Advertisement

ಸಿಎಂ ಪುತ್ರನ ವಿರುದ್ಧ ಬಿದರಿ ಕಣಕ್ಕಿಳಿಸುವ ಬಗ್ಗೆ BJP ಚಿಂತನೆ?

04:38 PM Oct 12, 2017 | |

ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಮಾಜಿ ಪೊಲೀಸ್‌ ಅಧಿಕಾರಿ ಶಂಕರ್‌ ಬಿದರಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. 

Advertisement

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಾಪಾಸಾಗಲು ನಿರ್ಧರಿಸಿದ್ದು , ವರುಣಾದಲ್ಲಿ ಪುತ್ರ ಯತೀಂದ್ರ ಜನಪರ ಕಾರ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೇ ಮುಂದಿನ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಯತೀಂದ್ರಗೆ ಪ್ರಬಲ ಸ್ಪರ್ಧೆ ನೀಡುವ ಸಲುವಾಗಿ ಲಿಂಗಾಯತ ಸಮುದಾಯದ ನಾಯಕ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. 

ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಪ್ತ ಕಾ.ಪು ಸಿದ್ದಲಿಂಗ ಸ್ವಾಮಿ ಅವರ ಹೆಸರೂ ಕೇಳಿ ಬರುತ್ತಿದ್ದು , ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಸಿದ್ದಲಿಂಗ ಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕೆಜೆಪಿ ಅಭ್ಯರ್ಥಿಯಾಗಿ ತೊಡೆ ತಟ್ಟಿ 29,641 ಮತಗಳ ಅಂತರದ ಸೋಲು ಕಂಡಿದ್ದರು. 

ಬಿದರಿ ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು, ಬಳಿಕ ಎಸ್‌ಪಿ ಸೇರಿ ,ಅಲ್ಲೂ ಸರಿ ಹೋಗದೆ ತನ್ನದೆ ಜನಶಕ್ತಿ ಪಕ್ಷ ಸ್ಥಾಪಿಸಿ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಕಣಕ್ಕಿಳಿದು ಮುಖಭಂಗ ಅನುಭವಿಸಿದ್ದರು. 2014 ರಲ್ಲಿ ಮೋದಿ ಅಲೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next