ಮಲ್ಲಿನಾಥ ಪಾಟೀಲ
ಶಹಾಬಾದ: ನಗರದ ಬಹುತೇಕ ಮುಖ್ಯ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೇ ಎಲ್ಲೆಂದರಲ್ಲಿ ತಿರುಗಾಡುವ ಮತ್ತು ಕುಳಿತೇಳುವ ಬಿಡಾಡಿ ದನಗಳಿಂದಾಗಿ ಇಲ್ಲಿನ ಸಾರಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ನಗರದ ಮುಖ್ಯ ರಸ್ತೆಗಳ ಮೇಲೆ ದನಗಳು ಕುಳಿತುಕೊಳ್ಳುತ್ತಿರುವುದರಿಂದ ಸಂಚಾರ ವ್ಯವಸ್ಥೆಗೆ ತೀವ್ರ ಸಮಸ್ಯೆ ಆಗುತ್ತಿದೆ. ಎಲ್ಲೆಂದರಲ್ಲಿ ಹಂದಿಗಳು ವಾಹನಗಳ ಕೆಳಗೆ ನುಗ್ಗಿ ಬರುವುದನ್ನು ತಪ್ಪಿಸಬೇಕೆಂದು ಸಾರ್ವಜನಿಕರು ನಗರಸಭೆಗೆ ಪದೇ ಪದೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಚಾರಕ್ಕೆ ಉಂಟಾಗುತ್ತಿರುವ ತಾಪತ್ರಯ ಒಂದೆಡೆಯಾದರೆ, ರಸ್ತೆ ಪಕ್ಕದ ಮಾರ್ಕೆಟ್ನಲ್ಲಿ ಹಣ್ಣು – ತರಕಾರಿ ಮಾರುವ ವ್ಯಾಪಾರಿಗಳ ಪಾಲಿಗಂತೂ ಈ ದನಗಳ ಕಾಟ ಸಾಕಾಗಿ ಹೋಗಿದೆ. ಒಂದು ಕ್ಷಣ ಮೈಮರೆತರೂ ತರಕಾರಿ ಮತ್ತು ಹಣ್ಣುಗಳತ್ತ ನುಗ್ಗುತ್ತಿವೆ. ಹೀಗಾದರೆ ನಮ್ಮ ಬದುಕು ಸಾಗಿಸುವುದಾದರೂ ಹೇಗೆ ಎಂದು ಬೀದಿ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ವಿಪಿ ವೃತ್ತ, ಪೊಲೀಸ್ ಠಾಣೆ ಹಾಗೂ ನಗರದ ಬಹುತೇಕ ಮುಖ್ಯ ರಸ್ತೆಗಳ ಮೇಲೆಯೇ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿವೆ. ಆದ್ದರಿಂದ ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ಬಿಡಾಡಿ ದನಗಳನ್ನು ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.