ಹೊಸದಿಲ್ಲಿ: ದೆಹಲಿ-ಸಿಡ್ನಿ ಏರ್ ಇಂಡಿಯಾ ವಿಮಾನದಲ್ಲಿ ಮಂಗಳವಾರ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ .
ಮೇ16 ರಂದು ಏರ್ ಇಂಡಿಯಾದ AI302 ವಿಮಾನವು ದೆಹಲಿಯಿಂದ ಸಿಡ್ನಿಗೆ ಹಾರಾಟ ನಡೆಸುತ್ತಿದ್ದ ಮಧ್ಯದಲ್ಲಿ ಪ್ರಕ್ಷುಬ್ಧತೆಯನ್ನು ಎದುರಿಸಿತು, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ವಿಮಾನವು ಸುರಕ್ಷಿತವಾಗಿ ಸಿಡ್ನಿಯಲ್ಲಿ ಇಳಿಯಿತು ಮತ್ತು ಮೂವರು ಪ್ರಯಾಣಿಕರು ಆಗಮನದ ನಂತರ ವೈದ್ಯಕೀಯ ಸಹಾಯವನ್ನು ಪಡೆದರು. ಅವರಲ್ಲಿ ಯಾರಿಗೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಈ ಆನ್ಬೋರ್ಡ್ ಘಟನೆಯನ್ನು ಪ್ರಮಾಣಿತ ಅಭ್ಯಾಸವಾಗಿ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ” ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಕ್ಯಾಬಿನ್ ಸಿಬಂದಿ ಗಾಯಾಳುಗಳಿಗೆ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ವೈದ್ಯರು ಮತ್ತು ನರ್ಸ್ ಸಹಾಯದಿಂದ ಆನ್ಬೋರ್ಡ್ ಪ್ರಥಮ ಚಿಕಿತ್ಸಾ ಕಿಟ್ ಬಳಸಿ ಪ್ರಥಮ ಚಿಕಿತ್ಸೆ ನೀಡಿದರು” ಎಂದು ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಎರಡು ವರ್ಷಗಳಲ್ಲಿ ತೀವ್ರ ಪ್ರಕ್ಷುಬ್ಧತೆಯ ಎರಡನೇ ಘಟನೆ ಇದಾಗಿದ್ದು, ಪ್ರಯಾಣಿಕರಿಗೆ ಗಾಯಗಳಾಗಿವೆ.ಕಳೆದ ವರ್ಷ ಮೇ 1 ರಂದು, 195 ಪ್ರಯಾಣಿಕರನ್ನು ಹೊತ್ತ ಮುಂಬೈ-ದರ್ಭಾಂಗ ಸ್ಪೈಸ್ಜೆಟ್ ವಿಮಾನವು ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿ ಪ್ರಯಾಣಿಕರಿಗೆ ಗಾಯಗಳಾಗಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಓರ್ವ ಪ್ರಯಾಣಿಕ ಸುದೀರ್ಘ ಚಿಕಿತ್ಸೆ ನಂತರ ಸಾವನ್ನಪ್ಪಿದ್ದರು.
Related Articles
ವಿಮಾನವು ಹಾರಾಟದ ವೇಳೆ ಯಾವುದೇ ಸಮಯದಲ್ಲಿ ಪ್ರಕ್ಷುಬ್ಧತೆಯನ್ನು ಎದುರಿಸಬಹುದು. ಇಂತಹ ಪರಿಸ್ಥಿತಿಗಳಲ್ಲಿ ಸೀಟ್ ಬೆಲ್ಟ್ ಧರಿಸಿರುವುದು ಅಗತ್ಯ ಎಂದು ಹಿರಿಯ ಪೈಲಟ್ ಒಬ್ಬರು ತಿಳಿಸಿದ್ದಾರೆ.