Advertisement

ಸೆಪ್ಟೆಂಬರ್ 17ರಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ: ಸಚಿವ ಭೈರತಿ ಬಸವರಾಜ್

02:50 PM Sep 16, 2021 | Team Udayavani |

ಬೆಂಗಳೂರು: ನಾಳೆ (ಸೆಪ್ಟೆಂಬರ್ 17ರಂದು) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಿದ್ದು, ಅಕ್ಟೋಬರ್ 7ರಂದು ನರೇಂದ್ರ ಮೋದಿಯವರು ಮೊದಲ ಬಾರಿ ಗುಜರಾತಿನ ಮುಖ್ಯಮಂತ್ರಿಯಾದ 20ನೇ ವಾರ್ಷಿಕೋತ್ಸವ ಬರಲಿದೆ. ಆದ್ದರಿಂದ ಸೆ.17ರಿಂದ ಅಕ್ಟೋಬರ್ 7ರ ವರೆಗೆ ಕೆರೆಕಟ್ಟೆಗಳ ಸ್ವಚ್ಛತೆ, ಜಲಮೂಲಗಳ ಪ್ಲಾಸ್ಟಿಕ್ ಹೆಕ್ಕುವುದು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು. ರೋಗಿಗಳಿಗೆ ಅಗತ್ಯ ಸೇವೆ ಮಾಡಲಾಗುವುದು ಎಂದರಲ್ಲದೆ, ದೇಶದಲ್ಲಿ 100 ಸ್ಮಾರ್ಟ್ ಸಿಟಿ ನೀಡಿದ ಗೌರವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರಾಜ್ಯಕ್ಕೆ 7 ಸ್ಮಾರ್ಟ್ ಸಿಟಿಗಳನ್ನು ನೀಡಿದ್ದು, ಅವರಿಗೆ ಜನರ ಪರವಾಗಿ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.

ಸೆ. 19ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ದಾವಣಗೆರೆಯಲ್ಲಿ ನಡೆಯಲಿದೆ. ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಚಿವರು, ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ 20 ದಿನಗಳ ಕಾಲ ಸೇವೆ ಹಾಗೂ ಸಮರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ದಿವ್ಯಾಂಗರಿಗೆ ನೆರವು ಮತ್ತು ಸೈಕಲ್, ಬೈಕ್, ಶ್ರವಣ ಉಪಕರಣ ಸೇರಿ ಉಪಯುಕ್ತ ಸಲಕರಣೆಗಳ ವಿತರಣೆ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಲಾಗುವುದು. ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಿಸಲಾಗುವುದು ಎಂದರು.

ಕಿಸಾನ್ ಸನ್ಮಾನ್ ನಿಧಿ, ಉಚಿತ ಪಡಿತರ, ಗರ್ಭಿಣಿಯರ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸಿರುವುದು, ವಿದ್ಯಾರ್ಥಿಗಳಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಅ. 2ರಂದು ಮಹಾತ್ಮ ಗಾಂಧಿಯವರ ಜಯಂತಿ ಇದ್ದು, ವಿಶಿಷ್ಟವಾಗಿ ಆಚರಿಸಲಾಗುವುದು. ಸ್ವದೇಶಿ ವಸ್ತು ಖರೀದಿಯ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವರು. ಖಾದಿ, ಸ್ವದೇಶಿ ಬಟ್ಟೆ ಖರೀದಿಸಲಾಗುವುದು ಎಂದರು. ಕುಂಬಾರರು, ಕಮ್ಮಾರರು ಸೇರಿ ಕೌಶಲ್ಯ ಆಧರಿತ ಬದುಕು ಸಾಗಿಸುವವರಿಂದ ವಸ್ತುಗಳನ್ನು ಖರೀದಿಸಲಾಗುತ್ತದೆ. ಟಾಯ್ಲೆಟ್ ಕಟ್ಟಿಸಿಕೊಡಲು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರಕಾರದ ಅನುದಾನ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು, ಸ್ಮರಣಿಕೆಗಳು ಇತ್ಯಾದಿಗಳು ಹರಾಜಿಗೆ ಲಭ್ಯವಿರುತ್ತದೆ. ಹರಾಜಿನಲ್ಲಿ ಗರಿಷ್ಠ ನೋಂದಣಿ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡಲಿದ್ದೇವೆ. ಸಂಗ್ರಹಿಸಿದ ದೊಡ್ಡ ಮೊತ್ತದ ನಿಧಿಯನ್ನು ‘ನಮಾಮಿ ಗಂಗೆ ಯೋಜನೆ’ಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಮೋ ಆಪ್‍ನಲ್ಲಿ ‘ಮೈ ಸೇವಾ ಟ್ರಿಬ್ಯೂಟ್’ (ನನ್ನ ಸೇವಾ ಕೊಡುಗೆ) ಮಾಡ್ಯೂಲ್ ಲಭ್ಯವಿದೆ. ಇಲ್ಲಿ ಪಕ್ಷದ ಕಾರ್ಯಕರ್ತರು ಅವರು ಕೈಗೊಂಡ ಸೇವಾ ಕಾರ್ಯದ ಬಗ್ಗೆ ವಿವರಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾರೈಸಲು ಉತ್ತೇಜನ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next