Advertisement

ಮಹಿಳಾ ಶಕ್ತಿಗೆ ನಲುಗಿದ ವಿದ್ಯಾರ್ಥಿಗಳು-ಪುರುಷರು!

02:27 PM Jun 19, 2023 | Team Udayavani |

ಚಾಮರಾಜನಗರ: ಲಕ್ಸುರಿ ಬಸ್‌ಗಳನ್ನು ಹೊರತುಪಡಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನ್ಥಾನಗೊಂಡ ಬಳಿಕ ಜಿಲ್ಲಾದ್ಯಂತ ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರು ಬಸ್‌ಗಳಲ್ಲಿ ನಿಂತು ಕೊಳ್ಳಲು ಸಹ ಜಾಗ ಸಿಗದೇ ಶಾಲೆಗಳಿಗೆ ಹಾಗೂ ತಂತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪರದಾಟ ಪಡುತ್ತಿದ್ದಾರೆ.

Advertisement

ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ಪಟ್ಟಣಗಳಿಂದ ಹಾಗೂ ಬೇಗೂರು, ತೆರಕಣಾಂಬಿ, ಸಂತೇಮರಹಳ್ಳಿ ಹಾಗೂ ಇತರೆ ಹೋಬಳಿ ಕೇಂದ್ರಗಳಿಂದ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್‌ ನಿಲ್ದಾಣಗಳಲ್ಲಿಯೇ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚು ಮಹಿಳೆಯರು ಬಸ್‌ ಹತ್ತುತ್ತಾರೆ. ನಂತರ ಮಾರ್ಗದ 3-4 ಗ್ರಾಮಗಳ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್‌ಗಳಿಗೆ ಹತ್ತುತ್ತಾರೆ. ಈ ವೇಳೆಗೆ ಬಸ್‌ ಕಿಕ್ಕಿರಿದು ತುಂಬಿರುತ್ತದೆ. ಹಾಗಾಗಿ ಬಳಿಕ ಮುಂದಿನ ಗ್ರಾಮಗಳ ನಿಲ್ದಾಣಗಳಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಬಸ್‌ ನಿಲ್ಲಿಸುವುದೇ ಇಲ್ಲ.

ಸಮಯ ಪಾಲನೆಯೂ ಆಗುತ್ತಿಲ್ಲ: ಬೆಳಗ್ಗೆ ಮತ್ತು ಸಂಜೆ ಪ್ರಮುಖವಾಗಿ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೆರಳಬೇಕಿದೆ. ಆದ್ದರಿಂದ ಈ ವೇಳೆಯಲ್ಲಿ ಸಾರಿಗೆ ಬಸ್‌ಗಳ ಹೆಚ್ಚು ಪ್ರಯಾಣಿಕರು ತುಂಬಿಕೊಂಡಿರುತ್ತಾರೆ. ಇವರಲ್ಲಿ ಮಹಿಳಾ ಪ್ರಯಾಣಿಕರೇ ಅಧಿಕ ಪ್ರಮಾಣದಲ್ಲಿರುತ್ತಾರೆ. ಈ ವೇಳೆಯಲ್ಲಿ ಗ್ರಾಮಗಳ ಬಳಿ ಕಾಯುವ ಪುರುಷ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ ಟಿಸಿ ಬಸ್‌ಗಳು ನಿಲ್ಲಿಸುತ್ತಿಲ್ಲ. ಅಲ್ಲದೆ ಸರಿಯಾಗಿ ಸಮಯ ಪಾಲನೆಯೂ ಆಗುತ್ತಿಲ್ಲ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿಬಂದಿದೆ.

ವಿವಿಧೆಡೆ ಪ್ರತಿಭಟನೆ: ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಸಕಾಲಕ್ಕೆ ಸಾರಿಗೆ ಬಸ್‌ಗಳು ಬರುತ್ತಿಲ್ಲ. ಇದರಿಂದ ಶಾಲೆ, ಕಾಲೇಜುಗಳಿಗೆ ತೆರಳಲು ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಗುಂಡ್ಲುಪೇಟೆ, ಹಂಗಳ ಮತ್ತು ಹನೂರು ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಸ್‌ ಹತ್ತಲು ತೀವ್ರ ಪೈಪೋಟಿ: ಇನ್ನು, ಧಾರ್ಮಿಕ ಸ್ಥಳಗಳಾದ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಗಳಿಗೆ ಹೋಗಲು, ಬಳಿಕ ವಾಪಸ್‌ ತಮ್ಮೂರುಗಳಿಗೆ ಹೋಗಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಕೊಳ್ಳೇಗಾಲ ಹಾಗೂ ಯಳಂದೂರು ಪಟ್ಟಣಗಳ ಬಸ್‌ ನಿಲ್ದಾಣದಲ್ಲಿ ಜಾತ್ರೆಯ ವಾತಾವರಣ ಇರುತ್ತದೆ. ಅಲ್ಲಿ ಒಂದು ಬಸ್‌ ಹತ್ತಿದರೆ, ಇನ್ನು ಐದಾರು ಬಸ್‌ ಗಳಿಗಾಗುವಷ್ಟು ಮಹಿಳೆಯರು ಪುರುಷರು ಕೆಳಗೆ ಇರುತ್ತಾರೆ. ಪ್ರತಿ ಬಸ್‌ ಬಂದಾಗಲೂ ಅದನ್ನು ಹತ್ತಲು ತೀವ್ರ ಪೈಪೋಟಿಯೇ ನಡೆಯುತ್ತದೆ. ಹೀಗೆ ಹತ್ತುವ ಭರದಲ್ಲಿ ಬಸ್‌ವೊಂದರ ಬಾಗಿಲು ಮುಕ್ಕಾಲು ಭಾಗ ಕಿತ್ತು ಹೋದ ಘಟನೆ ಎಲ್ಲೆಡೆ ವೈರಲ್‌ ಆಯಿತು.

Advertisement

ನಿರ್ವಾಹಕ, ಚಾಲಕರ ಕೊರತೆ: ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಅವರು, ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ವಾಹಕ, ಚಾಲಕರ ಕೊರತೆಯಿದೆ. ಕೋವಿಡ್‌-19 ನಂತರ ಹೊಸ ಬಸ್‌ಗಳನ್ನು ನೀಡಲಾಗಿಲ್ಲ. ನಮ್ಮ ವಿಭಾಗಕ್ಕೆ ಇನ್ನೂ 50 ಚಾಲಕರು ಹಾಗೂ ನಿರ್ವಾಹಕರು ಬೇಕಿದೆ. ಈ ಸಮಸ್ಯೆ ಬಗೆಹರಿಸಲು ತಾತ್ಕಾಲಿಕವಾಗಿ ದೂರ ಮಾರ್ಗಕ್ಕೆ ತೆರಳುವ ಬಸ್‌ಗಳನ್ನು ಸಮಸ್ಯೆ ಇರುವ ಮಾರ್ಗಗಳಿಗೆ ಕಾರ್ಯಾಚರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಬೆಳಗ್ಗೆ ಸಂಜೆ ಹೆಚ್ಚು ಬಸ್‌ಗಳನ್ನು ಬಿಡಿ : ಹಣ ನೀಡಿ ಟಿಕಟ್‌ ಪಡೆದರೂ ಸೀಟ್‌ ಸಿಗುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪುರುಷ ಪ್ರಯಾಣಿಕರು ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ, ಸಂಜೆ ವೇಳೆ ಹೆಚ್ಚುವರಿ ಬಸ್‌ ಓಡಿಸಿದರೆ ಈ ಸಮಸ್ಯೆ ನಿವಾರಣೆ ಆಗಲಿದೆ. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಶಕ್ತಿ ಯೋಜನೆಯ ಬಳಿಕ ಕೆಎಸ್‌ಆರ್‌ ಟಿಸಿ ಬಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಿ ಬಸ್‌ಗಳಲ್ಲಿ ಜಾಗವಿಲ್ಲದೇ, ಮಾರ್ಗಮಧ್ಯ ನಿಲ್ಲಿಸದೇ ಹೋದ ಕಾರಣ, ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಪ್ರಕರಣಗಳು ನಡೆದಿವೆ. ಯೋಜನೆ ಹೊಸದಾಗಿ ಜಾರಿಯಾಗಿರುವುದರಿಂದ ಈಗ ಹೆಚ್ಚು ರಶ್‌ ಇದೆ. ಮುಂದಿನ ದಿನಗಳಲ್ಲಿ ಇದು ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ. – ಶ್ರೀನಿವಾಸ್‌, ಚಾ.ನಗರ ಸಾರಿಗೆ ವಿಭಾಗೀಯ, ನಿಯಂತ್ರಣಾಧಿಕಾರಿ

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next