Advertisement

ಪಂಚಶೀಲ ತತ್ವದಿಂದ ಸರ್ವರ ಏಳ್ಗೆ ಸಾಧ್ಯ

01:34 PM Jan 19, 2020 | Naveen |

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡಲ್ಲಿ ವೈಯಕ್ತಿಕ ಮತ್ತು ಸಾಮುದಾಯಿಕ ಹಂತದಲ್ಲಿ ಶಾಂತಿ, ಸಹಬಾಳ್ವೆ, ಸರ್ವರ ಏಳಿಗೆ ಸಾಧ್ಯವೆಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ| ಚಿದಾನಂದ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕುವೆಂಪು ವಿಶ್ವವಿದ್ಯಾಲಯವು ಶನಿವಾರ ವಿವಿಯ ಪ್ರೊ| ಎಸ್‌.ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಅವರ 115ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮನುಜಮತವೇ ಮುಖ್ಯ ಎಂಬ ಆದರ್ಶ ಕ್ಷೀಣಿಸಿ ಇಂದು ಜಾತಿ, ಧರ್ಮಗಳ ಸಂಕುಚಿತತೆ ಹೆಚ್ಚಿದೆ. ಮನುಷ್ಯ ಊರು, ರಾಜ್ಯ, ದೇಶಗಳಿಗೆ ಅಂಟಿಕೊಂಡು ವಿಶ್ವಪಥವನ್ನು ಮರೆತಿದ್ದಾನೆ. ಹೀಗಾಗಿ ಈ ಶತಮಾನದ ಮೊದಲ ವರ್ಷವೇ (2001 ಸೆ. 11) ಅಮೆರಿಕಾದ ಅವಳಿ ಕಟ್ಟಡಗಳ ಮೇಲೆ ಭಯೋತ್ಪಾದನಾ ದಾಳಿ ನಡೆಯಿತು. ವಿಜ್ಞಾನ ತಂತ್ರಜ್ಞಾನದಲ್ಲಿ ಜಗತ್ತು ಮುಂದುವರಿದರೂ ನಾವು ಮಾನವೀಯತೆಯ ಸಂವೇದನಗಳಲ್ಲಿ ವೈಫಲ್ಯ ಕಂಡಿರುವುದನ್ನು ಇದು ತೋರುತ್ತದೆ ಎಂದರು.

ಕುವೆಂಪು ಅವರು ಸರ್ವ ಜನಾಂಗಗಳ ಜನರ ದೈಹಿಕ, ಆಧ್ಯಾತ್ಮಿಕ, ಕೌಟುಂಬಿಕ ಸೇರಿದಂತೆ ಸರ್ವಸ್ತರದ ಅಭಿವೃದ್ಧಿಯನ್ನು ಬಯಸಿದವರು. ಈ ಅಭಿವೃದ್ಧಿಯಲ್ಲಿ ತಾವು ನಡೆಯುತ್ತಿರುವ ಹಾದಿಯೆಡೆಗೆ ವಿಮರ್ಶಾತ್ಮಕ ನೋಟವನ್ನು ಹೊಂದಿ ಮುನ್ನಡೆಯುವ ಮೂಲಕ ಸಮನ್ವಯ ಸಾ ಧಿಸುವ ಸೂತ್ರವನ್ನು ನೀಡಿದ್ದಾರೆ. ಆಧುನಿಕ ಜಗತ್ತಿನ ರಾಷ್ಟ್ರ-ಧರ್ಮಗಳ ಮೇಲಾಟಗಳು, ಅಶಾಂತಿ, ವೈಷಮ್ಯಕ್ಕೆ ಕುವೆಂಪು ತತ್ವಗಳ ಪ್ರಸರಣೆ, ಅನುಸರಣೆಯೇ ಮದ್ದು ಎಂದು ಸಲಹೆ ನೀಡಿದರು.

ಬೆಂಗಳೂರಿನ ಡಾ| ರಾಜ್‌ಕುಮಾರ್‌ ಆಧ್ಯಯನ ಕೇಂದ್ರ ಮತ್ತು ಹಂಪಿ ಕನ್ನಡ ವಿವಿಯ ಕುಪ್ಪಳ್ಳಿಯಲ್ಲಿನ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಪ್ರೊ| ಕೆ.ಸಿ. ಶಿವಾರೆಡ್ಡಿ ಮಾತನಾಡಿ, ಕುವೆಂಪು ಅವರು ಅಂಬೇಡ್ಕರ್‌ ಅವರಷ್ಟೇ ಪ್ರಸ್ತುತ ವ್ಯಕ್ತಿತ್ವದವರು. ನಾಡಗೀತೆಯಲ್ಲಿ ಕರ್ನಾಟಕದ ವಿಶೇಷ ಅಸ್ತಿತ್ವವನ್ನು ಉಲ್ಲೇಖೀಸುತ್ತ, ಭಾರತಾಂಬೆಯೊಂದಿಗೆ ಬೆಸೆಯುವ ಅವರ ರೀತಿ ಐಕ್ಯತೆಯನ್ನು ಎತ್ತಿಹಿಡಿಯುವ ಸಮನ್ವಯತೆಯ ಸೂತ್ರವಾಗಿದೆ. ಕವಿ ಮನಸ್ಸಿಗೆ ವಿಚಾರವಾದ, ಸ್ವವಿಮರ್ಶೆ, ಅನ್ಯಾಯ, ಶೋಷಣೆಯೆಡೆಗೆ ತಿರಸ್ಕಾರಗಳಿರಬೇಕು ಎಂಬುದನ್ನು ಕುವೆಂಪು ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ ಎಂದರು.

ಗಣಿತ ನಕ್ಷೆ ಮತ್ತು ಮಲೆಗಳಲ್ಲಿ ಮದುಮಗಳು ಕಂಡಂತೆ ಕುವೆಂಪು
ವಿಷಯ ಕುರಿತು ಮಾತನಾಡಿದ ಪುತ್ರಿ ತಾರಿಣಿ, ಅಪ್ಪನೊಂದಿಗೆ ಕಳೆದ ತಮ್ಮ ಬಾಲ್ಯದ ದಿನಗಳು, ಅಧ್ಯಯನ, ಸಾಹಿತ್ಯದ ಪ್ರಭಾವ ಮತ್ತು ಕುವೆಂಪು ಅವರ ಯೋಗಕ್ಷೇಮ ನೋಡಿಕೊಂಡ ಅನುಭವಗಳನ್ನು ಹಂಚಿಕೊಂಡರು. ಕುವೆಂಪು ಅವರ ಸಾಹಿತ್ಯ ಕೃಷಿಯಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿದಾಗ ಮುಂದಿನ ಪ್ರಸಂಗವೊಂದನ್ನು ಹಂಚಿಕೊಂಡರು.

Advertisement

ಕುವೆಂಪು ಅವರು ಮೈಸೂರು ವಿವಿಯಿಂದ ನಿವೃತ್ತಿ ಹೊಂದಿದ ದಿನಗಳಲ್ಲಿ ಕಾದಂಬರಿ ಬರೆಯಲು ತುಡಿಯುತ್ತಿದ್ದರು. ಕಾದಂಬರಿಯ ಕೆಲವು ಅಧ್ಯಾಯಗಳನ್ನು ಹಿಂದೆ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದ್ದು, ಆ ಪ್ರತಿಗಳನ್ನು ಸಂಗ್ರಹಿಸಿಕೊಡಲು ಕೋರಿದ್ದರು. ಜೊತೆಗೆ ಕಾದಂಬರಿ ಕುರಿತು “ಮ್ಯಾಪ್‌’ ಒಂದನ್ನು ರಚಿಸಿ ಬೀರುವಿನಲ್ಲಿ ಇಟ್ಟು ಮರೆತಿದ್ದು, ಹುಡುಕಿಕೊಡಲು ತಿಳಿಸಿದ್ದರು. ಮನೆಯ ಎಲ್ಲ ಕೋಣೆ, ಕಪಾಟುಗಳನ್ನು ಹುಡುಕಿಯೂ ಸಿಗದೇ ನಾನು ಸುಮ್ಮನಾಗಿದ್ದಾಗ,
ಒಂದು ದಿನ ಅವರ ಗ್ರಂಥಾಲಯದ ಬೀರುವಿನ ಪುಸ್ತಕವೊಂದರಲ್ಲಿ ಅದು ದೊರೆತು ಖುಷಿಯಿಂದ ನನ್ನನ್ನು ಕೂಗಿ ಕರೆದಿದ್ದರು.

ತುಂಬಾ ಜೋಪಾನವಾಗಿ ಹಳೆಯ ಹಾಳೆಯ ಮಡಿಕೆಗಳನ್ನು ನಿಧಾನವಾಗಿ ಬಿಡಿಸಿ ತೋರಿದಾಗ ಅದರ ತುಂಬಾ ಕೆಲವು ವ್ಯಕ್ತಿಗಳ ಮತ್ತು ಊರುಗಳ ಹೆಸರುಗಳಿದ್ದವು. ಅವುಗಳ ನಡುವೆ ಗಣಿತದ ಕೂಡಿ, ಕಳೆಯುವ ಚಿಹ್ನೆಗಳು ಹಾಗೂ ಬಾಣದ ಗುರುತುಗಳು ಮಾತ್ರವಿದ್ದವು. ನನಗೆ ಏನೊಂದು ಅರ್ಥವಾಗದೇ ಸುಮ್ಮನಾಗಿದ್ದೆ. ಇನ್ನು ನನ್ನ ಕಾದಂಬರಿ ಮುಂದುವರಿಯುತ್ತದೆ ಎಂದ ಅಣ್ಣ (ಕುವೆಂಪು) ಕೆಲವೇ ದಿನಗಳಲ್ಲಿ “ಮಲೆಗಳಲ್ಲಿ ಮದುಮಗಳು’ ಕಾದಂಬರಿ ಬರೆದು ಮುಗಿಸಿದರು ಎಂದರು.

ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಕುವೆಂಪು ಅವರ ಸಾಹಿತ್ಯ, ತತ್ವಾದರ್ಶಗಳ ಅಧ್ಯಯನ, ಪ್ರಕಟಣೆ ಮತ್ತು ಪ್ರಸರಣೆಗಾಗಿ ವಿವಿಯಿಂದ ಕುವೆಂಪು ಅಧ್ಯಯನ ಪೀಠವನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ವಿವಿಯ ಕುಲಸಚಿವ ಪ್ರೊ| ಎಸ್‌. ಎಸ್‌. ಪಾಟೀಲ್‌, ಪರೀಕ್ಷಾಂಗ ಕುಲಸಚಿವ ಪ್ರೊ| ವೆಂಕಟೇಶ್ವರುಲು, ಪ್ರೊ| ರಮೇಶ್‌, ಪ್ರೊ| ಕೇಶವಶರ್ಮ, ಪ್ರೊ| ಪ್ರಶಾಂತನಾಯ್ಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next