Advertisement

 ಶಿವಮೊಗ್ಗದ ಕೋಟೆ ಆಂಜನೇಯ

11:48 AM Apr 29, 2017 | |

ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಶ್ರೀಕೋಟೆ ಆಂಜನೇಯಸ್ವಾಮಿ  ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ. ಮುಂಭಾಗದಲ್ಲಿ ವಿಶಾಲವಾದ ಪಟ್ಟಣ ಪ್ರದೇಶ,ಹಿಂಭಾಗದಲ್ಲಿ ಪವಿತ್ರ ತುಂಗಾ ನದಿ, ಶಿವಪ್ಪ ನಾಯಕನ ಕಾಲದಕೋಟೆ ಇತ್ಯಾದಿಗಳ ಕಾರಣ ಈ ದೇವಾಲಯ ಪ್ರಸಿದ್ಧವಾಗಿದೆ. ಭಕ್ತರ ಅಭೀಷ್ಠಗಳನ್ನು ಶೀಘ್ರ ನೆರವೇರಿಸಿ ಸಂಕಷ್ಟ ಪರಿಹರಿಸುವ ದೇವರು ಎಂದೇ ಹೆಸರಾಗಿದೆ.

Advertisement

 ಸ್ಥಳ ಪುರಾಣ
 ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಈ ದೇವಾಲಯ ಪುರಾಣ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ರಾಮಾಯಣ ಕಾಲದಲ್ಲಿ ಲಂಕೆಯ ಯುದ್ಧದಲ್ಲಿ ಲಕ್ಷ್ಮಣ ಮೂಛೆì ತಪ್ಪಿ ಬಿದ್ದ. ಆಗ ಶ್ರೀರಾಮನ ಆಜ್ಞೆಯಂತೆ ಆಂಜನೇಯ ಹಿಮಾಲಯದಲ್ಲಿನ ಸಂಜೀವಿನಿ ಗಿಡ ತರಲು ಹೊರಟ. ಅದೇ ಸಂದರ್ಭದಲ್ಲಿ ಶಿವಮೊಗ್ಗದ ತುಂಗಾನದಿಯ ತಟದಲ್ಲಿ ದುರ್ವಾಸ ಮುನಿಗಳು ತಪೋನಿರತರಾಗಿದ್ದರು. ಆಂಜನೇಯ ದಕ್ಷಿಣದ ತುದಿಯಿಂದ ಹಿಮಾಲಯದತ್ತ ಆಕಾಶ ಮಾರ್ಗದಲ್ಲಿ   ಚಲಿಸುತ್ತಿದ್ದನಂತೆ.  ಆಂಜನೇಯನ ಪ್ರಯಾಣದ ವೇಗ ಚಂಡ ಮಾರುತವನ್ನೆ ಸೃಷ್ಠಿಸಿತು. ಏಕಾಗ್ರತೆಗೆ ಭಂಗ ಉಂಟಾದ ಕಾರಣ ದುರ್ವಾಸರು ತಮ್ಮ ತಪಶಕ್ತಿಯಿಂದ ಆಂಜನೇಯನನ್ನು ತಡೆದು ನಿಲ್ಲಿಸಿದರು. ಬಾಲ ಹನುಮನ ರೂಪದಲ್ಲಿ ತಮಗೆ ದರ್ಶನ ನೀಡುವಂತೆ ಪ್ರಾರ್ಥಿಸಿದರು. ಅಂತೆಯೇ ಆಂಜನೇಯ ಬಾಲ ಹನುಮನಾಗಿ ಅವರಿಗೆ ದರ್ಶನ ನೀಡಿ ಆಶೀರ್ವದಿಸಿದನು. ನಂತರ ದುರ್ವಾಸರು ಯಂತ್ರದಲ್ಲಿ ಬಾಲ ಹನುಮನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ. 

ಮಹಾಭಾರತದ ಕೊನೆಯಲ್ಲಿ ಜನುಮೇಜಯ ರಾಜ ಸರ್ಪಯಾಗ ನಡೆಸಿದನು. ಇದರ ಪ್ರಾಯಶ್ಚಿತ್ತಕ್ಕಾಗಿ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದರು.ಹಿರೇಮಗಳೂರಿನಲ್ಲಿ ಸಪ್ತಸ್ತೂಪ ನಿರ್ಮಿಸಿ, ತುಂಗಾ ನದಿಯ ತೀರದಲ್ಲಿರುವ ಭೀಮೇಶ್ವರ ಕ್ಷೇತ್ರಕ್ಕೆ ಆಗಮಿಸಿದರು.  ಹೀಗೆ ಪಯಣಿಸುವಾಗ ಇಲ್ಲಿನ ಹುತ್ತದಲ್ಲಿ ರಾಮ ಜಪ ಕೇಳಿಸಿತಂತೆ. ಹುತ್ತವನ್ನು ಸರಿಸಿ ನೋಡಿದಾಗ ಬಂಡೆಯೊಳಗೆ ಯಂತ್ರ ರೂಪದಲ್ಲಿ ಬಾಲ ಹನುಮನ ಚಿತ್ರ ಕಂಡಿತು. ಅದೇ ರೂಪದಲ್ಲಿ ಆಂಜನೇಯನ 
ಮೂರ್ತಿಯನ್ನು ಕೆತ್ತಿಸಿ ,ಚಿಕ್ಕ ಗುಡಿಯನ್ನು ಸಹ ನಿರ್ಮಿಸಿ ಆಂಜನೇಯ ದೇವರ ವಿಗ್ರಹ ಪ್ರತಿಷ್ಠಾಪಿಸಿ ನಿತ್ಯ ಪೂಜೆಯ ವ್ಯವಸ್ಥೆ ಕಲ್ಪಿಸಿದರು ಎಂಬುದು ಸ್ಥಳ ಪುರಾಣ.

 ಈಗಿರುವ ಆಂಜನೇಯ ದೇವಾಲಯದ ಕಟ್ಟಡಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಮರಿಮಗ ನರಸಿಂಹ ಬಲ್ಲಾಳ ಜೀರ್ಣೋದ್ಧಾರ ಮಾಡಿ ವ್ಯವಸ್ಥಿತ ದೇಗುಲ ಕಟ್ಟಿದ ದಾಖಲೆಯಿದೆ. ವಿಜಯನಗರದ ಅರಸರು ಈ ದೇಗುಲಕ್ಕೆ ಶಿವಮೊಗ್ಗ ತಾಲೂಕು ವ್ಯಾಪ್ತಿಗೊಳ ಪಡುವ ಕೊರ್ಲಹಳ್ಳಿ, ಕಾಚಿನಕಟ್ಟೆ ಗ್ರಾಮಗಳನ್ನು ಉಂಬಳಿಯಾಗಿ ನೀಡಿದ್ದರು. ಕೆಳದಿ ರಾಜ ಶಿವಪ್ಪ ನಾಯಕ ಈ ದೇಗುಲದ ಅಭಿವೃದ್ಧಿಕೆ ವಿಶೇಷ ಕಾಣಿಕೆ ನೀಡಿ, ಈ ದೇಗುಲಕ್ಕೆ ಶಿವಪ್ಪನಾಯಕ ಗೋಪುರ ನಿರ್ಮಿಸಿದರು.

ಈ ದೇವಾಲಯದ ಪಕ್ಕದಲ್ಲಿ ಬೇಸಿಗೆ ಅರಮನೆ ನಿರ್ಮಿಸಿದ್ದ ಶಿವಪ್ಪನಾಯಕ ಈ ಪ್ರದೇಶದಲ್ಲಿ ಕೋಟೆ ನಿರ್ಮಿಸಿದ್ದರು. ಇದರಿಂದಾಗಿ ಈ ದೇಗುಲಕ್ಕೆ ಕೋಟೆ ಆಂಜನೇಯ ಎಂಬ ಹೆಸರು ಬಂದಿತು. ಇಲ್ಲಿನ ಅರ್ಚಕರಾಗಿದ್ದ ಅನಂತರಾಮು ಅಯ್ಯಂಗಾರ್‌ರು 1937 ಲ್ಲಿ ಈ ದೇವಾಲಯದ ಪಕ್ಕದಲ್ಲಿ ಶ್ರೀಸೀತಾರಾಮ ಲಕ್ಷ್ಮಣರ ವಿಗ್ರಹ ಪ್ರತಿಷ್ಠಾಪಿಸಿದರು. ಇದರಿಂದಾಗಿ ಈ ಸ್ಥಳ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯವೆಂದು ಕರೆಯ ಲಾರಂಭಿಸಿತು. ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈ ದೇವಾಯದ ಮುಂಭಾಗಕ್ಕೆ ಅಂಕಣ ನಿರ್ಮಿಸಿಕೊಟ್ಟಿದ್ದರು.

Advertisement

 ಈ ದೇವಾಲಯದಲ್ಲಿ ವರ್ಷಪೂರ್ತಿ ಉತ್ಸವ ನಡೆಯುತ್ತಲೆ ಇರುತ್ತದೆ. ವಿವಾಹ, ಸಂತಾನ,ಉದ್ಯೋಗ, ವ್ಯವಹಾರ, ವ್ಯಾಪಾರ,ಆರೋಗ್ಯಗಳನ್ನು ದಯಪಾಲಿಸುವಂತೆ ಕೋರಿ ನಿತ್ಯ ಭಕ್ತರು ಇಲ್ಲಿಗೆ ಬಂದು ಪೂಜೆ ಮತ್ತು ಹರಕೆ ಸಮರ್ಪಿಸುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರ

Advertisement

Udayavani is now on Telegram. Click here to join our channel and stay updated with the latest news.

Next