ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಅವರ ಆಶಯದಂತೆ ಮಕರ ಸಂಕ್ರಾಂತಿಯಂದು “ನಮ್ಮೂರು ನಮ್ಮ ಶ್ರದ್ಧಾಕೇಂದ್ರ’ ಕಾರ್ಯಕ್ರಮದಡಿ ರಾಜ್ಯದ 9,201ಕ್ಕೂ ಹೆಚ್ಚು ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತೆಯ ಮಹಾ ಅಭಿಯಾನವನ್ನು ಯಶಸ್ವಿಗೊಳಿಸಿದೆ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ ಅವರು ತಿಳಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ.ಸ್ವಚ್ಛತೆಯ ಪರಿಕಲ್ಪನೆ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತೀ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಡಾ| ಹೆಗ್ಗಡೆಯವರು 2016ರಲ್ಲಿ “ಸ್ವಚ್ಛ ಶ್ರದ್ಧಾ ಕೇಂದ್ರ’ ಪರಿಕಲ್ಪನೆಗೆ ಚಾಲನೆ ನೀಡಿದ್ದರು. 5 ವರ್ಷಗಳಿಂದ ವರ್ಷಕ್ಕೆ 2 ಬಾರಿಯಂತೆ ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಹಸ್ರಾರು ಮಂದಿ ಸಹಕಾರ
ಅಭಿಯಾನದಲ್ಲಿ ಶ್ರದ್ಧಾ ಕೇಂದ್ರಗಳ ಆಡಳಿತ ಮಂಡಳಿಗಳು, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಶೌರ್ಯ ವಿಪತ್ತು ನಿರ್ವಹಣೆಯ ಸ್ವಯಂ ಸೇವಕರು, ನವಜೀವನ ಸಮಿತಿ ಸದಸ್ಯರು, ಊರ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ಸಂಘ-ಸಂಸ್ಥೆಗಳ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಕರ್ತರು ಕೈ ಜೋಡಿಸಿದ್ದರು.
ಇದನ್ನೂ ಓದಿ:ರೈತರಿಗಿದೆ ಸರ್ಕಾರದ ಸಾಲ ತೀರಿಸುವ ಸಾಮರ್ಥ್ಯ
Related Articles
ಅಭಿಯಾನದಲ್ಲಿ ..
-ದೇವಸ್ಥಾನದ ಸುತ್ತಲಿನ ಗಿಡಗಂಟಿ ತೆರವು
-ಮಂದಿರ, ಚರ್ಚ್, ಮಸೀದಿಗಳ ಒಳಾಂಗಣ ಆವರಣ ಸ್ವಚ್ಛತೆ
-ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ್ಥ ಕಟ್ಟೆ/ಅರಳಿಕಟ್ಟೆ ಸ್ವಚ್ಛ
-ಸ್ನಾನಕಟ್ಟೆ, ನದಿ ತೀರ ಪ್ಲಾಸ್ಟಿಕ್, ಬಟ್ಟೆಬರೆ ಕಸ ಎಸೆಯದಂತೆ ಜಾಗೃತಿ
-ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು
-ವಸ್ತ್ರದ ಚೀಲ ಬಳಸುವಂತೆ ಜಾಗೃತಿ
-ಜಾತ್ರೆ, ವಿಶೇಷ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ತಂಡ
-ತ್ಯಾಜ್ಯ ಎಸೆಯಲು ಬಿದಿರಿನ ಬುಟ್ಟಿ, ಡಸ್ಟ್ಬಿನ್, ತಗಡಿನ ಡಬ್ಬ ಸೂಚನೆ ಫಲಕ ಅಳವಡಿಕೆ
ಶ್ರದ್ಧಾ ಕೇಂದ್ರಗಳು
– ದೇವಸ್ಥಾನ 8,824
-ಚರ್ಚ್ 68 ಮಸೀದಿ 151
– ಬಸದಿ 20 ಇತರ 138
ಒಟ್ಟು 9,201