Advertisement

ಲಂಗಟಿ ಅಂಗಳದಲ್ಲಿ ಎಪ್ಪತ್ತು ತಳಿ ಭತ್ತ

04:38 AM Jan 28, 2019 | |

ಭತ್ತ ಕೃಷಿಯಲ್ಲಿ ಲಂಗಟಿ ನಿಪುಣರು. ಇವರಿಗಿರುವ ನಾಲ್ಕು ಎಕರೆ ಕೃಷಿ ಭೂಮಿ, ಭತ್ತ ಕೃಷಿಯ ಪ್ರಯೋಗ ಶಾಲೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಭತ್ತ ಕೃಷಿಗಾಗಿ ಭೂಮಿ ಸಿದ್ಧತೆಯಲ್ಲಿ ತೊಡಗುತ್ತಾರೆ. ಎತ್ತಿನ ನೇಗಿಲಿನಿಂದ ಉಳುಮೆ. ನಾಲ್ಕೈದು ಬಾರಿ ಉಳುಮೆಯ ನಂತರ ಸಡಿಲಗೊಂಡ ಮಣ್ಣಿನ ಮೇಲೆ ರೆಂಟೆ ಹೊಡೆಯುತ್ತಾರೆ… 

Advertisement

ಶಂಕರ ಲಂಗಟಿ ಸಾವಯವ ಕೃಷಿಕ. ಇವರದು ಬೆಳಗಾವಿಯ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮ . ಈತ ದೇಸಿ ತಳಿಯ ಭತ್ತದ ಬೀಜ ಸಂರಕ್ಷಕ. ಎಪ್ಪತ್ತು ವಿವಿಧ ದೇಸಿ ತಳಿಯ ಭತ್ತ ಕೃಷಿ ಮಾಡುತ್ತಾರೆ. ಇದೆಲ್ಲ ಹೇಗೆ ಸಾಧ್ಯ ಅನ್ನೋದಕ್ಕೆ ಕಥೆಯೇ ಇದೆ. ವಯಸ್ಸು ಇಪ್ಪತ್ತೆಂಟರಲ್ಲಿರುವಾಗ ಭವಿಷ್ಯದ ದಿನಗಳಲ್ಲಿ ತನ್ನ ಕೃಷಿ ಬದುಕು ಹೇಗಿರಬೇಕೆಂದು ಯೋಚಿಸುತ್ತಾ ಮಾದರಿಯೊಂದರ ಹುಡುಕಾಟಕ್ಕಾಗಿ ಊರೂರು ಅಲೆಯುತ್ತಿದ್ದರು. ಆಗ ಶಾರದಾ ದಾಬಡೆ ಅವರ ಪರಿಚಯವಾಯಿತು. ಅವರು ಧರ್ಮಸ್ಥಳದ ಸಾವಯವ ಬೀಜ ಮೇಳಕ್ಕೆ ಹೋಗಿ ಬರುವಂತೆ ಸಲಹೆ ನೀಡಿದರು. ಅಲ್ಲಿ ಸೇಲಂ ಸಣ್ಣ, ರಾಜಮುಡಿ, ದೊಡ್ಡ ಬೈರನೆಲ್ಲು, ಮೈಸೂರು ಮಲ್ಲಿಗೆ, ಎಚ್.ಎಮ್‌.ಟಿ, ಮುಳ್ಳಾರೆ, ಜೀರಿಗೆ ಸಣ್ಣ, ನವರ, ಮುಗದ ಭತ್ತ, ಮುಗದಸಿರಿ, ಮುಗದ ಸುಗಂಧ, ಸಿದ್ದಗಿರಿ-2, ಬಾದಷಾಹ ಬೋಗ ಹೀಗೆ ಇಪ್ಪತ್ತಕ್ಕೂ ಅಧಿಕ ತಳಿಯ ಬೀಜಗಳು ದೇಸೀ ಸಂತೆಯಲ್ಲಿ ದೊರೆತವು.

ಧರ್ಮಸ್ಥಳದಿಂದ ವಾಪಸ್ಸಾದ ಶಂಕರ ಲಂಗಟಿಯವರಿಗೆ ಸುಮ್ಮನಿರಲು ಮನಸ್ಸಾಗಲಿಲ್ಲ. ಅದು ಜೂನ್‌ ತಿಂಗಳ ಮೊದಲ ವಾರ. ಮಳೆ ಹದವಾಗಿ ಬಿದ್ದಿತ್ತು. ಒಂದು ಪ್ರಯೋಗ ಮಾಡಿಬಿಡೋಣ ಅಂದುಕೊಂಡೇ ಉಳುಮೆ ಪೂರೈಸಿದರು. ನಲವತ್ತು ಅಡಿ ಉದ್ದದ ಒಟ್ಟು ಮೂವತ್ತು ರೆಂಟೆ ಸಾಲುಗಳನ್ನು ಹೊಡೆದರು. ಸಾಲಿನ ನಡುವೆ ಒಂದು ಅಡಿ ಅಂತರ ಕಾಯ್ದುಕೊಂಡರು. ಬೀಜ ಬಿತ್ತಿದರು. ಒಂದೊಂದು ಸಾಲಿನಲ್ಲಿ ಒಂದೊಂದು ತಳಿಯ ಬೀಜ. ಯಾವ ತಳಿಯ ಬೀಜ ಯಾವ ಸಾಲಿನಲ್ಲಿದೆ ಎಂಬುದನ್ನು ಜ್ಞಾಪಕ ದಲ್ಲಿಟ್ಟುಕೊಂಡರು. ಆಮೇಲೆ ಮತ್ತೆ ತಳಿ ಹುಡುಕುವ ಹುಚ್ಚಿಗೆ ಬಿದ್ದ ಶಂಕರ ಲಂಗಟಿ, ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಹೊಂದಿಕೊಂಡಂತಿರುವ ಗಡಿ ಭಾಗದ ಪ್ರದೇಶ­ಗಳನ್ನು ಅಡ್ಡಾಡಿ ಬಂದರು. ಪರಿಣಾಮವಾಗಿ, ಕೆರೆಗಜಲಿ, ಕಾಳ ಕುಮುದ್‌, ಕೃಷ್ಣಕುಮುದ್‌, ಸೊರಟ, ಬಾಯ್‌-4 ಹೀಗೆ ಹದಿನೈದಕ್ಕೂ ಅಧಿಕ ತಳಿಯ ಬೀಜಗಳು ದೊರೆತವು.

ಇಷ್ಟು ಸಾಲದೆಂಬಂತೆ, ಧಾರವಾಡದ ಕೃಷಿ ವಿವಿ ಡಾ.ಎನ್‌.ಜಿ. ಹನುಮರಮಟ್ಟಿ, ಇಪ್ಪತ್ತು ತಳಿಯ ಭತ್ತವನ್ನು ಶಂಕರರ ಕೈಗಿಟ್ಟರು. ರಾಮಗಲ್ಲಿ, ಚಿಣ್ಣಪೊನ್ನಿ, ರತ್ನಚೂಡಿ, ಮೊಡ್ಲೆ ಸಾಂಬ, ಸೇಲಂ ಸಣ್ಣ ಮುಂತಾದ ತಳಿಗಳು ಸಹಜ ಸಮೃದ್ಧದಿಂದ ಲಂಗಟಿಯವರ ಹೊಲಕ್ಕೆ ವರ್ಗಾವಣೆಯಾ­ದವು. ಪರಿಣಾಮ, ಶಂಕರರ ಬತ್ತಳಿಕೆಯಲ್ಲಿ ಸುಮಾರು ಎಂಭತ್ತು ದೇಸೀ ಬೀಜಗಳು ಸಂಗ್ರಹವಾದವು.

ಭತ್ತ ಕೃಷಿ ಹೀಗಿದೆ
ಭತ್ತ ಕೃಷಿಯಲ್ಲಿ ಲಂಗಟಿ ನಿಪುಣರು. ಇವರಿಗಿರುವ ನಾಲ್ಕು ಎಕರೆ ಕೃಷಿ ಭೂಮಿ, ಭತ್ತ ಕೃಷಿಯ ಪ್ರಯೋಗ ಶಾಲೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಭತ್ತ ಕೃಷಿಗಾಗಿ ಭೂಮಿ ಸಿದ್ಧತೆಯಲ್ಲಿ ತೊಡಗುತ್ತಾರೆ. ಎತ್ತಿನ ನೇಗಿಲಿನಿಂದ ಉಳುಮೆ. ನಾಲ್ಕೈದು ಬಾರಿ ಉಳುಮೆಯ ನಂತರ ಸಡಿಲಗೊಂಡ ಮಣ್ಣಿನ ಮೇಲೆ ರೆಂಟೆ ಹೊಡೆಯುತ್ತಾರೆ. ಮೇ ತಿಂಗಳ ಮೊದಲ ಅಥವಾ ಎರಡನೆಯ ವಾರದಲ್ಲಿ ಬಿತ್ತನೆ ಶುರು. ಹಿಂದೆ ಕೂರಿಗೆಯಲ್ಲಿ ಬೀಜ ಬಿತ್ತುತ್ತಿದ್ದರು. ಈಗ ಕೂರಿಗೆ ಬಿತ್ತನೆ ನಿಲ್ಲಿಸಿದ್ದಾರೆ. ಕಾರಣವಿಷ್ಟೆ; ಆರು ತಾಳಿನ ಕೂರಿಗೆಯಿಂದ ಬೀಜಗಳು ಆರು ಇಂಚಿಗೆ ಬೀಳುತ್ತಿದ್ದವು. ಆದರೆ ಸಾಲಿನ ನಡುವೆ ಇಷ್ಟು ಕಡಿಮೆ ಅಂತರವಿದ್ದರೆ ಒಳಿತಲ್ಲ ಎಂದುಕೊಂಡು ಹನ್ನೆರಡರಿಂದ ಹದಿನಾಲ್ಕು ಇಂಚು ಅಂತರದಲ್ಲಿ ಬಿತ್ತಲು ಟ್ರಾಕ್ಟರ್‌ ಕೂರಿಗೆ ಬಳಸುತ್ತಾರೆ. ಹೀಗೆ ಅಗಲ ಅಂತರ ಬಿಡುವುದರಿಂದ ಗಾಳಿ ಸಂಚಾರ ಸರಾಗ, ಯತೇಚ್ಛ ಬೆಳಕು ಭತ್ತದ ಬುಡ ತಲುಪುತ್ತದೆ. ಬಹಳ ದಿನ ಮಳೆ ಮರೆಯಾದರೂ ತೊಂದರೆ ಇಲ್ಲ. ಭೂಮಿಯಲ್ಲಿನ ತೇವ ಆರುವುದಿಲ್ಲ ಎನ್ನುತ್ತಾರೆ ಲಂಗಟಿ.

Advertisement

ಲಂಗಟಿ ಅಧಿಕ ಬೇಡಿಕೆ ಇರುವ ಭತ್ತದ ತಳಿಗಳಿಗೆ ಎಕರೆಗಟ್ಟಲೆ ಮೀಸಲಿಡುತ್ತಾರೆ. ಏಪ್ರಿಲ್‌ ಮೊದಲ ವಾರದಲ್ಲಿ ಸಿದ್ಧಪಡಿಸಿಟ್ಟ ಭೂಮಿಯಲ್ಲಿ ಅದೇ ತಿಂಗಳ ಕೊನೆಯ ವಾರ ಸೆಣಬು, ಡಯಾಂಚ ಹಾಗೂ ನವಧಾನ್ಯಗಳನ್ನು ಬಿತ್ತನೆ ಮಾಡುತ್ತಾರೆ. ದ್ವಿದಳ ಧಾನ್ಯಗಳು, ರಾಗಿ, ಗೋಧಿ, ಜೋಳದಂತಹ ಏಕದಳ ಧಾನ್ಯಗಳು, ಗುರೆಳ್ಳು ಅಗಸೆ, ಸಾಸಿವೆಯಂತಹ ಎಣ್ಣೆಕಾಳು ಬೀಜಗಳ ಮಿಶ್ರಣವನ್ನು ಹೊಲಪೂರ್ತಿ ಬಿತ್ತನೆ ಮಾಡುತ್ತಾರೆ. ಇಪ್ಪತ್ತು ದಿನದಿಂದ ಒಂದು ತಿಂಗಳ ಒಳಗೆ ಈ ಬೆಳೆಗಳ ಮೇಲೆ ಕೊರಡು ಹೊಡೆಸಿ ಹಸಿರು ಸಸ್ಯಗಳನ್ನು ಭೂಮಿಗೆ ಸೇರಿಸುತ್ತಾರೆ. ಭೂಮಿ ಫ‌ಲವತ್ತತೆ ಹೆಚ್ಚಿಸುವ ತಂತ್ರಗಾರಿಕೆ ಇದು.

ಬಿತ್ತನೆಗೆ ಬಳಸುವ ಬೀಜಗಳನ್ನು ಬೀಜೋಪಚಾರಕ್ಕೆ ಒಳಪಡಿಸುತ್ತಾರೆ. ಬಿತ್ತನೆ ಸಮಯದಲ್ಲಿ ಆಕಳ ಸಗಣಿ, ಗಂಜಲದಿಂದ ತಯಾರಿಸಿದ ದ್ರಾವಣದಲ್ಲಿ ಭತ್ತದ ಬೀಜಗಳನ್ನು ಅದ್ದಿ ಬಿತ್ತುವುದೂ ಇದೆ. ಭೂಮಿಯಲ್ಲಿರುವ ಗೊಬ್ಬರದ ಸಾರವನ್ನು ಪಡೆಯುವುದಕ್ಕಿಂತ ಮೊದಲೇ ಬೀಜಕ್ಕೆ ಅಂಟಿಕೊಂಡಿರುವ ಗೊಬ್ಬರದ ಬಲದಿಂದ ಬೀಜಗಳು ಶೀಘ್ರ ಮೊಳಕೆಯೊಡೆಯುತ್ತವೆ ಎನ್ನುತ್ತಾರೆ ಶಂಕರ ಲಂಗಟಿ. ಶಂಕರರು ಜಮೀನಿನ ಸುತ್ತಾ ನಲವತ್ತು ಆಪೂಸ್‌ ತಳಿಯ ಮಾವು ಬೆಳೆದಿದ್ದಾರೆ. ಹೆಬ್ಬೇವು, ತೇಗ, ಹುಣಸೆ, ಬಿದಿರು, ನಿಂಬೆ, ಪೇರಲೆ, ಗೇರು, ಚಿಕ್ಕು, ಬೇವು, ನುಗ್ಗೆ ಮತ್ತಿತರ ಮರಗಳೂ ಇವೆ. ಜಾನುವಾರುಗಳ ಮೇವಿಗೆಂದು ಹಸಿರುಹುಲ್ಲು ಬೆಳೆಸಿದ್ದಾರೆ. ಅರ್ಧ ಎಕರೆಯಲ್ಲಿ ತರಕಾರಿ ಕೃಷಿ ಮಾಡುತ್ತಾರೆ. •

ಜೀವಾಮೃತ ಔಷಧಿ
ಗದ್ದೆಗೆ ಹರಿಸುವ ನೀರಿನೊಂದಿಗೆ ಲಂಗಟಿ ಜೀವಾಮೃತ ಬೆರೆಸಿ ಬಿಡುತ್ತಾರೆ. ನಾಟಿ ಮಾಡಿದ 30ನೇ ದಿನಕ್ಕೆ ಮೊದಲ ಬಾರಿ ಬೆಳೆಯ ಲಕ್ಷಣವನ್ನು ಆಧರಿಸಿ ಎರಡನೆಯ ಬಾರಿ ಮತ್ತೆ ಜೀವಾಮೃತ ಹರಿಸುತ್ತಾರೆ. ಸಾವಯವ ಉಂಡು ಬೆಳೆದ ದೇಸಿ ಭತ್ತದ ತಳಿಗಳು ಸುಲಭದಲ್ಲಿ ರೋಗವನ್ನು ಅಂಟಿಸಿಕೊಳ್ಳುವುದಿಲ್ಲ. ಹುಳ ಹುಪ್ಪಡಿಗಳ ಬಾಧೆಗೆ ಒಳಗಾಗುವುದೂ ಅಪರೂಪವೇ. ಹಾಗೊಂದು ವೇಳೆ ಬಾಧೆ ಕಂಡು ಬಂದಲ್ಲಿ ಬೇವಿನ ಕಷಾಯ, ಹುಳಿ ಮಜ್ಜಿಗೆಯನ್ನು ಸಿಂಪರಣೆಗೆ ಬಳಸುತ್ತಾರೆ. ತಳಿಗೆ ಅನುಸಾರವಾಗಿ ಭತ್ತದ ಕಟಾವಿನ ದಿನ ನಿಗದಿಗೊಳ್ಳುತ್ತದೆ. ಕೆಲವು ತಳಿಯ ಭತ್ತಗಳು ಮೂರೂವರೆ ತಿಂಗಳಿಗೆ ಕೊಯ್ಲಿಗೆ ಸಿದ್ದಗೊಳ್ಳುತ್ತವೆ. ಆರು ತಿಂಗಳಿಗೆ ಕೊಯ್ಲು ಮಾಡಬೇಕಾದ ತಳಿಯ ಭತ್ತವೂ ಇವರಲ್ಲಿದೆ. ದೇಸಿ ಸಂತೆಗಳು, ಕೃಷಿ ಮೇಳಗಳು, ವಾರದ ಸಂತೆಗಳಲ್ಲಿ ಸ್ವತಃ ಕುಳಿತು ಮಾರಾಟ ಮಾಡುತ್ತಾರೆ. ಭತ್ತ ಕೃಷಿಯಲ್ಲಿ ಇನ್ನೊಂದು ಜಾಣ ನಡೆ ಇವರಲ್ಲಿದೆ. ವರ್ಷವಿಡೀ ಸ್ವತಃ ಮಾರಾಟಕ್ಕೆ ಕುಳಿತುಕೊಳ್ಳು­ವುದರಿಂದ, ಅಲ್ಲದೇ ಖಾಯಂ ಖರೀದಿದಾರರೂ ಇರುವುದರಿಂದ ಇವರಿಗೆ ತಾವು ಬೆಳೆದ ಭತ್ತವಷ್ಟೇ ಸಾಲುತ್ತಿಲ್ಲ. ಇದಕ್ಕೋಸ್ಕರವೇ ಹಲವು ರೈತರಲ್ಲಿ ಬಾಯ್ಮಾತಿನ ಒಪ್ಪಂದ ಮಾಡಿಕೊಂಡಿದ್ದಾರೆ.

•ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next