Advertisement

Shivamogga: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ

01:05 AM May 28, 2024 | sudhir |

ಶಿವಮೊಗ್ಗ: ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕೌಂಟೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇಲ್ಲಿನ ವಿನೋಬನಗರದ ಕೆಂಚಪ್ಪ ಲೇಔಟ್‌ ನಿವಾಸಿ ಚಂದ್ರಶೇಖರ್‌ (52) ಅವರು ತಮ್ಮ ನಿವಾಸದಲ್ಲಿ ರವಿವಾರ ನೇಣಿಗೆ ಶರಣಾಗಿದ್ದಾರೆ.

Advertisement

ಸ್ಥಳದಲ್ಲಿ ಆರು ಪುಟಗಳ ಡೆತ್‌ ನೋಟ್‌ ಪತ್ತೆಯಾಗಿದ್ದು, ನಿಗಮದ ಇಬ್ಬರು ಅ ಧಿಕಾರಿಗಳ ವಿರುದ್ಧ 80ರಿಂದ 85 ಕೋಟಿ ರೂ. ಅವ್ಯವ ಹಾರದ ಆರೋಪ ಮಾಡಿದ್ದಾರೆ.ಚಂದ್ರಶೇಖರ್‌ ಆತ್ಮಹತ್ಯೆಯ ಬೆನ್ನಲ್ಲೇ ಪ್ರಕ ರಣವು ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯ ಸರಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೆಸರಿನಲ್ಲಿ ನಡೆಯುತ್ತಿರುವ ದುರಾಚಾರ ಹಾಗೂ ಭ್ರಷ್ಟಾಚಾರದ ನೇತೃತ್ವವನ್ನು ಇಲಾಖೆಯ ಸಚಿವರೇ ವಹಿಸಿರುವುದು ದುರಂತ. ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯ ಮತ್ತು ರಾಜ್ಯದ ಜನತೆಯನ್ನು ಬಲಿ ಪಡೆಯುತ್ತಿದೆ. ಚಂದ್ರಶೇಖರ್‌ ಈ ಭ್ರಷ್ಟಾಚಾರದ ಬಲಿಪಶುವಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಈ ಕುರಿತು ಸರಣಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

ಡೆತ್‌ನೋಟ್‌ನಲ್ಲಿ ಏನಿದೆ?
ಯೂನಿಯನ್‌ ಬ್ಯಾಂಕ್‌ ಬೆಂಗಳೂರಿನ ವಸಂತ ನಗರ ಬ್ರ್ಯಾಂಚ್ ನಲ್ಲಿದ್ದ ಹಾಲಿ ಖಾತೆಯಲ್ಲಿ ಒಂದು ಉಪಖಾತೆಯನ್ನು ಎಂ.ಜಿ. ರಸ್ತೆ ಶಾಖೆಗೆ ವರ್ಗಾಯಿಸಲು ಸಚಿವರಿಂದ ಮೌಖೀಕ ಆದೇಶ ಇತ್ತು. ಆದರೆ ಇದಕ್ಕೆ ಬ್ರಾಂಚ್‌ ಮ್ಯಾನೇಜರ್‌ ಒಪ್ಪಿರಲಿಲ್ಲ. ಆದರೆ ಒತ್ತಾಯಪೂರ್ವಕವಾಗಿ ಮಾ. 4ರಂದು ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಶಾಖೆಗೆ ಜೀರೋ ಬ್ಯಾಲೆನ್ಸ್‌ ಉಪಖಾತೆ ಯನ್ನು ವರ್ಗಾಯಿಸಲಾಯಿತು.

ಅದಕ್ಕಾಗಿ ಒತ್ತಾಯಪೂರ್ವಕ ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಹೊಸ ಅಕೌಂಟ್‌ ತೆರೆಯಲಾಯಿತು. ಆ ಖಾತೆಗೆ ನಿಗಮದ ವಿವಿಧ ಅಕೌಂಟ್‌ಗಳಲ್ಲಿದ್ದ ಹಣವನ್ನು 2024ರ ಮಾ. 4ರಂದು 25 ಕೋ.ರೂ., ಮಾ. 6ರಂದು 25 ಕೋ.ರೂ., ಮಾ. 21ರಂದು 44 ಕೋ.ರೂ., ರಾಜ್ಯ ಖಜಾನೆಯಿಂದ 43.33 ಕೋ.ರೂ., ಮೇ 21ರಂದು 50 ಕೋ.ರೂ. ರೂ. ಸೇರಿ ಒಟ್ಟು 187.33 ಕೋಟಿ ರೂ. ವರ್ಗಾಯಿಸಲಾಗಿತ್ತು. ಪ್ರತೀ ಖಾತೆಯ ಹಣವನ್ನು ನಿಗಮದ ವ್ಯವಸ್ಥಾಪಕರು ಒತ್ತಾಯಪೂರ್ವಕವಾಗಿ ಉಪ ಖಾತೆಗೆ ವರ್ಗಾಯಿಸುತ್ತಿದ್ದರು. ಈ ಒಳಸಂಚು ನನಗೆ ಅರ್ಥವಾಗಲೇ ಇಲ್ಲ. ಮೇ 21ರಂದು 50 ಕೋಟಿ ರೂ. ಚೆಕ್‌ ಅನ್ನು ಗೌಪ್ಯವಾಗಿ ಬರೆದು ತರುವಂತೆ ವ್ಯವಸ್ಥಾಪಕರು ತಿಳಿಸಿದ್ದರು. ನಾನು ನಿರಾಕರಿಸಿದರೂ ಒತ್ತಾಯ ಮಾಡುತ್ತಿದ್ದರು. ನಾನು ಬ್ಯಾಂಕ್‌ಗೆ ಹೋಗಿ ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಿದೆ. ಅನಂತರ ಬ್ಯಾಂಕ್‌ ವ್ಯವಸ್ಥಾಪಕರ ಬಳಿ ಚೆಕ್‌ ಬುಕ್‌, ಬ್ಯಾಲೆನ್ಸ್‌, ಅಕೌಂಟ್‌ ಪುಸ್ತಕ ಕೇಳಿದಾಗ ಅವರು ಖಾತೆಯ ಅಧಿಕೃತ ಸಹಿದಾರರೇ ಬರಬೇಕು. ಇಲ್ಲದಿದ್ದರೆ ಅವರ ಪತ್ರವಿರಬೇಕೆಂದರು. ಮೇ 22ರಂದು ನಿಗಮದ ಕೇಂದ್ರ ಕಚೇರಿಗೆ ಬಂದ ಮ್ಯಾನೇಜರ್‌ ಈಗಾಗಲೇ ನಿಗಮದ ಪರವಾಗಿ ಚೆಕ್‌ ಬುಕ್‌ ಪಡೆಯಲಾಗಿದೆ ಎಂದು ತಿಳಿಸಿದರು.

Advertisement

ಸಂಶಯ ಬಂದು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ನಿಗಮದ ವ್ಯವಸ್ಥಾಪಕರು, ಅಕೌಂಟ್‌ ಆಫೀಸರ್‌ ಜಂಟಿ ಸಹಿ ಮಾಡಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಯಲ್ಲಿ ತೋರಿಸಲಾಗಿತ್ತು. ಮೇ 23ರಂದು ನಿಗಮದ ಪ್ರಾದೇಶಿಕ ಮುಖ್ಯಸ್ಥರಿಗೆ ದೂರು ನೀಡಿದಾಗ ಅವರು ಕೂಡ ಇಲಾಖೆ ಸಚಿವರ ಕಚೇರಿ ಸಿಬಂದಿಯಲ್ಲಿ ಮಾತನಾಡಿದ್ದು, ಎಲ್ಲ ಹಣ ವಾಪಸ್‌ ಬಂದೇ ಬರುತ್ತದೆ. ಅಲ್ಲಿಯ ವರೆಗೂ ಎಲ್ಲವನ್ನೂ ಗೌಪ್ಯವಾಗಿಡಿ ಎಂದು ತಾಕೀತು ಮಾಡಿದ್ದರು. ಅದೇ ದಿನ ಸಂಜೆ 5 ಕೋ.ರೂ. ವಾಪಸ್‌ ಬಂದಿದೆ ಎಂದರು.

ನಿಗಮದ ಅಕೌಂಟ್‌ನಿಂದ 80ರಿಂದ 85 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಜೆ.ಜಿ. ಪದ್ಮನಾಭ, ಪರಶುರಾಮ ದುರುಗಣ್ಣನವರ್‌, ಬ್ಯಾಂಕ್‌ ಮ್ಯಾನೇಜರ್‌ ಸುಚಿಸ್ಮಿತಾ ಕಾರಣ. ನಾನು ಹೇಡಿಯಲ್ಲ, ಆದರೆ ಅವಮಾನ ಸಹಿಸಲಾರೆ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ.

ಏನಿದು ಪ್ರಕರಣ,
ಡೆತ್‌ನೋಟ್‌ನಲ್ಲೇನಿದೆ?
-ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್‌ ಚಂದ್ರಶೇಖರ್‌ ಆತ್ಮಹತ್ಯೆ
-ಡೆತ್‌ನೋಟ್‌ನಲ್ಲಿ ನಿಗಮದ ಇಬ್ಬರು ಅಧಿ ಕಾರಿಗಳ ವಿರುದ್ಧ ಅವ್ಯವಹಾರದ ಆರೋಪ
-ಅಕ್ರಮ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ
-ಹಂತ ಹಂತವಾಗಿ 85 ಕೋ.ರೂ. ಲೂಟಿ, ಇದಕ್ಕೆ ಯೂನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಸುಚಿಸ್ಮಿತಾ ಸಾಥ್‌
-ಈ ಹಗರಣಕ್ಕೆ ನಾನು ಕಾರಣನಲ್ಲ, ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿಕೆ

ರಾಜ್ಯ ಕಾಂಗ್ರೆಸ್‌ ಸರಕಾರದಎಲ್ಲೆ ಮೀರಿದ ಭ್ರಷ್ಟಾಚಾರದ ನೈಜ ಮುಖವನ್ನು ಈ ಘಟನೆ ಅನಾವರಣ ಮಾಡಿದೆ. ಕಮಿಷನ್‌ ದಂಧೆಗಾಗಿ ಮಾತ್ರ ಯೋಜನೆಗಳು ರೂಪಿತವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ತುಕ್ಕು ಹಿಡಿದು ಕುಳಿತಿವೆ. ಈ ಕಮಿಷನ್‌ ವಿಷ ವರ್ತುಲದಲ್ಲಿ ಸಿಲುಕಿ ಇನ್ನೆಷ್ಟು ಜೀವಗಳು ಬಲಿ ಯಾಗಬೇಕು?
– ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ

ಈ ಕೊಲೆಗಡುಕ ಸರಕಾರವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಮೊತ್ತದ ಬೃಹತ್‌ ಭ್ರಷ್ಟಾಚಾರವನ್ನು ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿ, ಆತ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ, ಇದು ಆತ್ಮಹತ್ಯೆ ಅಲ್ಲ; ಕೊಲೆ. ಈ ಕೊಲೆಗೆ ಹೊಣೆ ಯಾರು?
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next