Advertisement

ತೈಲ ಬೆಲೆ ಏರಿಕೆ ಖಂಡಿಸಿ ಎನ್‌ಎಸ್‌ಯುಐ ಸೈಕಲ್‌ ಜಾಥಾ

06:48 PM Jul 28, 2021 | Shreeraj Acharya |

ಶಿವಮೊಗ್ಗ: ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಎನ್‌.ಎಸ್‌.ಯು.ಐ. ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಸೈಕಲ್‌ ಜಾಥಾ ಹಾಗೂ ಬಹಿರಂಗ ಸಭೆ ನಡೆಸಲಾಯಿತು. ಇಲ್ಲಿನ ಸೈನ್ಸ್‌ ಮೈದಾನದಲ್ಲಿ ಎನ್‌.ಎಸ್‌ .ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಸೈಕಲ್‌ ಜಾಥಾ ಗೋಪಿ ವೃತ್ತದವರೆಗೆ ಸಾಗಿತು.

Advertisement

ಬಳಿಕ ಅಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಕೀರ್ತಿ ಗಣೇಶ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಪರ ಕಾಳಜಿ ಇಲ್ಲ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆಯನ್ನು ನಿರಂತರ ಏರಿಕೆ ಮಾಡಲಾಗುತ್ತಿದೆ. ಕೋವಿಡ್‌ ನಂತಹ ಸಂದರ್ಭದಲ್ಲೇ 80 ರೂ.ಗಳಿಗಿದ್ದ ಪೆಟ್ರೋಲ್‌ ಬೆಲೆ ಇಂದು 107 ರೂ.ಗೆ ಬಂದು ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂತಾರಾಷ್ಟಿಯ ಮಟ್ಟದಲ್ಲಿ ಪೆಟ್ರೋಲ್‌ -ಡೀಸೆಲ್‌ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಮಾತ್ರ ನಿರಂತರ ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಇದರಿಂದಾಗಿ ಮೊದಲೇ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ.

ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್‌ -ಡೀಸೆಲ್‌ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಶಾಸಕ ಬಿ.ಕೆ. ಸಂಗಮೇಶ್ವರ್‌ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಜನರ ಹಿತ ಬೇಕಾಗಿಲ್ಲ. ಜನಸಾಮಾನ್ಯರ ಮೇಲೆ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಮಾಡುವ ಮೂಲಕ ಅವರ ಜೀವನವನ್ನು ದುಸ್ತರ ಮಾಡಿದೆ. ದೇಶದ ಇತಿಹಾಸದಲ್ಲೇ ಇಂತಹ ಜನವಿರೋಧಿ  ಸರ್ಕಾರ ಕಂಡಿಲ್ಲ ಎಂದರು. ಭದ್ರಾವತಿಯ ಯುವ ಮುಖಂಡ ಗಣೇಶ್‌ ಮಾತನಾಡಿ, ಮಾಜಿ ಸೂಡಾ ಅಧ್ಯಕ್ಷ ಎನ್‌. ರಮೇಶ್‌ ಮಾತನಾಡಿದರು.

ಪೆಟ್ರೋಲ್‌ -ಡೀಸೆಲ್‌ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪ್ರಮುಖರಾದ ಜಿ. ಮಧುಸೂದನ್‌, ಕೆ. ಚೇತನ್‌, ಎಚ್‌.ಎಸ್‌. ಬಾಲಾಜಿ, ವಿಜಯ್‌, ರವಿ, ಮಹಮ್ಮದ್‌ ನಿಹಾಲ್‌, ವಿನಯ್‌, ಗಿರಿ, ಭರತ, ಶ್ರೀಜಿತ್‌, ಅಬ್ದುಲ್ಲಾ, ಪುರಲೆ ಮಂಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next