Advertisement

ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಕಾಲಿಗೆ ಗುಂಡೇಟು

07:19 PM May 28, 2021 | Team Udayavani |

ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ದೈಹಿಕ ದೌರ್ಜನ್ಯ ಎಸಗಿದ ಆರೋಪಿಗಳಲ್ಲಿ ಇಬ್ಬರಿಗೆ ರಾಮಮೂರ್ತಿನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

Advertisement

ಬಾಂಗ್ಲಾ ಮೂಲದ ರಕೀಬುಲ್ಲಾ ಇಸ್ಲಾಮ್‌ ಸಾಗರ್‌ (27) ಮತ್ತು ರಿದಾಯ್‌ ಬಾಬು (26) ಎಂಬುವರಿಗೆ ಗುಂಡೇಟು ಬಿದ್ದಿದ್ದು, ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿಗಳ ಕಲ್ಲೇಟಿನಿಂದ ಎಸಿಪಿ ಎನ್‌.ಬಿ. ಬಕ್ರಿ ಹಾಗೂ ಪಿಎಸ್‌ ಐ ಅರವಿಂದ್‌ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳನ್ನು ಬಿ.ಚನ್ನಸಂದ್ರ ಸಮೀಪದಲ್ಲಿರುವ ಕನಕನಗರಕ್ಕೆ ಸ್ಥಳ ಮಹಜರು ಮಾಡಲು ಕರೆದೊಯ್ಯಲಾಗಿತ್ತು. ಆದರೆ, ಆರೋಪಿಗಳು ಹೊಯ್ಸಳ ವಾಹನದಿಂದ ಇಳಿಯುತ್ತಿದ್ದಂತೆ ಪೊಲೀಸ್‌ ಅಧಿಕಾರಿ-ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಎಸಿಪಿ ಎನ್‌.ಬಿ.ಬಕ್ರಿ ಮತ್ತು ಮತ್ತು ಕಾನ್‌ ಸ್ಟೇಬಲ್‌ ವೊಬ್ಬರು ಆರೋಪಿಗಳ ಹಿಡಿಯಲು ಹಿಂಬಾಲಿಸಿದ್ದಾರೆ. ಆಗ ಆರೋಪಿಗಳು ಕಲ್ಲುಗಳಿಂದ ದಾಳಿ ನಡೆಸಿದ್ದು, ಇನ್‌ ಸ್ಪೆಕ್ಟರ್‌ ಮೇಲ್ವಿನ್‌ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಮತ್ತೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಪಿಐ ಮೆಲ್ವಿನ್‌ ಅವರು ಆರೋಪಿಯೊಬ್ಬನಿಗೆ ಗುಂಡು ಹಾರಿಸಿದ್ದು, ಒಬ್ಬನ ಕಾಲಿಗೆ ತಗುಲಿದೆ.

ಮತ್ತೂಬ್ಬ ಆರೋಪಿ ಕೂಡ ಪಿಎಸ್‌ಐ ಅರವಿಂದ್‌ ಮೇಲೆ ಕಲ್ಲು ಎಸೆದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಪಿಎಸ್‌ಐ ಮತ್ತೂಬ್ಬ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಪೈಕಿ ರಿದಾಯಿ ಬಾಬು ವೈರಲ್‌ ಆಗಿರುವ ವಿಡಿಯೋದಲ್ಲಿ ಸಂತ್ರಸ್ತೆಯ ತಲೆ ಹಿಡಿದು ಹಲ್ಲೆ ನಡೆಸಿದ್ದಾನೆ. ಇತರೆ ಮೂವರು ರಿದಾಯಿ ಬಾಬು ಜತೆ ದೌರ್ಜನ್ಯ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಇದನ್ನೂ ಓದಿ :ಅಪ್ಪ-ಅಮ್ಮ ಆಸ್ಪತ್ರೆಯಲ್ಲಿ : ಮಕ್ಕಳಿಗೆ ಅಗತ್ಯ ಸಾಮಗ್ರಿ ಪೂರೈಸಿದ ಕೋವಿಡ್‌ ಕಾರ್ಯಪಡೆ

ಸಂತ್ರಸ್ತೆಯಿಂದಲೂ ವೇಶ್ಯಾವಾಟಿಕೆ?
ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮೂಲತಃ ಬಾರ್‌ ಡ್ಯಾನ್ಸರ್‌ ಆಗಿದ್ದು, ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು ಬಂಧಿತ ಆರೋಪಿಗಳು ಹೇಳಿಕೆ ನೀಡುತ್ತಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಸಂತ್ರಸ್ತೆ, ಮೊದಲಿಗೆ ಹೈದರಾಬಾದ್‌ ಗೆ ಬಂದು ಮಸಾಜ್‌ ಪಾರ್ಲರ್‌ ಗೆ ಸೇರಿಕೊಂಡಿದ್ದಳು. ಈ ವೇಳೆ ಹಣಕಾಸಿನ ಗಲಾಟೆಯಲ್ಲಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಒಬ್ಬನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಳು. ನಂತರ ಬೆಂಗಳೂರಿಗೆ ಬಂದು ತನ್ನ ಪರಿಚಯಸ್ಥರ ಜತೆ ಇದ್ದಳು ಎಂದು ಆರೋಪಿಗಳು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದಿಂದ ಆರೋಪಿಗಳನ್ನು ಕರೆಸಿದ್ದ ಸಂತ್ರಸ್ತೆ!?
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರಿಂದ ಅದಕ್ಕೆ ನೆರವಾಗಲೂ ಸಂತ್ರಸ್ತೆಯೇ ತನಗೆ ಸಹಾಯ ಮಾಡಲು ಆರೋಪಿಗಳನ್ನು ಬಾಂಗ್ಲಾದೇಶದಿಂದ ಅಕ್ರಮವಾಗಿ ಕರೆಸಿಕೊಂಡಿದ್ದಾಳೆ. ನಗರದಲ್ಲಿಯೇ ನೆಲೆಸಲು ಬಾಡಿಗೆ ಮನೆಯನ್ನೂ ಸಂತ್ರಸ್ತೆಯೇ ಕಲ್ಪಿಸಿದ್ದಾಳೆ. ನಂತರ ಬಾಂಗ್ಲಾದೇಶ ಅಥವಾ ಬೇರೆ ರಾಜ್ಯದಲ್ಲಿ ಪರಿಚಯವಿರುವ ಹೊಸ ಯುವತಿಯರನ್ನು ಕರೆಸುವಂತೆ ಪ್ರಚೋದಿಸುತ್ತಿದ್ದಳು ಎಂದು ಆರೋಪಿಗಳು ವಿಚಾರಣೆಯಲ್ಲಿ ಸಂತ್ರಸ್ತೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ :ರಾಹುಲ್ ಅರ್ಥಮಾಡಿಕೊಳ್ಳಬೇಕು…ಡಿಸೆಂಬರ್ ನೊಳಗೆ ಎಲ್ಲಾ ಭಾರತೀಯರಿಗೂ ಕೋವಿಡ್ ಲಸಿಕೆ…

ಕೇರಳದಲ್ಲಿ ಸಂತ್ರಸ್ತೆ ಪತ್ತೆ
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಬೇಸತ್ತಿದ್ದಳು. ಅದೇ ವೇಳೆ ಕೇರಳ ಮೂಲದ ಪರಿಚಯಸ್ಥ ಯುವಕನ ಬಳಿ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಳು. ಬಳಿಕ ಆತ ಸಂತ್ರಸ್ತೆ ಹಾಗೂ ಇತರೆ ಇಬ್ಬರು ಯುವತಿಯರನ್ನು ಕ್ಯಾಬ್‌ ಮಾಡಿ ಕೇರಳದ ಕಲ್ಲಿಕೋಟೆ ಗೆ ಕಳುಹಿಸಿದ್ದ. ಯುವತಿ ಕೇರಳದ ಕಲ್ಲಿಕೋಟೆಯಲ್ಲಿ ಸ್ಪಾ ನಡೆಸುತ್ತಿದ್ದಾಳೆ ಎಂದು ಹೇಳಲಾಗಿದೆ. ಹೀಗಾಗಿ ರಾಮಮೂರ್ತಿನಗರ ಪೊಲೀಸರ ಒಂದು ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ಶುಕ್ರವಾರ ತಡರಾತ್ರಿ ಅಥವಾ ಶನಿವಾರ ಬೆಳಗ್ಗೆ ಬೆಂಗಳೂರಿಗೆ ಕರೆತರಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸರಿಂದ ತಪ್ಪಿಸಿಕೊಂಡ ಸಂತ್ರಸ್ತೆ?
ಗಲಾಟೆ ಬಳಿಕ ಸಂತ್ರಸ್ತೆ ಕ್ಯಾಬ್‌ ನಲ್ಲಿ ಕೇರಳದ ಕಲ್ಲಿಕೋಟೆಗೆ ಹೋಗುತ್ತಿದ್ದಳು. ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಸಂಬಂಧ ಕೆ.ಆರ್‌.ಪುರದಲ್ಲಿ ಪೊಲೀಸರು ಚೆಕ್‌ ಪೋಸ್ಟ್‌ ಬಳಿ ಹಿಡಿದಿದ್ದಾರೆ. ಆದರೆ, ಸಂತ್ರಸ್ತೆ ಹಾಗೂ ಆಕೆ ಜತೆಯಿದ್ದ ಯುವತಿಯರ ವಿಚಾರಣೆ ನಡೆಸಿದಾಗ ರೈಲ್ವೆ ಟಿಕೆಟ್‌ ತೋರಿಸಿ ಪೊಲೀಸರ ದಾರಿ ತಪ್ಪಿಸಿದ್ದಾರೆ.

ಹಣಕಾಸು ವಿಚಾರಕ್ಕೆ ಗಲಾಟೆ
ಆರೋಪಿಗಳ ವಿಚಾರಣೆಯಲ್ಲಿ ಸಂತ್ರಸ್ತೆ ಕೇರಳದಲ್ಲಿ ಸ್ಪಾ ಕೆಲಸ ಶುರು ಮಾಡಿದ್ದು, ಬೆಂಗಳೂರಿನಲ್ಲಿದ್ದ ಮೂವರು ಯುವತಿಯರನ್ನು ಅಲ್ಲಿಗೆ ಕಳುಹಿಸಿದ್ದಳು. ಈ ಯುವತಿಯರನ್ನು ಆರೋಪಿಗಳು ಕರೆತಂದಿದ್ದರಿಂದ ಅವರಿಗೆ ಸಂತ್ರಸ್ತೆ ಸೂಕ್ತ ಹಣ ನೀಡಿರಲಿಲ್ಲ. ಅದರಿಂದ ಇಬ್ಬರ ನಡುವೆ ಗಲಾಟೆಯಾಗಿತ್ತು. ಅನಂತರ ಸಂಚು ರೂಪಿಸಿ ಮಾತುಕತೆ ನಡೆಸಬೇಕೆಂದು ಸಂತ್ರಸ್ತೆಯನ್ನು ನಗರಕ್ಕೆ ಕರೆಯಿಸಿಕೊಂಡಿದ್ದರು.

ಮೇ19ರಂದು ಹೈದರಾಬಾದ್‌ ನಿಂದ ಬೆಂಗಳೂರು ಬಂದಿದ್ದಳು. ರಾಮಮೂರ್ತಿ ನಗರದ ಮನೆಯಲ್ಲಿ ಇದೇ ವಿಚಾರಕ್ಕೆ ಚರ್ಚೆ ನಡೆದಿತ್ತು. ಮೊದಲು ಮದ್ಯದ ಪಾರ್ಟಿ ಮಾಡಿದ್ದ ಗ್ಯಾಂಗ್‌, ನಂತರ ಹಣಕಾಸಿನ ವಿಚಾರ ತೆಗೆದು ಯುವತಿ ವಿರುದ್ಧ ಗಲಾಟೆ ಶುರು ಮಾಡಿದೆ. ಬಳಿಕ ನಮಗೆ ಮೋಸ ಮಾಡುತ್ತಿದ್ದಿಯಾ ಎಂದು ಗಲಾಟೆ ಮಾಡಿದ್ದಾರೆ. ಬಳಿಕ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೂ ಸಂತ್ರಸ್ತೆ ಬಗದ್ದಿದ್ದಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ವೆುàಲ್‌ಗೆ ಚಿಂತಿಸಿದ್ದರು. ಆದರೆ, ಆ ವಿಡಿಯೋವನ್ನು ಮದ್ಯದ ಅಮಲಿನಲ್ಲಿ ಬೇರೆಯವರಿಗೆ ಶೇರ್‌ ಮಾಡಿದ್ದಾರೆ.

ಘಟನೆ ಬಳಿಕ ವಿಡಿಯೋ ಹೈದ್ರಾಬಾದ್‌ ನ ಒಬ್ಬನಿಗೆ ವಿಡಿಯೋ ಹೋಗಿತ್ತು. ಆ ವಿಡಿಯೋ ನೋಡಿದ ಬಳಿಕ ಪ್ರಕರಣ ದಾಖಲಿಸುವುದಾಗಿ ಸಂತ್ರಸ್ತೆ ಕಡೆಯವರು ಅರೋಪಿಗಳಿಗೆ ಬೆದರಿಕೆ ಹಾಕಿದ್ದರು. ಅಲ್ಲದೆ, 7 ಲಕ್ಷ ಹಣ ಕೊಟ್ಟರೆ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದಿದ್ದರಂತೆ. ಹಣ ನೀಡಿ ಆರೋಪಿಗಳು ಇತ್ಯರ್ಥ ಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

ಆರೋಪಿಗಳ ಮೇಲೆ ಹಲ್ಲೆ
ಘಟನೆ ಬಳಿಕ ಮಾರತ್ತಹಳ್ಳಿ ಬಳಿಯಿರುವ ಬಾಂಗ್ಲಾದೇಶದ ಕೆಲ ಯುವಕರಿಗೆ ಈ ಮಾಹಿತಿ ಗೊತ್ತಾಗಿ ಅರೋಪಿಗಳನ್ನು ಕಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆ ಹಿನ್ನೆಲೆ ಆರೋಪಿಗಳ ಕೈ ಕಾಲು ಹಾಗೂ ತಲೆಗೆ ಗಾಯಗಳಾಗಿದ್ದವು. ಬಳಿಕ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ಮಾಡಿಕೊಂಡವರನ್ನು ವಶಕ್ಕೆ ಪಡೆದು ನಂತರ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ದೌರ್ಜನ್ಯದ ಮತ್ತೂಂದು ವಿಡಿಯೊ ವೈರಲ್‌
ಯುವತಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಯುವತಿ ಮೇಲೆ ದೌರ್ಜನ್ಯ ನಡೆಸಿರುವ ಮತ್ತೂಂದು ವಿಡಿಯೋ ವೈರಲ್‌ ಆಗಿದೆ. ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆರೋಪಿಗಳು ಸಂತ್ರಸ್ರೆಗೆ ಸತತ ಒಂದು ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ. ರಿದಾಯ್‌ ಬಾಬು, ಸಾಗರ್‌, ಮಹಿಳೆ ಸೇರಿ ಆರು ಮಂದಿ ಸಂತ್ರಸ್ತೆ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಆಧಾರ್‌ ಕಾರ್ಡ್‌ ಪತ್ತೆ
ಆರೋಪಿಗಳ ಪೈಕಿ ಮೊಹಮ್ಮದ್‌ ಬಾಬು ಶೇಕ್‌ ಬಳಿ ಆಧಾರ್‌ ಕಾರ್ಡ್‌ ಪತ್ತೆಯಾಗಿದ್ದು, ಈತ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಪಡೆಯುವಾಗ ಕೊಟ್ಟಿದ್ದಾನೆ. ಆರೋಪಿಗಳು ಹಾಗೂ ಸಂತ್ರಸ್ತೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಫೋನ್‌ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಅವರನ್ನು ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ಕರೆದೊಯ್ಯುತ್ತಿದ್ದರು.
ಇನ್ನು ಮೊಹಮ್ಮದ್‌ ಬಾಬು ಶೇಕ್‌ ಪತ್ನಿ ಮತ್ತು ತಂಗಿಯ ವಿರುದ್ಧ ಹೈದರಾಬಾದ್‌ ನಲ್ಲಿ ವೇಶ್ಯಾವಾಟಿಕೆ ಪ್ರಕರಣ ದಾಖಲಾಗಿದ್ದು, ಜೈಲಿನಲ್ಲಿದ್ದಾರೆ ಎಂದು ಆತನೇ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next