ಶಿರ್ವ: ಕಾಲೇಜಿನ ಸಂಸ್ಥಾಪಕ ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ಸ್ಮರಣಾರ್ಥ ಮಂಗಳೂರು ವಿ.ವಿ. ಮಟ್ಟದ ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಕೂಟವು ಜ. 24 ರಂದು ಶಿರ್ವದ ಎಂಎಸ್ಆರ್ಎಸ್ ಕಾಲೇಜಿನ ಮೈದಾನದಲ್ಲಿ ನಡೆಯಿತು.
ಬ್ಯಾಂಕ್ ಆಫ್ ಬರೋಡ ಉಡುಪಿ ವಲಯ ಮುಖ್ಯಸ್ಥ ಸನಾತನ್ ಸತುವಾ ಪಂದ್ಯಾಕೂಟವನ್ನು ಉದ್ಘಾಟಿಸಿ ಕ್ರೀಡಾಕೂಟಗಳು ಯುವಕ-ಯುವತಿಯರ ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಶುಭ ಹಾರೈಸಿದರು.
ಉಡುಪಿ ವಲಯದ ಉಪ ಮುಖ್ಯಸ್ಥ ಸುರೇಶ್ ಶೆಟ್ಟಿ ಮಾತನಾಡಿ ರಾಷ್ಟ್ರಿಕೃತ ಬ್ಯಾಂಕುಗಳು ದೊಡ್ಡ ಮಟ್ಟದಲ್ಲಿ ಕ್ರೀಡಾಳುಗಳಿಗೆ ಬೆಂಬಲವನ್ನು ನೀಡುವುದರ ಮೂಲಕ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ್ ಶೆಟ್ಟಿ ಮಾತನಾಡಿ 42 ವರ್ಷಗಳಿಂದ ಕಾಲೇಜು, ಕಾಲೇಜಿನ ಸಂಸ್ಥಾಪಕ ಹಾಗೂ ವಿಜಯಾಬ್ಯಾಂಕ್ನ ಅಧ್ಯಕ್ಷ ದಿ| ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ಸ್ಮರಣಾರ್ಥ ಕ್ರಿಡಾಕೂಟವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಆ ಮೂಲಕ ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶಗಳ ಹೆಬ್ಟಾಗಿಲನ್ನು ತೆರೆದಿದ್ದು, ಅನೇಕ ಕ್ರೀಡಾಪಟುಗಳು ಸರಕಾರದ ವಿವಿಧ ಹುದ್ದೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
Related Articles
ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಹಾಗೂ ಉದ್ಯಮಿ ಮೋಹನ್ ವಿ. ಶೆಟ್ಟಿ ಮಾತನಾಡಿ ಕರಾವಳಿಯ ಬಹುತೇಕ ಕಾಲೇಜುಗಳು ಕೇವಲ ಗುಮಾಸ್ತರನ್ನು ಉತ್ಪಾದಿಸಿದರೆ, ಗ್ರಾಮೀಣ ಪ್ರದೇಶದ ಈ ಕಾಲೇಜು ನೂರಾರು ಉದ್ಯಮಿಗಳ ಸಮೂಹವನ್ನೇ ಉತ್ಪಾದಿಸಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ| ನಯನಾ ಎಂ. ಪಕ್ಕಳ ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ| ಮಂಜುನಾಥ್ ಕೆ.ಜಿ. ಅತಿಥಿಗಳನ್ನು ಪರಿಚಯಿಸಿದರು. ಡಾ|ಮಿಥುನ್ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಕ್ರೀಡಾ ಸಲಹೆಗಾರ ಎಸ್. ಸದಾನಂದ ವಂದಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ 32 ಕ್ರೀಡಾ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಇದನ್ನೂ ಓದಿ: ಬೆಂಗಳೂರು: ಫ್ಲೈ ಓವರ್ ಮೇಲೆ ನಿಂತು ನೋಟಿನ ಮಳೆ ಸುರಿಸಿದ ವ್ಯಕ್ತಿ ಯಾರು?