Advertisement

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

06:13 PM Oct 18, 2024 | Team Udayavani |

ಉದಯವಾಣಿ ಸಮಾಚಾರ
ಗೋಕರ್ಣ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಜನರ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಶವ ಪತ್ತೆಯಾಗಬೇಕಿದೆ. ಆದರೆ ಈ ಹಿಂದಿನಿಂದಲೂ ಪ್ರತ್ಯಕ್ಷದರ್ಶಿಗಳ ಪ್ರಕಾರ 15 ಜನರಿಗಿಂತಲೂ ಅಧಿಕ ವ್ಯಕ್ತಿಗಳು ಇಲ್ಲಿ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.

Advertisement

ಹಾಗೇ ಸೆ.30 ರಂದು ಕಾರ್ಯಾಚರಣೆಯಲ್ಲಿ ಸಿಕ್ಕ 2 ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರೂ ಇನ್ನುವರೆಗೂ ಅದರ ವರದಿ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ನಾಪತ್ತೆಯಾಗಿರುವವರ ಕುರಿತು 11 ಜನರ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ 9 ಶವಗಳು ಈಗಾಗಲೇ ಪತ್ತೆಯಾಗಿವೆ. ಯಾವುದೇ ಮಹತ್ವದ ಕಾರ್ಯಾಚರಣೆ ನಡೆಸದೇ ಇದ್ದಾಗಲೇ 7 ಶವಗಳು ಪತ್ತೆಯಾಗಿದ್ದವು. ಇನ್ನು ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ್‌ ಬೆಂಜ್‌ ಲಾರಿ ಹಾಗೂ ಆತ ನಾಪತ್ತೆಯಾಗಿದ್ದ. ಕೇರಳ ಸರಕಾರ
ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಜಿಲ್ಲಾಡಳಿತಕ್ಕೆ ಹಾಗೇ ರಾಜ್ಯಕ್ಕೆ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿತ್ತು.

ಗೋವಾದಿಂದ ಬಂದ ಕೋಟಿವೆಚ್ಚದ ಡ್ರೆಜ್ಜಿಂಗ್‌ ಯಂತ್ರ ಸತತವಾಗಿ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಆತನ ಕಳೆಬರ ಪತ್ತೆಹಚ್ಚಲು ಯಶಸ್ವಿಯಾಗಿದ್ದರು. ಆದರೆ ಈಗ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಪರವಾಗಿ ಧ್ವನಿ ಎತ್ತುವವರು ಇಲ್ಲದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಸೆ.30 ರಂದು 2 ಮೂಳೆಗಳು ಲಭ್ಯವಾಗಿದ್ದು, ಅದನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಸ್ಥಳೀಯ ವೈದ್ಯರು ಹೆಚ್ಚಿನ ರಾಸಾಯನಿಕ ಬಳಸಿದ್ದರಿಂದಾಗಿ ಅವರ ಡಿಎನ್‌ಎ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ.

Advertisement

ಇನ್ನು 10 ದಿನಗಳ ನಂತರ ವರದಿ ಬರಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ವರದಿ ಬಾರದಿರುವುದು ಜನರಲ್ಲಿ ಅನುಮಾನ ಹುಟ್ಟುಹಾಕಿದೆ. ಆರಂಭದಲ್ಲಿಯೇ 15 ಜನರಿಗಿಂತ ಹೆಚ್ಚು ಜನರು ಈ ದುರ್ಘ‌ಟನೆಯಲ್ಲಿ ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗೆ ಸೂಕ್ಷ್ಮವಾಗಿ ಗಮನಿಸಿದರೆ 11 ಜನರ ಬದಲಿಗೆ ಈಗ ಸಿಕ್ಕಿರುವ ಮೂಳೆಗಳು 12 ಅಥವಾ 13ನೇ ವ್ಯಕ್ತಿಗಳದ್ದಾ ಎಂಬ ಅನುಮಾನಗಳು ಮೂಡತೊಡಗಿವೆ. ಈ ಕುರಿತು ಜಿಲ್ಲಾಡಳಿತ ಜನರ ಮುಂದೆ ಸ್ಪಷ್ಟನೆ ನೀಡಬೇಕಾಗಿದೆ.

ಜು.16 ರಂದು ನಡೆದ ಘಟನೆಯಲ್ಲಿ ನಮ್ಮ ಸಹೋದರ ನಾಪತ್ತೆಯಾಗಿದ್ದಾನೆ. ಇದುವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಸಂದರ್ಭದಲ್ಲಿ ನಾವು ಸ್ಥಳದಲ್ಲಿಯೇ ಇದ್ದರೂ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ನಮ್ಮ ಸಹೋದರ ಲೋಕೇಶ ನಾಯ್ಕರ ಅವಶೇಷಗಳು ನಮಗೆ ಲಭ್ಯವಾಗಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಹೋರಾಟಗಳಲ್ಲಿ ನಾನು ಭಾಗವಹಿಸುತ್ತೇನೆ.
ವಿನೋದ ನಾಯ್ಕ, ನಾಪತ್ತೆಯಾದ
ಲೋಕೇಶನ ಸಹೋದರ

Advertisement

Udayavani is now on Telegram. Click here to join our channel and stay updated with the latest news.

Next