Advertisement

ಕೊಲೆಗೈದು ಠಾಣೆಗೆ ಶವ ತಂದ ಯುವಕ!

12:38 PM Nov 23, 2022 | Team Udayavani |

ಬೆಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಕಬ್ಬಿಣದ ರಾಡ್‌ನಿಂದ ಬರ್ಬರವಾಗಿ ಕೊಲೆ ಮಾಡಿ ತನ್ನದೇ ಕಾರಿನಲ್ಲಿ ಶವವನ್ನು ಪೊಲೀಸ್‌ ಠಾಣೆಗೆ ತಂದು ಶರಣಾದ ಘಟನೆ ನಡೆದಿದೆ.

Advertisement

ನಂಜನಗೂಡು ಮೂಲದ ಮಹೇಶಪ್ಪ(45) ಕೊಲೆಯಾದ ವ್ಯಕ್ತಿ. ರಾಮಮೂರ್ತಿನಗರ ಜಯಂತಿ ನಗರದ ನಿವಾಸಿ ರಾಜಶೇಖರ ಶರಣಾದ ಯುವಕ.

ತಮ್ಮ ತಾಯಿಗೆ ವಂಚಿಸಿದ್ದಕ್ಕಾಗಿ ಆಕ್ರೋಶಗೊಂಡು ಈ ಕೃತ್ಯ ನಡೆಸಿದ್ದಾಗಿ ಆರೋಪಿ ಹೇಳಿದ್ದಾನೆ. ಮೆಕಾನಿಕ್‌ ಕೆಲಸ ಮಾಡಿಕೊಂಡಿದ್ದ ರಾಜಶೇಖರ್‌ನ ತಾಯಿ ಸವಿತಾ ಅವರಿಗೆ ಮಹೇಶಪ್ಪ ತಾನು ಮಹಿಳಾ ಸ್ವ ಸಹಾಯ ಸಂಘ ನಡೆಸುತ್ತಿದ್ದೇನೆ ಎಂದು ನಂಬಿಸಿದ್ದ. ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ಹೇಳಿದ್ದ. ಈತನ ಮಾತಿನ ಮೋಡಿಗೆ ಮರುಳಾದ ಸವಿತಾ ತನ್ನ ಗೆಳತಿಯರಿಗೂ ಈ ವಿಚಾರ ತಿಳಿಸಿದ್ದರು. ಸಾಲ ನೀಡುವ ಮುನ್ನ ಮುಂಗಡ ಹಣ ನೀಡಬೇಕಾಗುತ್ತದೆ ಎಂದು ಹೇಳಿ ಹಂತ-ಹಂತವಾಗಿ ಸುಮಾರು 2 ಕೋಟಿ ರೂ. ಪಡೆದುಕೊಂಡಿದ್ದ. ಸವಿತಾ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಆರೋಪಿಗೆ ಕೊಟ್ಟಿದ್ದರು.

ಇದಾದ ಬಳಿಕ ಹಲವು ವರ್ಷ ಕಳೆದರೂ ಆತ ಯಾವುದೇ ಸಾಲವನ್ನು ನೀಡದೇ, ಕೊಟ್ಟ ಹಣವನ್ನೂ ವಾಪಸ್‌ ಕೊಡದೇ ಸತಾಯಿಸುತ್ತಿದ್ದ. ಹೀಗಾಗಿ, ಸವಿತಾ ಪುತ್ರ ರಾಜಶೇಖರ ಇತ್ತೀಚೆಗೆ ಮಹೇಶಪ್ಪನಿಗೆ ಕರೆ ಮಾಡಿ ನಿನ್ನ ಜತೆ ಮಾತನಾಡಬೇಕು ಎಂದು ಹೇಳಿ ಆತನನ್ನು ಕಾರಿನಲ್ಲಿ ಕರೆದುಕೊಂಡು ನಂಜನಗೂಡು, ಮೈಸೂರು, ಚನ್ನಪಟ್ಟಣ, ರಾಮನಗರ, ಹೊಸಕೋಟೆ ಸುತ್ತಮುತ್ತ ಹೆದ್ದಾರಿಯಲ್ಲಿ ಸುತ್ತಾಡಿಸಿದ್ದ. ತಾಯಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಹಣ ಕೊಡುವಂತೆ ಕೇಳಿಕೊಂಡ. ಆದರೂ ಮಹೇಶಪ್ಪ ಹಣ ಕೊಡು ಸಬೂಬು ಹೇಳುತ್ತಿದ್ದ.

ತಡರಾತ್ರಿ 1 ಗಂಟೆ ವೇಳೆ ಕೆರಳಿದ ಆರೋಪಿಯು ಕಬ್ಬಿಣದ ರಾಡಿನಿಂದ ಮಹೇಶಪ್ಪನ ತಲೆ ಹಾಗೂ ಕೈಕಾಲುಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ಮಹೇಶಪ್ಪ ಮೃತಪಟ್ಟಿದ್ದ. ರಾಜಶೇಖರನಿಗೆ ಮುಂದೇನು ಮಾಡಬೇಕೆಂ ಬುದು ತೋಚದೇ ಶವವನ್ನು ತನ್ನ ಕಾರಿನಲ್ಲಿಟ್ಟು ಕೊಂಡೇ ತಡರಾತ್ರಿ ರಾಮಮೂರ್ತಿ ನಗರ ಪೊಲೀಸ್‌ ಠಾಣೆಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next