Advertisement

ಗಂಗೂರಿನ ಉದ್ದಾಮನನ್ನು ನೀವೇ ಪೂಜಿಸಬಹುದು!

02:14 PM Apr 22, 2017 | |

ಭಾರತದಲ್ಲಿ ದೇವರ ಬಗೆಗಿನ ಯೋಚನೆಗಳು ಭಿನ್ನ. ಇಲ್ಲಿ ದೇವರೇ ಇಲ್ಲವೆನ್ನುವ ನಾಸ್ತಿಕರೂ ಆತ್ಮಸಾಕ್ಷಾತ್ಕಾರ ಪಡೆದಿದ್ದಾರೆ. ಅವರನ್ನು ಆಸ್ತಿಕರೂ ಒಪ್ಪಿಕೊಂಡಿದ್ದಾರೆ. ಇಲ್ಲಿನ ಕೆಲವು ದೇವಳಗಳಲ್ಲಿ ಎಲ್ಲರಿಗೂ ಪ್ರವೇಶ ಸಾಧ್ಯವಿಲ್ಲ. ಇನ್ನು ಕೆಲವೊಂದು ಕಡೆ ಯಾವುದೇ ನಿರ್ದಿಷ್ಟ ಆಚರಣೆಗಳೂ ಇಲ್ಲ, ನಿಮಗೆ ಬಂದಂತೆ ಪೂಜಿಸಿಕೊಳ್ಳಬಹುದು. ಈ ಎರಡೂ ದೈವಸ್ಥಾನಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಒಂದು ಕಡೆ ವಿಗ್ರಹ ಪ್ರತಿಷ್ಠಾಪನೆ ವಿದ್ಯುಕ್ತವಾಗಿ ನಡೆದು ಅದಕ್ಕೆ ಜೀವ ತುಂಬಲಾಗಿರುತ್ತದೆ, ಮತ್ತೂಂದು ಕಡೆ ಅಂತಹ ಯಾವುದೂ ನಡೆದಿರುವುದಿಲ್ಲ. ಜನರ ನಂಬಿಕೆ, ಶ್ರದ್ಧೆಯೇ ಅದಕ್ಕೆ  ಜೀವವಾಗುತ್ತದೆ. ಇದರಲ್ಲಿ ಯಾವುದೋ ಒಂದು ಮಾದರಿಗೆ ಇಲ್ಲಿರುವ ಪೂಜಾಸ್ಥಾನಗಳು ಸೇರಿಕೊಳ್ಳುತ್ತವೆ. ಆದರೆ ಎರಡೂ ಗುಣಗಳು ಒಂದು ಪೂಜಾಸ್ಥಾನದಲ್ಲಿ ಮೇಳೈಸಿರಬೇಕೆಂದರೆ ಅದೊಂದು ಅಪೂರ್ವ ಕ್ಷೇತ್ರವೇ ಆಗಿರಬೇಕಾಗುತ್ತದೆ. ಅಂತಹದೊಂದು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿರುವ ಗಂಗೂರು ಸಮೀಪದಲ್ಲಿದೆ. 

Advertisement

ಉದ್ದಾಮ ಶ್ರೀಕ್ಷೇತ್ರ…
ಭದ್ರಾವತಿಯಿಂದ ಶಿವನಿ ರಸ್ತೆಯಲ್ಲಿ ಸಾಗಿದರೆ ಕಾಡಿನಮಧ್ಯದಲ್ಲಿ ಸಿಗುವ ಈ ಸ್ಥಾನ ಬೆಳಕಿಗೆ ಬಂದಿದ್ದೇ 2011ರಿಂದ. ಅದುವರೆಗೆ ಗಿಡಮರಗಳಿಂದ ಮುಚ್ಚಿಹೋಗಿದ್ದ 12 ಅಡಿ ಎತ್ತರದ ದೈತ್ಯಾಕಾರದ ಆಂಜನೇಯ ಈಗ ಉದ್ದಾಮ ಎಂಬ ಹೆಸರಿನಿಂದ ವಿಶ್ವದ ಹಲವು ರಾಷ್ಟ್ರಗಳಿಗೆ ಮುಟ್ಟಿದ್ದಾನೆ. ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಹರಿದುಬರುತ್ತಿದ್ದಾರೆ. ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಪೂಜೆ ಇಲ್ಲಿನ ವಿಶೇಷ. ಆ ವೇಳೆ 10 ಸಾವಿರಕ್ಕೂ ಹೆಚ್ಚು ಉದ್ದಾಮಾಶ್ರಿತರು ಸೇರಿ ಉದ್ದಾಮನನ್ನು ಪೂಜಿಸುತ್ತಾರೆ.

ಎಲ್ಲರೂ ಪೂಜಿಸಬಹುದು!
ಈ ಕ್ಷೇತ್ರದ ವಿಶೇಷವೆ ಇದು. ಇಲ್ಲಿ ಯಾರೂ ಅರ್ಚಕರಿಲ್ಲ. ಅಲ್ಲೇ ಇರುವ ಹುಡುಗರು ಆಂಜನೇಯನನ್ನು ಪ್ರತಿದಿನ ತೊಳೆದು ಹೂವು ಹಚ್ಚಿ ಪೂಜಿಸುತ್ತಾರೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತರು ಯಾವುದೇ ಸಂಕೋಚವಿಲ್ಲದೇ ತಮಗೆ ತಿಳಿದಂತೆ ಉದ್ದಾಮನನ್ನು ಮುಟ್ಟಿ ಪೂಜಿಸಬಹುದು. ಹೀಗೆಯೇ ಪೂಜಿಸಬೇಕೆಂಬ ವಿಧಿವಿಧಾನಗಳೂ ಇಲ್ಲಿಲ್ಲ. ಪ್ರತಿ ಹುಣ್ಣಿಮೆ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಂತಹ ವಿಶೇಷ ದಿನಗಳಲ್ಲಿ ಮಾತ್ರ ಜನಬಾಹುಳ್ಯದ ಕಾರಣ ಮುಟ್ಟಿ ಪೂಜಿಸಲು ಅವಕಾಶ ನೀಡಲಾಗುವುದಿಲ್ಲ.

ಇಲ್ಲಿಗೆ ಬಂದವರು ಬರಿಗೈಯಿಂದ ಹಿಂದಿರುಗಿಲ್ಲ
ಉದ್ದಾಮನ ಬಳಿ ಬಂದವರು ಬರಿಗೈಯಿಂದ ಹಿಂತಿರುಗಿದ್ದೇ ಇಲ್ಲ. ಮಕ್ಕಳಾಗದವರು, ಮದುವೆಯಾಗದವರು, ವಿಪರೀತ ಅನಾರೋಗ್ಯ ಇರುವವರು, ಕೌಟುಂಬಿಕ ತಾಪತ್ರಯ ಇರುವವರು ಇಲ್ಲಿಗೆ ನಿರಂತರವಾಗಿ ಬರುತ್ತಲೇ ಇರುತ್ತಾರೆ. ಬಂದವರೆಲ್ಲ ತಮ್ಮ ಜೀವನದಲ್ಲಿ ಬದಲಾವಣೆಯಾಗಿದೆ, ನೆಮ್ಮದಿ ಸಿಕ್ಕಿದೆ ಎನ್ನುತ್ತಾ ಮತ್ತೆ ಮತ್ತೆ ಹಿಂತಿರುಗಿ ಬರುತ್ತಾರೆ. ಕೆಲವರಂತೂ ಶ್ರೀಕ್ಷೇತ್ರಕ್ಕೆ ಬಂದಾಗ ತಮಗೆ ಅಲೌಕಿಕ ಅನುಭವಗಳು ಆಗಿವೆ ಎಂದು ಹೇಳಿಕೊಳ್ಳುತ್ತಾರೆ. ಬಹಳ ಭಾವತುಂಬಿ ಮಾತನಾಡುವ ಅವರು ಕ್ಷೇತ್ರಕ್ಕೆ ದಾಸಾನುದಾಸರಂತಾಗಿದ್ದಾರೆ, ವರ್ಷಗಳಿಂದ ಹಾಸಿಗೆವಾಸಿಯಾಗಿದ್ದ ಬಾಲಕನೊಬ್ಬ ಎದ್ದು ಓಡಾಡಲು ಶುರು ಮಾಡಿದ್ದು, ಮಾತು ಬಾರದ ವ್ಯಕ್ತಿಯೊಬ್ಬ ಮಾತನಾಡಿದ್ದು… ಇಂತಹ ಸಾವಿರಾರು ಘಟನೆಗಳನ್ನು ಭಕ್ತರೊಳಗಿನ ನಂಬಿಕೆ ಹೆಚ್ಚಿಸಿದೆ.  ಅಂತಹ ಭಕ್ತರೆಲ್ಲ ಇಲ್ಲಿಗೆ ಬಂದವರಾರೂ ಬರಿಗೈಯಿಂದ ಹಿಂತಿರುಗಲ್ಲ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

800 ವರ್ಷದ ಇತಿಹಾಸ
ಉದ್ದಾಮ ಶ್ರೀಕ್ಷೇತ್ರದ ಇತಿಹಾಸ ವಿಶೇಷವಾಗಿದೆ. ಈ ವಿಗ್ರಹ ಕೆತ್ತಿರುವುದು 800 ವರ್ಷಗಳ ಹಿಂದೆ. ಗುಜರಾತ್‌ನಿಂದ ಗೋವಾಕ್ಕೆ ಅಲ್ಲಿಂದ ಭದ್ರಾವತಿಗೆ ಬಂದ ಜನಾಂಗವೊಂದರ ಶಿಲ್ಪಿಯೊಬ್ಬ ಇಲ್ಲಿ ಇಂತಹ ಸುಂದರ, ಭವ್ಯ ವಿಗ್ರಹ ಕೆತ್ತಿದ. ಆಂಜನೇಯನ ಪರಮ ಭಕ್ತನಾಗಿದ್ದ ಆತ ಭಾರೀ ಗಾತ್ರದ ಏಕಶಿಲೆ ಇರುವುದನ್ನು ನೋಡಿ ಕೆತ್ತಲು ಮನವಿ ಮಾಡಿದ. ಕೆತ್ತಿ ಮುಗಿಸಿ ಇದೇ ಜಾಗದಲ್ಲಿ ಸದ್ಗತಿ ಪಡೆದ ಎಂಬ ಘಟನೆ ಚಾಲ್ತಿಯಲ್ಲಿದೆ. ಆತನ ಸಮಾಧಿಯೆನ್ನುವ ಜಾಗವೂ ದೇವಸ್ಥಾನಕ್ಕೆ ಸಮೀಪದಲ್ಲಿದೆ. ಇಲ್ಲಿ 300 ವರ್ಷಗಳ ಹಿಂದೆ ಊರಿತ್ತು. ನಂತರ ಅದು ಚದುರಿಹೋಯಿತು. ಅದೇ ಜನರು ಮರಗಳಿಂದ ಮುಚ್ಚಿಹೋದ ಉದ್ದಾಮನನ್ನು ವರ್ಷಕ್ಕೊಮ್ಮೆ ಮನೆದೇವರೆಂದು ಪೂಜಿಸಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಇಲ್ಲೊಂದು ಉದ್ದಾಮನ ದೇವಸ್ಥಾನ ಕಟ್ಟುವ ಯೋಚನೆ ಬಂದು ಅದೀಗ ಶ್ರೀಕ್ಷೇತ್ರವಾಗಿ ಬೆಳೆದು ನಿಂತಿದೆ. 

Advertisement

ಸಾಮೂಹಿಕ ಕಲ್ಪನೆ-ಹಣಕ್ಕೆ ಮಹತ್ವವಿಲ್ಲ
ಇಲ್ಲಿ ಯಾವುದೇ ಪೂಜೆಗಳಿಗೆ ಹಣ ತೆಗೆದುಕೊಳ್ಳು ವುದಿಲ್ಲ. ಸಾಮೂಹಿಕವಾಗಿ ಎಲ್ಲರಿಗೂ ಅನ್ವಯವಾಗುವಂತೆ ಪೂಜೆಗಳಾಗುತ್ತವೆ. ಪ್ರತಿ ಹುಣ್ಣಿಮೆಯಂದು ಒಟ್ಟು 6 ಹೋಮಗಳು ನಡೆಯುತ್ತವೆ, ಜಾತ್ರೆ ವೇಳೆ 14 ಹೋಮ ಗಳು ನಡೆಯುತ್ತವೆ. ಆಶ್ಲೇಷಬಲಿ, ದುರ್ಗಾದೀಪ ನಮಸ್ಕಾರ,ಕುಂಭಾಭಿಷೇಕ, ಸತ್ಯನಾರಾಯಣ ವ್ರತಗಳೂ ಸಾಮೂಹಿಕ ವಾಗಿಯೇ ನಡೆಯುತ್ತವೆ. ಈ ಪೂಜೆಗೋಸ್ಕರ ಪಡೆಯುವ ಹಣಕ್ಕೆ ಪ್ರತಿಯಾಗಿ ಅದಕ್ಕೂ ಹೆಚ್ಚಿನ ಮೌಲ್ಯದ ಪೂಜಾ ಪರಿಕರಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಉದ್ದಾಮನಿಗೆ ಯಾವುದೇ ಹಂಗಿಲ್ಲ
ಇಲ್ಲಿಗೆ ಬರುವ ಭಕ್ತರಲ್ಲಿ ಕೆಲವರು ಹೆಚ್ಚು ಕೆಲವರು ಕಡಿಮೆ ಎಂಬ ಮಾತೇನಿಲ್ಲ. ಎಲ್ಲರಿಗೂ ಒಂದೇ ಗೌರವ. ಯಾರ ಹಿಂದೆಯೂ ಬಿದ್ದು ಹಣ ಬೇಡುವುದಿಲ್ಲ, ಆದ್ದರಿಂದ ಯಾರೊಬ್ಬರ ಮುಲಾಜಿಗೂ ಒಳಗಾಗಬೇಕಾದ ಜರೂರತ್ತಿಲ್ಲ. ಬರುವ ಯಾರು ಬೇಕಾದರೂ ಇಲ್ಲಿನ ಸ್ವಯಂಸೇವಕರಾಗಬಹುದು, ಭಕ್ತಿಯೊಂದಿದ್ದರೆ ಸಾಕು ಮತ್ಯಾವುದೇ ಹೆಚ್ಚಿನ ಶಿಫಾರಸನ್ನು ಉದ್ದಾಮ ಸ್ವೀಕರಿಸುವುದಿಲ್ಲ!
ಫೇಸ್‌ಬುಕ್‌: sreeuddama
ವೆಬ್‌ಸೈಟ್‌: shreeuddama.com

ನಿರೂಪ 

Advertisement

Udayavani is now on Telegram. Click here to join our channel and stay updated with the latest news.

Next