Advertisement

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

08:01 PM Aug 07, 2022 | Team Udayavani |

ಬೆಂಗಳೂರು: “ನೇಕಾರ ಯುವಕರಿಗೆ ಸರ್ಕಾರ ಹೆಣ್ಣು ತಂದುಕೊಡಲಾಗದು. ಅದು ಸರ್ಕಾರದ ಕೆಲಸವೂ ಅಲ್ಲ’ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

Advertisement

ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ನೇಕಾರರ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನೇಕಾರರನ್ನು ಸ್ವಾವಲಂಬಿಯಾಗಿಸಲು ರಾಜ್ಯಾದ್ಯಂತ ಎಲ್ಲ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತ ಸಮ್ಮಾನ ಮಾದರಿಯಲ್ಲಿ ನೇಕಾರ ಸಮ್ಮಾನ ರೂಪಿಸಲಾಗಿದೆ. ಅದೇ ರೀತಿ, ರೈತ ವಿದ್ಯಾನಿಧಿಯಂತೆ ನೇಕಾರ ಮಕ್ಕಳಿಗೂ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ. ನೇಕಾರರ ಸ್ಥಿತಿಗತಿ ತಿಳಿಯಲು ಹಾಗೂ ಅವರ ಅಭಿವೃದ್ಧಿಗಾಗಿ ಸಮಿತಿ ರಚಿಸಲಾಗಿದೆ. ನಾನು ಖುದ್ದು ನೇಕಾರ ಕಾಲೋನಿಗಳಿಗೆ ಭೇಟಿ ನೀಡಿದ್ದೇನೆ. ಇದಲ್ಲದೆ, ಇನ್ನೂ ಅನೇಕ ಯೋಜನೆಗಳು ಜಾರಿಗೊಳಿಸಲಾಗಿದೆ ಎಂದರು.

ನೇಕಾರ ಸಮುದಾಯದ ಯುವಕರಿಗೆ ಹೆಣ್ಣು ಕೂಡ ಸಿಗದ ಪರಿಸ್ಥಿತಿ ಇದೆ ಎಂದಾಗ, “ಅದಕ್ಕಾಗಿ ಸರ್ಕಾರ ಹೆಣ್ಣು ತಂದುಕೊಡಲಿಕ್ಕಾಗದು. ನೇಕಾರ ಸಮುದಾಯದ ಸ್ಥಿತಿಗತಿ ಸುಧಾರಣೆಗೆ ಕ್ರಮ ಕೈಗೊಳ್ಳಬಹುದಷ್ಟೇ. ಈಗಾಗಲೇ ಆ ನಿಟ್ಟಿನಲ್ಲಿ ಸರ್ಕಾರವೂ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವು ಮೂರು ದಿನಗಳಿಗೆ ಸೀಮಿತವಾಗಿದೆ. ಮುಂಬರುವ ವರ್ಷಗಳಲ್ಲಿ ಈ ಅವಧಿಯನ್ನು ವಿಸ್ತರಿಸಲಾಗುವುದು. ಜತೆಗೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಏರ್ಪಡಿಸಲಾಗುವುದು. ಇದರಿಂದ ನೇಕಾರರ ಉತ್ಪನ್ನಗಳಿಗೆ ಸರ್ಕಾರದಿಂದ ಉತ್ತಮ ವೇದಿಕೆ ಕಲ್ಪಿಸಿದಂತಾಗುತ್ತದೆ’ ಎಂದರು.

Advertisement

ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಐವರು ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಹಾಗೂ ಮೂವರಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ
ರೇಷ್ಮೆ ಕೈಮಗ್ಗ ವಿಭಾಗ: ರೇಷ್ಮೆ ಸೀರೆಯಲ್ಲಿ ರೈತರ ಸುಗ್ಗಿ ಚಿತ್ರಣ ಬಿಡಿಸಿದ ಮೊಳಕಾಲ್ಮೂರಿನ ಡಿ.ಎಸ್‌.ಮಲ್ಲಿಕಾರ್ಜುನ (ಪ್ರಥಮ), ರೇಷ್ಮೆ ವಸ್ತ್ರದಲ್ಲಿ ಡಾ.ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರ ಬಿಡಿಸಿದ ಕೊಳ್ಳೇಗಾಲದ ಪಿ. ಶ್ರೀನಿವಾಸ್‌ (ದ್ವಿತೀಯ).

ಹತ್ತಿ ಕೈಮಗ್ಗ ವಿಭಾಗ: ಕಾಟನ್‌ ಸೀರೆಯಲ್ಲಿ ಭಾರತದ ನಕ್ಷೆ ಬಿಡಿಸಿದ ಚಿಕ್ಕೋಡಿಯ ಸಚಿನ ಬಾಹುಸಾಬ ತೇರದಾಳ (ಪ್ರಥಮ), ಕೊಂಡಿ ತಂತ್ರಜ್ಞಾನದೊಂದಿಗೆ ಇಳಕಲ್‌ ಮಾದರಿಯ ಸೀರೆಗೆ ಬೀಳಗಿಯ ಪಡಿಯಪ್ಪ ಗೋಕಾವಿ (ದ್ವಿತೀಯ).

ಉಣ್ಣೆ ಕೈಮಗ್ಗ ವಿಭಾಗ: ಉಣ್ಣೆಯಲ್ಲಿ ರಾಷ್ಟ್ರಧ್ವಜ ರೂಪಿಸಿದ ಚಿಕ್ಕೋಡಿಯ ಶಂಕರ ಸಣ್ಣಕ್ಕಿ (ಪ್ರಥಮ).

Advertisement

Udayavani is now on Telegram. Click here to join our channel and stay updated with the latest news.

Next