Advertisement

ಷರೀಫ್, ಪೂಜಾರಿ ವಿಶ್ವನಾಥ್‌ ಬಾಯಿ ಮುಚ್ಚಿಸುವಂತೆ ಆಗ್ರಹ

03:45 AM Feb 09, 2017 | Team Udayavani |

ಬೆಂಗಳೂರು: ಪಕ್ಷ ಹಾಗೂ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿರುವ ಪಕ್ಷದ ಹಿರಿಯ ನಾಯಕರ ಬಾಯಿ ಮುಚ್ಚಿಸುವಂತೆ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಗೆ ಆಗ್ರಹಿಸಿದ್ದಾರೆ.

Advertisement

ಬುಧವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಹನೂರು ಶಾಸಕ ನರೇಂದ್ರ, ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ಎಚ್‌. ವಿಶ್ವನಾಥ್‌ ಹಾಗೂ ಸಿ.ಕೆ. ಜಾಫ‌ರ್‌ ಷರೀಫ್ ಅವರು ಪಕ್ಷ ಹಾಗೂ ಸರ್ಕಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಸಾಕಷ್ಟು ಮುಜುಗರವಾಗುತ್ತಿದೆ. ಅದನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. . ಅವರ ಮಾತಿಗೆ ಬಹುತೇಕ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

ಈ ಬಗ್ಗೆ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮೇಶ್ವರ್‌ ನೀಡಿದರು.

ಆಂಜನೇಯ ವಿರುದ್ಧ ಆಕ್ರೋಶ
ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ವಿರುದ್ಧ ಬಹುತೇಕ ಶಾಸಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್‌ ಕೊರೆಸಲು ಅನುಮತಿ ನೀಡಿ, ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸದೇ ಹಾಗೇ ಬಿಡಲಾಗಿದೆ. ಇದರಿಂದ ರೈತರಿಗೆ ಬೋರ್‌ ಕೊರೆಸಿದರೂ ಬಳಕೆ ಮಾಡಿಕೊಳ್ಳದಂತಾಗಿದೆ ಎಂದು ಬಹುತೇಕ ಶಾಸಕರು ಸಚಿವ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

° ಶಾಸಕರ ಅನುದಾನವನ್ನು 2 ಕೋಟಿಯಿಂದ 5 ಕೋಟಿಗೆ ಹೆಚ್ಚಿಸುವಂತೆ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಬಿಪಿಎಲ್‌ ಕಾರ್ಡ್‌ದಾರರಿಗೆ ಆರಂಭದಲ್ಲಿ ನೀಡಿದಂತೆ ಪ್ರತಿ ಕುಟುಂಬಕ್ಕೂ 30 ಕೆಜಿ ಅಕ್ಕಿ ನೀಡುವುದನ್ನು ಮುಂದುವರೆಸಬೇಕು. ಕೂಪನ್‌ ವ್ಯವಸ್ಥೆಯಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆದಿದ್ದಾರೆ. ಅಲ್ಲದೇ ಅಕ್ರಮ ಸಕ್ರಮ ಯೋಜನೆ ಶೀಘ್ರವೇ ಜಾರಿಗೆ ತರುವಂತೆ ಆಗ್ರಹಿಸಿದ್ದು, ಬಿಡಿಎ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳಿಂದ ದಂಡ ಕಟ್ಟಿಸಿಕೊಂಡು ಆದಷ್ಟು ಬೇಗ ಸಕ್ರಮ ಮಾಡುವಂತೆ ಬೆಂಗಳೂರು ಶಾಸಕರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು  ಎಂದು ತಿಳಿದು ಬಂದಿದೆ.

Advertisement

ಏಪ್ರಿಲ್‌ನಿಂದ ಪ್ರತಿ ಬಿಪಿಎಲ್‌ ಕುಟುಂಬಕ್ಕೂ ಪ್ರತಿಯೊಬ್ಬರಿಗೂ ಐದು ಕೆಜಿ ಬದಲು ಎಂಟು ಕೆಜಿ ಅಕ್ಕಿ ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ, ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸದನಕ್ಕೆ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿ, ಸಚಿವರು ಕಡ್ಡಾಯ ಹಾಜರಾಗಲು ಸೂಚಿಸಿದ್ದು, ಪ್ರತಿಪಕ್ಷಗಳ ವಾಗ್ಧಾಳಿಗೆ ಎದುರಿಸಲು ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ಸಭೆ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಜನಾರ್ದನ ಪೂಜಾರಿ, ಸಿ.ಕೆ. ಜಾಫ‌ರ್‌ ಷರೀಫ್ ಹಾಗೂ ಎಚ್‌. ವಿಶ್ವನಾಥ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮೂವರು ನಾಯಕರ ವಿರುದ್ಧ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಮಿತಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಬಹುತೇಕ ಶಾಸಕರು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next