Advertisement

ಸ್ವಾತಂತ್ರ್ಯಕ್ಕೆ ಪ್ರೇರಕ ಶಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು

02:48 PM Nov 24, 2019 | Naveen |

ಶಿವಮೊಗ್ಗ: ಭಾರತದ ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಕ ಶಕ್ತಿ ಆಗಿದ್ದವರು ಸ್ವಾಮಿ ವಿವೇಕಾನಂದರು ಎಂದು ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಠದ ಸಹಾಯಕ ಕಾರ್ಯದರ್ಶಿ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್‌ ಹೇಳಿದರು.

Advertisement

ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಸಮ್ಮೇಳನ ಭಾಷಣದ 125ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ನಗರದ ಪೆಸಿಟ್‌ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸೇರಿದಂತೆ ಜೀವನ ಚರಿತ್ರೆಯಲ್ಲಿ ಸ್ವಾಮಿ ವಿವೇಕಾನಂದರ ಪ್ರಭಾವ ಮತ್ತು ಪ್ರೇರಣೆಯ ಉಲ್ಲೇಖವಿದೆ. ಶತಮಾನ ಕಳೆದರೂ ಭಾರತದ ಯುವಸಮೂಹಕ್ಕೆ ಸ್ವಾಮಿ ವಿವೇಕರು ಅದ್ಭುತ ಸ್ಫೂರ್ತಿಯ ಶಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲಿಯೂ ವಿಶೇಷ ಶಕ್ತಿ ಹಾಗೂ ಉಜ್ವಲ ಭವಿಷ್ಯವಿದೆ. ಆತ್ಮವಿಶ್ವಾಸ, ಶ್ರದ್ಧೆ ಹಾಗೂ ನಿರಂತರ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದರು.

ಸ್ವಾಮಿ ವಿವೇಕರ ಆಲೋಚನೆಗಳನ್ನು ಎಲ್ಲರೂ ಅಧ್ಯಯನ ನಡೆಸಬೇಕು. ಸ್ವಾಮಿ ವಿವೇಕರ ಕೃತಿಗಳು ಧನಾತ್ಮಕ ದಿಸೆಯಲ್ಲಿ ಜೀವನ ಬದಲಾಯಿಸುವ ಶಕ್ತಿ ಹೊಂದಿವೆ ಎಂದರು.

Advertisement

ಜೀವನದಲ್ಲಿ ಸಫಲತೆ ಸಾಧಿಸಲು ಎಲ್ಲರ ಸೇವೆಯಲ್ಲಿಯೂ ಶಿವ ಸ್ವರೂಪ ಕಾಣಬೇಕು. ಪರರ ಸೇವೆಯಲ್ಲಿ ಭಗವಂತನ ಸೇವೆ ಮಾಡಬೇಕು. ಆತ್ಮವಿಶ್ವಾಸ ಮತ್ತು ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು. ನನಗಿಂತಲೂ ಸಹಸ್ರಪಟ್ಟು ಸಾಧಿ ಸಲು ಎಲ್ಲರಲ್ಲಿಯೂ ಶಕ್ತಿ ಇದೆ ಎಂದು ವಿವೇಕರು ಸಂದೇಶ ಸಾರುತ್ತಿದ್ದರು.

ವಿವೇಕಾನಂದರ ಸಂದೇಶಗಳಲ್ಲಿ ಅದ್ಭುತ ವ್ಯಕ್ತಿತ್ವ ಮತ್ತು ಮನೋಸಾಮರ್ಥ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವು ವಿಶ್ವಕ್ಕೆ ಭಾರತದ ಸಂಸ್ಕೃತಿ ಹಾಗೂ ಭವ್ಯತೆಯನ್ನು ಸಾರಿತು. ವಿವೇಕಾನಂದರ ಪ್ರತಿಯೊಂದು ನುಡಿಯು ವಿಶ್ವದ ಎಲ್ಲರನ್ನು ಆಶ್ಚಯ ಚಕಿತರನ್ನಾಗಿ ಮಾಡಿಸಿತ್ತು ಎಂದು ಹೇಳಿದರು.

ಸದೃಢ ದೇಶದ ನಿರ್ಮಾಣಕ್ಕೆ ಯುವಜನರೇ ಶಕ್ತಿ ಎಂಬುದು ವಿವೇಕಾನಂದರ ಅದ್ಭುತ ಪರಿಕಲ್ಪನೆ. ಯುವಜನರಲ್ಲಿ ಜಾಗೃತಿ ಮೂಡಿಸಲು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಯುವಜನತೆ ಗುರಿಯಾಗಿಸಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ರಾಮಕೃಷ್ಣ ಮಠಗಳು ಯುವಜನರಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬಿತ್ತುವಲ್ಲಿ ಮಾಡುತ್ತಿರುವ ಕಾರ್ಯ ಅಭಿನಂದನೀಯ. ರಾಮಕೃಷ್ಣ ಮಠದ ಸ್ವಾಮೀಜಿಗಳು ವಿವೇಕಾನಂದರ ಜೀವನಚರಿತ್ರೆಯ ಪ್ರತಿಯೊಂದು ಸಂದೇಶಗಳನ್ನು ತಲುಪಿಸುವ ಕಾರ್ಯ ಮಾಡುತ್ತಿವೆ ಎಂದರು.

ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕಾರ್ಯದರ್ಶಿ ಪರಮೇಶ್ವರ ಭಟ್‌
ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಮತ್ತು ಚಿಕಾಗೋ ಸಮ್ಮೇಳನದಲ್ಲಿ ನೀಡಿರುವ ಸಂದೇಶಗಳನ್ನು ಯುವಜನರಿಗೆ ತಲುಪಿಸುವುದೇ ಸಮ್ಮೇಳನದ ಆಶಯ ಎಂದು ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರು “ವಿವೇಕ ಮಾರ್ಗದರ್ಶಿ’ ಪುಸ್ತಕ ಲೋಕಾರ್ಪಣೆಗೊಳಿಸಿದರು.

ಸಮನ್ವಯ ಕಾಶಿ ಕಾರ್ಯಕ್ರಮ ರೂಪಿಸಿದರು. ಶಿವಮೊಗ್ಗ ನಗರದ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌, ಸ್ವಾಮಿ ಮುಕ್ತಿದಾನಂದಜೀ, ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್‌, ಸ್ವಾಮಿ ಭೋದಸ್ವರೂಪಾನಂದಜೀ ಮಹಾರಾಜ್‌, ಸ್ವಾಮಿ ಮಂಗಳಾನಾಥನಂದ್‌ಜೀ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಾರದಾ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಡಾ| ಎಚ್‌.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪೆಸಿಟ್‌ ಟ್ರಸ್ಟಿ ಎಸ್‌.ವೈ. ಅರುಣಾದೇವಿ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ| ಎಂ.ಕೆ. ನಾಯ್ಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next