Advertisement

ಶಾಂತಿನಿವಾಸ ನಂ.3063

09:03 AM May 23, 2019 | mahesh |

“ಕಾಡು ಕುದುರೆ ಓಡಿ ಬಂದಿತ್ತಾ…’ ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು. ಇಂಥ ಸುಬ್ಬಣ್ಣನ ಮನೆಯೊಡತಿ ಶಾಂತಾ. ಹೀಗಾಗಿ ದಂಪತಿಗಳು ವಾಸವಿರುವ ನಂ. 3936ನೇ ಮನೆಯನ್ನು “ಶಾಂತನಿವಾಸ’ ಎಂದೂ ಕರೆಯಬಹುದು. ಇದೇ ಮೇ 23ಕ್ಕೆ, ಶಾಂತಾ-ಸುಬ್ಬಣ್ಣರ ಮದುವೆಗೆ 50ನೇ ವರ್ಷದ ಸಂಭ್ರಮವೂ ಜೊತೆಯಾಗಲಿದೆ. ಬಾಳ ಗೆಳೆಯ ಸುಬ್ಬಣ್ಣ ಅವರ ವ್ಯಕ್ತಿತ್ವ ಮತ್ತು ಅವರೊಂದಿಗೆ ನಡದು ಬಂದ ಕ್ಷಣಗಳ ಕುರಿತು ಶಾಂತಾ ಅವರು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.

Advertisement

– ನೀವು ಕಂಡಂತೆ ಸುಬ್ಬಣ್ಣನವರನ್ನು ನಮಗೆ ಪರಿಚಯಿಸಿ
ಮೇ 23ಕ್ಕೆ ನಮ್ಮ ಮದುವೆ ಆಗಿ 50 ವರ್ಷಗಳಾಗುತ್ತೆ. ನನಗೆ ಅವರು, ಶಿವಮೊಗ್ಗ ಸುಬ್ಬಣ್ಣ ಆದ ಮೇಲೆ ಪರಿಚಯ ಆಗಿದ್ದಲ್ಲ. ಅವರು ನಂಗೆ ಜಿ. ಸುಬ್ರಮಣ್ಯಂ ಇದ್ದಾಗಿನಿಂದ ಪರಿಚಯ. ಅವರು ಮೊದಲು ಶಿವಮೊಗ್ಗದಲ್ಲಿ ಆಡಿಟರ್‌ ಆಗಿದ್ದರು. ಆಗ ಅವರು ಈಗಿನಷ್ಟು ಜನಪ್ರಿಯರೂ ಆಗಿರಲಿಲ್ಲ. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಇವರನ್ನು ಕರೆಸಿ ಹಾಡಿಸುತ್ತಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ, ಖ್ಯಾತ ಕವಿಗಳಾದ ಲಕ್ಷ್ಮೀ ನಾರಾಯಣ ಭಟ್ಟರು, ಹೊಸ ಗಾಯಕರಿಗೆ ಅವಕಾಶ ಕೊಡಬೇಕು ಅಂತ ಕಂಬಾರರಿಗೆ ಹೇಳಿ, ಅವರ “ಕರಿಮಾಯಿ’ ಸಿನಿಮಾದಲ್ಲಿ ಹಾಡಲು ಅವಕಾಶ ಮಾಡಿಕೊಟ್ಟರು. ಅದಾದ ನಂತರ, ಕಂಬಾರರದ್ದೇ ಮತ್ತೂಂದು ಸಿನೆಮಾ, “ಕಾಡು ಕುದುರೆ’ ಸಿನಿಮಾದಲ್ಲಿ “ಕಾಡು ಕುದುರೆ ಓಡಿ ಬಂದಿತ್ತಾ..’ ಅನ್ನೋ ಹಾಡನ್ನು ಹಾಡಿಸಿದರು. ಈ ಹಾಡಿಗಾಗಿ ಸುಬ್ಬಣ್ಣ ಅವರಿಗೆ ರಾಷ್ಟ್ರಪ್ರಶಸ್ತಿ ಬಂತು. ಅಲ್ಲಿಯವರೆಗೆ, ಕೆಲವರಿಗಷ್ಟೇ ಗೊತ್ತಿದ್ದ ಜಿ.ಸುಬ್ರಮಣ್ಯಂ, ಶಿವಮೊಗ್ಗ ಸುಬ್ಬಣ್ಣ ಆಗಿ, ಇಡೀ ಭಾರತಕ್ಕೆ ಪರಿಚಿತರಾದರು.

-ಗಂಡ ಹೆಂಡತಿ ಅಂದಮೇಲೆ ಹುಸಿಮುನಿಸು, ಸಣ್ಣ ಪುಟ್ಟ ಜಗಳ ಇದ್ದದ್ದೇ… ಹಾಗೇನಾದರೂ ಆದಾಗ, ಸುಬ್ಬಣ್ಣನವರು ಯಾವ ಹಾಡು ಹಾಡಿ ನಿಮ್ಮ ಕೋಪ ತಣಿಸುತ್ತಿದ್ದರು?
ಅದೇನೋ, ನನಗೆ ಯಾವತ್ತೂ ಕೋಪ ಬಂದದ್ದೇ ಇಲ್ಲ. ನನ್ನ ತಂದೆ ತಾಯಿ ಇಟ್ಟ ಹೆಸರಿನ ಹಾಗೆಯೇ ನಾನು ಇರಬೇಕು ಅಂತ ತೀರ್ಮಾನ ಮಾಡಿದೆನೇನೋ ಅನ್ನುವಷ್ಟರ ಮಟ್ಟಿಗೆ ನಾನು ಇದ್ದೀನಿ. ನನಗೆ ಕೋಪವೇ ಬರೋದಿಲ್ಲ. ಹಾಗಾಗಿ, ಕೋಪ ತಣಿಸಲು ಯಾವುದೇ ಹಾಡನ್ನೂ ಅವರು ಹಾಡಲಿಲ್ಲ, ನಾನು ಹಾಡಿಸಿಕೊಂಡಿಲ್ಲ.

– ಸುಬ್ಬಣ್ಣನವರು ಹಾಡುಗಾರರಷ್ಟೇ ಅಲ್ಲ, ವಕೀಲರು ಸಹ ಆಗಿದ್ದರು. ನಿಮಗೆ ಹಾಡುಗಾರ ಸುಬ್ಬಣ್ಣನವರು ಇಷ್ಟವೋ ಅಥವಾ ವಕೀಲ ಸುಬ್ಬಣ್ಣನವರು ಇಷ್ಟವೋ?
ಬೇರೆ ಯಾರಿಗೆ ಹೇಗೋ ಏನೋ ಗೊತ್ತಿಲ್ಲ, ನನಗೆ ಮಾತ್ರ ಇವರು ಹಾಡುಗಾರರಾಗಿಯೇ ಹೆಚ್ಚು ಇಷ್ಟ

-ನೀವಿಬ್ಬರೂ ಮೊದಲು ಭೇಟಿಯಾಗಿದ್ದು ಎಲ್ಲಿ?
ನಾನು ಮತ್ತು ಇವರು ಒಂದೇ ಕಾಲೇಜಿನಲ್ಲಿ ಓದಿದ್ದು. ಆದರೆ ಬೇರೆ ಬೇರೆ ವರ್ಷದಲ್ಲಿ. ನಮ್ಮ ಕಾಲೇಜಿನ ಯಾವುದೋ ಸಮಾರಂಭಕ್ಕೆ ಇವರು ಬಂದಿದ್ದಾಗ, ಅಲ್ಲಿ ನಾನು ಹಾಡಿದ್ದೆ. “ನಿನ್ನೆಡೆಗೆ ಬರುವಾಗ ಸಿಂಗಾರದ ಹೊರೆ ಏಕೆ…’ ಅನ್ನುವ ಹಾಡು. ಕಡೆಯಲ್ಲಿ ಬರುವ “ಪ್ರೇಮದಾರತಿ ಹಿಡಿದು ತೇಲಿ ಬರುವೆ…’ ಎಂಬ ಸಾಲನ್ನು, ಹುಡುಗರು ರೇಗಿಸಿಯಾರು ಅಂತ “ಭಕ್ತಿಯಾರತಿ ಹಿಡಿದು ತೇಲಿ ಬರುವೆ..’ ಅಂತ ಬದಲಾಯಿಸಿ ಹಾಡಿದ್ದೆ. ಇದನ್ನು ಗಮನಿಸಿದ ನಿಸಾರ್‌ ಅಹಮದ್‌ ಅವರು, “ಏನಮ್ಮ, ನೀನು ಬಹಳ ಘಾಟಿ ಇದ್ದೀಯ’ ಅಂತ ಹೇಳಿದ್ದರು. ನನ್ನನ್ನು ಕಾಲೇಜಿನಲ್ಲಿ ನೋಡಿದ್ದ ಇವರು, ನಂತರ ನಮ್ಮ ಮನೆಗೆ ಬಂದು ನಮ್ಮ ತಂದೆ ತಾಯಿಯೊಂದಿಗೆ ಮಾತಾಡಿದರು. ನಂತರ ನಮ್ಮ ಮದುವೆ ಆಯಿತು.

Advertisement

-ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಾಗ ನಿಮಗೆ ಹೇಗನ್ನಿಸಿತು? ಯಾವ ರೀತಿ ನೀವು ಈ ಮಹಾನಗರಕ್ಕೆ ಹೊಂದಿಕೊಂಡಿರಿ?
ಶಿವಮೊಗ್ಗದಲ್ಲೇ ಇದ್ದರೆ, ಹೆಚ್ಚು ಅವಕಾಶಗಳು ಸಿಗಲ್ಲ. ಬೆಂಗಳೂರಿಗೆ ಬಾ, ಅಂತ ಲಕ್ಷ್ಮೀನಾರಾಯಣ ಭಟ್ಟರು ಹೇಳಿದ್ದರಿಂದ ಸುಬ್ಬಣ್ಣ ಅವರೊಂದಿಗೆ ನಾವೆಲ್ಲ ಬೆಂಗಳೂರಿಗೆ ಶಿಫr… ಆದೆವು. ಮೊದಲು ಬನಶಂಕರಿಯಲ್ಲಿ ಮನೆ ಮಾಡಿದಾಗ, 40 ರೂ. ಬಾಡಿಗೆ. ಶಿವಮೊಗ್ಗದಲ್ಲಿ ನನಗೆ ತುಂಬಾ ಜನ ಹೇಳಿದ್ದರು : “ಬೆಂಗಳೂರಿನಲ್ಲಿ ತುಂಬಾ ಹುಷಾರಾಗಿರಬೇಕು. ಅದು ತುಂಬಾ ದೊಡ್ಡ ಊರು, ಹಾಗೆ ಹೀಗೆ..’ ಅಂತ. ಇವರಿಗೆ ವರ್ಷದಲ್ಲಿ 3-4 ತಿಂಗಳು ಕಾರ್ಯಕ್ರಮಗಳು ಇರ್ತಾ ಇದುÌ. ಆಗೆಲ್ಲ 2 ಮಕ್ಕಳನ್ನು, ಮನೆಯನ್ನು ಸಂಭಾಳಿಸುವುದು ಹೇಗಪ್ಪಾ ಅನ್ನಿಸುತ್ತಿತ್ತು. ಆದರೆ ಇವತ್ತು ಹಿಂದಿರುಗಿ ನೋಡಿದರೆ, ಇದನ್ನೆಲ್ಲಾ ಹೇಗೆ ಮಾಡಿದೆ ಅಂತ ನನಗೇ ಆಶ್ಚರ್ಯ ಆಗುತ್ತದೆ.

– ಸುಬ್ಬಣ್ಣನವರ ಸ್ನೇಹಿತರ ಹೆಂಡತಿಯರ ಜೊತೆ ನಿಮ್ಮ ಒಡನಾಟ ಹೇಗಿತ್ತು?
ನಮ್ಮ ಲೇಡಿಸ್‌ ಕ್ಲಬ್‌ ತುಂಬಾ ಚೆನ್ನಾಗಿತ್ತು. ಸಿ. ಅಶ್ವತ್ಥ್ ಅವರ ಪತ್ನಿ ಚಂದ್ರಾ, ಲಕ್ಷ್ಮೀ ನಾರಾಯಣ ಭಟ್ಟರ ಶ್ರೀಮತಿ ಜ್ಯೋತಿ, ನನಗೆ ಒಳ್ಳೆ ಸ್ನೇಹಿತೆಯರು. ಕಂಬಾರರ ಮಗಳು ನನ್ನ ಮಗಳ ಕ್ಲಾಸ್‌ಮೇಟ್‌ ಆಗಿದ್ದರು. ಹೀಗೆ ನಮ್ಮ ಒಡನಾಟ ತುಂಬಾ ಚೆನ್ನಾಗಿತ್ತು ಮತ್ತು ಈಗಲೂ ಚೆನ್ನಾಗಿದೆ.

-ನೀವು ಮಾಡುವ ಅಡುಗೆಯಲ್ಲಿ, ಸುಬ್ಬಣ್ಣ ಅವರಿಗೆ ಯಾವುದು ತುಂಬಾ ಇಷ್ಟ?
ಯಾವುದೇ ತರಹದ ಸಿಹಿತಿಂಡಿ ಮಾಡಿದರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ನಾನು ಮಾಡುವ ಕೇಸರಿಬಾತ್‌ ಇವರಿಗೆ ತುಂಬಾ ಇಷ್ಟ.

-ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಅದನ್ನು ಹೇಗೆ ಸಂಭ್ರಮಿಸಿದಿರಿ?
ನಿಜ ಹೇಳಬೇಕೆಂದರೆ, ರಾಷ್ಟ್ರ ಪ್ರಶಸ್ತಿ ಬಂದ ದಿನ ನಾವು ಯಾರೂ ಶಿವಮೊಗ್ಗದಲ್ಲಿ ಇರಲೇ ಇಲ್ಲ. ಮಕ್ಕಳೊಂದಿಗೆ ಹೊಸನಗರದಲ್ಲಿದ್ದ ನಮ್ಮ ತಾಯಿಯ ಮನೆಗೆ ಹೋಗಿದ್ದೆವು. ನೆರೆಮನೆಯವರು ಬಂದು ನಮಗೆ ವಿಷಯ ತಿಳಿಸಿದರೆ, ನಾವು ಅದನ್ನು ನಂಬಲು ತಯಾರಿರಲಿಲ್ಲ. ನಂತರ ಇವರು, ಯಾವುದೋ ತುರ್ತು ಕೆಲಸದ ಮೇಲೆ ಅವತ್ತೇ ಶಿವಮೊಗ್ಗಕ್ಕೆ ಹೋಗಬೇಕಾಗಿ ಬಂತು. ಬಸ್‌ನಲ್ಲಿ ಪಯಣಿಸುವಾಗ, ದಾರಿಯಲ್ಲಿ ಇವರು ಪೇಪರ್‌ ಕೊಂಡು ಓದಿದಾಗಲೇ, ಇವರಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವ ವಿಷಯ ಗೊತ್ತಾಗಿದ್ದು. ತಕ್ಷಣ ಇವರು ನಮಗೆ ವಿಷಯ ತಿಳಿಸಿದರು. ನಾವೆಲ್ಲರೂ ಅವತ್ತೇ ಅಮ್ಮನ ಮನೆಯಿಂದ ಹೊರಟು ಬಂದೆವು. ಇವರು ಮನೆಗೆ ಹೋಗಿ ನೋಡಿದರೆ, ಅಭಿಮಾನಿಗಳು ಇವರಿಗೆ ಸನ್ಮಾನ ಮಾಡಲು ತಂದಿದ್ದ ಹೂಮಾಲೆಗಳನ್ನು ಗೇಟಿನ ಮೇಲೆ ಹಾಕಿ ಹೋಗಿದ್ದರು. ನಾವೆಲ್ಲ ವಾಪಸ್‌ ಶಿವಮೊಗ್ಗಕ್ಕೆ ಬಂದ ಮೇಲೆ, ಸನ್ಮಾನ ಸಮಾರಂಭಗಳು ನಡೆದವು.

– ಹಾಡುಗಾರ ಪತಿ, ಮಕ್ಕಳು, ಸೊಸೆ ಇವರೆಲ್ಲರಿಗೂ ಸಮಾನ ಪ್ರೋತ್ಸಾಹ ಹೇಗೆ ಕೊಡುತ್ತೀರಿ? ಇವರೆಲ್ಲರನ್ನು ಹೇಗೆ ಸಂಭಾಳಿಸುತ್ತೀರಿ?
ಹೆಣ್ಣುಮಕ್ಕಳು ಚೆನ್ನಾಗಿ ಓದಬೇಕು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರಬೇಕು ಎನ್ನುವುದು ನನ್ನ ಆಸೆ. ನಾನು ನಮ್ಮ ಹಳ್ಳಿಯಲ್ಲಿ 7ನೇ ತರಗತಿಯವರೆಗೆ ಓದಿ, ಶಿವಮೊಗ್ಗದಲ್ಲಿರುವ ನನ್ನ ಸೋದರ ಮಾವನ ಮನೆಯಲ್ಲಿದ್ದುಕೊಂಡು ಹೈ ಸ್ಕೂಲ್‌, ಪಿಯುಸಿ ಮತ್ತು ಡಿಗ್ರಿ ಮುಗಿಸಿದ್ದೆ. ನನ್ನ ಮಕ್ಕಳಿಗೂ ಸಹ, ಚೆನ್ನಾಗಿ ಓದಬೇಕು ಅನ್ನೋ ಗುರಿ ಹಾಕಿಕೊಟ್ಟೆ. ಅವರಿಬ್ಬರೂ ಅಷ್ಟೇ ಚೆನ್ನಾಗಿ ಓದಿ, ಇಂದು ಒಳ್ಳೆ ಸ್ಥಾನದಲ್ಲಿದ್ದಾರೆ. ಇವರೆಲ್ಲರ ಸಾಧನೆಗಳೇ ನನ್ನ ಸಾಧನೆ.

ಶುಭಾಶಯ, ಶುಭಾಶಯ
ಸಿಟ್ಟು, ಸಿಡಿಮಿಡಿ ಎಂಬ ಪದಗಳ ಅರ್ಥವೇ ಗೊತ್ತಿಲ್ಲದ ಮಗುವಿನಂಥ ಮನುಷ್ಯ ಶಿವಮೊಗ್ಗ ಸುಬ್ಬಣ್ಣ. ಅವರನ್ನು ಗೆಳೆಯರು, ಬಂಧುಗಳೆಲ್ಲಾ- “ಸಿಹಿನಗೆಯ ಸುಬ್ಬಣ್ಣ’ ಎಂದೇ ಕರೆಯುವುದುಂಟು. ಸುಬ್ಬಣ್ಣನಿಗಿಂಥ ಹೆಚ್ಚು ತಾಳ್ಮೆ ಹೊಂದಿದವರು ಶಾಂತಾ. ನಾಳೆ, ಮೇ 23ರ ಗುರುವಾರ, ಈ ದಂಪತಿಗೆ 50ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಈ ಆದರ್ಶ ದಂಪತಿಗೆ ಓದುಗರೆಲ್ಲರ ಪರವಾಗಿ ಪತ್ರಿಕೆ ಶುಭ ಹಾರೈಸುತ್ತದೆ…

-ಬದುಕಿನಲ್ಲಿ ಮರೆಯಲಾರದ ಘಟನೆ
ನಮ್ಮ ಮನೆಗೆ ಘಟಾನುಘಟಿ ಸಂಗೀತ ವಿದ್ವಾಂಸರಾದ, ಬಾಲಮುರಳಿ ಕೃಷ್ಣ, ಗಂಗೂಬಾಯಿ ಹಾನಗಲ…, ಪಿ. ಕಾಳಿಂಗರಾವ್‌, ಭೀಮಸೇನ್‌ ಜೋಶಿ, ಯೇಸುದಾಸ್‌, ಸಾಹಿತಿ ಎಸ್‌.ಎಲ್‌. ಭೈರಪ್ಪ ಮುಂತಾದ ಗಣ್ಯರು ಬಂದಿದ್ದಾರೆ. ಇವರಿಗೆಲ್ಲ ಅಡುಗೆ ಮಾಡಿ ಬಡಿಸಿದ್ದೀನಿ ಅನ್ನೋದೇ ನನಗೆ ದೊಡ್ಡ ವಿಷಯ. ಕಾಳಿಂಗರಾವ್‌ ಅವರಂತೂ ಕಡೆಗಾಲದಲ್ಲಿ, ನಮ್ಮ ಮನೆಗೆ ಬಂದು, ಅವರಿಗೆ ತುಂಬಾ ಇಷ್ಟವಾದ ತಿಳಿ ಸಾರು ಮಾಡಿಸಿಕೊಂಡು ಊಟ ಮಾಡಿದ್ದರು. ಅದನ್ನು ನಾನು ಎಂದಿಗೂ ಮರೆಯಲಾರೆ.

– ಜೀವನದ ಮೂಲಮಂತ್ರ
ಏನೇ ಬರಲಿ, ಏನೇ ಇರಲಿ, ತಾಳ್ಮೆಯಿಂದ ಇದ್ದರೆ ಆಗ ಜೀವನದಲ್ಲಿ ಬರುವ ಪ್ರತಿ ಕಷ್ಟವನ್ನೂ ಎದುರಿಸಬಹುದು ಮತ್ತು ಇದ್ದುದರಲ್ಲಿ ತೃಪ್ತಿಯಿಂದ ಜೀವನ ನಡೆಸಿದರೆ, ಅದರಷ್ಟು ಸುಖ ಮತ್ತೂಂದಿಲ್ಲ.

– ರೋಹಿಣಿ ರಾಮ್‌ ಶಶಿಧರ್‌

Advertisement

Udayavani is now on Telegram. Click here to join our channel and stay updated with the latest news.

Next