕ್ಷಗಳಿಂದಲೂ ಪ್ರಬಲ ಪ್ರತಿಸ್ಪರ್ಧಿಗಳಾಗಿ ಯುವಕರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಶಾಮನೂರು ಶಿವಶಂಕರಪ್ಪ ತಮ್ಮ ರಾಜಕಾರಣದ ಅನುಭವ ತಂತ್ರವನ್ನು ಯುವಕರ ಮೇಲೆ ಹೇಗೆ ಪ್ರಯೋಗಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದರೆ, ಹಿರಿಯ ರಾಜಕಾರಣಿ ಯನ್ನು ಸೋಲಿಸಲು
ಬಿಜೆಪಿ ಸಹಿತ ಇತರೆ ರಾಜಕೀಯ ಪಕ್ಷಗಳು ಯಾವ ರೀತಿಯ ಪ್ರತಿತಂತ್ರ ಹೆಣೆಯುತ್ತವೆ ಎಂಬುದು ಸಹ ಎಲ್ಲ ರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ಏರಿಕೆ ಸಾಧ್ಯತೆ
ಮುಸ್ಲಿಂ ಸಮುದಾಯದ ಮತಗಳೇ (ಅಂದಾಜು 80 ಸಾವಿರ) ಅಧಿಕವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್‌ ಕೊಡುತ್ತ ಬಂದಿದೆ. ಈ ಬಾರಿಯಾದರೂ ವಯಸ್ಸಿನ ಕಾರಣ ದಿಂದ ಶಿವಶಂಕರಪ್ಪ ಅವರನ್ನು ಕೈಬಿಟ್ಟು ಮುಸ್ಲಿಂ ಸಮು ದಾಯದವರಿಗೆ ಟಿಕೆಟ್‌ ಕೊಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಪ್ರಬಲವಾಗಿ ಕೇಳಿಬಂದಿತ್ತು. ಆದರೂ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಬೇರೆ ಬೇರೆ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮುಸ್ಲಿಂ ಮತ ವಿಭಜನೆಯಾಗಬಹುದಾದ ಈ ತಂತ್ರಕ್ಕೆ ಬಿಜೆಪಿಯ ಬೆಂಬಲ ಸಿಗುವ ಲೆಕ್ಕಾಚಾರವೂ ಇದೆ. ಕಾಂಗ್ರೆಸ್‌ನ ಮುಸ್ಲಿಂ ಮತ ಬ್ಯಾಂಕ್‌ ಒಡೆಯುವ ಈ ತಂತ್ರಗಾರಿಕೆ ಕೂಡ ಚುನಾವಣ ಕಣವನ್ನು ಮತ್ತಷ್ಟು ರಂಗೇರಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

– ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next