Advertisement

ಗಣಪನ ಮೆರವಣಿಗೆಗೆ ಕಲಾ ತಂಡಗಳ ಮೆರಗು

12:38 PM Oct 30, 2022 | Team Udayavani |

ಅರಸೀಕೆರೆ: ಕೊರೊನಾ ಹಿನ್ನೆಲೆ 2 ವರ್ಷಗಳಿಂದ ಸರಳವಾಗಿ ನಡೆಯುತ್ತಿದ್ದ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ಶುಕ್ರವಾರ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆದು 2ನೇ ದಿನವಾದ ಶನಿವಾರವೂ ಅತ್ಯಂತ ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ಮೆರವಣಿಗೆ ಮುಂದುವರೆಯಿತು.

Advertisement

25ಕ್ಕೂ ಹೆಚ್ಚಿನ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಭಾರೀ ಮದ್ದು ಗುಂಡುಗಳ ಪ್ರದರ್ಶನಕ್ಕೆ ನೆರೆದಿದ್ದ ಜನರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಶುಕ್ರವಾರ ಸಂಜೆ ಆಸ್ಥಾನ ಮಂಟಪದಿಂದ ನಿರ್ಗಮಿಸಿದ ಶ್ರೀ ಪ್ರಸನ್ನ ಗಣಪತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಗರದ ಹಾಸನ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ವಿಘ್ನ ವಿನಾಯಕನ ಮೆರವಣಿಗೆಗೆ ಆಗಮಿಸಿದ ಸಂದರ್ಭದಲ್ಲಿ ವಡೇರಹಳ್ಳಿ ಶ್ರೀ ಕಾಳಿಕಾಂಬ ಫೈರ್‌ ವಕ್ಸ್‌ ìನವರ ಭಾರೀ ಮದ್ದು ಗುಂಡುಗಳ ಪ್ರದರ್ಶನ ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ ಚಿತ್ರಗಳನ್ನು ಮೂಡಿಸುವ ಮೂಲಕ ಜನರನ್ನು ಆಕರ್ಷಿಸಿತು. ಗಣಪತಿಯನ್ನು ಭಕ್ತಿಯಿಂದ ಭಕ್ತಾದಿಗಳು ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದು ಬೀಳ್ಕೊಟ್ಟರು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಬೃಹತ್‌ ಪ್ರಮಾಣದ ಹೂವಿನ ಹಾರವನ್ನು ಸಮರ್ಪಿಸಿದರು.

ಕಲಾ ತಂಡಗಳ ಮೆರಗು: ಶನಿವಾರ ಮಧ್ಯಾಹ್ನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಮುಂಭಾಗದಿಂದ ಪ್ರಾರಂಭವಾದ ಅದ್ಧೂರಿ ಮೆರವಣಿಗೆಯಲ್ಲಿ ಡಿ.ಜೆ ಆರ್ಕೇಸ್ಟ್ರಗಳ ಪೈಪೋಟಿಯಲ್ಲಿ ಗುಂಪು-ಗುಂಪುಗಳಲ್ಲಿ ಯುವಕರ ತಂಡ ಕುಣಿದು ಕುಪ್ಪಳಿಸಿದರೆ ಮತ್ತೂಂದು ಕಡೆಯಲ್ಲಿ ಮಡಿಕೇರಿಯ ಟ್ಯಾಬ್ಲೋ, ಮೈಸೂರಿನ ನಗಾರಿ ಪ್ರದರ್ಶನ, ಕೇರಳದ ಪಂಚ ಕಾಳಿ ನರ್ತನ, ಚಂಡೇ ವಾದ್ಯ, ಡೊಳ್ಳು ಕುಣಿತ, ಮಂಗಳೂರಿನ ಹುಲಿವೇಷ, ಉಡುಪಿಯ ಶಿವ ಮತ್ತು ಅಘೋರಿ ಪ್ರದರ್ಶನ, ರಾಣೆಬೆನ್ನೂರಿನ ಶಾರದಾ ಬ್ಯಾಂಡ್‌ ರೋಡ್‌ ಆರ್ಕೆಸ್ಟ್ರಾ, ನಾಗಮಂಗಲ ದ ರವಿ ತಂಡದ ವೀರಭದ್ರ ದೇವರ ಕುಣಿತ, ಬಸವೇಶ್ವರ ಯುವಕ ತಂಡದವರಿಂದ ನಂದಿ ಧ್ವಜ ಕುಣಿತ, ತಮಟೆ ವಾದ್ಯಗಳ ಚಮತ್ಕಾರ ಹಾಗೂ ಗೊಂಬೆಯಾಟ ಸೇರಿದಂತೆ 25ಕ್ಕೂ ಹೆಚ್ಚಿನ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಸಮೂಹಕ್ಕೆ ಬೃಹತ್‌ ಮನರಂಜನೆ ನೀಡಿದರು.

ಮೆರವಣಿಗೆಯಲ್ಲಿ ಗಣ್ಯರು ಭಾಗಿ: ಮೆರವಣಿಗೆಯಲ್ಲಿ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ರವಿಂದ್ರ ಬಾಬು, ಕಾರ್ಯದರ್ಶಿ ವೆಂಕಟೇಶ ಬಾಬು, ಖಜಾಂಚಿ ನಾಗಾಭೂಷಣ್‌, ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಉದ್ಯಮಿ ಅರುಣ್‌ ಕುಮಾರ್‌, ನಿಕಟ ಪೂರ್ವ ಸಿ.ಎಂ. ರಾಜಕೀಯ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್‌, ನಗರಸಭಾ ಅಧ್ಯಕ್ಷ ಸಿ.ಗಿರೀಶ್‌ ಹಾಗೂ ನಗರಸಭಾ ಸದಸ್ಯರು ಸೇರಿದಂತೆ ಗಣ್ಯಮಾನ್ಯರು ಭಾಗವಹಿದ್ದರು.

ಬಿಗಿ ಭದ್ರತೆ: ಮೆರವಣಿಗೆ ಕಂತೇನಹಳ್ಳಿ ದೊಡ್ಡ ಕೆರೆ ತಲುಪುವವರೆಗೆ ತೀವ್ರ ನಿಗಾವಹಿಸಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಡಿವೈಎಸ್‌ಪಿ ಅಶೋಕ್‌ ನೇತೃತ್ವದಲ್ಲಿ ಮೆರವಣಿಗೆಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

ಇಂದೇ ತೆಪ್ಪೋತ್ಸವ ನಡೆಸಿ ಗಣೇಶನ ವಿಸರ್ಜನೆ : ಭಾನುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕಂತೇನಹಳ್ಳಿ ದೊಡ್ಡಕೆರೆಯಲ್ಲಿ ಶ್ರೀ ಪ್ರಸನ್ನ ಗಣಪತಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ನಡೆಸಿದ ನಂತರ ಗಣಪತಿ ವಿಸರ್ಜನೆ ನೆರವೇರಿಸ ಲಾಗುತ್ತದೆ. ವಿಜೃಂಭಣೆಯ ಗಣಪತಿ ವಿರ್ಜನೆಗೆ ಭಾರೀ ಭಕ್ತ ಸಾಗರವೇ ಹರಿದು ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next