Advertisement

‘ಶ್ರೀಕೃಷ್ಣ ಆ್ಯಟ್‌ ಜಿಮೇಲ್‌ ಡಾಟ್‌ ಕಾಂ’ ರಿಲೀಸ್‌ ಗೆ ರೆಡಿ

12:01 PM Oct 11, 2021 | Team Udayavani |

ನಟ ಡಾರ್ಲಿಂಗ್‌ ಕೃಷ್ಣ, ಭಾವನಾ ಮೆನನ್‌ ಜೋಡಿಯಾಗಿ ಅಭಿನಯಿಸಿರುವ “ಶ್ರೀಕೃಷ್ಣ ಆ್ಯಟ್‌ ಜಿಮೇಲ್‌ ಡಾಟ್‌ ಕಾಂ’ ಇದೇ ದಸರಾ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದ್ದು, ಇದೇ ವೇಳೆ ಚಿತ್ರದ ರಿಲೀಸ್‌ ಬಗ್ಗೆ ಮಾಹಿತಿ ನೀಡಲು ನಟ ಡಾರ್ಲಿಂಗ್‌ ಕೃಷ್ಣ, ನಿರ್ಮಾಪಕ ಸಂದೇಶ್‌ ನಾಗರಾಜ್‌ ಮತ್ತು ನಿರ್ದೇಶಕ ನಾಗಶೇಖರ್‌ ಮಾಧ್ಯಮಗಳ ಮುಂದೆ ಬಂದಿದ್ದರು.

Advertisement

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಸಂದೇಶ್‌ ನಾಗರಾಜ್‌, “ಥಿಯೇಟರ್‌ಗಳಲ್ಲಿ 50% ಪ್ರೇಕ್ಷಕರ ಅವಕಾಶವಿರುವಾಗಲೇ ನಾವು ಈ ಸಿನಿಮಾ ರಿಲೀಸ್‌ ಮಾಡಬೇಕೆಂದು ನಿರ್ಧರಿಸಿದ್ದೆವು. ಸಾಕಷ್ಟು ಮುಂಚೆಯೇ ರಿಲೀಸ್‌ ಡೇಟ್‌ ಕೂಡ ನಿರ್ಧಾರವಾಗಿತ್ತು. ಈಗ ಸರ್ಕಾರ ಥಿಯೇಟರ್‌ಗಳಲ್ಲಿ ಪೂರ್ಣ ಪ್ರಮಾಣದಪ್ರವೇಶಾತಿಗೆ ಅವಕಾಶ ನೀಡಿದೆ. ಜೊತೆಗೆ ದಸರಾ ಹಬ್ಬದ ವೇಳೆ ಸಾಲುಸಾಲು ರಜೆಗಳಿದ್ದು, ಥಿಯೇಟರ್‌ಗೆ ಬರಲು ಪ್ರೇಕ್ಷಕರಿಗೂ ಅನುಕೂಲವಾಗುತ್ತದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಈಗಾಗಲೇ ಹಾಕಿದ ಬಂಡವಾಳ ಕೂಡ ವಾಪಾಸ್‌ ಬಂದಿದೆ. ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ’ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ:‘ಕಿಂಗ್ ಈಸ್ ಬ್ಯಾಕ್..’ ಹಳೇಯ ಖದರ್ ಗೆ ಮರಳಿದ ಮಾಹಿ, ಸಂತಸದಲ್ಲಿ ತೇಲಾಡಿದ ವಿರಾಟ್

ಚಿತ್ರದ ಬಗ್ಗೆ ಮಾತಿಗಿಳಿದ ನಟ ಕೃಷ್ಣ, “ನಾನು ಮೈಸೂರಿನವನೇ ಆಗಿದ್ದರಿಂದ ಚಿಕ್ಕಂದಿನಿಂದಲೂ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರನ್ನು ಬಲ್ಲೆ. ಅವರ ಹೋಟೆಲ್‌ಗೆ ಹೋಗುತ್ತಿದ್ದೆ. ಈಗ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಸಿನಿಮಾದ ಕಥೆ ಹೊಸ ಥರದಲ್ಲಿದೆ. ಹಾಡುಗಳೂ ಚೆನ್ನಾಗಿದೆ. ದತ್ತಣ್ಣ ಅವರಂತಹ ಹಿರಿಯರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ. ನನ್ನೊಂದಿಗೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಸೊಗಸಾಗಿದೆ’ ಎಂದರು.

ನಿರ್ದೇಶಕ ನಾಗಶೇಖರ್‌ ಮಾತನಾಡಿ, “ಕೊರೊನಾ ಸಮಯದಲ್ಲಿ ಒಮ್ಮೆ ಇದ್ದಕ್ಕಿದ್ದಂತೆ ಪೋನ್‌ ಮಾಡಿದ ನಿರ್ಮಾಪಕ ಸಂದೇಶ್‌ ನಾಗರಾಜ್‌, ತಕ್ಷಣವೇ ಮೈಸೂರಿಗೆ ಬರುವಂತೆ ಹೇಳಿದರು. ಲಾಕ್‌ ಡೌನ್‌ ಸಮಯದಿಂದ ಎಷ್ಟೋ ಜನರಿಗೆ ಕೆಲಸ ಇಲ್ಲ. ನಾವು ಸಿನಿಮಾ ಶುರು ಮಾಡಿದರೆ, ಎಷ್ಟೋ ಜನಕ್ಕೆ ಕೆಲಸ ಸಿಗುತ್ತದೆ ತಕ್ಷಣವೇ ಸಿನಿಮಾ ಶುರು ಮಾಡೋಣ ಎಂದರು.

Advertisement

ಆ ನಂತರ ಒಂದು ಕಥೆ ಆಯ್ಕೆ ಮಾಡಿಕೊಂಡು, ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಅಂದುಕೊಂಡಂತೆ ಸಿನಿಮಾ ಮಾಡಿ ಮುಗಿಸಿದ್ದೇವೆ. ಇಲ್ಲಿಯವರೆಗೆ ನೇಚರ್‌ ಬ್ಯಾಗ್ರೌಂಡ್‌ನ‌ಲ್ಲಿ ಸಿನಿಮಾ ಮಾಡಿದ್ದ ನಾನು ಮೊದಲ ಬಾರಿಗೆ ಸಿಟಿ ಬ್ಯಾಗ್ರೌಂಡ್‌ನ‌ಲ್ಲಿ ಈ ಸಿನಿಮಾ ಮಾಡಿದ್ದೇವೆ. ಇದು ನಮ್ಮ ನಡುವೆಯೇ ನಡೆಯುವಂಥ ಕಥೆ. ಆದ್ರೆ ನೋಡುಗರ ಮನಸ್ಸಿನಲ್ಲಿ ಉಳಿಯುತ್ತದೆ. ಈಗಾಗಲೇ ಸಾಂಗ್ಸ್‌, ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಸಿನಿಮಾಕ್ಕೂ ಹಾಗೇ ರೆಸ್ಪಾನ್ಸ್‌ ಸಿಗುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡಿದರು.

ಇನ್ನು “ಶ್ರೀಕೃಷ್ಣ ಆ್ಯಟ್‌ ಜಿಮೇಲ್‌ ಡಾಟ್‌ ಕಾಂ’ ಚಿತ್ರದಲ್ಲಿ ಕೃಷ್ಣ, ಭಾವನಾ ಮೆನನ್‌ ಜೊತೆಗೆ ಹಿರಿಯ ನಟ ದತ್ತಣ್ಣ, ರಿಷಭ್‌ ಶೆಟ್ಟಿ, ಚಂದನ್‌ ಗೌಡ, ಸಾಧುಕೋಕಿಲ, ಅಚ್ಯುತರಾವ್‌, ಸಾತ್ವಿಕ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತವಿದ್ದು, ಕವಿರಾಜ್‌ ಸಾಹಿತ್ಯವಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನವಿದೆ

Advertisement

Udayavani is now on Telegram. Click here to join our channel and stay updated with the latest news.

Next