ಮುಂಬಯಿ: ಬಾಲಿವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೇಯಸ್ ತಲ್ಪಡೆ ಅವರಿಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಆಂಜಿಯೋಪ್ಲಾಸ್ಟಿಗೆ ಒಳಗಾದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನನಗೆ ಪುನರ್ ಜನ್ಮ ಸಿಕ್ಕಿದೆ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ತಮ್ಮ ಬದುಕಿನ ಸಂಕಷ್ಟದ ಕ್ಷಣಗಳ ಕುರಿತು ಮಾಹಿತಿ ಹಂಚಿಕೊಂಡಿದ್ದು ”ಆ ದಿನ ಕೆಲವು ನಿಮಿಷಗಳ ಕಾಲ ತಾನು ಪ್ರಾಯೋಗಿಕವಾಗಿ ಕೊನೆಯುಸಿರೆಳೆದಿದ್ದೆ”. ನನ್ನ ಕುಟುಂಬವೂ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.
ಡಿಸೆಂಬರ್ 14 ರಂದು ಪತ್ನಿ ದೀಪ್ತಿ ತನ್ನನ್ನು ಆಸ್ಪತ್ರೆಗೆ ಕರೆದೊಯ್ದಾಗ ಏನಾಯಿತು ಎಂಬ ವಿಚಾರ ವಿವರವಾಗಿ ಹೇಳಿದ್ದು, “ಶೂಟಿಂಗ್ ಸ್ಥಳದಲ್ಲಿ ಇದ್ದಕ್ಕಿದ್ದಂತೆ, ನನಗೆ ಉಸಿರುಗಟ್ಟುವಿಕೆ ಶುರುವಾಯಿತು. ನನ್ನ ಎಡಗೈ ನೋವು ಪ್ರಾರಂಭಿಸಿತು. ನನ್ನ ಬಟ್ಟೆಗಳನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ನಾವು ಆಕ್ಷನ್ ಸೀಕ್ವೆನ್ಸ್ಗಳನ್ನು ಶೂಟ್ ಮಾಡುತ್ತಿರುವುದರಿಂದ ಇದು ಸ್ನಾಯು ಎಳೆತ ಎಂದು ನಾನು ಭಾವಿಸಿದೆ. ಈ ಹಿಂದೆ ನಾನು ಈ ರೀತಿಯ ಆಯಾಸವನ್ನು ಅನುಭವಿಸಿರಲಿಲ್ಲ.’ನಾನು ಕಾರ್ ಹತ್ತಿದ ತತ್ ಕ್ಷಣ, ನಾನು ನೇರವಾಗಿ ಆಸ್ಪತ್ರೆಗೆ ಹೋಗಬೇಕು ಎಂದು ನನಗೆ ಅನಿಸಿತು, ಆದರೆ ನಾನು ಮೊದಲು ಮನೆಗೆ ಹೋಗಬೇಕು ಎಂದು ಭಾವಿಸಿದೆ. ನನ್ನ ಹೆಂಡತಿ ದೀಪ್ತಿ ನನ್ನನ್ನು ಆ ಸ್ಥಿತಿಯಲ್ಲಿ ನೋಡಿ 10 ನಿಮಿಷಗಳ ಒಳಗೆ ಆಸ್ಪತ್ರೆಗೆ ಹೋಗುತ್ತಿದ್ದೆವು.ಗೇಟ್ನಿಂದ ಆಸ್ಪತ್ರೆಯನ್ನು ಪ್ರವೇಶಿಸುವ ಹೊತ್ತಿಗೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದೆ” ಎಂದು ಬಹಿರಂಗಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕೆಲಸ ಮುಗಿಸಿ ತೀವ್ರ ಆಯಾಸ ಅನುಭವಿಸುತ್ತಿದ್ದೆ, ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣ ಔಷಧೋಪಚಾರ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಶ್ರೇಯಸ್ ಹೇಳಿದ್ದಾರೆ.
“ನನ್ನ ಜೀವನದಲ್ಲಿ ನಾನು ಎಂದಿಗೂ ಆಸ್ಪತ್ರೆಗೆ ದಾಖಲಾಗಲಿಲ್ಲ, ಮೂಳೆ ಮುರಿತಕ್ಕೆ ಸಹ ಆಗಿರಲಿಲ್ಲ,ನಿಮ್ಮ ಆರೋಗ್ಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಮಯವು ತುಂಬಾ ಅನಿಶ್ಚಿತ. ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಅದು ಕೆಟ್ಟರೆ, ಬೇರೆ ಯಾವುದೂ ಮುಖ್ಯವಾಗುವುದಿಲ್ಲ” ಎಂದು ಸಲಹೆ ನೀಡಿದ್ದಾರೆ.