Advertisement

ಯುವತಿಯರ ಸಶಕ್ತಿಕರಣ ಅಗತ್ಯ

04:44 PM Dec 09, 2019 | Team Udayavani |

ಶಹಾಪುರ: ಸಮಾಜ ಈಗ ಆಧುನಿಕತೆಯತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ. ನಮ್ಮ ದೇಶದಲ್ಲಿ ನೆಂಟಸ್ಥನ ಮತ್ತು ಸಂಬಂಧಗಳಿಗೆ ಹೊಸ ಪರಿಭಾಷೆಗಳು ಹುಟ್ಟುತ್ತಿವೆ. ಇಂತಹ ಕಾಲದಲ್ಲಿ ಸಂಸ್ಕೃತಿ ಪ್ರದಾನ ದೇಶವಾದ ಭಾರತದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಎಂದು ಸ್ಮಾರ್ಟ್‌ ಗರ್ಲ್ ತರಬೇತಿ ಕಾರ್ಯಕ್ರಮದ ತರಬೇತುದಾರರಾದ ಸಂಗೀತ ಜೈನ್‌ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ಶಾ ಮಗನ್‌ ಲಾಲ ಚಮನಾಜೀ ಜೈನ್‌ ಸ್ಕೂಲ್‌ನಲ್ಲಿ ಭಾರತೀಯ ಜೈನ ಸಂಘಟನೆಯಿಂದ (ಬಿಜೆಎಸ್‌)ನಡೆದ ಸ್ಮಾರ್ಟ್‌ ಗರ್ಲ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

21ನೇ ಶತಮಾನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಯುವತಿಯರು ವಿಭಿನ್ನ ಪ್ರಕಾರದ ಸವಾಲು ಎದರಿಸುವಂತಾಗಿದೆ. ಆದ್ದರಿಂದ ಸ್ಮಾರ್ಟ್‌ ಗರ್ಲ್ ತರಬೇತಿ ಕಾರ್ಯಕ್ರಮದ ಮೂಲಕ ಯುವತಿಯರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಯುವತಿಯರಿಗೆ ಸಶಕ್ತೀಕರಣ, ಸ್ವಜಾಗರಣೆ, ಸಂವಾದ ಮತ್ತು ಸಂಬಂಧ, ಮಾಸಿಕ ಧರ್ಮ ಮತ್ತು ಆರೋಗ್ಯ ವೃದ್ಧಿ, ಆಯ್ಕೆ ಮತ್ತು ನಿರ್ಣಯ ಸೇರಿದಂತೆ ಸ್ವಶಕ್ತಿ ಮತ್ತು ಆತ್ಮರಕ್ಷಣೆ ಹಾಗೂ ಗೆಳೆತನ ಬಗ್ಗೆ ತರಬೇತಿಯಲ್ಲಿ ಅರ್ಥೈಸಲಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಪಾಲಕರಿಗೂ ಕೆಲವೊಂದು ಮಹತ್ವದ ವಿಚಾರ ತಿಳಿಸಲಾಗುತ್ತದೆ. ಇದೊಂದು ಯುವತಿಯರನ್ನು ಸಂಪೂರ್ಣ ಸಬಲೀಕರಣ ಮಾಡುವ ಕಾರ್ಯಕ್ರಮವಾಗಿದೆ. ಇದರ ಸದುಪಯೋಗ ಪಡೆಯುವುದು ಅಗತ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಾಲಕರಿಂದ ಅವರ ಮಕ್ಕಳಿಗೆ ಏನು ಇಷ್ಟವಿದೆ ಎಂಬುದನ್ನು ತಿಳಿಯಲಾಯಿತು. ಅದರಂತೆ ಮಕ್ಕಳಲ್ಲಿ ಆ ಕುರಿತು ಪ್ರಶ್ನಿಸಿ ಹೆತ್ತವರು ಮಕ್ಕಳ ನಡುವೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ತರಬೇತಿಯಲ್ಲಿ ತಿಳಿದುಕೊಂಡು ಬೋಧನೆ ಮಾಡಲಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇದು ಅಗತ್ಯವಿದೆ. ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಬೇಕಿದೆ. ಹೆತ್ತವರ ಪ್ರೀತಿ, ಮಮತೆ, ಕರುಣೆ ಕಾಣದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ತಜ್ಞರ ಸಂಶೋಧನೆಯಿಂದ ತಿಳಿದು ಬಂದಿರುವ ಕಾರಣ ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ. ತಂದೆ ತಾಯಿ ಮಕ್ಕಳ ಪ್ರೀತಿ ಬಲಗೊಳಿಸುವುದಲ್ಲದೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವನ್ನು ಶಾಶ್ವತವಾಗಿ ಉಳಿಸುವ ಕೆಲಸಕ್ಕೆ ಇದು ಮುನ್ನುಡಿಯಾಗಲಿದೆ ಎಂದು ಹೇಳಿದರು. ಶಾಲಾ ಪ್ರಾಂಶುಪಾಲೆ ಭಾವಿಕಾ ಎಸ್‌.ಲಾಡ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಎಸ್‌ ಅಧ್ಯಕ್ಷ ದೀನೇಶ ಜೈನ್‌, ರಾಜೇಶ ಜೈನ್‌, ಅಜೀತ್‌ ಜೈನ್‌, ಆನಂದ ಜೈನ್‌, ಜೈನ್‌ ಶಾಲೆ ಮುಖ್ಯಸ್ಥ ಮಾಂಗಿಲಾಲ್‌ ಜೈನ್‌ ಸೇರಿದಂತೆ ವಿದ್ಯಾರ್ಥಿನಿಯರು ಮತ್ತು ಪಾಲಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next