Advertisement

ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?

09:02 PM Oct 15, 2021 | Team Udayavani |

ಇದು ಶಿವನ ಮಹಿಮೆಯೋ.. ಸಾಗರದ ಮಾಯೆಯೋ.. ಇದು ವಿಸ್ಮಯದ ತಾಣ.. ಭಕ್ತಿಯ ಕೇಂದ್ರ.. ಇಲ್ಲಿನ ಸ್ಥಳಮಹಿಮೆಗೆ ಪರವಶವಾಗದವರಿಲ್ಲ.. ಇಲ್ಲಿನ ಶಿವಲೀಲೆಗೆ ಮನಸೋಲದೇ ಹೋದವರಿಲ್ಲ.. ಇದು ಪರಶಿವನ ಭಕ್ತಿಯ ಜೊತೆ ಪ್ರಕೃತಿಯ ಕೌತುಕವೂ ಸೇರಿರುವ ಅಪರೂಪದಲ್ಲಿ ಅಪರೂಪವಾಗಿರುವ  ದೇವಾಲಯ.

Advertisement

ಇದುವೇ ಸ್ತಂಭೇಶ್ವರ ದೇಗುಲ. ಇಂದಿಗೂ ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ. ನಿಮ್ಮ ಕಣ್ಣಿಗೆ ಈ ದೇಗುಲ ಕಾಣಿಸುವುದೇ ಇಲ್ಲ. ಮಾಯವಾಗಿ ಕೆಲ ಹೊತ್ತಿನ ಬಳಿಕ ಮತ್ತೆ ದೇಗುಲ ಪ್ರತ್ಯಕ್ಷವಾಗುತ್ತದೆ. ಅಚ್ಚರಿಯಾದರೂ ಇದು ಸತ್ಯ.

ಗುಜರಾತ್ ರಾಜ್ಯದ ವಡೋದರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಬರೂಚ್ ಜಿಲ್ಲೆಯ ಒಂದು ಸಣ್ಣ ಗ್ರಾಮ ಕವಿ ಕಾಂಬೋಯಿಯಲ್ಲಿರುವ ಈ ಶಿವಾಲಯ ಎಲ್ಲಾ ದೇವಾಲಯಗಳಂತಲ್ಲ. ಈ ಸ್ತಂಭೇಶ್ವರ ನೆಲೆಯಾಗಿರುವುದು ಸಮುದ್ರದ ತಟದಲ್ಲಿ. ಇಲ್ಲಿಗೆ ಭಕ್ತರು ಯಾವ ಸಮಯದಲ್ಲಿ ಬೇಕಾದರೂ ಹೋಗಬಹುದು. ತಮ್ಮ ಪ್ರೀತಿಯ ಶಿವನನ್ನು ಆರಾಧಿಸಬಹುದು. ಆದರೆ, ನೋಡ ನೋಡುತ್ತಿದ್ದಂತೆ ಈ ದೇಗುಲ ದಿಢೀರ್ ಮಾಯವಾಗುತ್ತದೆ. ಅದು ದಿನಕ್ಕೆ ಎರಡು ಬಾರಿ ಈ ದೇವಾಲಯದ ಅರ್ಧಭಾಗ ಕಾಣಿಸುವುದೇ ಇಲ್ಲ. ಹಾಗೆಂದು ದಿನವಿಡೀ ಈ ದೇಗುಲ ಕಣ್ಮರೆಯಾಗುವುದಿಲ್ಲ. ಮಾಯವಾದ ಕೆಲಹೊತ್ತಲ್ಲೇ ಮತ್ತೆ ಭಕ್ತರಿಗೆ ದರ್ಶನ ಕೊಡಲು ಯಥಾಸ್ಥಿತಿಗೆ ಬರುತ್ತದೆ.

ಸಮುದ್ರ ತಟದಲ್ಲಿರುವ ಈ ದೇವಾಲಯ ದಿನಕ್ಕೆರಡು ಬಾರಿ ಸಮುದ್ರದ ನೀರಿನಲ್ಲಿ ಮುಳುಗುತ್ತದೆ. ಸಮುದ್ರರಾಜನೇ ಬಂದು ಶಿವನ ಅಭಿಷೇಕ ಮಾಡುತ್ತಾನೆ. ಹೀಗಾಗಿಯೇ ಸಮುದ್ರದ ನೀರಿನಲ್ಲಿ ಶಿವಲಿಂಗ ಮುಳುಗುತ್ತದೆ. ಇಲ್ಲಿ ಸಮುದ್ರದ ಅಲೆಗಳಲ್ಲಿ ನಡೆಯುವ ವಿಪರೀತ ಉಬ್ಬರವೇ ದೇಗುಲ ಮುಳುಗಲು ಕಾರಣ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಶಿವದೇವಾಲಯ ಮುಳುಗುತ್ತದೆ. ಪ್ರಕೃತಿಯ ಈ ಸೋಜಿಗವನ್ನು ಅದೆಷ್ಟೋ ಭಕ್ತರು ಇಂದಿಗೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಶಿವಲಿಂಗದ ಅಭಿಷೇಕ ಸ್ವತಃ ಸಮುದ್ರದೇವತೆಯಿಂದಲೇ ನೆರವೇರುತ್ತದೆ ಎನ್ನುವುದು ಭಕ್ತರ ನಂಬಿಕೆ.

Advertisement

ದೇಗುಲದ ಹಿನ್ನೆಲೆ

200 ವರ್ಷಗಳ ಹಿಂದೆ ಉತ್ಖನನ  ನಡೆಸಿದ್ದಾಗ ಈ ದೇವಾಸ್ಥಾನ ಪತ್ತೆಯಾಗಿತ್ತು. ಇನ್ನು ಸ್ಕಂದ ಪುರಾಣದಲ್ಲಿ ಈ ದೇಗುಲದ ಬಗ್ಗೆ ಒಂದು ಕಥೆಯೂ ಬರುತ್ತದೆ. ತರಾಕಾಸುರ ಎನ್ನುವ ಅಸುರ ಶಿವನ ಕುರಿತು ತಪಸ್ಸು ಮಾಡುತ್ತಿದ್ದ. ಈತನ ತಪಸ್ಸಿಗೆ ಒಲಿದ ಈಶ್ವರ ವರ ಕೇಳು ಎಂದು ಹೇಳಿದಾಗ, ತರಾಕಾಸುರ ನನ್ನನ್ನು ಯಾರೂ ಕೊಲ್ಲಬಾರದು ಎಂದು ವರ ಕೇಳುತ್ತಾನೆ.

ಈ ವರ ನೀಡಲು ಈಶ್ವರ ನಿರಾಕರಿಸಿದಾಗ, ಶಿವಪುತ್ರರು ಬಿಟ್ಟು ಉಳಿದವರು ಯಾರೂ ಕೂಡಾ ನನ್ನ ಕೊಲ್ಲಬಾರದು ಎಂದು ವರ ಕೇಳುತ್ತಾನೆ. ಆಗ ಈಶ್ವರ ಕೂಡಾ ವರ ದಯಪಾಲಿಸುತ್ತಾನೆ. ತದನಂತರ ತರಾಕಾಸುರನ ಹಿಂಸೆ ಮಿತಿಮೀರತೊಡಗಿದಾಗ ಕೊನೆಗೂ ಕಾರ್ತಿಕೇಯ ಅಸುರನ ವಧೆ ಮಾಡುತ್ತಾನೆ. ಆದರೆ ಶಿವಭಕ್ತನನ್ನು ಕೊಂದಿದ್ದಕ್ಕೆ ಕಾರ್ತಿಕೇಯನ ಮನಸ್ಸು ನೊಂದುಕೊಳ್ಳುತ್ತದೆ. ಆಗ ತನ್ನಲ್ಲಾದ ತಳಮಳವನ್ನು ಕಾರ್ತಿಕೇಯ ಭಗವಾನ್ ವಿಷ್ಣುವಿನ ಬಳಿ ಹೇಳಿಕೊಳ್ಳುತ್ತಾನೆ. ಆಗ ವಿಷ್ಣು, ತಂಡಕಾಸುರನನ್ನು ಕೊಂದ ಸ್ಥಳದಲ್ಲಿ ಶಿವದೇಗುಲ ನಿರ್ಮಿಸು ಎಂದು ಸೂಚಿಸುತ್ತಾನೆ. ಹೀಗಾಗಿಯೇ ಕಾರ್ತಿಕೇಯ ಸಿಂಧೂ ನದಿ ಹಾಗೂ ಸಾಗರದ ಸಂಗಮ ಸ್ಥಳದಲ್ಲಿ ಈ ದೇಗುಲ ಕಟ್ಟುತ್ತಾನೆ ಎನ್ನುವ ಪ್ರತೀತಿ ಇದೆ.

ಪ್ರತಿದಿನ ದೇವಾಲಯ ಮುಳುಗುವ ಸಮಯವನ್ನು ಹೊರತು ಪಡಿಸಿ ಬೇರೆ ಸಮಯದಲ್ಲಿ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಶಿವನನ್ನು ಆರಾಧಿಸುತ್ತಾರೆ. ಸಮುದ್ರದ ಅಲೆಗಳು ಕಡಿಮೆಯಿದ್ದಾಗ ಶ್ವೇತವರ್ಣದಲ್ಲಿ ಗೋಚರಿಸುವ ಶಿವಲಿಂಗದ ದರ್ಶನ ಪಡೆಯುವುದೇ ಭಕ್ತರ ಭಾಗ್ಯ.

ಇತ್ತೀಚೆಗೆ ಈ ದೇವಾಲಯಕ್ಕೆ ಹೊಸ ರೂಪವನ್ನು ನೀಡಲಾಗಿದೆ. ಸಮುದ್ರದ ಉಬ್ಬರ ಇಳಿತದ ಸಮಯ ನೋಡಿ ಇಲ್ಲಿ ದಿನನಿತ್ಯ ಪೂಜೆ ನಿಗದಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಗುಜರಾತ್ ಪ್ರವಾಸ ಕೈಗೊಳ್ಳುವವರು ಈ ವಿಸ್ಮಯಕಾರಿ ದೇಗುಲವನ್ನು ನೋಡಲು ಬಿಡುವು ಮಾಡಿಕೊಂಡು ಹೋಗಿ, ಶಿವನ ದರ್ಶನ ಪಡೆಯಬಹುದು.

ಶ್ವೇತಾ ಮುಂಡ್ರುಪ್ಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next