Advertisement

ಪರಿಸರಕ್ಕೆ ಬದ್ಧತೆಯ ದನಿ ನೀಡಿದ್ದ ಶಂಪಾ

06:00 AM Feb 22, 2018 | Team Udayavani |

ಶಂಪಾ ದೈತೋಟರು ಅಪ್ಪಟ ಪರಿಸರವಾದಿ. ಸೋಗುಗಳಿಲ್ಲದ ವ್ಯಕ್ತಿತ್ವ. ನಿತ್ಯ ಅಧ್ಯಯನಶೀಲ. ವಿಶ್ವಾದ್ಯಂತ ಬದಲಾಗುತ್ತಿರುವ ಪರಿಸರ ವಿಚಾರಗಳ ಮಾಹಿತಿಗಳತ್ತ ಕುತೂಹಲಿ. ಕಂಪ್ಯೂಟರ್‌ ಹೆಚ್ಚು ಸದ್ದು ಮಾಡದ ದಿನಗಳಲ್ಲಿ ಶಂಪಾರ ಮತಿಯು ನಿತ್ಯ ಅಪ್‌ಡೇಟ್‌ ಆಗುತ್ತಿತ್ತು. ಶಂಕರನಾರಾಯಣ ಭಟ್‌ ಪಾಣಾಜೆ ದೂರವಾಗಿ ಹದಿನಾರು ವರುಷ ಸಂದಿತು. ಅವರ ಒಡನಾಡಿಗಳು, ಪರಿಸರ ಸಂಬಂಧಿ ಮನಸ್ಸುಗಳು ಶಂಪಾರನ್ನು ಮರೆಯುವುದಿಲ್ಲ.

Advertisement

“ಆಧುನಿಕ ಜಗತ್ತಿನ ಅತಿ ಹೆಚ್ಚು ಬೇಡಿಕೆಯ ವಸ್ತುಗಳಲ್ಲಿ ಪೆಟ್ರೋಲಿಯಂ ಬಿಟ್ಟರೆ ಎರಡನೆಯ ಸ್ಥಾನದಲ್ಲಿರುವುದು ರಬ್ಬರು. ಮುಂದುವರಿದ ದೇಶಗಳಲ್ಲಿಂದು ಐವತ್ತು ಸಾವಿರ ನಿತ್ಯ ಬಳಕೆಯ ಅನಿವಾರ್ಯ ವಸ್ತುಗಳು ರಬ್ಬರಿನಿಂದ ಸಿದ್ಧವಾಗುತ್ತಿವೆ. ಭಾರತ ದಲ್ಲಿ ಏನಿಲ್ಲವೆಂದರೂ ಮೂವತ್ತೈದು ಸಾವಿರ ವಸ್ತುಗಳು ರಬ್ಬರಿ ನಿಂದ ತಯಾರಾಗುತ್ತಿವೆ. ಜಪಾನಿನಲ್ಲಿ ತಲಾ ವಾರ್ಷಿಕ ಹನ್ನೆರಡು ಕಿಲೋ ರಬ್ಬರ್‌ ಬಳಸುತ್ತಿದ್ದರೆ, ಭಾರತದಲ್ಲಿಂದು ಅರ್ಧಕಿಲೋ ಗಿಂತ ಕಡಿಮೆ. ಇದು ಹೆಚ್ಚುತ್ತಾ ಹೋಗುವ ಅವಕಾಶ ಧಾರಾಳ ಇರುತ್ತಾ ಬಳಕೆಯು ಇಳಿಯುವ ಪ್ರಶ್ನೆಯೇ ಇಲ್ಲ.’

ಹಿರಿಯ ಪರಿಸರ ತಜ್ಞ ಶಂಪಾ ದೈತೋಟರು ಇಪ್ಪತ್ತೈದು ವರು ಷದ ಹಿಂದೆಯೇ ಕಣಿ ಹೇಳುತ್ತಾ, “ಕೃತಕ ರಬ್ಬರ್‌ ಪೆಟ್ರೋಲಿಯಂ ನಿಂದ ಆಗುವ ವಸ್ತು. ಭಾರತಕ್ಕಂತೂ ಬಹಳ ದುಬಾರಿ. ಪೆಟ್ರೋ ಲಿಯಂ ಜಗತ್ತಿನಲ್ಲಿಂದು ನಿರಂತರವಾಗಿ ಬತ್ತಿ ಹೋಗುತ್ತಿದ್ದು, ಹೊಸ ಮೂಲಗಳು ಪತ್ತೆಯಾಗದೆ ಹೋದರೆ ಹತ್ತು ವರುಷದಲ್ಲಿ ಸೊನ್ನೆಯಾಗುವ ಭಯವಿದೆ. ಅಂಥ ಕಾಲಕ್ಕೆ ಕೃತಕ ರಬ್ಬರಿ ನಿಂದಲೇ ತಮ್ಮ ಅಗತ್ಯ ಪೂರೈಸುತ್ತಿರುವ ಶ್ರೀಮಂತ ರಾಷ್ಟ್ರಗಳೆಲ್ಲ ನೈಜ ರಬ್ಬರನ್ನೇ ಆಶ್ರಯಿಸಬೇಕು.’

ಶಂಪಾ ದೈತೋಟರು ಅಪ್ಪಟ ಪರಿಸರವಾದಿ. ಸೋಗುಗಳಿಲ್ಲದ ವ್ಯಕ್ತಿತ್ವ. ನಿತ್ಯ ಅಧ್ಯಯನಶೀಲ. ವಿಶ್ವಾದ್ಯಂತ ಬದಲಾಗುತ್ತಿರುವ ಪರಿಸರ ವಿಚಾರಗಳ ಮಾಹಿತಿಗಳತ್ತ ಕುತೂಹಲಿ. ಕಂಪ್ಯೂಟರ್‌ ಹೆಚ್ಚು ಸದ್ದು ಮಾಡದ ದಿನಗಳಲ್ಲಿ ಶಂಪಾರ ಮತಿಯು ನಿತ್ಯ ಅಪ್‌ಡೇಟ್‌ ಆಗುತ್ತಿತ್ತು. ರಬ್ಬರ್‌ ಕುರಿತು ಆಗಲೇ ದೂರದೃಷ್ಟಿ ಹೊಂದಿ ದ್ದರು. ಕೃಷಿಕರ ಕೈ ಹಿಡಿಯಬಹುದೆಂಬ ಆಶಾಭಾವನೆ ಹೊಂದಿದ್ದರು. ಮಾಹಿತಿಯನ್ನು ಕಲೆಹಾಕಿ ಕೃಷಿಕರಿಗೆ ಹಂಚಿದ್ದರು. ನಂತರದ ದಿವಸಗಳಲ್ಲಿ ರಬ್ಬರ್‌ ಖುಷಿಯನ್ನು ನೀಡಿದರೂ, ಈಚೆಗಂತೂ ವಿಷಾದಗಳ ಸುದ್ದಿಗಳೇ ರಾಚುತ್ತವೆ. ಕೃಷಿ ಮತ್ತು ಮಾರುಕಟ್ಟೆಗಳ ಪಲ್ಲಟಗಳು ಒಟ್ಟೂ ಕೃಷಿ ಬದುಕನ್ನು ಅಲ್ಲಾಡಿಸುತ್ತಿವೆ. 

ಶಂಕರನಾರಾಯಣ ಭಟ್‌ ಪಾಣಾಜೆ ದೈತೋಟ-ಶಂಪಾ ದೈತೋಟ ದೂರವಾಗಿ ಹದಿನಾರು ವರುಷ ಸಂದಿತು. ಅವರ ಒಡನಾಡಿಗಳು, ಪರಿಸರ ಸಂಬಂಧಿ ಮನಸ್ಸುಗಳು ಶಂಪಾರನ್ನು ಮರೆಯುವುದಿಲ್ಲ. ಕಾಲು ಶತಮಾನದ ಹಿಂದೆ ರಬ್ಬರ್‌ ಕುರಿತು ಶಂಪಾ ಬರೆದ ಲೇಖನವೊಂದು ಅಚಾನಕ್ಕಾಗಿ ಸಿಕ್ಕಿತು. ಒಂದು ಬೆಳೆಯ ಸಾಧಕ, ಬಾಧಕಗಳನ್ನು ಕೂಲಂಕಷವಾಗಿ ವಿವರಿಸಿದ್ದರು. ರಬ್ಬರ್‌ ಕೃಷಿಯು ನಮ್ಮೂರಿಗೆ ಹೊಂದಬಹುದೆಂದು ತರ್ಕಿಸಿದ್ದರು. ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದರು ಕೂಡಾ. 

Advertisement

ತನ್ನ ಯೋಚನೆಯ ಸುತ್ತ ಪರಿಸರ ಉಳಿಸುವ ಕಾರ್ಯ ಹೂರಣವು ರಬ್ಬರಿನಲ್ಲೂ ಸುತ್ತುತ್ತಿದ್ದುವು “ಸಾಮಾಜಿಕ ಅರಣ್ಯದಲ್ಲಿ ಬಳಸುವ ನೀಲಗಿರಿ, ಅಕೇಶಿಯಾ, ಕ್ಯಾಶುರಿನಾ ಮರಗಳಿಗಿಂತ ರಬ್ಬರು ಮಲೆನಾಡಿನ ಪರಿಸರಕ್ಕೆ ಹೆಚ್ಚು ಹೊಂದಿಕೊಳ್ಳುವ ಸಸ್ಯ. ರಬ್ಬರ್‌ ಮರದಲ್ಲಿ ಹೂವಿನಿಂದ ಮಾತ್ರವಲ್ಲ ಎಲೆಸಂದಿನಿಂದಲೂ ಮಕರಂದ ಸುರಿದು ಧಾರಾಳ ಜೇನಾಗಿ, ಜೇನ್ನೊಣಗಳ ಸಂಸಾರ ಸಾವಿರವಾಗಿ, ಇತರ ಬೆಳೆಗಳಲ್ಲೂ, ಕಾಡು ಸಸ್ಯಗಳಲ್ಲೂ ಪರಾಗ ಸಂಸರ್ಗ ಹೆಚ್ಚುತ್ತ ಫ‌ಲೀಕರಣ ಸಮೃದ್ಧವಾಗಿ ಹಸಿರು ಸೊಂಪಾಗಿ ಹರಡುತ್ತದೆ.’ 

ಎಂಭತ್ತರ ದಶಕ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕ್ಯಾಸನೂರು ಕಾಡಿನ ಕಾಯಿಲೆ(ಮಂಗನ ಕಾಯಿಲೆ)ಗೆ ಬಡ ಜೀವಗಳು ತುತ್ತಾಗುತ್ತಿದ್ದ ಸಮಯ. ಆಗ ಶಂಪಾ ಪುತ್ತೂರು ತಾಲೂಕಿನ ಪಾಣಾಜೆಯಿಂದ ಮುಂಡಾಜೆಯಲ್ಲಿ ನೆಲೆಸಿದ ದಿನ ಮಾನಗಳು. ದಿನಕ್ಕೊಂದು ಮರಣದ ಸುದ್ದಿಯಿಂದ ವಿಚಲಿತರಾಗಿದ್ದರು. ಆಗಷ್ಟೇ ಬೆಂಗಳೂರಿನಲ್ಲಿ ಸರ್ಕಸ್‌ ಕಂಪೆನಿಯೊಂದು ಅಗ್ನಿದುರಂತಕ್ಕೆ ಈಡಾಗಿತ್ತು. ಹಲವಾರು ಜೀವ ಹಾನಿಯಾಗಿತ್ತು. ಸರಕಾರವು ಪರಿಹಾರವನ್ನು ನೀಡಿತ್ತು. “ಹಳ್ಳಿಮೂಲೆಯಲ್ಲಿ ಸರಣಿ ಯಂತೆ ಜೀವ ಕಳೆದುಕೊಳ್ಳುವವರನ್ನು ಕೇಳುವವರೇ ಇಲ್ಲ’ ಎಂದು ಕೈಕೈ ಹಿಚುಕಿಕೊಂಡಿದ್ದರು ಶಂಪಾ. 

ಇತ್ತ ಕಾಯಿಲೆಯಿಂದ ಮಡಿದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು. ದಿವ್ಯಮೌನ ವಹಿಸಿದ ಸರಕಾರದ ಕಡೆಯಿಂದ ಸ್ಪಂದನವಿರಲಿಲ್ಲ. ಅಧಿಕಾರಿಗಳು ಮಾತನಾಡುತ್ತಿಲ್ಲ, ಜನ ನಾಯ ಕರು ನೋಡಿಯೂ ನೋಡದಂತಿದ್ದರು. ಮಳೆಗಾಲಕ್ಕಾಗುವಾಗ ಕಾಯಿಲೆ ನಿಯಂತ್ರಣಕ್ಕೆ ಬರಬಹುದು ಎಂದು ಆರೋಗ್ಯ ಇಲಾಖೆಯು ಒಂದು ವಾಕ್ಯದ ಷರಾ ಬರೆದಿತ್ತು. ಮನೆ ಜಗಲಿ ಯಲ್ಲಿ ಕುಳಿತು ಮಂಗಗಳನ್ನು ಕೊಲ್ಲುವುದೊಂದೇ ದಾರಿ ಎಂದು ತೀರ್ಪಿತ್ತವರು ಅನೇಕರು.
ಈಗಿನಂತೆ ಮಾಧ್ಯಮ ಸೌಕರ್ಯವಿಲ್ಲದ ಕಾಲ. ಶಂಪಾರು ವಾಸವಿದ್ದ ಜಾಗದಿಂದ ಅಂಚೆ ಕಚೇರಿ, ಫೋನ್‌, ಜೆರಾಕ್ಸ್‌… ವ್ಯವಸ್ಥೆಗಳು ಬಹುದೂರ. ಗ್ರಹಿಸಿದಷ್ಟು ಕ್ಷಿಪ್ರವಾಗಿ ಸಂವಹನ ಅಸಾಧ್ಯವಾಗಿತ್ತು. ಸವಾಲುಗಳು ಹೆಜ್ಜೆಹೆಜ್ಜೆಗೂ ಅಡ್ಡಡ್ಡವಾಗಿ ಬಂದಷ್ಟು ಶಂಪಾರ ಮನವು ಗಟ್ಟಿಯಾಗುತ್ತಾ ಬಂತು. ಈ ಎಲ್ಲಾ ವಿದ್ಯಮಾನಗಳನ್ನು ಮೌನವಾಗಿ ಸಹಿಸುತ್ತಿದ್ದ ಶಂಪಾ ಇದಕ್ಕೊಂದು ಪರಿಹಾರದ ಹಾದಿಗಾಗಿ ನಾಗರಿಕ ಸೇವಾ ಟ್ರಸ್ಟ್‌ ಜತೆ ಕೈಜೋಡಿಸಿದರು.

ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳುತ್ತಾರೆ, “ಮಂಗನ ಕಾಯಿ ಲೆಯ ಕಾರಣ ತಿಳಿಯಲು, ಬಡ ಸಂತ್ರಸ್ತರಲ್ಲಿ ಜಾಗೃತಿ ಮೂಡಿ ಸಲು ಚಿಕಿತ್ಸಾ ಸೌಕರ್ಯ ಒದಗಿಸಲು, ಆಡಳಿತಕ್ಕೆ ಚುರುಕು ಮುಟ್ಟಿಸಲು, ಲಸಿಕೆ ತಯಾರಿಯ ಕೆಲಸ ಶೀಘ್ರಗೊಳಿಸಲು ಪ್ರತಿಯೊಂದಕ್ಕೂ ಹರಸಾಹಸವೇ ಬೇಕಾಯಿತು. ಪುಣೆಯ ವೈರಾಣು ಸಂಶೋಧನಾ ಕೇಂದ್ರದ ವರದಿಯಿಂದ ಶಂಪಾ ಚುರುಕಾಗಿದ್ದರು. ದಟ್ಟ ಕಾಡನ್ನು ನುಣುಪಾಗಿಸಿದ್ದರಿಂದ ವೈರಾಣು ಮೂಲದ ಕಾಯಿಲೆ ಭುಗಿಲೆದ್ದಿತ್ತು. ಉಣ್ಣಿಗಳು ರೋಗಾಣುವಿನ ವಾಹಕ ಗಳಾದರೆ ಕೋತಿಗಳು ದ್ವಿತೀಯ ವಾಹಕ. ಕಾಡಿಗೆ ಹೋದ ಹಳ್ಳಿಗರ ಮೈ ಸೇರಿಕೊಂಡ ಉಣ್ಣಿಗಳಿಂದ ರೋಗಪ್ರಸಾರ. ಜೀವ ಹಾನಿ. ಹಾಗಾಗಿ ಉಣ್ಣಿ ನಿಯಂತ್ರಣಕ್ಕೆ ಮೊದಲ ಆದ್ಯತೆ ಕೊಟ್ಟರು.’

ಮಂಗನ ಕಾಯಿಲೆ ಕುರಿತು ಅನಕ್ಷರಸ್ಥ ಜನರಿಗೆ ಸುತ್ತಲಿನವರು ಓದಿ ಹೇಳಲಿ ಎನ್ನುವ ಉದ್ದೇಶದಿಂದ ಪುಸ್ತಿಕೆಗಳ ತಯಾರಿ. ಹಳ್ಳಿ ಗಳಲ್ಲಿ ಉಣ್ಣಿ ನಿಯಂತ್ರಣದ ಸ್ಲೆ„ಡ್‌ಶೋ. ಮಾಧ್ಯಮ ಪ್ರತಿ ನಿಧಿಗಳನ್ನು ಕರೆಸಿ ಕಾಯಿಲೆಯ ಗಾಢತೆಯತ್ತ ಮಾಧ್ಯಮದ ಬೆಳಕು ಚೆಲ್ಲುವ ಯತ್ನ. ಆ ದಿವಸಗಳಲ್ಲಿ ಅದು ರಾಷ್ಟ್ರೀಯ ಸುದ್ದಿ. ಕಾಯಿಲೆಯ ನಿವಾರಣೆ, ಚಿಕಿತ್ಸೆ, ಪುನರ್ವಸತಿ, ಸಂತ್ರಸ್ತರಿಗೆ ಪರಿಹಾರ… ಹೀಗೆ ಶಂಪಾರದ್ದು ನಿದ್ದೆಯಿಲ್ಲದ ದುಡಿತ. “ಅಂದಿನ ದಿನಗಳಲ್ಲಿ ಶಂಪಣ್ಣ ಅಂದರೆ ಮಂಗನ ಕಾಯಿಲೆ ನೆನಪಾಗುವಷ್ಟರ ಮಟ್ಟಿಗೆ ಆ ವಿಚಾರದಲ್ಲಿ ಮುಳುಗಿದ್ದರು. ಇಂದು ಅವರ ಉಲ್ಲೇಖವಿಲ್ಲದೆ ಈ ದುರಂತದ ಚರಿತ್ರೆ ಬರೆಯುವುದು ಸಾಧ್ಯ ವಿಲ್ಲ’ ಎನ್ನುತ್ತಾರೆ ಶ್ರೀ ಪಡ್ರೆ. 

ನಂತರದ ದಿನಗಳಲ್ಲಿ ಶಂಪಾ ಅವರ ಹೋರಾಟಕ್ಕೆ ಬೀಸು ಹೆಜ್ಜೆ. ಮನೆಯನ್ನು ಮರೆತ ದುಡಿತ. ಕೊಜೆಂಟ್ರಿಕ್ಸ್‌, ಪೈಪ್‌ಲೈನ್‌ ಹೋರಾಟ, ಹಕ್ಕೊತ್ತಾಯ, ಕುದುರೆಮುಖ ಗಣಿಗಾರಿಕೆ, ನಾಗಾರ್ಜುನ, ಎಂ.ಆರ್‌.ಪಿ.ಎಲ್‌, ಪಶ್ಚಿಮಘಟ್ಟ ಉಳಿಸಿ… ಹೀಗೆ ಪ್ರಕೃತಿ ಸಂರಕ್ಷಣೆಯ ಹೋರಾಟಗಳ ಪಟ್ಟಿ ಉದ್ದುದ್ದ. ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ ನಿಲುವು. ಜಿಲ್ಲಾದ್ಯಂತ ಓಡಾಟ. ಪರಿಸರ ಒಕ್ಕೂಟದ ಅಧ್ಯಕ್ಷರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡರು. ಎಲ್ಲಾ ಹೋರಾಟಗಳಲ್ಲೂ ಯಾವುದೇ ರಾಜಕೀಯ ಪಕ್ಷದ ಮುಖವಾಗಿರಲಿಲ್ಲ. 

“ಪಶ್ಚಿಮದ ನದಿಗಳನ್ನು ತಿರುಗಿಸುವ, ಜೋಡಿಸುವ ಮೆಗಾ ಯೋಜನೆಯು ಅವರಿಗೆ ತುಂಬ ಆತಂಕ ತಂದಿತ್ತು. ಏಕೆ ಈ ಮಂದಿ ಆಳವಾಗಿ ಚಿಂತಿಸುವುದಿಲ್ಲ. ಹಾನಿಯ, ನಿರರ್ಥಕತೆಯ ತಿಳಿವಿದ್ದೂ ನಟನೆಯೇ. ಈ ಯೋಜನೆಯು ಅನುಷ್ಠಾನವಾದರೆ ಮತ್ತೆ ಪಶ್ಚಿಮ ಘಟ್ಟವನ್ನು ಬೋರ್ಡಿನಲ್ಲಿ ಮಾತ್ರ ಕಾಣಬೇಕು’ ಎನ್ನುತ್ತಿದ್ದರು. ಅವರು ಮಾತಿಗೆ ಸಿಕ್ಕಾಗಲೆಲ್ಲ ಯಾವುದಾದರೊಂದು ಪರಿಸರ ಸುದ್ದಿಗಳು, ಕರಪತ್ರಗಳು, ಪುಸ್ತಿಕೆಗಳು ಇರುತ್ತಿದ್ದುವು. 

ಪುತ್ತೂರು ತಾಲೂಕಿನ ಪಾಣಾಜೆ ಪಂಡಿತ ಮನೆತನದ ಶಂಪಾ ದೈತೋಟರು ಎಪ್ಪತ್ತೂಂದು ವರುಷ ಬಾಳಿದ್ದರು. ಅವರ ಸಹೋ ದರ ಮೂಲಿಕಾ ತಜ್ಞ ವೆಂಕಟರಾಮ ದೈತೋಟರು ಕಳೆದ ವರುಷವಷ್ಟೇ ದೈವಾಧೀನರಾದರು. “ಶಂಪಣ್ಣ ನಿಜಾರ್ಥದ ಪರಿಸರ ಯೋಗಿಯಾಗಿ ಬದುಕಿದ್ದರು. ಒಂದು ಯೋಚನೆಯಲ್ಲಿ ಮುಳು ಗಿಬಿಟ್ಟರೆ ಅದರ ತುದಿ ತಲುಪಿದ ತನಕವೇ ವಿಶ್ರಾಂತಿ. ಪರಿಸರ ಅಲ್ಲದೆ ಮನೆತನದ ವೃತ್ತಿಯಾದ ಮೂಲಿಕೆ, ಆಯುರ್ವೇದಗಳ ಕುರಿತು ಆಳವಾದ ಜ್ಞಾನವಿತ್ತು. ಆಯುರ್ವೇದ ಪ್ರಕಾಶನಕ್ಕೆ ದೊಡ್ಡ ಹೆಗಲು ನೀಡಿದ್ದರು’ ಎಂದು ಜ್ಞಾಪಿಸಿಕೊಳ್ಳುತ್ತಾರೆ ಪಡ್ರೆ. 

ಆ ದಿವಸ ಇನ್ನೂ ನೆನಪಿದೆ. ಶಂಪಾರ ಓಡಾಟ ಕಡಿಮೆಯಾಗಿತ್ತು. ಪತ್ರಿಕೆಗಳನ್ನು ಓದದೆ ಚಡಪಡಿಸುತ್ತಿದ್ದರು. ರಾತ್ರಿ ಹತ್ತರ ಬಳಿಕ ಫೋನ್‌ ಮಾಡಿದ್ರೆ ಕನಿಷ್ಠ ಅರ್ಧ ಗಂಟೆ ಮಾತುಕತೆ. ದಿನಪತ್ರಿಕೆಗಳ ಶೀರ್ಷಿಕೆಗಳನ್ನು ಓದಿ ಹೇಳಿದರಷ್ಟೇ ಸಮಾಧಾನ. ಜತೆಗೆ ಆ ಶೀರ್ಷಿಕೆಗೆ ಒಂದಷ್ಟು ಕಟು ವಿಮರ್ಶೆಗಳು. ಪರಿಸರದ ವಿಚಾರ ಬಂದಾಗ ತಾನೇನೂ ಮಾಡಲಾಗದ ವಿಷಾದಗಳೊಂದಿಗೆ ಮಾತುಕತೆ ಮುಕ್ತಾಯ. 2002 ಸೆಪ್ಟೆಂಬರ್‌ 27ರಂದು ಕರೆ ಬರಲಿಲ್ಲ. ಅವರ ಮರಣದ ಸುದ್ದಿ ಬಂದಿತ್ತು. ಪರಿಸರ ಸಂರಕ್ಷಣೆಯ ನಿಜ ಕಾಳಜಿಯ ಮತ್ತು ಹಕ್ಕೊತ್ತಾಯ ಪದವನ್ನು ಪರಿಸರ ಹೋರಾಟಕ್ಕೆ ಟಂಕಿಸಿದ ಮನಸ್ಸು ಅಂದು ಶಾಶ್ವತವಾಗಿ ಮೌನವಹಿಸಿತ್ತು. 

ಹದಿನಾರು ವರುಷದ ಬಳಿಕವೂ ಪ್ರಾಮಾಣಿಕತೆಯ ಅನು ಷ್ಠಾನ, ಬದುಕಿನ ಬದ್ಧತೆ ಮತ್ತು ಸಮಾಜ ಹಿತ ಈ ಕಾರಣಗಳಿ ಗಾಗಿ ಹಿರಿಯಣ್ಣ ಶಂಪಾ ನೆನಪಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next