Advertisement

ಶತಮಂಗಳ ಅಡಿಕೆ ತಳಿಗೆ ಬೇಡಿಕೆ ದುಪ್ಪಟ್ಟು !

01:11 AM Jul 27, 2021 | Team Udayavani |

ಪುತ್ತೂರು: ಐದು ವರ್ಷಗಳ ಹಿಂದೆ ಕರಾವಳಿಯಲ್ಲಿ ಪರಿಚಯಿಸ್ಪಟ್ಟ ಶತಮಂಗಳ ಅಡಿಕೆ ಗಿಡ ತಳಿಗೆ ಕೃಷಿಕರಿಂದ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು ಉತ್ಪಾದನೆಗಿಂತ 20 ಪಟ್ಟು ಅಧಿಕ ಬೇಡಿಕೆ ಕಂಡು ಬಂದಿದೆ..!

Advertisement

ವಿಟ್ಲ ಸಿಪಿಸಿಆರ್‌ಐನಲ್ಲಿ 2016ರಲ್ಲಿ ಈ ತಳಿಯನ್ನು ಸಂಶೋಧಿಸಿ ಬಿಡುಗಡೆ ಮಾಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಈ ತಳಿ ನಾಟಿ ಮಾಡುವವರ ಸಂಖ್ಯೆ ಹೆಚ್ಚಾದ ಕಾರಣ ಬೇಡಿಕೆ ವೃದ್ಧಿಸಿದೆ. ಇಳುವರಿ ಸಹಿತ ಹಲವು ದೃಷ್ಟಿಯಿಂದ ಹೆಚ್ಚು ಲಾಭದಾಯಕ ಎನ್ನುವ ಕಾರಣದಿಂದ ಬೇಡಿಕೆ ಸೃಷ್ಟಿಯಾಗಿದೆ.

ಶತಮಂಗಳ ತಳಿ..!:

ಶತಮಂಗಳ ಅಡಿಕೆ ಗಿಡವು 3.98 ಕೆ.ಜಿ. ಇಳುವರಿ ನೀಡುವ ತಳಿಯಾಗಿದೆ. ಮರಗಳು ಕ್ರಮಬದ್ದ ಇಳುವರಿಯನ್ನು ಕೊಡುವ ಕಾರಣ ಇದರ ವಾರ್ಷಿಕ ಇಳುವರಿಯಲ್ಲಿನ ವ್ಯತ್ಯಾಸ ಕಡಿಮೆ. ಅಡಿಕೆ ಮರಗಳು ಮಧ್ಯಮ ದಪ್ಪದ ಕಾಂಡವನ್ನು ಹೊಂದಿದ್ದು ಮಧ್ಯಮ ಎತ್ತರದ ತಳಿ ಇದಾಗಿದೆ. ಹಣ್ಣಡಿಕೆ ದುಂಡಾಕಾರವಾಗಿದ್ದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಹಣ್ಣಡಿಕೆಯಿಂದ ಗೋಟು ಅಡಿಕೆ ಸಿಗುವ ಪ್ರಮಾಣ ಈ ತಳಿಯಲ್ಲಿ ಹೆಚ್ಚು. ಕರಾವಳಿ ಜಿಲ್ಲೆಯ ಜತೆಗೆ ಕೆಂಪಡಿಕೆ ಬೆಳೆಯುವ ಇತರ ಜಿಲ್ಲೆಗಳಲ್ಲಿಯೂ ಬೆಳೆಯುವುದು ಇದರ ಇನ್ನೊಂದು ವಿಶೇಷ ಗುಣ ಎನ್ನುತ್ತಾರೆ ವಿಜ್ಞಾನಿಗಳು.

25 ಶೇ.ಇಳುವರಿ ಅಧಿಕ..!:

Advertisement

ಉಳಿದ ತಳಿಗಿಂತ ಇದು ದುಪ್ಪಟ್ಟು ಇಳುವರಿ ಕೊಡುತ್ತದೆ. ಉಳಿದ ಅಡಿಕೆ ತಳಿಗಳ ಫಸಲಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚು ಇಳುವರಿ ನೀಡುವ ಸಾಮರ್ಥ್ಯವು ಶತಮಂಗಳ ತಳಿಗೆ ಇದೆ ಅನ್ನುವುದು ದೃಢಪಟ್ಟಿದೆ. ಇದಲ್ಲದೆ ಮಧ್ಯಮ ಎತ್ತರ, ಮಂಗಳಕ್ಕಿಂತ ಅ ಧಿಕ ಇಳುವರಿ ಮತ್ತು ಅಡಿಕೆಯ ಉತ್ತಮ ಗುಣಮಟ್ಟ, ಆಕರ್ಷಕವಾಗಿ ಕಾಣುವ ತೋಟ ಮತ್ತು ಗೊನೆಗಳು – ಇವು ಕಡಿಮೆ ಅವ ಧಿಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಲು ಕಾರಣವಾದ ಪ್ರಮುಖ ಅಂಶಗಳು ಎನ್ನುತ್ತಾರೆ ವಿಜ್ಞಾನಿ ಡಾ| ಜೋಸೆ.

20 ಪಟ್ಟು ಬೇಡಿಕೆ ಹೆಚ್ಚಳ..!:

ಕೃಷಿಕರಿಗೆ ವಿತರಣೆಗೆಂದು ವಿಟ್ಲ ಸಿಪಿಸಿಆರ್‌ಐನಲ್ಲಿ ಪ್ರತಿ ವರ್ಷ 20,000ದಿಂದ 28,000 ಶತಮಂಗಳ ಸಸಿಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಬೇಡಿಕೆ ಪ್ರಮಾಣವು ಉತ್ಪಾದನೆಗಿಂತ 15ರಿಂದ 20 ಪಟ್ಟು ಹೆಚ್ಚಿದೆ. ಅಂದರೆ ಒಟ್ಟು ಅರ್ಜಿ ಗಮನಿಸಿದರೆ ವಾರ್ಷಿಕ 2 ಲಕ್ಷಕ್ಕಿಂತ ಅಧಿಕ ಗಿಡಗಳು ಪೂರೈಕೆಗಾಗಿ ಬೇಕಾಗಬಹುದು. ಆದರೆ ಉತ್ಪಾದನೆ ಪ್ರಮಾಣಕ್ಕೆ ಆಧರಿಸಿ ಪ್ರತಿ ಅರ್ಜಿದಾರರಿಗೆ 50 ಗಿಡಗಳನ್ನಷ್ಟೇ ವಿತರಿಸಲಾಗುತ್ತಿದೆ.

ಅಡಿಕೆ ಕೃಷಿ ಹೆಚ್ಚಳ..! :

ಕಳೆದ ಎರಡು ವರ್ಷಗಳಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ದಾಖಲೆ ಪ್ರಮಾಣದಲ್ಲಿ ಏರಿಕೆಯ  ಜತೆಗೆ ಕೋವಿಡ್‌ ಕಾರಣದಿಂದ ಮಹಾನಗರ ತೊರೆದವರು ಊರಿನಲ್ಲಿ ಹಡಿಲು ಬಿದ್ದ ಜಮೀನುಗಳಲ್ಲಿ ಅಡಿಕೆ ಕೃಷಿಯತ್ತ ಮುಖ ಮಾಡಿರುವ ಕಾರಣ ನರ್ಸರಿ ಸೇರಿದಂತೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ಗಿಡಗಳಿಗೆ ಅಪಾರ ಪ್ರಮಾಣದ ಬೇಡಿಕೆ ಕಂಡು ಬಂದಿದೆ. ಹೊಸ ತೋಟ ಮಾಡುವವರು, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಮತ್ತು ದೀರ್ಘ‌ಕಾಲದ ತನಕ ಫಸಲು ನೀಡಬಲ್ಲ ಗಿಡಗಳ ಖರೀದಿಗೆ ಆದ್ಯತೆ ನೀಡಿದ್ದು ಅದರಲ್ಲಿ ಶತಮಂಗಳ ತಳಿ ಮುಂಚೂಣಿಯಲ್ಲಿದೆ.

ಶತಮಂಗಳ ತಳಿಯನ್ನು 2016ರಲ್ಲಿ ಪರಿಚಯಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಇದರ ಬೇಡಿಕೆ ಪ್ರಮಾಣ ಏರಿಕೆ ಕಂಡಿದೆ. ಉತ್ತಮ ಫಲಿತಾಂಶ ದೊರೆಯುತ್ತಿರುವ ಕಾರಣ ಕೃಷಿಕರು ಈ ಗಿಡದತ್ತ ಆಕರ್ಷಿತರಾಗಿದ್ದಾರೆ. ಎರಡು ವರ್ಷದಲ್ಲಿ ಫಸಲು ಬಂದಿರುವ ಬಗ್ಗೆ ಬೆಳೆಗಾರರು ತಿಳಿಸಿದ್ದಾರೆ.ಡಾ| ನಾಗರಾಜ್‌ ವಿಜ್ಞಾನಿ, ಸಿಪಿಸಿಆರ್‌ಐ, ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next