Advertisement

ಶಿರಾಡಿ ಘಾಟಿ ರಸ್ತೆ ನಿರ್ಮಾಣ ಮಾರ್ಚ್‌ನಿಂದ ಆರಂಭ

10:27 PM Jan 05, 2023 | Team Udayavani |

ಬೆಂಗಳೂರು: ರಾಜಧಾನಿಯಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಬರುವ ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ.

Advertisement

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈಗಾಗಲೇ ಘಾಟಿ ಬಳಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು. ಇದರ ಜತೆಗೆ ಭವಿಷ್ಯದಲ್ಲಿ ಹತ್ತು ಸಾವಿರ ಕೋಟಿ ರೂ. ಮೊತ್ತದಲ್ಲಿ ಶಾಶ್ವತ ಪರಿಹಾರಕ್ಕೆ ಸುರಂಗ ಮಾರ್ಗ ನಿರ್ಮಿಸಲು ಯೋಜನೆ ವಿನ್ಯಾಸಗೊಳಿಸಿ ಕೇಂದ್ರಕ್ಕೆ ಸಲ್ಲಿಸಲು ಸಚಿವರು ತಿಳಿಸಿದ್ದಾರೆ.

ಅದಕ್ಕೆ ಅನುಮೋದನೆ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಇದಕ್ಕೆ ಸಿದ್ಧತೆಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಭೂಸಾರಿಗೆ ಮತ್ತು ಹೆದ್ದಾರಿಗೆ ಸಂಬಂಧಿಸಿದ ಕೇಂದ್ರದ ಯಾವುದೇ ಯೋಜನೆಗೆ ಶೇ. 50ರಷ್ಟು ವೆಚ್ಚ ಭರಿಸುವ ಬದಲಿಗೆ ಕಲ್ಲಿನ ಕಡಿ, ಸಿಮೆಂಟ್‌ ಮತ್ತಿತ್ತರ ಕಚ್ಚಾವಸ್ತುಗಳ ಪೂರೈಕೆ ಮೇಲಿನ ರಾಜಧನ ವಿನಾಯಿತಿ ಮತ್ತು ಜಿಎಸ್‌ಟಿ ಮೂಲಕ ಹೊಂದಾಣಿಕೆ ಮಾಡುವ ಸಂಬಂಧ ಪರಸ್ಪರ ಸುದೀರ್ಘ‌ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next