ಕುಷ್ಟಗಿ: ಕುಷ್ಟಗಿಯಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಉದ್ಘಾಟನೆ ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ ಅವರು, ಬಿಜೆಪಿಯ ಗ್ರಾಮೀಣಾಭಿವೃಧ್ಧಿ ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವ ಈಶ್ವರಪ್ಪ ಅವರನ್ನು ಗುಣಗಾನ ಮಾಡಿದರು.
ಗ್ರಾಮೀಣಾಭಿವೃಧ್ಧಿ ಪಂಚಾಯತ ಸಚಿವ ಈಶ್ವರಪ್ಪ ಅವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಎಲ್ಲಾ ವಿಧಾನ ಪರಿಷತ್ ಸದಸ್ಯರನ್ನು ಅಹ್ವಾನಿಸಿ, ಮುತುರ್ಜಿಯಿಂದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ದುರದೃಷ್ಟವಷಾತ್ ಮಂತ್ರಿ ಸ್ಥಾನ ಕಳೆದುಕೊಂಡಿದ್ದರಿಂದ ಸಮಸ್ಯೆಗಳಿಗೆ ಸ್ಪಂಧನೆ ಸಾದ್ಯವಾಗಲಿಲ್ಲ. ಸದರಿ ಖಾತೆಯನ್ನು ಮುಖ್ಯಮಂತ್ರಿ ನಿಭಾಯಿಸುತ್ತಿದ್ದು ಅವರಿಗೂ ಮನಮುಟ್ಟುವ ರೀತಿಯಲ್ಲಿ ನಿವೇದಿಸಿಕೊಂಡಿದ್ದರೂ ಪರಿಹಾರ ಸಿಕ್ಕಿಲ್ಲ ಎಂದರು.
ವಿಧಾನಪರಿಷತ್ ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀಲಕುಮಾರ ಕಟೀಲ್ ಅವರು ಸಿರವಾರದಲ್ಲಿ ಗ್ರಾ.ಪಂ. ಸದಸ್ಯರಿಗೆ 10ಸಾವಿರ ರೂ. ಭತ್ಯೆ ಹಾಗೂ ಕಾರು ಸೌಲಭ್ಯದ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಾಗ್ದಾನದ ಬಗ್ಗೆ ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿತ್ತು. ಗ್ರಾ.ಪಂ. ಅಧ್ಯಕ್ಷರ ಗೌರವ ಉಳಿಸುವುದಗೋಸ್ಕರ ಕಾರು ಬೇಡ 10 ಸಾವಿರ ರೂ. ಭತ್ಯೆ ಹಾಗೂ ಕೇರಳ ಮಾದರಿ ಆಗಿನ ಗ್ರಾಮೀಣಾಭಿವೃಧ್ಧಿ ಸಚಿವ ಈಶ್ವರಪ್ಪ ಅವರಲ್ಲಿ ನಿವೇದಿಸಿಕೊಂಡಿದ್ದೆವು. ಆದರೆ ಅವರು ಕೇರಳಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗಿ ಅಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆಯ ಸಮಗ್ರ ವರದಿ ನೀಡುವಂತೆ ಹೇಳಿರುವುದನ್ನು ಸ್ಮರಿಸಿದರು.